Friday, November 5, 2010

ನಾ ಕಂಡ ತಿರುವನಂತಪುರಂ ಮತ್ತು ಕನ್ಯಾಕುಮಾರಿ
(ಒಂದು ಅಪೂರ್ವ ಪ್ರವಾಸ ಕಥನ)-2

Mangalore Railway Station.
ಮಂಗಳೂರು ರೈಲ್ವೆ ಸ್ಟೇಷನ್ ತಲುಪಿದ್ದೆವು.  ಕೌಂಟರ್ ನಲ್ಲಿ ನಾನು ವಿಚಾರಿಸುವಾಗ ಕನ್ನಡ ಉಪಯೋಗಕ್ಕೆ ಬರಲಿಲ್ಲ. ಇಂಗ್ಲೀಷ್ ನೆರವಿಗೆ ಬಂತು.  ತಿರುವನ್ ದ್ರಮ್ ಗೆ ಪರಶುರಾಮ್ ಎಕ್ಸ್ ಪ್ರೆಸ್ ಬೆಳಗಿನ ಜಾವ 3-30 ಕ್ಕೆ ಇದೆಯೆಂದು ತಿಳಿಯಿತು. ಸ್ಲೀಪಿಂಗ್ ಕೋಚ್ ಕೇಳ ಬೇಡಿ, ಫಸ್ಟ್ ಕ್ಲಾಸ್ ಕೂಡ ಇಲ್ಲ. ಇರುವುದೊಂದೇ ಎ.ಸಿ.ಚೇರ್ ಕಾರ್ ಭೋಗಿಗಳು.  ಮನಸ್ಸು ಕೊಂಚ ಅಳುಕಿತು. ಆದರೇನು! ಮುಂದಿನ ದೂರದ ಪ್ರಯಾಣ ಎದುರಿಸಲು ಎದೆಯಲ್ಲಿ ಧೈರ್ಯ ಧುತ್ತನೆದ್ದಿತ್ತು.

ಅಲ್ಲಿಯವರೆಗೆ ಫ್ಲಾಟ್ ಫಾರಂನಲ್ಲೇ ನಿದ್ರೆ ಹೋಗುವುದೋ ಕಾಲಾಹರಣ ಮಾಡುವುದೋ ಆಗಬೇಕಿತ್ತು. ಅಲ್ಲೇ ಸೊಳ್ಳೆಗಳ ಕಾಟ ಬೇರೆ ವಕ್ಕಸಿಕೊಳ್ಳಬೇಕೇ… ಹೊಟ್ಟೆಬೇರೆ ತಾಳ ಹಾಕತೊಡಗಿತ್ತಲ್ಲ;  ಟೀ ಸ್ಟಾಲ್ ಬಿಟ್ಟರೆ ಬೇರೇನೂ ಕಾಣಿಸಲಿಲ್ಲ.
ಅಲ್ಲೋ ಬನ್ ಬಿಟ್ಟರೆ ಇನ್ನೇನು ಇರಲಿಲ್ಲ.  ಟೀ ಮಲಬಾರಿಗಳ  ಮಸಾಲೆ ವಾಸನೆಗೆ ಅದಾಗಲೇ ಹತ್ತಿರವಾಗಿತ್ತು.  ಬನ್ ತಿಂದು ಟೀ ಕುಡಿದೆವು. ಬಿಲ್ ಅಷ್ಟೇ ಮಸಾಲೆ ಹಾಕಿದಷ್ಟೇ ಖಾರವಾಗಿತ್ತು. ತೆತ್ತು ಬಂದು ವೈಟಿಂಗ್ ರೂಂ ನೋಡಿದರೆ ಅದೂ ಭರ್ತಿ. ಹೊರಗೆ ಫ್ಲಾಟ್ ಫಾರಂ ಕಟ್ಟೆಯಲ್ಲೇ ಎಲ್ಲಂದರಲ್ಲಿ ಜಾಗ ಹುಡುಕಿಕೊಂಡು ಹೆಂಗಸರು ಮಕ್ಕಳು, ಮಧ್ಯಮ ವರ್ಗದವರು, ಕೆಳವರ್ಗದವರು ಹಾಗೂ ಮೇಲ್ವರ್ಗದವರೂ ಸಹ ಮನಷ್ಯ ಜೀವಕ್ಕೆ ಯಾವೊಂದು ಬೇಧವಿಲ್ಲವೆಂಬಂತೆ ಅಲ್ಲಲ್ಲಿ  ತಮ್ಮ ವಸ್ತ್ರಗಳನ್ನು  ಹಾಸಿ ಉರುಳಿಕೊಂಡಿದ್ದಾರೆ.  ಕೆಲವರಂತೂ ನ್ಯೂಸ್‌ ಪೇಪರ್ ಮೇಲೇ ಮಲಗಿದ್ದಾರೆ.  ನಾವಿಬ್ಬರೂ ಒಂದು ಗೋಡೆ ಮಗ್ಗುಲು ಹಿಡಿದೆವು. ನನ್ನ ಶಾಲು ಮತ್ತು ಟವೆಲ್ ಉಪಯೋಗಕ್ಕೆ ಬಂದವು. ಸೊಳ್ಳೆಗಳೋ ರಕ್ತ ಹೀರಲು ಮುಂದಾದವು. ಬಾಲಾಜಿ ಕುಳಿತೇ ಇದ್ದ ಜಪಮಾಡುವವನಂತೆ.  ನಾನೋ ಮಲಗುವುದು ಏಳುವುದು ಮಾಡುತ್ತಲೆ ಇದ್ದೆ.

ಅಷ್ಟರಲ್ಲಿ, ಉತ್ತರ ಭಾರತದ ಕಡೆಯ ಕಾಲೇಜೊಂದರ ಟೇನೇಜ್ ಹುಡುಗಿಯರ ಗುಂಪೊಂದು ನಮ್ಮ ಸನಿಹಕ್ಕೇ ಬಂದಿತ್ತು.  ಸುಮಾರು 25-30 ಹುಡುಗಿಯರ ಗುಂಪದು. ಅವರ ಯುವ ಮಾಸ್ತರ ಆ ಹುಡುಗಿಯರ ಮಧ್ಯೆ ಕುಳಿತು ಕೊಂಡು ಏನೋ ತಮಾಷೆಯ ಕಥೆ ಹೇಳತೊಡಗಿದ್ದ.  ಹುಡುಗಿಯರು ಆಗಾಗ್ಗೆ ಅವನ ಹಾಸ್ಯ ಚಟಾಕಿಗಳಿಗೆ ಸ್ಪಂದಿಸುತ್ತಿದ್ದರೆ ನೋಡಲು ಮೋಜೆನಿಸುತ್ತಿತ್ತು.   ಅವರಲ್ಲಿ ಬಹುತೇಕ ಪಿಟಿಪಿಟಿ ಟಾಪ್ ಮತ್ತು ಜೀನ್ಸ್ ಪ್ಯಾಂಟ್ ನಲ್ಲಿದ್ದ ಹುಡ್ಗೀರು. ಅವರ ಸ್ಟೈಲೋ ಸ್ಟೈಲು! ಕಿಲಕಿಲ ನಗುವೇ ಚೆಂದ,  ಇನ್ನು ಹೇಳುವುದೇನು?  ಓಹ್! ಅವರ ತಕ ಪಕ ಡ್ಯಾನ್ಸ್ ಗೆ  ಸೊಳ್ಳೆಗಳ ಸಪೋರ್ಟ್  ಸಹ  ಇತ್ತಲ್ಲ! ಅವರ ಗುಜರಾತಿ ಬೆರೆತ ಹಿಂದಿ ಪೂರ್ತಿ ಅರ್ಥವಾಗುತ್ತಿರಲಿಲ್ಲ. ಅವರ ಹರೆಯದ ಹುಮ್ಮಸ್ಸಿನ  ನೋಟದ ಮುಂದೆ ನಮಗೆ ಸೊಳ್ಳೆ ಕಾಟ ಮರೆತೇ ಹೋಗಿತ್ತು. ಬೆಳಗಿನ ಜಾವ 3-45 ರ ಹೊತ್ತಿಗೆ ಪರಶುರಾಮ್ ಎಕ್ಸ್ ಪ್ರೆಸ್ ನ ಭೋಗಿಗಳು  ಮೊದಲ ಫ್ಲಾಟ್ ಫಾರಂನಲ್ಲೆ ಬಂದು ನಿಲ್ಲತೊಡಗಿದವು.
photos Courtesy- URL of respective owners           
ಸಂಪೂರ್ಣ  ಇ_ಪುಸ್ತಕ ಇಲ್ಲಿದೆ ಓದಿ...

Wednesday, November 3, 2010

ನಾ ಕಂಡ ತಿರುವನಂತಪುರಂ ಮತ್ತು ಕನ್ಯಾಕುಮಾರಿ
(ಒಂದು ಅಪೂರ್ವ ಪ್ರವಾಸ ಕಥನ)-1

ನಾನು ಮೂವತ್ತು ವರ್ಷ ಮೂರು ತಿಂಗಳು ಟೆಲಿಕಾಂ ಇಲಾಖೆಯಲ್ಲಿ ಸೇವೆಸಲ್ಲಿಸಿ ಸ್ವಯಂ ನಿವೃತ್ತಿ ಪಡೆದೆ.  ನನ್ನ ಸೇವಾ ಅವಧಿಯಲ್ಲಿ ಅನೇಕ ಅನುಭವಗಳಾಗಿವೆ. ಅವುಗಳಲ್ಲಿ ಕೆಲವಂತು ಬೇಡವೆಂದರೂ ನೆನಪಿನಲ್ಲಿ ಉಳಿದಿವೆ. ಆ ನೆನಪುಗಳಲ್ಲಿ ಸಿಹಿ ಕಹಿ ಎರಡೂ ಇವೆ. ನನಗೆ ತುಂಬ ಸಿಹಿಯೆನಿಸಿ ಸಂತಸ ಸಮಾಧಾನ ನೀಡಿದ ಪ್ರವಾಸಾನುಭವದ ಬಗ್ಗೆ ಈಗ ಹೇಳ ಬಯಸುತ್ತೇನೆ. ಅದು ೧೯೯೮ ಫೆಬ್ರವರಿ ತಿಂಗಳು. ಆಗಷ್ಟೇ ಚಳಿ ಹೋಗುತ್ತಾ ಬೇಸಿಗೆ ಕಾಲಿಡುತ್ತಿದ್ದ ಕಾಲ.  ನಮ್ಮ ಆಡಳಿತ ಕಛೇರಿಯಿಂದ ಕೇರಳದ ತಿರುವನಂತಪುರದಲ್ಲಿ ‌ಒಂದು ತಿಂಗಳ ಕಂಪ್ಯೂಟರ‍್ ಟ್ರೈನಿಂಗ್ ಗೆ ಇಬ್ಬರು ಹಿರಿಯ ನೌಕರರನ್ನು ಕಳುಹಿಸಬೇಕಿತ್ತು. ನಮ್ಮ ಕಿರಿಯ ಲೆಕ್ಕಾಧಿಕಾರಿಗಳೂ ಸೇರಿದಂತೆ ಅದೇಕೋ ಬೇಡವೆಂದು ನಿರಾಕರಿಸಿದವರೇ ಬಹಳ.  ಹಾಗೆ ಹೋಗುವ ಅವಕಾಶ ನಂತರದ ಹಿರಿಯ ನೌಕರನಾದ ನನಗೆ ತಾನಾಗಿಯೆ ಒದಗಿಬಂದಿತ್ತು. ನೋಡಿ, ಮೊದಲೇ ನಿಮ್ಮ ಆರೋಗ್ಯ ಸ್ವಲ್ಪ ಸೂಕ್ಷ್ಮ, ಕೇರಳದಲ್ಲಿ ಕಾರಾವಳಿಯ ಉರಿಬಿಸಿಲ ಬೇಗೆ ಆರಂಭವಾಗಿಬಿಡುತ್ತದೆ. ಹೋಗುವ ಮುನ್ನ ಇನ್ನೊಮ್ಮೆ ಯೋಚಿಸಬಾರದೇ ಎಂದೂ ಎಚ್ಚರಿಸಿದ್ದರು ಅವರೆಲ್ಲ.  ಆದರೆ, ನನಗೆ ಅದೇನು ಧೈರ್ಯವೋ ಏನೋ ಯಾರ ಮಾತಿಗೂ ಕಿವಿಗೊಡದೇ ಹೊರಟು ನಿಂತಿದ್ದೆ.  ನಮ್ಮ ಕಛೇರಿಯಲ್ಲಿ ನಮ್ಮ ಸೆಕ್ಷನ್ನಲ್ಲೇ ಇದ್ದ  ಸಹೋದ್ಯೋಗಿ ಬಾಲಾಜಿ ಕೂಡ  ಹೊರಡಲು ಸಿದ್ಧನಾದ. ನನಗೆ ಜೊತೆಯಾಗಿದ್ದ.

ಆ ತಿಂಗಳ ೧೫ರಂದು ಶನಿವಾರ ಸಂಜೆ ೫ ಗಂಟೆಯ ಬಸ್ಸಿಗೆ ಹೊರಟು ಆ ರಾತ್ರಿ ಮಂಗಳೂರು ತಲುಪಬೇಕಿತ್ತು. ನಾನು ಎಲ್ಲ ಪೂರ್ವ ಸಿದ್ಧತೆಯೊಂದಿಗೆ ಅಂದು ಸಂಜೆ ೪ ಗಂ. ಮನೆಯಿಂದ ಹೊರಟೆ. ನಮ್ಮ ಮೂವರು ಗಂಡು ಮಕ್ಕಳಲ್ಲಿ ಇಬ್ಬರು ಪುಟ್ಟ ಮಕ್ಕಳಿಗೆ ಟಾಟಾ ಹೇಳಿ,  ಮಕ್ಕಳೊಂದಿಗೆ ಹುಷಾರಾಗಿ ಮನೆಯ ಕಡೆ ನೋಡಿಕೋ ಎಂದು ಹೆಂಡತಿಗೆ ಹೇಳಿ, ಲಗ್ಗೇಜಿನ ಸಮೇತ ಪಿ.ಯು.ಸಿ ಓದುತ್ತಿದ್ದ ಹಿರಿಯ ಮಗನೊಂದಿಗೆ ನನ್ನ ಗಾಡಿ ಎಂ ೮೦ ಏರಿ ಬಸ್ ಸ್ಟ್ಯಾಂಡಿಗೆ  ಬಂದಿದ್ದೆ. ಮಂಗಳೂರಿನ ಬಸ್ಸು ಬಂದ ಹಾಗೆ ಕಾಣಲಿಲ್ಲ. ಸುತ್ತೆಲ್ಲ ಕಣ್ಣಾಡಿಸಿದೆ ಸಹೋದ್ಯೋಗಿ ಬಾಲಾಜಿಯೂ ಬಂದಿಲ್ಲ ಅಂದುಕೊಂಡೆ.

ಅಷ್ಟರಲ್ಲಿ ಅನ್ನಪೂರ್ಣ ಟ್ರಾವಲ್ಸ್ ಮಿನಿ ಬಸ್ಸು ಎದುರಿನ ಪೆಟ್ರೋಲ್ ಪಂಪ್ ನಲ್ಲಿ ನಿಂತಿತ್ತು. ಅದೇ ಮಂಗಳೂರಿಗೆ ಹೋಗುವುದೆಂದೂ ತಿಳಿಯಿತು. ತಕ್ಷಣ ಅಲ್ಲಿಗೇ ಹೋಗಿ ನೋಡಿದರೆ, ಅದಾಗಲೆ ಬಾಲಾಜಿ ಹಿಂಬದಿಯ ಸೀಟಿನಲ್ಲಿದ್ದುದು ಕಂಡಿತು. ನನಗೆ ಹೇಳಿ ಕಾದಿರಿಸಿದಂತೆ ಮುಂಭಾಗದ ಬಾಗಿಲ ಬದಿಯ ಸೀಟು!  ನಾನು ಬಾಲಾಜಿಯನ್ನು ನೋಡಿ ನಕ್ಕು ಮಾತನಾಡಿಸಿದ್ದನ್ನು ಕಂಡ ಕಂಡಕ್ಟರ್ ಸುಮ್ಮನಿರಲಾರದೇ ನಿಮ್ಮ ಹೋಗಿ ಸರ್ ನಿಮ್ಮ ಫ್ರೆಂಡ್ ಜೊತೆ ಕುಳಿತುಕೊಳ್ಳಿ ಎಂದಾಗ, ಅಲ್ಲಿದ್ದವರು ಮುಂದಿನ ಸೀಟಿಗೆ ತಟ್ಟನೆ ಎದ್ದು ಬಂದಿದ್ದರು.  ನಾನು ಬಾಲಾಜಿ ಪಕ್ಕ ಕುಳಿತೆ. ಬಸ್ಸಿನ ತುಂಬಾ ಜನ! ತಡೆಯಲಾಗದ ಸೆಖೆ ಬೇರೆ. ಬಸ್ಸು ಹೊರಟರೆ ಸಾಕೆನಿಸಿತ್ತು. ಬಸ್ಸು ಹೊರಡುವ ತನಕ ಗಾಳಿಯಿಲ್ಲದೆ ಹಿಂಸೆಯೇ.  ಬಸ್ಸೇನೋ ಹೊರಟಿತು. ಆಗ ಅರಿವಾಯಿತು; ನಮಗೆ ಮುಂದೆ ಬರಬರುತ್ತ ಕ್ರಮಿಸಲಿರುವುದು ಘಾಟ್ ಸೆಕ್ಷನ್ ಪ್ರಯಾಣವೆಂದು. ಆ ಸೆಖೆಯಲ್ಲೂ ಮೈ ನಡುಗಿತೋ ಮನಸ್ಸು  ಅಳುಕಿತೋ ...ಅಂತೂ ಎಂಥ ಕೆಲಸ ಮಾಡಿಬಿಟ್ಟೆ!  ನನಗಿಂತ ಇಲಾಖೆಯಲ್ಲಿ ಕಿರಿಯ ಸಹೋದ್ಯೋಗಿ ಬಾಲಾಜಿಗೆ ಇಂತಹ ಇಕ್ಕಟ್ಟಿನ ಬಿಕ್ಕಟ್ಟಿನ ಉಸಿರುಗಟ್ಟಿಸುವ ಸಂದರ್ಭ ಸಹಿಸಿಕೊಳ್ಳಲು ವಯಸ್ಸಿದೆಯಲ್ಲ!  ನನಗೋ ಕೆಲವೊಮ್ಮೆ ನನ್ನ ಸ್ವಹಿತಕ್ಕಿಂತ ಸ್ನೇಹ  ಸಾಹಚರ್ಯೆಯೆ ಮೇಲಾಗಿ ಕಾಡಿಬಿಡುತ್ತದೆ. ಕೊನೆಗೂ ಬಸ್ಸು ಅನ್ನಪೂರ್ಣ ಹೊರಟಾಗ “ಉಸ್” ಎಂದು ನಿಟ್ಟುಸಿರು ಬಿಡುವಂತಾಯ್ತು.

ಇನ್ನೊಂದು ಕಿರಿಕಿರಿಯೆಂದರೆ ಈ ಮಿನಿ ಬಸ್ಸು ಮುಂದೆ ಘಾಟ್ ಸೆಕ್ಷನ್ ನಲ್ಲಿ ನುಸುಳಿ ತಿರುವುಗಳಲ್ಲಿ ಹೊರಳಿ ಸಾಗುತ್ತದೆ; ಅದೂ ಸಂಜೆಗತ್ತಲಲ್ಲಿ. ಅಂತಹದರಲ್ಲಿ ಜನರನ್ನು ತುಂಬಿಸಿಕೊಳ್ಳುತ್ತಲೇ ಇದ್ದಾನೆ ಕಂಡಕ್ಟರ್ ಮಹಾಶಯ.  ಆ ಜನರೋ  ತಮಗೆ ಇದು ನಿತ್ಯ ಸಹಜವೆಂಬಂತೆ ಎರಡು ಸಾಲಿನ ಸೀಟುಗಳ ಮಧ್ಯೆ ಉದ್ದ ಸಾಲಿನಲ್ಲಿ ನಿಂತು ಒಬ್ಬರ ಹಿಂದೊಬ್ಬರು ಜೋತಾಡಲು ತಯಾರಾಗಿಯೆ ಬಂದಿದ್ದಾರೆ! ಇವರಲ್ಲಿ ಕೆಲವರು ಉಡುಪಿಯವರೆಗೂ ಹೊರಟವರಿದ್ದಾರೆ!! ಮಧ್ಯೆ ಅವರಿಗೆ ಸೀಟು ಸಿಗುವುದೇನು ಗ್ಯಾರಂಟಿ ಇಲ್ಲ.  ಒಬ್ಬಾತ ಇದು ಹೊಸತೇನಲ್ಲವೆಂಬಂತೆ ಹೇಳಿದ: ಶಿವಮೊಗ್ಗಾದಿಂದ ಮಂಗಳೂರು ಕಡೆಗೆ ಇದೇ ಕಡೆಯ ಬಸ್ಸು.  ಇದು ಹೋಗುವ ಮಾರ್ಗವೆಂದರೆ ಆಗುಂಬೆ ಘಾಟ್ ಸೆಕ್ಷನ್ ನಲ್ಲಿ. ಪ್ರಯಾಣದಲ್ಲಿ ಓದುವ ಅಭ್ಯಾಸ ನನಗೆ.  ಬಸ್ಸ್ ನಲ್ಲಿ ಹುಡುಗನೊಬ್ಬ “ಹಾಯ್ ಬೆಂಗಳೂರು” ಪತ್ರಿಕೆ ಮಾರಾಟಕ್ಕೆ ಬಂದ. ಅದನ್ನು ಕೊಂಡು ಹಾಳೆ ತಿರುವ ತೊಡಗಿದೆ.  ಅದರಲ್ಲಿ ನಾನು ಮೊದಲು ನೋಡುವುದು “ಬಾಟಮ್ ಐಟಮ್” ರವಿ ಬೆಳಗೆರೆ ತಮ್ಮ ಅನುಭವದ ಮೂಸೆಯಿಂದ ಅಲ್ಲಿ ಬಿಚ್ಚಿಕೊಳ್ಳುತ್ತಾರಲ್ಲ… ನನ್ನ ಎಡ ಪಕ್ಕಕ್ಕೆ ಕುಳಿತವರು ಮಣಿಪಾಲ್ ಕಾರ್ಪೋರೇಷನ್ ಮೇನೇಜರ್.  ಮಣಿಪಾಲ್ ಗೇ ಅವರ ಪ್ರಯಾಣ. ಅವರೊಡನೆ ಮಾತು ಮೊಳೆತು ಬೆಳೆದಂತೇ ಒಳ್ಳೇ ಕಂಪೆನಿ ಸಿಕ್ತಿತೆನಿಸಿತು.  ಯಾಕೆಂದರೆ, ನನ್ನ ಜೊತೆಗಿದ್ದ  ಬಾಲಾಜಿ ಅಷ್ಟು ಮಾತುಗಾರನಲ್ಲ.  ನನ್ನ ವೈಚಾರಿಕತೆಯೂ ಕೆಲವೊಮ್ಮೆ ಅವನಿಗೆ ಹಿಡಿಸಲಾರದೇನೋ…

ಬಸ್ಸು ತೀರ್ಥಹಳ್ಳಿಯನ್ನು  ಸಮೀಪಿಸುತ್ತಿತ್ತು.  ಓಹ್,  ನನ್ನ ದೈಹಿಕ  ಜಲಭಾದೆಯ ತುರ್ತು ಶುರುವಾಗಿತ್ತು.  ಪ್ರಾಯಶಃ  ನನಗೆ ಪ್ರಯಾಣದಲ್ಲಿ ಇದು ಮೊದಲ ಅನುಭವ.  ಪಕ್ಕದಲ್ಲಿ ಅಡ್ಡ ಪಂಚೆ ಕಟ್ಟಿಕೊಂಡು ನಿಂತಿದ್ದ ಮನುಷ್ಯ ಘಟ್ಟದ ಕೆಳಗಿನವನು. ಆತನಿಗೆ ಕೇಳಿದೆ- “ ಬಸ್ಸು ಮುಂದೆಲ್ಲಿ ನಿಲ್ಲುತ್ತದೆ?”    “ಮುಂದೆ ಬರುವ  ಆಗುಂಬೆ ಘಾಟ್ ಇಳಿಯಬೇಕಲ್ಲ; ಸಂಜೆಗತ್ತಲು ಕಳೆಯುವುದರೊಳಗೇ,  ಘಟ್ಟ ಇಳಿಯುವವರೆಗೆ ಎಲ್ಲೂ ನಿಲ್ಲುವುದಿಲ್ಲವೆನ್ನಬೇಕೇ…! 
ತೀರ್ಥಹಳ್ಳಿಯಲ್ಲಿ…?” ಹುಬ್ಬೇರಿಸಿ ಮತ್ತೆ ಕೇಳಿದೆ.   “ಉಹೂಂ...” ಇಲ್ಲವೆಂದು ತಲೆಯಾಡಿಸಿದ್ದ.  ಹೊಯ್! ನನ್ನ ಜಲಭಾದೆ ಇನ್ನೂ ತೀವ್ರವಾಗಿ ಕಾಡಿತ್ತು.  ಎಲಾ ತಿರುಪತಿ ವೆಂಕಟ ರಮಣನೇ ನೀನೇ ಈ  ಸಂಕಟ ಪರಿಹರಿಸಬೇಕು,  ಅಷ್ಟಕ್ಕೂ ನಾನು ಧೈರ್ಯ ಮಾಡದಿದ್ದರೆ ಅವನೇನು ಮಾಡಿಯಾನು?  ತೀರ್ಥ ಹಳ್ಳಿ ಬಂದೇ ಬಂತು....ನಾನು ಏಳಬೇಕೆನ್ನುವಷ್ಟರಲ್ಲಿ,
ಆತ ಹೇಳಿದಂತೆಯೆ ಬಸ್ ಸ್ಟ್ಯಾಂಡಿನಲ್ಲಿ ನಿಂತಂತೆ ಮಾಡಿ ಹೊರಟೇ ಬಿಟ್ಟಿತು ನಮ್ಮ ಬಸ್ಸು ಅನ್ನಪೂರ್ಣ!  ಹೇಗೆ ಕಟ್ಟಿ ಹಾಕಲಿ ಡೀಸೆಂಟಾಗಿ ನಾನು ನನ್ನ ಪಾಪಿ ದೇಹವನ್ನಿಲ್ಲಿ…?  ಯಾಕೆ ಡೀಸೆಂಟಾಗಿ ಎಂದು ಹೇಳಿದೆನೆಂದು ಕೇಳುವಿರೇನು? ಹಳೆಯ ಘಟನೆಯೊಂದು ನೆನಪಿಗೆ ಬಂತು. ಇದೇ ತೀರ್ಥಹಳ್ಳಿಯ  ತುಂಗಾ ಮಹಾ ವಿದ್ಯಾಲಯಕ್ಕೆ ಮುಖ್ಯ ಅತಿಥಿಯಾಗಿ ಒಂದು ಸಮಾರಂಭಕ್ಕೆ ನನ್ನನ್ನು  ಆಹ್ವಾನಿಸಿದ್ದರು.  ಆ ಸಮಾರಂಭ  ಮುಗಿದು ಮರಳಿ ಶಿವಮೊಗ್ಗಾಕ್ಕೆ  ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದೆ.   ಆಗ ಬಸ್ ನಲ್ಲೇ ಕಂಡದ್ದನ್ನು ಹೇಳಿದರೆ ನೀವು ಬಂಬಲಾರಿರಿ.  ಏನಾಯಿತೆಂದರೆ,  ಪಾಪ ಒಬ್ಬ ಹಳ್ಳಿ ಹೈದ.  ನೋಡಲು ಸಭ್ಯನಂತೇ ಕಾಣುತ್ತಾನೆ.   ತನ್ನ ಲುಂಗಿ ಪಂಚೆಯನ್ನೆತ್ತಿ ಮೊಣಕಾಲವರೆಗೆ ಕಟ್ಟಿಕೊಂಡಿದ್ದಾನೆ.  ಮೇಲ್ಕಂಬಿ ಹಿಡಕ್ಕೊಂಡು ಜೋತಾಡುತ್ತಾ ನಿಂತವನು  ಇದ್ದಕ್ಕಿದ್ದಂತೆ  ತನ್ನ ಪಂಚೆಯೋಳಗಿಂದ ನೀರು ಚುರ್ರನೆ ಬಿಟ್ಟೇ ಬಿಟ್ಟ….!  ಎಲ ಎಲಾ ಕತ್ತೆಗೂ ಈ ಮನುಷ್ಯನಿಗೂ ಏನೇನೂ ವ್ಯತ್ಯಾಸವಿಲ್ಲವಲ್ಲ.  ಕಂಡಕ್ಟ್ ರ್ ಥೂತ್  ತೇರಿಕೆ ಅಂತ ಗೊಣಗಿದ.   “ನಾ ಕೂಗಿದ್ರ  ನೀನೇನ್ನ ನಿಲ್ಲಿಸ್ತಿದ್ದೇನೂ….” ಅವನೆಂದ ಮೂತಿ ಸೊಟ್ಟಗೆ ಮಾಡಿ.  ಏನ್ ಕೂಗ್ತೀ  ನಿನ್ನ  ತಲಿ…. ನೀನೆಂಥ ಮನುಷ್ಯನಯ್ಯ ! ಗೊಣಗಿದ ಕಂಡಕ್ಟರ್ ಅವನಿಗೊಂದಿಷ್ಟು ಉಗಿದ  ಎಲ್ಲಿಂದಲೋ ಒಂದು ಬಾಟಲಿ ನೀರು ತಂದು ಅಲ್ಲಿ  ಸುರುವಿದ್ದನಷ್ಟೇ  ಎಲ್ಲಿ ವಾಸನೆ ಬಸ್ಸೆಲ್ಲಾ ಆವರಿಸೀತೋ ಎಂದು.

ಈಗ ಮುಂದೆ ಕೇಳಿ ನನ್ನ ಡೀಸೆಂಟ್ ಅವಸ್ಥೆನಾ….
ಇನ್ನೇನು,  ಈ  ಬಸ್ಸು ಅನ್ನಪೂರ್ಣ ತೀರ್ಥಹಳ್ಳಿಯ ಗಡಿಯನ್ನೂ ಬಿಡಲಿದ್ದಾಳೆ.  ಆಗ ಯಾಕೋ ಮುಖ್ಯ ರಸ್ತೆಯಲ್ಲೇ ಗಕ್ಕನೆ ನಿಂತಳಲ್ಲ ನಾನೂ ತಟ್ಟನೆ ಚುರುಕಾದೆ.....
ನಾನು ಹಿಂದೆ ಕುಳಿತಿದ್ದೆನಲ್ಲ, ಸಾಲಾಗಿ ನಿಂತು ಜೋತಾಡಲಿರುವ ಜನರನ್ನೆಲ್ಲ ಸರಸರನೆ ತಳ್ಳಿ ದಾರಿ ಮಾಡಿಕೊಳ್ಳುತ್ತ ಹೊರಬೀಳುವ ಮುನ್ನ ಎದುರಿಗೆ ಸಿಕ್ಕ ಕಂಡಕ್ಟರ್ ಗೆ ಸನ್ನೆ ಮಾಡಿ ನನ್ನ ಅವಸ್ಥೆ ಹೇಳಿಕೊಂಡೆ. “ಹೋಗ್ ಬನ್ರಿ ಬೇಗಾ..” ಅಂದ ಅಸಹನೆಯಿಂದ.  ಎಲ್ಲಿಗೆ ಹೋಗೋದು?  “ಮೂತ್ರಿ” ಎಂಬುದೆಲ್ಲಿದೆಯೋ ಕಾಣಸುತ್ತಿಲ್ಲ!  ಧೈರ್ಯವೋ ಧೈರ್ಯ ನಂದು. ಇನ್ನೊಂದೆರಡು ಹೆಜ್ಚೆ ಮುಂದೆ ನಡೆದೇ ಬಿಟ್ಟೆ.  ಅಲ್ಲೇ ಪೆಟ್ಟಿಗೆ ಅಂಗಡಿಗಳ ಮಧ್ಯೆ ಕಾಣಿಸಿತು ಎಂತದೋ ಕೊಳಕು ವಾಸನೆಯದು.  ಸಧ್ಯ ಅದೇ ಸಾಕಾಗಿತ್ತು. ಓಡಿ ಹೋಗಿ ನಿಂತೆನಲ್ಲಿ; ದೇಹ ಹಗುರವಾಯ್ತು.   ಪ್ಯಾಂಟು ಜಿಪ್ ಎಳೆದು ತಿರುಗಿ ಬಂದರೆ ಬಸ್ಸೆಲ್ಲಿ ? ಕಾಣಿಸಲೇ ಇಲ್ಲ!  ಅಯ್ಯ! ಅದ್ಹೇಗೆ ಹೇಳಿದ್ದರೂ ನನ್ನ ಬಿಟ್ಟು ಹೋಗ್ಬಿಡ್ತಾನೆ!  ನನ್ನ ಸ್ನೇಹಿತ ಬೇರೆ ಒಳಗಿದ್ದಾನಲ್ಲ; ಅವನಿಗೆ ಹೇಳಲಿಕ್ಕೇ.  ಓಹ್ ಅದು ಅಲ್ಲೇ ದೂರದಲ್ಲಿ ನಿಂತಿದೆ!  ಓಡೋಡಿ ಹೋಗಿ ಹತ್ತಿಕೊಂಡೆ. ನಿರಾಳ ನಿಟ್ಟುಸಿರಿಟ್ಟೆ… “ಅಂತೂ ಮುಗಿಸ್ಕೊಂಡ್ ಬಂದ್ರಿ ಈಗ ಆರಾಮಾಗಿ ಕೂತ್ಕೊಳ್ಳಿ ಎಂದರು ಪಕ್ಕದಲ್ಲಿದ್ದ ಮೇನೇಜರ್ ಸಾಹೇಬರು.  ನಾನು ಇಳಿದು ಹೋದದ್ದಕ್ಕೆ  ಜನ, ಯಾಕೆ ನಿಲ್ಸಿದಾರೆ ಬಸ್ಸು, ಲೇಟಾಗತ್ತೇಂತ ಕೂಗ್ತಾ ಇದ್ರಂತೆ!  ಅಲ್ಲಾ, ಎಂಥ ಬಹುತೇಕ ಜನರೇ ಹೀಗಲ್ಲವೇ…ತಮ್ಮದಾದ್ರೆ ಕಷ್ಟ, ಇತರರದಾದ್ರೆ ಏನೂ ಅಲ್ಲ...ಅಲ್ಲಾ ಇದೇನ್ರಿ ನಿಮ್ಮದು ಪ್ರವಾಸ ಕಥನ ಜಲಭಾದೆಯಿಂದಲೇ ಆರಂಭವಾಗಬೇಕೇ… ಸಹಿಯಾದ ಅನುಭವ ಆಗಿದೇಂತಿರಾ,  ಆರಂಭದಲ್ಲೇ ನಿಮ್ಮ ಕಹಿ ಅನುಭವ ಮುಂದಿಡ್ತೀರಲ್ಲ  ಎನ್ನದಿರಿ. ಯಾಕಂದ್ರೆ ಮೊದಲು ಒಂಚೂರು ಪಾರಾದ್ರು ಕಹಿಯಿದ್ದರೇನೆ ಆಮೇಲೆ ಸಿಹಿ ರುಚಿಸೋದು ಏನಂತೀರಿ…?  ಆಗುಂಬೆ ಘಾಟ್ ಸೆಕ್ಷನ್ ಬಂತು. ಬಸ್ಸು ಘಟ್ಟ ಇಳಿಯತೊಡಗಿತು. ಪಕ್ಕದಲ್ಲಿ ನಿಂತು ಘಟ್ಟ ತಗ್ಗಿನ ಹಿರಿಯಡ್ಕಕ್ಕೆ ಪ್ರಯಾಣಿಸು ತ್ತಿದ್ದಾತನಿಗೆ ಕೇಳಿದೆ- “ಎಷ್ಟು ನಿಮಿಷ ತಗೊಳ್ತಾನೆ; ಘಾಟ್  ಇಳಿಯಲಿಕ್ಕೇ? ಆತ 15 ನಿಮಿಷ ಸಾಕು” ಎಂದ. ಹತ್ತಲಿಕ್ಕೆ 25ರಿಂದ 30 ನಿಮಿಷ ಬೇಕು ಎಂದ.  ಓಹ್! ಎಂದೆ.                      
ಮುಂದುವರೆಯವುದು...

Monday, November 1, 2010

54ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಸಪ್ನ ಬುಕ್ ಹೌಸ್ ನ ಪುಸ್ತಕಗಳ ಬಿಡುಗಡೆ

54ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ
ತಾ|| 01-11-2010 ರಂದು ಸಪ್ನಬುಕ್ ಹೌಸ್
54 ಮಕ್ಕಳ ಕನ್ನಡ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿತು.
ಇನ್ ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು.




ಖ್ಯಾತ ನ್ಯಾಯವಾದಿ ರಾಮಾಜೊಯಿಸ್ ಪುಸ್ತಕಗಳು ಮಕ್ಕಳಿಗೆ ಜ್ಞಾನ ಭಂಡಾರ. ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು, ಸಮಾಜ ನಿರ್ಮಾಣದಲ್ಲಿ ಮಕ್ಕಳ ಸಾಹಿತ್ಯ ಅತ್ಯಂತ ಪರಿಣಾಮಕಾರಿ ಎಂದು ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಮಕ್ಕಳ ಸಾಹಿತ್ಯದ  ಪ್ರಾಮುಖ್ಯತೆ ಕುರಿತು ಹೇಳಿದರು. ಚಿಕ್ಕಂದಿನಿಂದಲೇ ಮಾತೃಭಾಷೆಯಲ್ಲಿ ಶಿಕ್ಷಣ ಕೊಡುವುದು ಅತ್ಯವಶ್ಯವೆಂದೂ ಹೇಳಿದರು.

ಸುಧಾಮೂರ್ತಿ ಮಕ್ಕಳು ಕನ್ನಡದ ಬಗ್ಗೆ ಚಿಕ್ಕಂದಿನಿಂದಲೇ ಆಸಕ್ತಿ ಬೆಳೆಸಿಕೊಳ್ಳಬೇಕು, ಕಥೆಗಳು ಮಕ್ಕಳಿಗೆ ಸಾಹಿತ್ಯಾಸಕ್ತಿ ಮೂಡಿಸುತ್ತವೆ ಎಂದರು. ತಂದೆ ತಾಯಿಗಳೂ ಈ ಬಗ್ಗೆ ಗಮನ ಹರಿಸಬೇಕೆಂದರು. ಇಲ್ಲದಿದ್ದರೆ, ದೊಡ್ಡವರಾದಮೇಲೆ ಅವರಿಗೆ ಹೇಗೆ  ಸಾಧ್ಯವೆಂದರು.



ಕನ್ನಡದ  ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪನವರು ಅಧ್ಯಕ್ಷತೆ ವಹಿಸಿದ್ದರು. ಕವಿ ಶಿವರುದ್ರಪ್ಪನವರು ಮಕ್ಕಳು ಮಾತೃಭಾಷೆ ಕನ್ನಡದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕೆಂದರೆ, ಕನ್ನಡ ಶಿಕ್ಷಣ 1 ರಿಂದ 10 ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕಾದ ತುರ್ತು ಅಗತ್ಯವಿದೆ.  ಇದು ಜಾರಿಯಾಗದಿದ್ದರೆ ಕನ್ನಡಕ್ಕೆ ಉಳಿಗಾಳವಿಲ್ಲವೆಂದರು.
ಮಕ್ಕಳ ಸಾಹಿತ್ಯ ನಿರ್ಲಕ್ಷ್ಯಕ್ಕೊಳಗಾಗಿದೆ, ಸೃಜಶೀಲ ಬರಹಗಾರರು ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳಲ್ಲಿ ನೈತಿಕತೆ ಮಾನವೀಯತೆಗೆ ಬೆಳೆಯಲು ಮಕ್ಕಳ ಸಾಹಿತ್ಯ ಸಹಕಾರಿ. ಪಂಚೆ ಮಂಗೇಶರಾಯರು, ಜಿ.ಪಿ.ರಾಜರತ್ನಂ, ಶಿವರಾಮ ಕಾರಂತ ಮುಂತಾದ ಹಿರಿಯರು ಮಕ್ಕಳಿಗಾಗಿ ಮಹತ್ವದ ಸಾಧನೆ ಮಾಡಿದ್ದಾರೆ ಎಂದು ಸ್ಮರಿಸಿದರು.

54 ಮಂದಿ ಶಾಲಾ ಮಕ್ಕಳಿಗೆ (ಪ್ರತಿಯೊಂದು ಪುಸ್ತಕವೂ 54 ಪುಟಗಳು) ವೇದಿಕೆಯ ಮೇಲೆ ಕರೆದು ಪುಸ್ತಕ ವಿತರಣೆ ಮಾಡಿದ್ದು ಒಂದು ವಿಶೇಷ.
ಸಮಾರಂಭದಲ್ಲಿ ಸಾಹಿತಿಗಳಾದ ಸಾ.ಶಿ.ಮರುಳಯ್ಯ, ಕವಿ ಸುಮತೀಂದ್ರನಾಡಿಗ್, ರಾಜಶೇಖರ ಭೂಸನೂರ ಮಠ, ಸು. ರುದ್ರಮೂರ್ತಿ ಶಾಸ್ತ್ರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಬರೀ ನೆರೆತ ತಲೆಗಳಿಂದ ಹೆಚ್ಚು ತುಂಬಿದ್ದ ಸಮಾರಂಭವು ಕಳೆದ ತಲೆಮಾರಿನಲ್ಲಿ ಯುವ ಪೀಳಿಗೆಯಿಂದ ಕಿಕ್ಕಿರಿದು ತುಂಬಿರುತ್ತಿದ್ದ ಇಂತಹ ಸಮಾರಂಭಗಳನ್ನು ಸ್ಮರಿಸಿ ಕೊಳ್ಳುವಂತಿತ್ತು.

ಸಮಾರಂಭದ ಕೊನೆಯಲ್ಲಿ ಸಪ್ನ ಕನ್ನಡ ವಿಭಾಗದ ಮುಖ್ಯಸ್ಥರಾದ  ದೊಡ್ಡೇಗೌಡರು ವಂದನಾರ್ಪಣೆ ಮಾಡಿದರು.

Friday, October 22, 2010

ಕಥಾಸಂಕಲನ- ಆವರ್ತಕಾಲ

ಇದು ನನ್ನ ಮೂರನೆಯ ಕಥಾಸಂಕಲನ
ಇಲ್ಲಿ ೧೪ ಕಥೆಗಳಿವೆ.  ಇವು ಸುಧಾ, ತರಂಗ, ಸಂಯುಕ್ತ ಕರ್ನಾಟಕ, ಮಂಜುವಾಣಿ, ಮುಂಗಾರು, ಮಯೂರ, ಮಂಗಳ, ಕನ್ನಡ ಪ್ರಭ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
"ಆವರ್ತಕಾಲ" ಕಥೆಗೆ "ಉತ್ಥಾನ" ಮಾಸ ಪತ್ರಿಕೆಯಲ್ಲಿ ಮೆಚ್ಚುಗೆ ಬಹುಮಾನ ಪಡೆದಿದೆ.


 ಹೀಗೆ ನನ್ನ ಕೆಲ ಇ-ಬುಕ್ ಗಳನ್ನು ಕೊಡುವ ಅಭಿಲಾಷೆ ಇದೆ.
ಓದಿ, ನಿಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿ.

Saturday, April 17, 2010

ಇರುಳ ನಕ್ಷತ್ರ-5 (ಕಿರು ಕಾದಂಬರಿ)

-5-
“ ನನಗೆ ಮನೆಯಿಂದ ಪೋನ್ ಬಂದಿತ್ತೇನೂ ? ”
ಹಾಸ್ಟೆಲ್ ಗೆ ಬಂದವಳೆ ರೋಸಿಯನ್ನು ಕೇಳಿದಳು ಲಾವಣ್ಯ.
“ ಹೂಂ, ಪೋನ್ ಕಾಲ್ ಬಂದಿತ್ತು. ನಿಮ್ಮ ಅಕ್ಕನಿಗೆ ಪುನಃ ಸುಸ್ತಾಗಿದೆಯಂತೆ. ಅವಳಿಗೇನೋ ಹೆದರಿಕೆ, ನೀನು ಹೋಗ್ಬೇಕಂತೆ..... ” ರೋಸಿ ಹೇಳಿದಳು. ಅನಂತರ, ಲಾವಣ್ಯಳನ್ನೂ ಪರೀಕ್ಷಕ ದೃಷ್ಟಿಯಿಂದ ನೋಡಿದಳು. “ ನೀನು ಹೋದ ಕೆಲಸ ಏನಾಯಿತು ? ಛಾಯಾಪತಿ ನಿನ್ನನ್ನು ಚೆನ್ನಾಗಿ ನೋಡಿಕೊಂಡಿರಬೇಕಲ್ಲಾ...... ! ” ಕಣ್ ಮಿಟುಕಿಸಿದಳು.
“ ಏನೋ..... ನಾನಂತೂ ಅವನನ್ನು ಪೂರ್ಣ ನಂಬಿದ್ದೆನೆ, ” ಲಾವಣ್ಯ ಎತ್ತಲೋ ನೋಡುತ್ತಾ ಹೇಳಿದಳು.
“ ಸಂಪೂರ್ಣ ಒಪ್ಪಿಸಿಕೊಂಡು ಬಿಟ್ಟೆ ಅನ್ನೂ.... ”
ಈ ಹುಡುಗಿ ಸಾಮಾನ್ಯಳಲ್ಲವೆನಿಸಿ ದುರುಗುಟ್ಟಿದಳು. ಈಗ ರೋಸಿಗೆ ಎತ್ತಲೋ ನೋಡುವ ಸರದಿ.
ಇಬ್ಬರಿಗೂ ಮಾತು ಬೇಡವಾಗಿತ್ತು.

ಲಾವಣ್ಯ ತಡಮಾಡದೆ ಅಕ್ಕನ ಮನೆಗೆ ಹೊರಟು ಬಂದಳು.
ಅಕ್ಕ ಕೋಣೆಯಲ್ಲಿ ಹಾಸಿಗೆ ಹಿಡಿದಿದ್ದಾಳೆ. ಅವಳಿಗೆ ಸಿಸೇರಿಯನ್ ಆದ್ರೆ ತಾನು ಅಥವಾ ಮಗು ಇಬ್ಬರಲ್ಲಿ ಒಬ್ಬರು ಉಳಿಯುವ ಸಾಧ್ಯತೆಯಷ್ಟೇ ಇದೆ ಎಂಬುದಾಗಿ ಡಾಕ್ಟರುಗಳು ಹೇಳಿದ್ದು ಹೇಗೋ ತಿಳಿದುಹೋಗಿದೆ. ಗಾಬರಿಯಾಗಿದ್ದಾಳೆ.

ಆದರೇನು, ಡಾಕ್ಟರು ದೇವರೇನಲ್ಲ. ಮಗು, ತಾಯಿ ಇಬ್ಬರೂ ಉಳಿಯುತ್ತಾರೆ ಎಂಬುದು ಅಭಿರಾಮನ ಅಚಲವಾದ ನಂಬಿಕೆ, ಲಾವಣ್ಯ ಬಂದವಳೇ ಸಹನಾಗೆ ಆತ್ಮಸ್ಥೈರ್ಯ, ವಿಶ್ವಾಸ ತುಂಬಲೆತ್ನಿಸಿದ್ದಳು. ಆ ದಿನದ ರಾತ್ರಿಯನ್ನೂ ಅವಳ ಪಕ್ಕದಲ್ಲೇ ಮಲಗಿ ಕಳೆದಳು.

ಮಾರನೆಯ ದಿನ ಬೆಳಿಗ್ಗೆ.........
ಸುಪ್ರಭಾತದ ಹೊಂಗಿರಣಗಳು ಕಿಟಕಿಯಿಂದ ಪ್ರವೇಶಿಸಿವೆ. ಬೆಳಗಿನ ತಿಂಡಿಗೆ ದೋಸೆ, ಚಟ್ನಿ ತಯಾರಿಸಿದ್ದ ಲಾವಣ್ಯ ಬಾವನನ್ನು ಹುಡುಕಿಕೊಂಡು ಅವನ ಕೋಣೆಗೆ ಬಂದವಳು. ಅಭೀರಾಮ ತನ್ನ ಕೋಣೆಯಲ್ಲಿ ಕೆಲವು ಚಿತ್ರಗಳನ್ನು ತೂಗು ಹಾಕಿದ್ದಾನೆ. ಅವುಗಳಲ್ಲಿ ಒಂದು ಹೆಣ್ಣಿನ ಅರೆನಗ್ನ ಚಿತ್ರ ಲಾವಣ್ಯಳ ಗಮನ ಸೆಳೆದಿತ್ತು. ಅವಳ ಕಣ್ಣುಗಳನ್ನು ಅವಳೇ ನಂಬದಾದಳು. ಅಭಿರಾಮ ಅವಳ ಆಳೆತ್ತರದ ನಿಲುವಿನ ಅಪೂರ್ವ ಸೌಂದರ್ಯವನ್ನೂ ತನ್ನ ಕುಂಚದಲ್ಲೀ ಸೆರೆಹಿಡಿದಿದ್ದ.

“ ಬಾವಾ ........ , ನನ್ನ ಚಿತ್ರ ಯಾವಾಗ ಬರೀತೀರಿ....” ಎಂಬ ತನ್ನ ಬಹುದಿನದ ಪ್ರಶ್ನೆಗೆ ಉತ್ತರ ಸಿಕ್ಕಿತ್ತು.
“ ಅದಕ್ಕೂ ಸಂದರ್ಭ ಕೂಡಿ ಬರ್ಬೇಕು. ಸಮಯ ಸ್ಪೂರ್ತಿ ಸಿಗಬೇಕು.... ” ಹಿಂದೆ ಅಭಿರಾಮ ಹೇಳಿದ್ದ.

ಆ ಸಂದರ್ಭ ಯಾವುದಾಗಿತ್ತು ? ಆ ಸ್ಪೂರ್ತಿ ಕೆಲವೇ ಕ್ಷಣಗಳದಾಗಿತ್ತು. ತಾನು ತಾಸುಗಟ್ಟಲೆ ಕುಳಿತು ಪೋಸು ಕೊಡಲಿಲ್ಲ. ಬಾವನ ಸ್ಪೃತಿಪಟಲದಲ್ಲಿ ಅದೆಂತಹ ಸೂಕ್ಷ್ಮತೆ, ಅದ್ಭುತ ಶಕ್ತಿ ! ಕುಸುರಿ ಕೆಲಸ ! ಆಧುನಿಕ ಛಾಯಾಗ್ರಹಣಕ್ಕೂ ಮಿಗಿಲಾದ ಪರಿಪೂರ್ಣ ಸೃಷ್ಟಿ. ತನ್ನನ್ನು ಅಂದು ನೋಡಿದಂತೆ ಸಜೀವಗೊಳಸಿಬಿಟ್ಟಿದ್ದಾರೆ, ನಿರ್ವಾಣ ಸ್ಥಿತಿಯಲ್ಲೆ ! ನೋಡುತ್ತಿದ್ದಂತೇ ನಾಚಿ ನೀರಾದಳು ಲಾವಣ್ಯ. ತನ್ನ ಬಾವ ಅಭಿರಾಮನ ಅಂತರ್ ದೃಷ್ಟಿ ಅನುಪಮವೆನಿಸಿತು.
ಹೀ ಈಸ ರಿಯಲೀ ಗ್ರೇಟ್, ಹೆಣ್ಣನ್ನು ಹೇಗೆಂದರೆ ಹಾಗೆ ಎದುರಿಗೆ ಬೆತ್ತಲೆ ನಿಲ್ಲಿಸಿಕೊಂಡು ಬಾಯಿ ಚಪ್ಪರಿಸುತ್ತಾ ಹಣದಾಸೆಗಾಗಿ ಪೋಟೋ ಕ್ಲಿಕ್ಕಿಸುವ ಪೋಟೋಗ್ರಾಫರ್ ಗಳೆಲ್ಲಿ ? ಅಮೋಘ ತೈಲವರ್ಣ ಸಂಯೋಜನೆ! ತನ್ನ ಬಾವನ ನೈಪುಣ್ಯತೆಗೆ ಹೆಣ್ಣಿನ ನಗ್ನತೆಯೂ ಶೋಭೆಯಿಂದ ಕಂಗೋಳಿಸಿದೆ! ಸೌಂದರ್ಯವೆಂಬುದು ನೋಡುವ ಕಣ್ಣುಗಳಲ್ಲಿ ಎಂಬ ಮಾತು ನಿಜವಾಗಿದೆಯಲ್ಲ !

“ ಈ ಚಿತ್ರ ನಿನಗೆ ಹಿಡಿಸಿತೇ ಲಾವಣ್ಯ ? ” ಮೆಲ್ಲನೆ ಹೆಜ್ಜೆ ಹಾಕಿ ಹಿಂದಿನಿಂದ ಒಳಬಂದ ಅಭಿರಾಮ ಕೇಳಿದ್ದ.
“ ಅದ್ಬುತ ರಚನೆ ! ಬಾವಾ ಕಲಾ ಸೃಷ್ಟಿಯಲ್ಲಿ ಹೆಣ್ಣಿನ ಔನತ್ಯವನ್ನೂ ಕ0ಡಿದೆ.” ಲಾವಣ್ಯ ಎದೆ ತುಂಬಿ ಹೊಗಳಿದಳು.
“ ಇದನ್ನು ನಿನಗೆ ಕೊಡಲೇನು .... ? ”
“ ಬೇಡ ಬಾವಾ, ನನ್ನ ಪ್ರೀತಿಯ ಕಾಣಿಕೆಯಾಗಿ ಇದು ನಿಮ್ಮಲ್ಲೇ ಇರಲಿ ” ಅವಳೆ0ದಳು.
“ ಇದನ್ನೇಲ್ಲಾ ಅಶ್ಲೀಲ ಎನ್ನುತ್ತಿಯೋ ಎಂಬ ಅಂಜಿಕೆ ಇತ್ತು. ನಿನ್ನ ಅಭಿಮಾನವು ಅಳತೆಗೆ ಮೀರಿದ್ದು ಲಾವಣ್ಯ. ”
ತಾನು ಅದೆಷ್ಟೋ ಅಶ್ಲೀಲ ಭಂಗಿಗಳಲ್ಲಿ ಪೋಸು ಕೊಟ್ಟು ದೈಹಿಕ ಸೌಂದರ್ಯವನ್ನೇ ಮಾರಾಟಕ್ಕಿಟ್ಟಿದ್ದಳು. ಅವಳ ಕಣ್ಣುಗಳು ಒಮ್ಮೇಲೆ ತುಂಬಿ ಬಂದಿದ್ದವು.
“ ಯಾಕೆ ಲಾವಣ್ಯ ಕಣ್ಣೀರು ? ” ಕೇಳಿದ ಅಭಿರಾಮ.
“ ಏನಿಲ್ಲ ಬಾವಾ, ನಾನೀಗ ಹೊರಗಿನ ಪ್ರಪಂಚವನ್ನು ಸಾಕಷ್ಟು ಕಂಡಿದ್ದೇನೆಲ್ಲ.... ” ಏನೋ ನೆನಪಿಗೆ ಬಂತು..... ಸತ್ಯ ಯಾವಾಗಲೂ ನಗ್ನವೇ. ಆದರೂ, ನಿಮ್ಮ ಕಲೆ ಶ್ರೇಷ್ಟವಾದದ್ದು. ಅದಕ್ಕೆ ಬೆಲೆ ಕಟ್ಟಲಾದೀತೇ... ! ಸೆರೆಗಂಚಿನಿಂದ ಕೆನ್ನೆಯೊರೆಸಿಕೊಂಡಳು.
ಅಭಿರಾಮ ಅವಳ ನೋವು ಅರ್ಥಮಾಡಿಕೊಳ್ಳಲೆತ್ನಿಸಿದ್ದ.
“ ನನ್ನ ಈ ಚಿತ್ರವನ್ನು ಅಕ್ಕ ನೋಡಿರ್ಬೇಕಲ್ವಾ......” ಕೇಳಿದಳು ಲಾವಣ್ಯ.
“ ಅವಳು ಎಷ್ಟೇ ಆಗಲಿ..... ನಿನ್ನ ಅಕ್ಕ. ಈ ಕಲಾವಿದರನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾಳೆ ”ಅಭಿರಾಮ ಸಾವಾಕಾಶವಾಗಿ ನುಡಿದಾಗ,
"ಹೌದೇನೂ..." ಲಾವಣ್ಯ ದಿಗ್ಮೂಡಳೇ ಆದಳು.
* ***

ಕಂಡು ಕಾಣದ ದಾರಿಯಲ್ಲಿ ಲಾವಣ್ಯ ಬಹುದೂರ ಕ್ರಮಿಸಿಬಿಟ್ಟಳು. ಛಾಯಾಪತಿಯೊಂದಿಗೆ ಅವಳ ಸ್ನೇಹ, ಸಂಬಂದ ಮತ್ತಷ್ಟು ರಂಗೇರಿತ್ತು. ವಾರಕ್ಕೆರೆಡು ಬಾರಿಯಾದರೂ ಲಾವಣ್ಯಳಿಗೆ ಪೋನ್ ಮಾಡಿ ತನ್ನ ಸ್ಟುಡಿಯೋ ಕಡೆ ಬರಲು ಹೇಳುತ್ತಿದ್ದ. ಆಗಾಗ್ಗೆ ಮಾಡೆಲಿಂಗ್ ಕ್ಷೇತ್ರದ ಘಟಾನುಘಟಿಗಳಿಗೆ ಇವಳನ್ನು ಪರಿಚಯಿಸಿ ಹೋಗಳುತ್ತಿದ್ದ. ಕೆಲವೊಮ್ಮೆ ಇವಳನ್ನು ಕರೆದುಕೊ0ಡು ಊರೂರು ಅಲೆಯುತ್ತಿದ್ದ. ಸ್ಟಾರ್ ಹೋಟೆಲ್‌ಗಳಲ್ಲಿ ರೂಮ್ ಮಾಡಿಕೊಂಡು ಸ್ವರ್ಗಸುಖವನ್ನು ತೋರಿಸಿದ್ದ.

ತನ್ನೊಂದಿಗೆ ರಮಿಸುವಂತಹ ಕ್ಷಣಗಳಲ್ಲಿ ಆಕೆ ದುಗುಡದಿಂದ ದನಿ ಎತ್ತಿದ್ದರೆ, “ ನಾನೀದ್ದೇನೆ, ನಿನ್ನನ್ನು ರಿಜಿಸ್ಟರ್ಡ ಮದುವೆ ಮಾಡಿಕೊಳ್ಳುವೆ. ಯಾಕೆ ಹೆದರುತ್ತಿ ! ಹುಚ್ಚುಹುಡುಗಿ ನೀನು ” ಎ0ದು ಅವಳ ಕೆನ್ನೆ ಹಿಂಡುತ್ತಿದ್ದ, ಚುಂಬಿಸುತ್ತಾ ಹತ್ತಿರಕ್ಕೆಳೆದುಕೊಳ್ಳುತ್ತಾ ಇದ್ದ. “ ನೀನು ಮನಸ್ಸು ಮಾಡಿದರೆ ದೊಡ್ಡ ಸಿನಿಮಾ ತಾರೆಯೇ ಆಗುತ್ತಿಯೇ.” ಅದೇ ಪಲ್ಲವಿ ಹಾಡುತ್ತಾ ಇದ್ದ.
ಹೀಗೊಂದು ತಿಂಗಳು ಕಳೆಯುವುದರಲ್ಲಿ ಲಾವಣ್ಯ. ಛಾಯಾಪತಿಯೇ ತನ್ನ ‘ ಭಾವಿ ಪತ್ನಿ ’ ಎಂದೇ ವೃತ್ತಿನಿರತರಲ್ಲಿ ಹೇಳಿಕೊಂಡು ಬರುವಂತಾದಳು ಕೂಡ. ಅವನೋ ಕೇಳಿದವರಿಗೆ ಹಾರಿಕೆಯ ಉತ್ತರ ನೀಡುತ್ತಿದ್ದುದು ಇವಳೀಗೆ ಗೊತ್ತಾಗಲೇ ಇಲ್ಲ !
ಲಾವಣ್ಯ ನಿಜಕ್ಕೂ ಭ್ರಮಾ ಲೋಕದಲ್ಲಿ ಮುಳುಗಿದ್ದಳು. ಆದರೆ, ಅದರ ಅರಿವು ಅವಳಿಗೆಲ್ಲಿತ್ತು ?

ಕಡೆಗೂ ಒಂದು ದಿನ ಛಾಯಾಪತಿಯ ಬಣ್ಣ ಬಯಲಾಗಿತ್ತು. ಒಬ್ಬ ಮಹಾನ್ ಬಿಸಿನೆಸ್ ಮ್ಯಾಗ್ನೆಟ್ ಬಳಿ ಇವಳನ್ನು ಕಳುಹಿಸಿಕೊಡೋ ಏರ್ಪಾಟು ಮಾಡಿಬಿಟ್ಟ!
ಆತನ ಕಂಪೆನಿಯ ಯಾವುದೋ ಜಾಹೀರಾತು ಕೆಲಸಗಳಿಗೆ ಲಾವಣ್ಯಳೇ ಮಾಡೆಲ್ ! ಆತನ ಕಂಪೆನಿಯಿಂದ ತನಗೆ ಒಂದು ಲಕ್ಷ ರೂಪಾಯಿ ಬರುವುದಿದೆ. ನೀನೇ ಹೋಗಿ ಬಂದರೆ ಆ ಹಣ ಕೈಗೆ ಬೇಗ ಸಿಗುತ್ತದೆ ಎಂದು ಅವಳನ್ನೇ ಹೋಗಲು ಒತ್ತಾಯಿಸಿದ್ದ. ಲಾವಣ್ಯ, “ ನಾನೇಕೆ ಅಲ್ಲಿಗೆ ಹೋಗ್ಬೇಕು ? ” ನೀನೇ ಹೋಗಿಬರಬಾರೆದೇ ? ಎಂದು ವಾದಿಸಿದಳಾದರೂ ಪ್ರಯೋಜನವಾಗಲಿಲ್ಲ.
“ ಹಾಗೆಲ್ಲ, ವ್ಯಾಪಾರ – ವ್ಯವಹಾರಗಳಲ್ಲಿ ಸುಂದರಳಾದ ಹೆಣ್ಣಿನ ಆಕರ್ಷಣೆ ಅದೆಷ್ಟು ಕೆಲಸ ಮಾಡುತ್ತದೆಂದು ನಿನಗೆ ಮತ್ತೆ ಹೇಳಬೇಕಾಗಿಲ್ಲ ಲಾವಣ್ಯ ! ” ಆಗ್ರಹಪಡಿಸಿದ್ದ.
ಆ ಮಹಾಶಯ ಇಳಿದುಕೊಂಡಿದ್ದ ತ್ರೀ ಸ್ಟಾರ್ ಹೋಟೆಲಿನ ವಿಳಾಸವನ್ನು ಪಡೆದು ಹೊರಟಳು ಲಾವಣ್ಯ. ಆ ಹೋಟೆಲಿನ ಪಾವಟಿಗೆಗಳನ್ನು ಏರಿ ರಿಸೆಪ್ಷನಿಸ್ಟ್ ಕೌಂಟರ್ ನಲ್ಲಿ ವಿಚಾರಿಸಲಾಗಿ ಆತ ತನ್ನ ಕೋಣೆಯಲ್ಲಿ ಇಲ್ಲ. ಹೊರಗೆಲ್ಲೋ ಹೋಗಿರುವನೆಂದೂ, ಇನ್ನರ್ಧ ಗಂಟೆ ಕಾದರೆ ಖಂಡಿತಾ ಬರುವನೆಂದೂ ತಿಳಿಯಿತು, ಅಲ್ಲೇ ಕೌಂಟರಿನ ಎದುರಿನಲ್ಲಿಯೇ ಕಾಯುತ್ತಾ ಕುಳಿತಳು. ಅವಳ ತಲೆಯ ತುಂಬಾ ಕೆಟ್ಟ ಯೋಚನೆಗಳೇ. ಈ ಛಾಯಾಪತಿ ಹೀಗೇಕೆ ತನ್ನನ್ನು ಇಲ್ಲಿಗೆ ಒಂಟಿಯಾಗಿ ಕಳುಹಿಸಿದ್ದಾನೆ ! ಅವನ ಉದ್ದೇಶವೇನಿದ್ದಿತು ? ಹೀಗೆ ಸುಂದರ ಮುಖ ನೋಡಿದರೆ ಸಾಕು, ಈ ದೊಡ್ಡ ಮನುಷ್ಯನಿ0ದ ಹಳೆಯ ಬಾಕಿ ವಸೂಲಿ ಖಚಿತವೆಂದೇ ಇರಬೇಕು. ಈವಾಗಿದೆಲ್ಲ ಮಾರುಕಟ್ಟೆಯಲ್ಲಿ ಸಹಜವೇ, ಹೆಣ್ಣನ್ನೂ ಮುಂದಿಟ್ಟುಕೊಂಡು ದುಡಿಯುವ ಗಂಡಸರಿಗೆ, ಹೀಗೆ ತನ್ನಷ್ಟಕ್ಕೇ ಸಮಜಾಯಿಸಿಕೊಂಡಳು. ‘ ನಾನು ಮೋಹಕ ನಗೆ ನಗುತ್ತಲೇ ಇಲ್ಲಿಂದ ಕೆಲಸ ಸಾಧಿಸಿಕೊಂಡು ಹೋಗಬೇಕಲ್ಲ ! ’
ಅಷ್ಟರಲ್ಲಿ, ಹೊರಗೆ ಹೋಗಿದ್ದ ಆ ದೊಡ್ಡ ಮನುಷ್ಯ ಬಂದಿದ್ದ. ನೀಲಿ ಸೂಟಿನಲ್ಲಿದ್ದ ಆತ ಸರಸರನೆ ಪ್ರವೇಶಿಸಿದ್ದ. ಕೌಂಟರಿನ ಮುಂದೇಯೆ ಅವನು ಹಾದು ಹೋಗಲಿದ್ದಾಗ ಲಾವಣ್ಯ ಹುಬ್ಬೇರಿಸಿ ಅವನನ್ನೇ ನೋಡುವುದಕ್ಕೂ, ಲೇಡಿ ರಿಸೆಪ್ಷನಿಸ್ಟ್,
“ ಅವರೇ ಕೃಷ್ಣಾನಂದ್ ” ಎಂದು ಹೇಳುವುದಕ್ಕೂ ಸರಿಹೋಗಿತ್ತು. ಲಾವಣ್ಯ ಹೌಹಾರಿದಳು.
ಮತ್ತೆ ಮತ್ತೆ ಕೇಳಿದಳು, “ ಅವರೇನಾ ..... ನಿಜವಾಗ್ಲು..... ” ತನ್ನ ಕಣ್ಣುಗಳನ್ನು ತಾನೇ ನಂಬದಾದಳು.
“ ಹೌದು ಮೇಡಮ್ , ಅವರೇ...... ” ಸ್ವಾಗತಕಾರಿಣೀ ಒತ್ತುಕೊಟ್ಟು ನುಡಿದಳು.
“ ಆಂ ! ಅಂದು ರಾಕೇಶ ...... ಇಂದು ಕೃಷ್ಣಾನಂದ್ ! ”
ಅಂದು ತನ್ನ ಗಂಡನಾಗಿದ್ದ ಮದನ್‌ಕುಮಾರ್ ಈ ದೊಡ್ಡ ಮನುಷ್ಯನಿಗೆ ಅಲ್ಲವೇ ತನ್ನನ್ನು ಪಶುವಂತೆ ಮಾರಾಟ ಮಾಡಲು ಸಿದ್ದನಾಗಿದ್ದು ? ಇಂದು ? ತನಗೆ ಎರಡನೆಯ ಗಂಡನಾಗಿ ಬರಲಿರುವ ಛಾಯಾಪತಿ ಇದೇ ನೀಚನಿಗೆ ತನ್ನನ್ನು ಒಪ್ಪಿಸಲೆಂದು ಹೂಡಿರುವ ಸಂಚಲ್ಲದೇ ಇದು ಮತ್ತೇನು ! ಲಾವಣ್ಯ ಥರಥರ ನಡುಗಿಹೋದಳು.
“ ಓಹ್ ! ನೀವು ...... ಏನಿಲ್ಲಿಗೆ ಬಂದರಿ.... ? ” ತನಗೇನೂ ಗೊತ್ತಿಲ್ಲದವನಂತೆ ನಾಟಕೀಯ ನಗೆ ನಕ್ಕನವನು.
“ ನಿಮಗೇನು ಗೊತ್ತಿಲ್ಲವೇ ? ನನ್ನನ್ನು ಯಾರು ಇಲ್ಲಿಗೆ ಕಳುಹಿಸಿದ್ದೂಂತ ” “ ಇಲ್ಲವಲ್ಲ..... ! ”
“ ಛಾಯಾಪತಿ ;ಯಾರು ಗೊತ್ತಿಲ್ಲವೇ ನಿಮಗೆ ? ”
“ ಯಾರು ? ಆ ಪೋಟೋಗ್ರಾಫರ್ ಛಾಯಾಪತಿಯೇ..... ಗೊತ್ತು ಗೊತ್ತು..... ಆದರೆ...... ”
“ ಆದರೆ ....... ನಿವ್ಯಾಕೆ ನನ್ನನ್ನು ಬರಹೇಳಿದಿರಿ..... ನನಗೆ ಗೊತ್ತಿಲ್ವೇ ..... ! ”
“ ಛೇ, ಛೇ ..... ನೀನು ತಪ್ಪು ತಿಳಿಯಬೇಡ, ಇದು ಕೇವಲ ವ್ಯವಹಾರಿಕ . ಪ್ಯೂರ್ ಲೀ ಬಿಸಿನೆಸ್ ಆಫೇರ್. ”
‘ ವ್ಯವಹಾರವಂತೆ ! ನನ್ನನ್ನು ನೀನು ಎಂದೇ ಸಂಬೋದಿಸುತ್ತಿದ್ದಾನೆ. ಎಷ್ಟು ಸೊಕ್ಕಿದ್ದಿತ್ತು ! ನಾನು ಅಗ್ಗಕ್ಕೆ ಸಿಕ್ಕಿದ ವಸ್ತುವೆಂಬಂತೆ. ’
“ ಈ.... ಇಲ್ಲೇನು ನಮ್ಮ ಮಾತು. ರೂಮಿಗೆ ಬಾ ಲಾವಣ್ಯ.... ” ಪುನಃ ಅವನೇ ನಯವಾಗಿ ನುಡಿದಿದ್ದ. ಲಾವಣ್ಯಳಿಗೆ ಮೈಯೆಲ್ಲಾ ಉರಿದುಹೋಯಿತು. ಇವನ ಮುಖಕ್ಕೆ ಉಗಿದು ಇಲ್ಲೇ ಚೆನ್ನಾಗಿ ಮಂಗಳಾರತಿ ಮಾಡಿಬಿಡಲೇ ಎನಿಸಿತ್ತು. ಉಹೂಂ, ತಾನು ಹಾಗೆ ಮಾಡಿದರೆ ಜಾಣೆಯಾಗಲಾರೆ. ಇಲ್ಲಿಂದ ಸುಲಭವಾಗಿ ಜಾರಿಕೊಳ್ಳಲಾರೆ ಎಂದು ಅವಳ ಮನಸ್ನು ಎಚ್ಚರಿಕೆ ನೀಡಿತ್ತು.
“ ಸಾರಿ, ನೀವು ತುಂಬಾ ತಡ ಮಾಡಿದಿರಿ..... ನಾನೀಗ ತುಂಬಾ ಅರ್ಜೆಂಟಾಗಿ ಹೋಗಬೇಕು. ಆಮೇಲೆ ನಾನೇ ಪೋನ್ ಮಾಡಿ ಬರುತ್ತೇನೆ. ಹಣ ರೆಡಿಯಾಗಿರಲಿ, ಕ್ಯಾಷ್ ಬೇಕು. ಓ.ಕೆ. ಸೀಯೂ. ವೈಯಾರದ ನಗೆ ಬೀರಿದಳು.
ಅಲ್ಲಿಂದ ಕಾಲ್ತೆಗೆದವಳೇ ಹಿಂದುರುಗಿ ನೋಡದೇ ಹುಲಿಯನ್ನು ಕಂಡ ಹುಲ್ಲೇಯಂತೆ ಹಾರಿ ಆ ಹೋಟೆಲಿನ ಮೆಟ್ಟಿಲುಗಳನ್ನು ಸರಸರನೆ ಇಳಿದು ಬಂದಳು ಲಾವಣ್ಯ.
ಕೃಷ್ಣಾನಂದ್ ಅಲಿಯಾಸ್ ರಾಕೇಶ ನಿಂತಲ್ಲೇ ಕೈ ಕೈ ಹಿಸುಕಿಕೊಂಡ.
*** ***

ದಾರಿಯುದ್ದಕ್ಕೂ ತನ್ನ ವಿಧಿಯನ್ನು ಶಪಿಸಿಕೊಂಡಳು. ‘ ತಮ್ಮ ತೀಟೆ, ತೆವಲುಗಳನ್ನು ತೀರಿಸಿಕೊಂಡು ಕೈ ಬಿಡಬಯಸುವ ಛಾಯಾಪತಿಯಂಥ ಗೋಮುಖ ವ್ಯಾರ್ಘ, ಮೈಖೇಲ್ ನಂಥ ಕಾಮುಕ ನೋಟದ ಗಂಡಸರ ನಡುವೆ ಈ ಕ್ಷೇತ್ರದ ತೆರೆಮರೆಯಲ್ಲಿ ಸುಂದರಳಾದ ಹೆಣ್ಣು ಎಷ್ಟೋಂದು ಅಗ್ಗದ ವಸ್ತುವಾಗಿ ಬಿಡುತ್ತಾಳೆ.! ಇಲ್ಲಿ ನನ್ನಂಥ ಅಮಾಯಕಳೀಗೆ ಜಾಗವಿರಲಾರದು. ಈಗೀಂದೀಗಲೇ ಹೋಗಿ ಆ ಛಾಯಾಪತಿಗೆ ಛೀಮಾರಿ ಹಾಕಲೇ, ಅದರಿಂದ ತನಗೇನು ಉಪಕಾರವಾದೀತು ? ನೆಮ್ಮದಿ ಸಿಕ್ಕಿತು ? ಅಷ್ಟಕ್ಕೂ, ನಾನು ಏನು ಸಾಧಿಸಿಬೇಕೆಂದು ಈ ಮಾಡೆಲಿಂಗ್ ಫೀಲ್ಡ್‌ಗೆ ಬಂದೇ ? ಹಣ ಮಾಡಬೇಕೆಂದೇ..... ಭೋಗ ಜೀವನ ನಡೆಸಬೇಕೆಂದೇ..... ಅಥವಾ ಮಿಸ್ ವರ್ಲ್ಡ್ ಆಗುವುದು ನನ್ನ ಗುರಿಯಾಗಿತ್ತೇನು ? ಏನು ಇಲ್ಲದೆ ಸುಮ್ಮನೆ ನನ್ನ ಸೌಂದರ್ಯ ಮೆರೆಸುವ ಹವ್ಯಾಸವಾಗಿಯೇ ಇದನ್ನು ಆರಿಸಿಕೊಂಡೆನೇ ? ’
ಉಹೂಂ ಯಾವೊಂದಕ್ಕೂ ಅವಳಲ್ಲಿ ಉತ್ತರವಿರಲಿಲ್ಲ. ಆದರೆ, ಈಗ ಅವಳಿಗೆ ತನ್ನ ದಾರಿ ಯಾವುದೇಂದು ಸ್ಪಷ್ಟವಾಗುತ್ತಿದೆ. ಇದು ತನ್ನ ಪಾಲಿಗೆ ಇರುಳಿನ ಲೋಕದ ನಂಟೇ ಆಯಿತಲ್ಲ.... ಒಳ್ಳೆಯ ರೀತಿಯಲ್ಲೇ ಮುಂದುವರೆದು ಬೆಳಕಿನ ನಕ್ಷತ್ರದಂತೆ ಮಿನುಗುವ ಭಾಗ್ಯ ಅದೆಷ್ಟು ಹೆಣ್ಣುಗಳಿಗೆ ಲಭೀಸಿತು ಇಲ್ಲಿ !
ಲಾವಣ್ಯ ದಾಪುಗಾಲಿಕ್ಕುತ್ತ ಹಾಸ್ಟೆಲ್‌ಗೆ ಬಂದಾಗ ಸಂಜೆ ಆರು ಗಂಟೆಯಾಗಿತ್ತು. ಕೋಣೆಯೊಳಗೆ ಕಾಲಿಡುತ್ತಿದ್ದಂತೆ ರೋಸಿ ಹೇಳಿದಳು. “ ನಿಮ್ಮ ಬಾವ ಪೋನ್ ಮಾಡಿದ್ದರು. ನಿಮ್ಮ ಅಕ್ಕನಿಗೆ ಡೆಲಿವರಿ ಆಯಿತೆಂದು ತಾಯಿ, ಮಗು ಸುಖವಾಗಿದಾರಂತೆ. ಗಂಡುಮಗು. ಪಾಪ, ಸಿಸೇರಿಯನ್ ಕಷ್ಟವಾದ್ರೂ ದೇವರ ದಯೆಯಿಂದ ನಿಮ್ಮ ಅಕ್ಕ ಬದುಕುಳಿದಿದ್ದಾಳೆ. ನೀನು ಹೋಗಿ ಬಾ .....”
“ ನಾನೀಗಲೇ ಹೊರಟೆ ......” ಎಂದವಳೇ ಲಾವಣ್ಯ ಲಗುಬಗೆಯಿಂದ ತನ್ನ ಸೀರೆ, ಬಟ್ಟೆಗಳನ್ನು ಸೂಟ್ ಕೇಸಿಗೆ ಒತ್ತಿ ತುಂಬಿದಳು.
ರೋಸಿ ಚಕಿತಳಾಗಿ ನೋಡುತ್ತಲೇ ಇದ್ದಾಳೆ. “ ಯಾಕೇ ನೀನು ಅಕ್ಕನ ಬಾಣಂತನಕ್ಕೆ ಹೋಗುವ ಹಾಗಿದೆ.....” ಅಂದಳು.
“ ಅದನ್ನಾದ್ರೂ ಮಾಡೋಣ, ಪುಣ್ಯ ಬರುತ್ತೇಂತ, ರೋಸಿ, ನಾನು ಮರಳಿ ಬರಲಾರೆ ” ಎಂದಳು.
“ ನಿನಗೇನಾಯ್ತು ಇದ್ದಕ್ಕಿದ್ದ ಹಾಗೇ..... ”
“ ನಕ್ಷತ್ರ ಲೋಕದಲ್ಲಿ ಉಲ್ಕಾ ಪಾತ ಆಗೋದು ಸಹಜ ತಾನೇ...... ಅದನ್ನ ಯಾರು ಗಮನಿಸೋಕೆ ಹೋಗಲ್ಲ ಅಲ್ವಾ..... ? ಆಕಸ್ಮಾತ್ ಅಲ್ಲಿಂದ ಯಾರಾದ್ರೂ ಕೇಳಕೊಂಡು ಬಂದ್ರೆ ನಾನೆಲ್ಲಿದ್ದಿನೀಂತ ಹೇಳ್ಬೇಡ ಪ್ಲೀಸ್..... ”
“ ನಿನ್ನಿಷ್ಟದಂತೆ ಬದಕೋ ಸ್ವಾತಂತ್ರ್ಯ ನಿನಗಿದೆ. ನಿನ್ಯಾಕೆ ಉಲ್ಕೇಂತ ಭಾವಿಸ್ಬೇಕೂ ? ಆಗಲಿ ಸಿಸ್ಟರ್, ನೀನಿನ್ನು ಹೊರಡು. ಯಾಕೋ ನಿನ್ನ ಮನಸ್ಥಿತಿ ಸರಿಯಿಲ್ಲ. ”
“ ರೋಸಿ, ನಿನಗೆ ತುಂಬಾ ಹೆಲ್ಪಿಂಗ್ ನೇಚರ್ ಇದೆ. ನೀನು ಒಳ್ಳೆ ದಂತವೈದ್ಯೆಯಾಗಿ ಬಡವರ ಸೇವೆ ಮಾಡಬಹುದಲ್ಲಾ.... ? ” ಎಂದಳು ಲಾವಣ್ಯ.
“ ಅದ್ಸರಿ ನೀನು ? ”
“ ನಾನು ಪುಟ್ಟ ಮಕ್ಕಳಿಗಾಗಿ ಒಂದು ನರ್ಸರಿ ಸೆಂಟರ್, ಬೇಬಿ ಕೇರ್ ಅಂಥಾದ್ದೇನಾದ್ರೂ ಮಾಡೋಣಾಂತ. ”
“ ಅಂತೂ ನೀನು ಒಂದು ನಿರ್ಧಾರಕ್ಕೆ ಬಂದಿದ್ದಿಯಾನ್ನು. ಇಷ್ಟು ಬೇಗ ನನ್ನಿಂದ ದೂರ ಹೋಗ್ತಿಯ ಅಂದುಕೊಂಡಿರಲಿಲ್ಲ. ಗಾಡ್ ಬ್ಲೆಸ್ ಯೂ ಮೈ ಸಿಸ್ಟರ್ ! ನಿನ್ನ ಬದುಕಿನ ಲೋಕದಲ್ಲಾದ್ರೂ ನೀನೋಂದು ಬೆಳಕಿನ ನಕ್ಷತ್ರವಾಗ್ಬೇಕು ! ” ರೋಸಿ ತನ್ನ ಕಣ್ಣೊರೆಸಿಕೊಂಡಳು.
ಅವಳಿಗೆ ವಿದಾಯ ಹೇಳಿ ಹೊರಟಾಗ ಲಾವಣ್ಯಳ ಕಣ್ಣಂಚಿನಲ್ಲೂ ಕಂಬನಿ ತುಂಬಿ ಬಾರದಿರಲಿಲ್ಲ.

ನರ್ಸಿಂಗ್ ಹೋಮ್‌ನ ವಾರ್ಡಿನಲ್ಲಿ ಸಹನಾ ಬೆಡ್‌ನಲ್ಲಿ ಮಲಗಿದ್ದಾಳೆ. ಪಕ್ಕದಲ್ಲಿ ಅವಳ ಮುದ್ದಾದ ಗಂಡುಮಗು ನಿದ್ರಿಸುತ್ತಿತ್ತು. ತಂಗಿಯ ಆಗಮನವಾಗುತ್ತಿದ್ದಂತೆ ಲವಲವಿಕೆಯಿಂದಲೇ ಕಣ್ಣರಸಿಕೊಂಡಳು.
“ ಬಂದೆಯಾ ಲಾವಣ್ಯ ? ಹೇಗಿದ್ದಿಯಾ ..... ? ” ಕ್ಷೀಣ ಸ್ವರವೆತ್ತಿದ್ದಳು. ಲಾವಣ್ಯಳಿಗೆ ಒಮ್ಮೇಲೆ ದುಂಖ ಒತ್ತರಿಸಿಬಂತು.
“ ನಾನ್ ಕೇಳ್ಬೇಕೂ ಅಕ್ಕಾ, ನೀನು ಹೇಗಿದ್ದಿಯಾಂತ ? ಎಲ್ಲಿ ಮಗು ? ಓ, ಎಲ್ಲಾ ಬಾವನ ಹಾಗೇ ಸುಂದರ ಪುರುಷ ಬಿಡು ! ” ಮಗುವನ್ನು ಎತ್ತಿ ಮುತ್ತಿಟ್ಟಳು. ಅವಳ ಕಂಗಳೂ ತುಂಬಿಬಂದವು.
“ ಯಾಕೆ .... ? ” ಸಹನಾ ಆತಂಕಗೊಂಡಳು. “ ಇಲ್ಲ. ಇದು ಆನಂದಬಾಷ್ಪ ಕಣೇ. ನೀನು ತಾಯಿಯಾದುದಕ್ಕೇ, ನಾನು ಚಿಕ್ಕಮ್ಮನಾದುದಕ್ಕೆ, ಈ ಮಗು ನನ್ನನ್ನು ಚಿಕ್ಕಮ್ಮ ಎಂದು ಕರೆಯುವಾಗ ಎಂಥಾ ಸುಖವಿದೆ ಗೊತ್ತಾ....... ? ”
ಸಹನಾ ಮಂದಸ್ಮಿತೆಯಾದಳು. ಅದೇ ವೇಳೆಗೆ ಅಭಿರಾಮನೂ ಬಂದಿದ್ದ.
“ ಯಾಕೋ ನಿಮ್ಮ ನಾದಿನಿ ತೀರಾ ಡಲ್ ಆಗಿದ್ದಾಳೆ ” ಸಹನಾ ಹೇಳಿದಳು.
“ ಇಲ್ಲವಲ್ಲ..... ! ” ಲಾವಣ್ಯ ಸೆರೆಗಿನಿಂದ ಮುಖ ಒರೆಸಿಕೊಂಡು ಬೆರೆತ್ತಲೋ ನೋಡಿದಳು.
ಆದರೂ, ಅಭಿರಾಮ ಅವಳ ಮುಖವನ್ನು ಓದದೆಯೂ ಇರಲಿಲ್ಲ.
“ ಯಾಕೆ ಲಾವಣ್ಯ.....” ಎಂದು ಪ್ರಶ್ನಾರ್ಥಕ ನೋಟ ಹರಿಸಿದ್ದ.
ಆ ನೋಟವನ್ನು ಎದುರಿಸಲಾರದಾದವಳು ಲಾವಣ್ಯ.
ಮತ್ತೆ ಕೆಲವು ಕ್ಷಣಗಳು ಕಳೆದಿದ್ದವು. ನಾದಿನಿಯೊಂದಿಗೆ ನರ್ಸಿಂಗ್ ಹೋಮ್‌ನಿಂದ ಮನೆಗೆ ಮರಳಿದಾಗ ಅಭಿರಾಮ ಕೇಳಿದ. “ ಒಂದೆರಡು ದಿನ ಇರ್ತಿಯಲ್ಲ ಲಾವಣ್ಯ.....”
“ ಒಂದೆರಡು ದಿನ ಏನು ಬಾವಾ.... ನೀವು ಅವಕಾಶ ಮಾಡಿಕೊಟ್ಟರೆ, ನಾನು ಇಲ್ಲೇ....” ಎನ್ನುತ್ತಿದ್ದಂತೇನೆ ದುಃಖ ಉಮ್ಮಳಿಸಿ ಬಂತು ಅವಳಿಗೆ, “ ಬಾವಾ, ನಾನು ನಿಮ್ಮ ಮಾತು ಕೇಳೆದೇನೆ ತಪ್ಪು ದಾರಿ ತುಳಿದಿಬಿಟ್ಟೆ. ನನ್ನನ್ನು ಕ್ಷಮಿಸಿ ಬಿಡಿ ಬಾವಾ.....” ಅವನ ಕಾಲಿಗೆರಗಲು ಮುಂದಾದಳು.
ಅಭೀರಾಮ ಥಟ್ಟನೆ ತನ್ನಕಾಲು ಹಿಂತೆಗೆದುಕೊಂಡು ಸರಿದಿದ್ದ. “ ಛೇ ಇದೇನ್ ಮಾಡ್ತಾ ಇದೀಯಾ ! ಏಳು ಲಾವಣ್ಯ. ” ಅವಳ ಕಂಕುಳಿಗೆ ಕೈ ಹಾಕಿ ಎಬ್ಬಿಸಿದ್ದ. “ ನೋಡು ಲಾವಣ್ಯ, ನಡೆಯುವವರು ಎಡವದೇ ಇರಲಾರರಲ್ಲ. ಹಾಗೆಂದು ನಡೆಯುವದನ್ನು ನಿಲ್ಲಿಸಿಬಿಡಬಹುದೇ ಹೇಳು ! ನಾವು ಮುಂದೆ ನಡೆಯುತ್ತಲೇ ಇರಬೇಕು. ನಮ್ಮೊಳಗೆ ಬದಲಾಗುತ್ತಲೂ ಇರಬೇಕು. ”

“ಬಾವಾ, ನೀನೆಷ್ಟು ಸಹೃದಯರು. ನಿಮ್ಮ ತಿಳಿವಿನ ಹರವೂ ದೊಡ್ಡದು. ನಾನೂ ಮುಂದೆ ನಡೆಯುತ್ತೀನಿ. ಹೊಸ ಬದುಕು ಕಾಣಬಯಸುತ್ತಿನಿ.ನಿಮ್ಮ ಆಸರೆಯಲ್ಲಿ ಬಾವ. ” ಲಾವಣ್ಯ ಬಿಕ್ಕಳಿಸುತ್ತ ಅಭಿರಾಮನ ಎದೆಗೊರಗಿದ್ದಳು.

( ಮುಗಿಯಿತು)
"ರಾಗ ಸಂಗಮ" ದಲ್ಲಿ ಪ್ರಕಟಿತ

ಇರುಳ ನಕ್ಷತ್ರ-4 (ಕಿರು ಕಾದಂಬರಿ)

-4-
ಮಾರೆನೆಯ ದಿನ ಸಂಜೆ ರೋಸಿಯೊಂದಿಗೆ ಲಾವಣ್ಯ ಛಾಯಗ್ರಾಹಕ ಛಾಯಾಪತಿಯನ್ನು ಭೇಟಿಯಾದಳು. ಛಾಯಾಪತಿ ! ತನ್ನ ಹೆಸರನ್ನು ಅನ್ವರ್ಥಗೊಳಿಸಿಗೊಂಡಿದ್ದಾನೆ. ಮಾಡೆಲಿಂಗ್ ಲೋಕಕ್ಕೆ ಪ್ರವೇಶಿಸಲಿಚ್ಚಿಸುವ ಹದಿಹರೆಯದ ಲಲನೆಯರು ನಾ ಮುಂದು ತಾಮುಂದು ಎಂದು ಈತನ ಬಳಿ ಬರುತ್ತಿದ್ದರು. ಹೀಗೆ ಲಾವಣ್ಯಳಂಥ ತುಂಬು ಸುಂದರಿ, ಅಪೂರ್ವ ಹೆಣ್ಣು ಬರುವುದು ಅಪರೂಪವೇ ! ಅಲ್ಲದೇ, ಇಂತ ಸಪೂರಳಾದ ಆಕರ್ಷಕ ಮೈಮಾಟದ ಹೆಣ್ಣು ಬಹುಬೇಗ ಈ ಕ್ಷೇತ್ರದಲ್ಲಿ ಮೇಲೆ ಬರುತ್ತಾಳೆಂಬುದನ್ನೂ ತಿಳಿದವನೇ. ಅಂತೆಯೇ, ಮಾಡೆಲ್ ಆಗ ಬಯಸುವ ಹೆಣ್ಣೂ ಕೆಲ ವಿಷಯಗಳಲ್ಲಿ ಸಿದ್ದಳಾಗಿ ಮುಂದೆ ಬರಬೇಕಲ್ಲ. ನಾನಾ ಡಿಸೈನಿಂಗ್ ಉಡುಪುಗಳ ಖರ್ಚು, ಬ್ಯೂಟಿಪಾರ್ಲರ್ ಖರ್ಚು, ಪ್ರಾಯೋಜಕರನ್ನು, ಕೋ ಆರ್ಡಿನೇಟರ್ ಗಳನ್ನು ಸಂಪರ್ಕಿಸಲು ತಗಲುವ ವಾಹನದ ಬಾಡಿಗೆ ಇತ್ಯಾದಿ ಹಣವನ್ನೇಲ್ಲ ತಾನೇ ಭರಿಸಬೇಕು. ಮೊದಲು ಛಾಯಾಗ್ರಾಹಕರಿಂದ ತನ್ನ ಪೋಟೋಗ್ರಾಫಿಕ್ ಪೋಲಿಯೋ ;ಮಾಡಿಸಲು ಏನಿಲ್ಲವೆಂದರೂ ಐದಾರ ಸಾವಿರ ರೂಪಾಯಿಗಳ ಖರ್ಚು ಹೊರಲು ಸಿದ್ದಳಿರಬೇಕು.
“ ಕೆಲ ಛಾಯಾಗ್ರಾಹಕರು ನಂಬಿಸಿ ಮೋಸ ಮಾಡ್ತಾರೆ. ಈ ಛಾಯಾಪತಿ ಹಾಗಲ್ಲ, ನಂಬಿಗಸ್ಥ, ಗುರಿ ಮುಟ್ಟಿಸೋ ಸ್ಪ್ರಿಂಗ್ ಬೋರ್ಡ್ ಇದ್ದ ಹಾಗೆ. ನಿನಗೆ ಒಳ್ಳೆ ಷೇಪ್ ಕೊಟ್ಟು ಬೇಗ ಜಂಪ್ ಕೊಡಿಸ್ತಾನೆ. ನೀನು ಚಳಿ ಬಿಡ್ಬೇಕು. ಅವನು ಹೇಳಿದ ಹಾಗೆ ಕೇಳಿ ಪೋಸ್ ಕೊಡ್ಬೇಕಷ್ಟೇ ! ” ರೋಸಿ ಪೂರ್ವ ಸಿದ್ದತೆಯಿಂದ ಆರಂಬಿಸಿ ಲಾವಣ್ಯ ಮಾನಸಿಕವಾಗಿ ಹೇಗೆ ಎದುರಿಸಲು ಸನ್ನದ್ದಳಾಗಬೇಕೆಂಬುದರ ಬಗ್ಗೆ ಸಾಕಷ್ಟು ವಿವರಣೆ ಕೊಟ್ಟಳು. ಸ್ಟುಡಿಯೋದಲ್ಲಿ ಛಾಯಾಪತಿ ಎದುರಿಗೆ ಲಾವಣ್ಯ ಅವನು ಹೇಳಿದಂತೆ ಉಡುಪು ಧರಿಸಿ, ಮೇಕಪ್ ಮಾಡಿಸಿಕೊಂಡು ನಿಂತಾಗ, “ ರಿಯಲೀ...... ಗುಡ್ ಫಿಗರ್ , ಗುಡ್ ಪ್ಯೂಚರ್..... ” ದೊಡ್ಡ ಉದ್ಗಾರ ತೆಗೆದಿದ್ದ.

ಲಾವಣ್ಯ, ಬರುಬರುತ್ತಾ ಲಜ್ಜೆ ತೊರೆದುಬಿಟ್ಟಳು. ನಾನ ಡಿಸೈನ್‌ಗಳ ಉಡುಪುಗಳನ್ನು ತೊಟ್ಟಳು. ಹಲವಾರು ಭಂಗಿಗಳಲ್ಲಿ ಅವನದೇ ನಿರ್ದೇಶನವಾದಂತೆಲ್ಲ ಧೈರ್ಯದಿಂದಲೇ ಎದೆಯುಬ್ಬಿಸುತ್ತಾ ಪೋಸ್ ಕೊಡಲಾರಂಭಿಸಿದಳು. ಆತ ಮಧ್ಯೆ ಮಧ್ಯೆ ಇವಳ ಸನಿಹಕ್ಕೆ ಬಂದು ಮೈ ಕೈ ಮುಟ್ಟಿ, ಉಬ್ಬಿದೆದೆ ಇನ್ನೂ ಆಕರ್ಷಕವಾಗಿಸಲು ಕೈಯಾಡಿಸಿ,
ಓರೆ ನಿಂತಾಗ ಹೇಗೆ ತೋರಬೇಕೆಂದು ನಿತಂಬಗಳ ಮೇಲೆ ತಟ್ಟಿ, ಟೇಕ್‌ಗಳ ಮೇಲೆ ಟೇಕ್‌ ತೆಗೆಯುತ್ತಲಿದ್ದಾಗ ಇವಳಿಗೋ ತೀರ ಮುಜುಗರವಾಗುತ್ತಿತ್ತು. ಅದ್ಹೇಗೆ ಟೇಕ್ ಗಳನ್ನು ಓಕೆ ಮಾಡಿದ್ದಳೋ ಅವಳಿಗೆ ಗೊತ್ತಿರಲಿಲ್ಲ.
ಅಲ್ಲಿಂದ ಹೊರಬಿದ್ದಾಗ ರೋಸಿ ಇವಳ ಬೆನ್ನು ಬಳಸಿಕೊಂಡು.
“ ಈ ಫೀಲ್ಡ್ ನಲ್ಲಿ ಇದೆಲ್ಲಾ ಕಾಮನ್. ಮೈ ಹಗುರವಾಗಿಟ್ಟುಕೊ ಬೇಕು..... ನಿರ್ಭಿಡೆಯಾಗಿ ಪ್ರದರ್ಶಿಸಬೇಕು. ಹಣ, ಹೆಸರು ಬರುತ್ತಿದ್ದಂತೆ ಇವೆಲ್ಲ ಅಭ್ಯಾಸವಾಗಿ ಹೋಗುತ್ತೇ. ” ಹುರಿದುಂಬಿಸಿದ್ದಳು ಆ ಹುಡುಗಿ.

ಕೆಲವೇ ದಿನಗಳಲ್ಲಿ ಪೋಟೋ ಪೋರ್ಟ್ ಪೋಲಿಯೋ ರೆಡಿಯಾಗಿತ್ತು. ಲಾವಣ್ಯ ಅದನ್ನು ನೋಡುನೋಡುತ್ತಿದ್ದಂತೇ ದಿಗ್ಬ್ರಮೆಗೊಂಡಳು. ತಾನಿಷ್ಟು ಅನುಪಮ ಸುಂದರಿಯೆ ಎಂದು ಅತೀವವಾದ ಬಿಗುಮಾನದಿಂದ ಬೀಗಿದಳು. ಪೋಟೋಗಳು ಹಲವಾರು ಪ್ರತಿಗಳು ಹತ್ತು ಹಲವು ಕೋ- ಆರ್ಡಿನೇಟರುಗಳಿಗೆ ರವಾನಿಸಲ್ಪಟ್ಟವು. ಇವೆಲ್ಲ ಪ್ರಾರಂಭಿಕ ಖರ್ಚನ್ನು ರೋಸಿಯೇ ವಹಿಸಿಕೊಂಡಳು. ಈಗಾಗಲೇ ಲಾವಣ್ಯಳ ಉಳಿತಾಯ ಖಾತೆಯಲ್ಲಿ ಹಣ ಹತ್ತು ಸಾವಿರದಷ್ಟಿತ್ತು. ರೋಸಿ ಅವಳಿಂದೇನೋ ಖರ್ಚು ಮಾಡಿಸಲು ಅವಕಾಶವೀಯದಾದಳು.
‘ ಈ ಹುಡುಗಿ ಎಂತಹ ಸ್ನೇಹ ಮಯಿ! ನನಗಾಗಯೇ ತುಂಬ ರಿಸ್ಕ ತೆಗೆದುಕೊಂಡಿರುವಳಲ್ಲ ! ನನ್ನನ್ನು ಎಷ್ಟೋಂದು ಹಚ್ಚಿಕೊಂಡಿದ್ದಾಳೆ ! ’
“ ಏಯ್ ಹುಡುಗಿ ನಿನ್ನ ಉಪಕಾರ ಬಹಳ ಆಯ್ತು.... ಎಂದರೆ, ” ನಥಿಂಗ್ ಟು ವರಿ, ಮೈ ಡಿಯರ್ ಸಿಸ್ಟರ್...... ಐ ಲೈಕ್ ಯೂ ಸೋ ಮಚ್ . ಅನ್ತಾಳೆ, ಒಂಥರಾ ಪೋಸ್ ಕೊಡುತ್ತಾ !

ಬಳಕುವ ನಡಿಗೆಯ , ಬೆಡಗಿನ ರೂಪಸಿ ಲಾವಣ್ಯಳಿಗೆ ಸ್ವಭಾವದಲ್ಲೇ ಲಯವಿರುವುದರಿಂದ ಮಾಡೆಲಿಂಗ್ ಕಷ್ಟವೆನಿಸಲಿಲ್ಲ. ಜತೆಗೆ ಮಾತುಗಾರಿಕೆಯ ಜಾಣ್ಮೆ , ಕಣ್ಣಳತೆಯಲ್ಲೇ ಸೆಳೆಯುವ ತೀಕ್ಷ್ಣತೆ, ನಡೆಗೆಯ ಲಾಸ್ಯ ಇವುಗಳಿಂದ ಆಕೆ ಬಹುಬೇಗ ಮಾಡೆಲಿಂಗ್‌ನ ಒಂದೊಂದೇ ಮೆಟ್ಟಿಲುಗಳನ್ನು ಏರತೊಡಗಿದಳು. ತರಬೇತಿ, ಆಯ್ಕೆಗಳೊಂದಿಗೆ ಆ ಕ್ಷೇತ್ರದಲ್ಲಿರಬಹುದಾದ ಜಟಿಲ ಸಮಸ್ಯೆಗಳನ್ನು ಬಿಡಿಸಿ ಮುನ್ನುಗ್ಗ ತೊಡಗಿದಳು. ನಂತರದ ದಿನಗಳಲ್ಲಿ ಇವಳಿಗೆ ಪೋನ್ ಕರೆಗಳ ಮೇಲೆ ಕರೆಗಳು ಬರಲಾರಂಬಿಸಿದವು.
ಅತಿ ಶೀಘ್ರದಲ್ಲಿ ಆ ಕ್ಷೇತ್ರದಲ್ಲಿ ಹತ್ತು ವರುಷಗಳಿಂದಲೂ ಬೇಡಿಗೆಯಲ್ಲಿರುವ ಮಾಡೆಲ್ ಗಳನ್ನು ಹಿಂದೆ ಹಾಕಿದಳು. ತೀರ ಅಶ್ಲೀಲವೆನೆಸದಂತ ಡಿಸೈನರ್ ಉಡುಪುಗಳಲ್ಲಿ ತಾನೇ ತಾನಾಗಿ ಮಿಂಚ ತೊಡಗಿದಳು. ತನ್ನ ಎದ್ದು ತೋರುವ ವ್ಯವಹಾರಿಕ ರೀತಿ ರಿವಾಜುಗಳಿಂದಾಗಿ ಎಲ್ಲರ ಮೆಚ್ವುಗೆ ಗಳಿಸಿದಳು. ಈಗ ಒಂದು ಸಾಮಾನ್ಯ ಜಾಹಿರಾತಿನ ಚಿತ್ರಗಳಿಗೆ ಅವಳು ಪ್ರಾಯೋಜಕರಿಂದ ಪಡೆಯತ್ತಿದ್ದ ಹಣ ಕಡಿಮೆ ಎಂದರೂ ಇಪ್ಪತ್ತೈದು ಸಾವಿರವಾಗಿತ್ತು.

“ ಏನ್ ಸಿಸ್ಟರ್, ಮಧು ಸಪ್ರೆಯಂತ ಫೇಮಸ್ ಮಾಡೆಲ್‌ನ ಕೂಡ ನಿನ್ನ ಮುಂದೆ ಸಪ್ಪೆ ಎನಿಸಿಬಿಟ್ಟೆಯಲ್ಲ ! ಇನ್ನು ಸ್ವಲ್ಪ ದಿವ್ಸ ಹೋದ್ರೆ ನನ್ನನ್ನೂ ಮಾತಾನಾಡಿಸುತ್ತಿಯೋ ಇಲ್ವೋ........ ” ಯಾಕೆಂದ್ರೆ, ಈ ಹಾಸ್ಟೆಲ್ ಬಿಟ್ಟು ಯಾವುದಾದ್ರೂ ಪಾಷ್ ಏರಿಯಾದಲ್ಲಿ ಒಂದು ಪ್ಲಾಟ್ ಹುಡ್ಕೊತೀಯ. ಆಮೇಲೆ...... ರೋಸಿ ಬೇಕೆಂತಲೇ ಕೆಣಕಿದಳು. ಏಯ್ ಸಾಕು ನಿಲ್ಸೆ ಹುಡುಗಿ. ನಿನ್ನ ಹೊಗಳಿಕೆ ಜಾಸ್ತಿಯಾಯ್ತು....... ಅವಳ ಹೊಗಳಿಕೆಗೆ ರೋಸಿ ಹೋದವಳಂತೆ ಲಾವಣ್ಯ ಅವಳ ಬೆನ್ನಿಗೆ ಗುದ್ದಿದಳು.

“ ಅಮ್ಮಾ, ಎಷ್ಟು ಗಟ್ಟಿಯಾಗಿ ಗುದ್ದುತ್ತಿಯಾ ! ಹ್ಞೂಂ...... ನೀನು ಈ ತಾರಾ ಲೋಕದಲ್ಲಿ ಗಟ್ಟಿಯಾಗಿ ನಿಲ್ಲಬೇಕೆಂದರೆ ನೀನಿನ್ನೂ ಹುಡುಗಿಯಂತೆ ಸ್ಲಿಮ್ ಆಗುವುದನ್ನೇ ಕೀಪಪ್ ಮಾಡ್ಬೇಕು. ವ್ಯಾಯಾಮ, ಯೋಗಾಸನ, ಡಯೆಟಿಂಗ್ ಶುರು ಮಾಡು. ಆವಾಗ ನೋಡು ನಿನ್ನ ವೃತ್ತಿಗೆ ಪ್ರೋಫೆಷನಲ್ ಟಚ್ ಬರೊದೂಂದ್ರೆ. ಆಗ ಹಣ ನಿನ್ನ ಪಾಲಿಗೆ ಚಿಂದಿ ಚಿಂದಿ! ” ರೋಸಿ ಒಮ್ಮೇಲೆ ಹಾರಿ ಆಕೆಯ ಕೊರಳಿಗೆ ಜೋತುಬಿದ್ದಳು. “ ಓಹ್ಹೋ...... ಮರಳು ಮಾಡಬೇಡ್ವೇ. ”

“ ನಾನೇಕೆ ನಿನ್ನ ಮರುಳು ಮಾಡ್ಲಿ...... ನೀನು ಈಗ ಜಗತ್ತನ್ನೇ ಮರಳೂ ಮಾಡೊ ಕಾಲ ದೂರವಿಲ್ಲ. ನೀನು ಕೆಲವು ಫ್ಯಾಷನ್ ಷೋಗಳಿಗೆ ಹೋಗ್ಬೇಕು. ರಾಂಪ್ ನಲ್ಲಿ ಎಕ್ಸಪೋಸ್ ಆಗ್ಬೇಕು. ಅಂತಹ ಅವಕಾಶ ನಿನಗೆ ಸಿಗಬೇಕು. ಆವಾಗ ನೋಡು ನೀನೇ ಮಿಸ್ ಇಂಡಿಯಾ ಸ್ಪರ್ಧೆಗಿಳಿಯೋಣಾಂತ ಯೋಚಿಸ್ತಿಯಾ. ”
“ ಅಯ್ಯೋ ಅದೆಲ್ಲ ಬೇಡ್ವೇ. ನಾನಿಷ್ಟರಲ್ಲೇ ತೃಪ್ತಳಾಗಿದ್ದೇನೆ. ”
“ ನಿನ್ನಂಥ ಅದ್ಬುತ ಸುಂದರಿಯರು ಮೊದಮೊದಲು ಹೀಗೆ ಹೇಳೊದು. ಆಮೇಲೆ ಅಂತಹ ಅವಕಾಶ ಸಿಕ್ಕರೆ ಸಾಕು ಹಾರಿ ಹೋಗೋದು. ”
“ ಸಾಕೇ ಸಾಕು ಬಿಡೇ ಹುಡುಗಿ. ನನಗೀಗ ನೀನು ಒದಗಿಸಿಕೊಟ್ಟಿರೋ ಅವಕಾಶ, ನನಗೇಕೋ ಮುಂದಿನದೆಲ್ಲ ನೆನೆಸಿಕೊಂಡರೆ ಭಯವಾಗುತ್ತೇ ” ಎಂದಿದ್ದಳು ಲಾವಣ್ಯ. ಏನೇ ಆಗಲಿ ರೋಸಿಯನ್ನೀಗ ಬಹಳ ಹಚ್ಚಿಕೊಂಡಿದ್ದಳು. ಚಿಕ್ಕವಯಸ್ಸಿನ ಹುಡುಗಿ ಸಾಮಾನ್ಯಳಲ್ಲ. ತನಗೆ ಶರವೇಗದಲ್ಲಿ ಹೆಸರು, ಹಣ ಬರುವಂತೆ ಮಾಡಿದಳಲ್ಲ ! ಹತಾಶೆಯಿಂದ ಬಳಲುತ್ತಿದ್ದಾಗ ತನಗೆ ಹೊಸ ಭರವಸೆಯ ಅಗತ್ಯವಿತ್ತು. ಆ ಭರವಸೆಯೆನೋ ದೊರಕಿತ್ತು. ಆದರೆ, ಈ ಇರುಳು ಬೆಳಕಿನ ಭ್ರಾಮಕ ಪ್ರಪಂಚದ ತೆರೆಮರೆಯಲ್ಲಿ ಏಕೋ ಭಯವೇ ಆವರಿಸುತ್ತಿತ್ತು.....

ಅದೋಂದು ಸಂಜೆ ಲಾವಣ್ಯ ರೋಸಿಯನ್ನು ಷಾಪಿಂಗ್‌ಗೆ ಕರೆದುಕೊಂಡು ಹೋದಳು. ಅವಳು ಬೇಡವೆಂದರೂ ಅವಳಿಗಾಗಿ ನಾಲ್ಕು ಜತೆ ಉಡುಪುಗಳನ್ನು ಖರೀದಿಸಿದ್ದಳು. ಎಂ. ಜಿ. ರೋಡಿನ ಪಬ್‌ವೊಂದರಲ್ಲಿ ಅವರಿಬ್ಬರೂ ಜ್ಯೂಸ್ ಹೀರುತ್ತ ಕುಳಿತಿದ್ದರು. ಅಲ್ಲೇ ಪ್ರತ್ಯಕ್ಷನಾಗಿದ್ದ ಛಾಯಾಪತಿ ! ಲಾವಣ್ಯಳ ಪಕ್ಕಕ್ಕೇ ಬಂದು ಕುಳಿತ. ಉಭಯ ಕುಶಲವನ್ನು ಆರಂಭಿಸಿದವನೆ ನೇರವಾಗಿಯೇ ವಿಷಯಕ್ಕೆ ಬಂದ. “ ಲಾವಣ್ಯ ಳಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವಿದೆ. ಅವಳು ಇನ್ನೂ ಪೂರ್ತಿ ಚಳಿ ಬಿಟ್ಟು ನಡ್ಕೊಬೇಕು. ಇಲ್ಲಿ ಎಲ್ಲರ ಜತೆ ಬೆರೆಯಬೇಕು ” ಅಂದ.
“ ಇನ್ನೂ ಚಳಿ ಬಿಟ್ಟು ನಡ್ಕೋಳೂದೋಂದ್ರೆ ಅಸಭ್ಯವಾಗಿಯೇ ಅಂಗ ಪ್ರದರ್ಶನ ಮಾಡಬೇಕು ! ಅದು ನನ್ನಿಂದ ಸಾಧ್ಯ ಇಲ್ಲಾ ” ಲಾವಣ್ಯ ಚುರುಕಾಗಿ ಹೇಳಿದಳು.
“ ಲಾವಣ್ಯ, ನಿನಗೆ ಇಲ್ಲಿ ಎಲ್ಲವೂ ಅರ್ಥವಾಗಿಲ್ಲ. ನಿನಗೆ ಅರ್ಹತೆ ಇದೆ. ತರಬೇತಿ ಸಾಲದು. ಇಲ್ಲಿ ಎಕ್ಸ್‌ಪೋಸ್‌ ಆಗುವುದರಲ್ಲಿ ಕೆಲವು ಟ್ರಿಕ್ಸಗಳೀವೆ, ನೀನು ವಾರಕ್ಕೋಮ್ಮೆಯಾದರೂ ನನ್ನ ಸ್ಟುಡಿಯೋಗೆ ಬಂದರೆ ಸಾಕು ನಾನು ಎಲ್ಲ ಹೇಳಿಕೊಡ್ತೀನಿ. ಛಾಯಾಪತಿ ಆಕೆಯನ್ನೇ ಕಂಗಳಿಂದ ನಿಟ್ಟಿಸಿದ್ದ.”
ರೋಸಿಯತ್ತ ಪ್ರಶ್ನಾರ್ಥಕ ನೋಟ ಬೀರಿದಳು ಲಾವಣ್ಯ. “ ಷೀ ಈಸ್ ರಿಯಲೀ ಲೌಲೀ ಗರ್ಲ್,. ನಿನ್ನಂಥ ಆತ್ಮೀಯಳ ಸಲಹೆ ಅವಳಿಗೆ ಅಗತ್ಯ. ” ಮತ್ತೆ ರೋಸಿಯತ್ತ ನೋಡಿ ಮಾತಿಗೆ ಜೇನು ಸವರಿದ ಛಾಯಾಪತಿ.
“ ವಾರಕ್ಕೋಂದ್ಸಾರಿ ಹೋಗ್ಬರಲಿಕ್ಕೇನು ಲಾವಣ್ಯ ? ಇಲ್ಲಿ ಎತ್ತರಕ್ಕೇರಬೇಕೆಂದರೆ, ಸ್ಟುಡಿಯೋದ ಕತ್ತಲೆ ಬೆಳಕಿನಾಟದಲ್ಲಿ ಮೊದಲು ಪಳಗಬೇಕು. ” ರೋಸಿ ನಗೆ ಸೂಸಿದಳು.ಸ ಲಾವಣ್ಯ ಮೌನವಾಗಿಯೇ ಇಬ್ಬರನ್ನೂ ವೀಕ್ಷಣೆ ಮಾಡುತ್ತ ಕುಳಿತಳು. ಮನಸ್ನು ಡೋಲಾಯ ಮಾನವಾಗಿತ್ತು. “ ಒಂದು ಕಂಡೀಷನ್ ಲಾವಣ್ಯ. ನೀನು ಪೋನಾಯಿಸಿ ಒಬ್ಬಳೇ ಬರ್ಬೇಕು. ಯಾಕೇಂತ ರೋಸಿನೇ ಕೇಳಿ ತಿಳಿದುಕೊ ” ಛಾಯಾಪತಿ ಅಚಾನಕ್ಕಾಗಿ ತಾನು ಬಂದರೂ ಇಲ್ಲೊಂದು ವ್ಯಾಪಾರ ಕುದುರಿತೆಂಬ ಗೆಲುವಿನಿಂದ ಹೊರಟುಬಿಟ್ಟ.
ಅವನು ಇತ್ತ ಮರೆಯಾಗುತ್ತಿದ್ದಂತೆ, “ ಇವನನ್ನ ಹೇಗೆ ನಂಬೋದೆ ಹುಡುಗಿ..... ! ತುಂಬಾ ಸೊಗಸುಗಾರನ ಹಾಗೆ ಕಾಣ್ತಾನೆ. ” ಲಾವಣ್ಯ ತಿಳಿದನಿ ಎತ್ತಿದಳು.
“ ನಂಬಲೇಬೇಕಮ್ಮ..... ಇಂಥ ಸೊಗಸುಗಾರನನ್ನೇ ನೀನು ಸಲೀಸಾಗಿ ನಿನ್ನ ಬುಟ್ಟಿಗೆ ಹಾಕ್ಕೋಂಡೇಂದರೆ ಅರ್ಧ ಗೆದ್ದ ಹಾಗೆ ..... ”
“ ಅದೇನೆ ಬುಟ್ಟಿಗೆ ಹಾಕ್ಕೋಳೂದೂಂದರೆ..... ನನಗೆ ಅದೆಲ್ಲ ಬರೋಲ್ಲ..... ಅವನ ಹತ್ತಿರ ಹೋಗಲೇಬೇಕೇನು ? ”
“ ಹೋಗದಿದ್ದರೆ ನಿನ್ನನ್ನ ನಡು ನೀರಲ್ಲೇ ಕೈ ಬಿಡ್ತಾನೆ..... ಬಹಳ ಇನ್‌ಪ್ಲೂಯೆನ್ಸ್ ಇರೋ ಮನುಷ್ಯ. ಮನಸ್ಸು ಮಾಡಿದರೆ ನಿನ್ನನ್ನ ಏನೂ ಮಾಡಬಲ್ಲ...... ”
“ ಓ ಹಾಗೇನು ! .... ಅವನಿಗೆ ಮದುವೆ ಆಗಿದೆಯೆನು ? ”
“ ಓ ಯಾಕೇ..... ”
“ ಸುಮ್ನೆ ಕೇಳಿದೆ.... ”
“ ಆಗಿಲ್ಲ.... ನೀನೂ ಪ್ರಯತ್ನಿಸಬಹುದಲ್ಲ...... ” ರೋಸಿ ಕುಹಕ ನಗೆ ನಕ್ಕಳು.
ಲಾವಣ್ಯ ಆದಾಗಲೇ ಯಾವುದೋ ಗುಂಗಿನಲ್ಲಿದ್ದಳು.

ಇಬ್ಬರೂ ಗೆಳತಿಯರೂ ಹಾಸ್ಟೆಲ್ಲಿಗೆ ವಾಪಾಸ್ಸಾಗಿದ್ದರು. ಆಗ ರಾತ್ರಿ ಎಂಟುವರೆ. ಎದುರಿಗೆ ಕಾಣಿಸಿದ ವಾರ್ಡನ್ ರಮಾಮಣಿ ಹೇಳಿದಳು, “ ಲಾವಣ್ಯ, ನಿಮ್ಮ ಬಾವಾ ಅಭಿರಾಮ ಕೇಳ್‌ಕೊಂಡು ಬಂದಿದ್ದರು. ನೀನು ಅವರ ಮನೆಗೆ ಪೋನ್ ಮಾಡ್ಬೇಕಂತೆ. ”
“ ಆಯ್ತು ಮೇಡಮ್ ...... ” ಎಂದು ರೋಸಿ ಜತೆ ಹಾಸ್ಟೆಲಿನೊಳಗೆ ಹೆಜ್ಜೆ ಹಾಕಲಿದ್ದಳು ಲಾವಣ್ಯ.
“ ಇಲ್ನೋಡು ಲಾವಣ್ಯ, ನಿನ್ನನ್ನ ಕೇಳಿಕೊಂಡು ಇಲ್ಲಿಗೆ ಬರೋ ಜನ ಹೆಚ್ಚುತ್ತಿದ್ದಾರೆ. ಇವರು ಬಿಡು, ನಿನ್ನ ಬಾವನ ವಿಷ್ಯ ಬೇರೆ. ನಿನಗಾಗಿ ಬರೋ ಪೋನ್‌ ಕಾಲ್‌ಗಳು ಬಹಳ. ನೀನು ಆ ಹಾಸ್ಟೆಲ್‌ನಲ್ಲಿರಬೇಕೆಂದರೆ, ಮಾಡೆಲಿಂಗ್ ಮಾಡೋದನ್ನ ಬಿಡ್ಬೇಕು. ಹ್ಞಾಂ, ನಿನಗೇನು ಈಗ ದುಡಿಮೆ ಚೆನ್ನಾಗಿದೆಯಲ್ಲ, ಹೈ ಸೊಸೈಟಿ ಏರಿಯಾದಲ್ಲೋಂದು ಫ್ಲಾಟ್ ಖರೀದಿ ಮಾಡ್ಕೊಂಡು ಹೋಗ್ಬಹುದಲ್ಲ.... ! ರಮಾಮಣಿ ಜಡಿಮಳೆ ಹೊಯ್ದಂತೆ ಮಾತಿನ ಮಳೆಗೆರೆದಳು. ಲಾವಣ್ಯ ಮೂಕವಿಸ್ಮಿತೆಯಾದಳು.”
“ ರೋಸಿ ನಿಲ್ಲು, ನೀನೂ ಕಾಲೇಜ್ ಹುಡ್ಗಿ ಅಲ್ಲಾ..... ನಿನ್ನ ಆಯ್ಕೆ ಯಾವುದಾದರೂ ಒಂದಾಗಿರಲಿ. ಮಾಡೆಲಿಂಗ್ ಅಥವಾ ಸ್ಟಡಿಯಿಂಗ್ ನಮ್ಮ ಹಾಸ್ಟೆಲ್‌ನಲ್ಲಿ ಚೆನ್ನಾಗಿ ಓದೋ ಹುಡುಗಿಯರೂ ಇದ್ದಾರೆ. ಅವರ ಪೇರೆಂಟ್ಸ್ ನಮ್ಮ ಮೇಲೆ ಬಹಳ ಭರವಸೆ ಇಟ್ಟಿದ್ದಾರೆ. ಈ ಹಾಸ್ಟೆಲ್‌ನಲ್ಲಿ ಓದಲಿಕ್ಕೆ ಒಳ್ಳೆ ವಾತಾವರಣ ಇದೇಂತ. ನೀವು ಅದನ್ನು ಹಾಳು ಮಾಡ್ತಾ ಇದ್ದೀರಾ. ನೀವು ಇಲ್ಲೇ ಇರಬೆಕೂಂದ್ರೆ ಇಲ್ಲಿನ ನಿಯಮ, ನಿಬಂಧನೆ ಪಾಲಿಸಬೇಕು. ತಿಳೀತೇ ? ರಮಾಮಣಿ ಕಟ್ಟಪ್ಪಣೆ ಮಾಡಿದ್ದಳು. ”
“ ಸಾರೀ..... ಮೇಡಮ್...... ”ರೋಸಿ ರಾಗವೆಂದಳು.
ಪಾಪ! ಅವಳಿಗೆ ಗೊತ್ತಿಲ್ಲದೇ ಈ ಮೇಡಮ್ ಯಾವಾಗಲು ಹೀಗೆ ಕಪ್ಪೆ ವಟಗುಟ್ಟಿದ ಹಾಗೇಂತ. ಸ್ವಲ್ಪ ಪೆಚ್ಚಾದವಳೆಂದರೆ ಲಾವಣ್ಯ, ಅವಳು, “ ನಮ್ಮ ಬಾವನವರಿಗೆ ಪೋನ್ ಮಾಡ್ಲೇ ಮೇಡಮ್ ......” ಮೆಲ್ಲನೆ ಕೇಳಿದಳು.
“ ಮಾಡು........ ಮಾಡೂ..... .”ರಮಾಮಣಿ ಅದೇ ಗತ್ತಿನಿಂದ ಹೇಳಿದಳು. ಲಾವಣ್ಯ ಪೋನ್ ರಿಸೀವರ್ ಎತ್ತಿಕೊಂಡು ನಂಬರ್ ಒತ್ತಿದಳು.
“ ಹಲೋ.....” ಆ ಕರೆಗೆ ಆ ಕಡೆಯಿಂದ ಅಬಿರಾಮ ಪ್ರತಿಕ್ರಿಯೆಸಿದ್ದ.
“ ನಾನು ಬಾವ, ಲಾವಣ್ಯ.... ಹೇಗಿದ್ದೀರಿ..... ? ”
“ ಚೆನ್ನಾಗಿದ್ದೇನೆ....... ನೀನು ಬಿಡು ಈಗ ಆಕಾಶದಲ್ಲೇ ಹಾರಾಡ್ತಾ ಇದೀಯ, ನಮ್ಮನ್ನೆಲ್ಲಾ ಮರೆತು ಬಿಟ್ಟಿಯೇನೂ..... ! ”
“ ಇಲ್ಲ ಬಾವ, ನನಗೂ ನಿಮ್ಮನ್ನ, ಅಕ್ಕನ್ನಾ ನೋಡಲ್ಲಿಲ್ಲಾಂತ ಮನಸ್ಸಲ್ಲೇ ಕೊರೆಯುತ್ತಿತ್ತು. ಅಕ್ಕ ಹೇಗಿದ್ದಾಳೆ ಬಾವ........ ”
“ ನಿನ್ನ ಅಕ್ಕ ತಾಯಿಯಾಗಲಿದ್ದಾಳೆ. ಅವಳಿಗೀಗ ಆರು ತಿಂಗಳು. ಆದರೆ ....”
“ ಆದರೇನು ಬಾವ, ಅಕ್ಕನಿಗೆ ಹುಷಾರಿಲ್ಲವೇ ? ”
“ ಅದೇ, ತುಂಬಾ ಸುಸ್ತೂ, ಆಯಾಸ ಅನ್ತಿರ್ತಾಳೆ. ಡಾಕ್ಟರು ಮಾತ್ರ, ಟಾನಿಕ್ ಬರೆದುಕೊಟ್ಟಿದ್ದಾರೆ. ತಗೋಳ್ತಾ ಇದ್ದಾಳೆ...... ಪೂರ್ತಿ ರೆಸ್ಟ್‌ನಲ್ಲಿರಬೇಕೂಂತಾರೆ. ನಿನ್ನನ್ನ ನೋಡ್ಬೇಕೂಂತ ಹೇಳ್ತಾನೆ ಇರ್ತಾಳೆ.”
“ ನಾನೂ ಬೆಳಿಗ್ಗೆನೆ.... ಆಗದೇ..... ? ”
“ ನಾನೂ ಫ್ಯಾಕ್ಟರಿಗೆ ಒಂದು ವಾರ ರಜೆ ಹಾಕಿದ್ದೇನೆ. ಹಾಗಾದರೆ ನೀನು ಬಂದು ಬಿಡು .... ” ಅಭಿರಾಮ ರಿಸೀವರ್ ಇಟ್ಟ ಸದ್ದು. ಲಾವಣ್ಯಳ ಮುಖ ಕಳಾಹೀನಾವಾಗಿತ್ತು. ‘ ಅಕ್ಕಾ ಈ ಬಾರಿ ಸುಖವಾಗಿ ಮೈ ಕಳೆದರೆ..... ಓ ದೇವರೇ, ಅಕ್ಕನ ಮಡಿಲು ತುಂಬಿದರೆ ಎಷ್ಟು ಚೆನ್ನ ! ’ ಅವಳಿಗಾಗಿ ಮನಸ್ಸು ಮರುಗಿತ್ತು. ಈಗಾಗಲೇ ಲಾವಣ್ಯಳ ವೈಯುಕ್ತಿಕ ವಿಷಯವನ್ನೆಲ್ಲ ಕೇಳಿ ತಿಳಿದಿದ್ದ ರೋಸಿ “ ಮೊದಲು ಹೋಗಿ ಬರಬಾರದೇ ಸಿಸ್ಟರ್..... ” ಅಂದಳು.

ಮರುದಿವಸ ಬೆಳಿಗ್ಗೆಯೇ ಲಾವಣ್ಯ ಅಕ್ಕನ ಮನೆಯಲ್ಲಿ ಕಾಲಿಟ್ಟಳು. ಅಭಿರಾಮ ಹಾಲ್‌ನಲ್ಲಿ ಅಂದಿನ ಪತ್ರಿಕೆ ಓದುತ್ತಾ ಕೂತಿದ್ದ. ಹೆಜ್ಜೆಯ ಸಪ್ಪಳವಾಗುತ್ತಿದ್ದಂತೆ ತಲೆ ಎತ್ತಿದ್ದ. ತನ್ನ ಪ್ರೀತಿಯ ನಾದಿನಿ ಎದುರಿಗೆ ನಿಂತಿದ್ದಾಳೆ ! ಬಹಳ ದಿವ್ಸಗಳ ನಂತರದ ಭೇಟಿ, ಲಾವಣ್ಯ ಬಾವನ ಮುಖದಲ್ಲೇ ಆಳವಾಗಿ ಮೂಡಿದ್ದ ಚಿಂತೆಯ ಗೆರೆಗಳನ್ನು ಗುರುತಿಸದಿರಲಿಲ್ಲ. ಏಕೋ ಅವಳ ಕಣ್ಣುಗಳು ತೇವಗೊಂಡವು.
“ ಬಾವಾ....... ” ದನಿ ಕಂಪಿಸಿತ್ತು.
“ ಲಾವಣ್ಯ .... ” ಆತನ ಮಾರ್ದನಿ ವಿಲಪಿಸಿತ್ತು. ನೂರು ಮಾತುಗಳೂ ಹೇಳಲಾಗದ ಅನುಬಂದದ ಸೆಲೆ ! ಕ್ಷಣಕಾಲ ಇಬ್ಬರೂ ಮೈ ಮರೆತರು..... ಇಹದ ನೋವನ್ನು ಹತ್ತಿಕ್ಕಲು ಮನಗಳು ಒಂದಾಗಿದ್ದವು.
ಸಹನಾ ಇನ್ನೂ ಹಾಸಿಗೆಯಿಂದ ಎದ್ದಿರಲಿಲ್ಲ. ತಂಗಿ ಬಂದ ಸಪ್ಪಳ ಕೇಳಿ ಎಚ್ಚರಗೊಂಡಳು. ಅವಳು ತನ್ನ ಕೋಣೆಗೆ ಬಂದಾಗ ಪ್ರಯಾಸ ಪಡುತ್ತಾ ಹಾಸಿಗೆಯಿಂದೆದ್ದು ಕುಳಿತಳು.
“ ಬಂದೇಯೇನು ? ನೀನು ಬರ್ತೀಯೋ, ಇಲ್ವೋ ಅನ್ಕೊಂಡಿದ್ದೆ.....” ಅಂದಳು.
“ ಯಾಕಕ್ಕಾ..... ? ”
“ ಈಗ ನಿನಗೆ ಕೀರ್ತಿ, ಹಣ ಎಲ್ಲಾ ಇದೆ, ನಾವು ಮರೆತು ಹೋಗಬಹುದಲ್ಲ.... ! ”
“ ಹಾಗೆಲ್ಲ ಹೇಳ್ಬೇಡಾ ಅಕ್ಕಾ...... ನನಗಾದರೂ ಬೇರೆ ಯಾರಿದ್ದಾರೆ ? ”
“ ಲಾವಣ್ಯ, ನಾನು ಹೆಚ್ಚು ದಿನ ಬದುಕೊದಿಲ್ಲ ಕಣೇ. ”
“ ಅಕ್ಕಾ..... ಏನ್ ಮಾತೂಂತ ಆಡ್ತಿಯಾ ? ನಿಂಗೆನಾಗಿದೆ, ಏನು ಆಗೊಲ್ಲಾ...... ” ಎಂದ ಲಾವಣ್ಯ ತನ್ನ ಬಾವನ ಕಡೆ ತಿರುಗಿ,
“ ಬಾವಾ, ಅಕ್ಕನಿಗೆ ಏನಾಗಿದೇಂತ ಡಾಕ್ಟರು ಹೇಳ್ತಾರೆ.... ” ಕೇಳಿದಳು.
“ ಹೆರಿಗೆ ಕಷ್ಟವಾದೀತು. ಅವಳು ಧೈರ್ಯವಾಗಿರಬೇಕಷ್ಟೇ. ಹಾಗೇನಾದ್ರೂ ಅದ್ರೆ ಸಿಸೇರಿಯನ್ ಮಾಡ್ಬೇಕೆಂದೇ ಹೇಳ್ತಾರೆ.....”
“ ಓ ಇದೇ ಏನೂ...... ಈವಾಗೆಲ್ಲಾ ಸಿಸೇರಿಯನ್ ಕೇಸು ಏನೂ ಅಲ್ಲಾ, ಅದಿಕ್ಕೆ ಗಾಬರಿಯಾಗೊದೂ..... ಇವಳು...... ? ಲಾವಣ್ಯ ಅಕ್ಕನ ಭುಜ ಆಲುಗಿಸಿದಳು.”
“ ನನ್ನ ದೇಹ ಸ್ಥಿತಿ ನಂಗೊತ್ತಿಲ್ಲವೇನೆ ..... ” ಸಹನಾ ನರಳಿದಳು.
“ ಅಕ್ಕಾ, ಮೊದಲನೇ ಹೆರಿಗೇಲಿ ಎಲ್ಲಾ ಹೆಂಗಸರು ಹೀಗೆ ಅನ್ನೋದು.... ” ಲಾವಣ್ಯ ಎಂದಳು.
“ ರೀ..... ಕಾಫಿ ತಗೊಂಬರ್ತಿರಾ.... ನಿಮ್ಮ ನಾದಿನಿಗೂ ಒಂದು ಕಪ್ಪು ತನ್ನಿಂದ್ರೆ..... ಸಹನಾ ಹೇಳಿದಳು. ”
ಮರುಕ್ಷಣದಲ್ಲಿಯೇ ಅಭಿರಾಮ ಎದ್ದು ಹೋಗಿದ್ದ. ಬಿಸಿ ಕಾಫಿಯ ಎರಡು ಕಪ್ಪು ಟ್ರೇನಲ್ಲಿಟ್ಟು ತಂದಿದ್ದ.
“ ಹೀಗೆ ...... ಅಟ್ ಲೀಸ್ಟ್ ಸಮಯ ಸಂದರ್ಭ ಅಂದ್ರೆ ಕುಳಿತಲ್ಲೇ ಕೈ ಹಿಡಿದಾಕೆಯ ಸೇವೆಯನ್ನು ಮಾಡೋ ಗಂಡ ಸಿಗಬೇಕೂಂದರೆ..... ಪುಣ್ಯ ಮಾಡಿರಬೇಕೂ ಅಕ್ಕಾ ನೀನೂ.....” ಲಾವಣ್ಯ ತನ್ನ ಬಾವನನ್ನು ಹೊಗಳಲು ಶುರುಮಾಡಿದಳು.
“ ಹೌದಮ್ಮ, ಹೆಂಡತಿಯೆಂದ್ರೆ ತಾಯಿಯೂ ಆಗ್ತಾಳೆ ಎಂದೇ ಭಾವಿಸ್ತಾರೆ. ನಾನು ನಿಜಕ್ಕೂ ತಾಯಿ ಆಗೋದು ಒಂದು ಮಗುವಿಗೆ ಜನ್ಮ ನೀಡಿದಾಗಲೇ ತಾನೇ ? ಆ ಶಕ್ತಿ ನನಗೆ ಇದೆಯೇನೆ ? ಇನ್ನೂ ನೀನು ಮನಸ್ಸು ಮಾಡಿದರೆ ಖಂಡಿತ ತಾಯಿ ಆಗ್ತೀಯಾ ನೋಡು. ” ಸಹನಾಳ ಸ್ವರ ಆರ್ತವಾಯಿತು. ತುಸು ತಡೆದು ಅವಳೇ ಹೇಳಿದಳು.
“ ಲಾವಣ್ಯ, ನಾನು ಕಣ್ಮುಚ್ಚಿಕೊಂಡ್ರೆ ನೀನು ನಿನ್ನ ಬಾವನ್ನ ಮರೀಬೇಡ್ವೇ. ನೀನೇ ಅವರಿಗೆ ಎಲ್ಲಾ. ” ಸಹನಾಳ ಕೆನ್ನೆ ಮೇಲೆ ಕಂಬನಿ ತೊಟ್ಟಿಕ್ಕಿತ್ತು.
“ ಅಕ್ಕಾ, ಯಾಕಿಷ್ಟು ಭಾವುಕಳಾಗ್ತಿಯಾ ! ನಿಂಗೇನೂ ಆಗೊಲ್ಲಾ ಅಕ್ಕಾ. ” ಅಕ್ಕನ ಪಕ್ಕಕ್ಕೆ ಒತ್ತಿರಿಸಿಕೊಂಡು ಕುಳಿತಳು.
“ ತಗೋಳೇ, ಕಾಫಿ ಆರಿ ಹೋಗುತ್ತೇ. ” ಕಪ್ಪು ಅವಳ ಕೈಗಿಟ್ಟಳು ಲಾವಣ್ಯ. ಅಭಿರಾಮ ಈ ಅಕ್ಕ ತಂಗಿಯರ ಪ್ರೀತಿ ವಾತ್ಸಲ್ಯವನ್ನು ಕಂಡು ಅವಕ್ಕಾಗಿದ್ದ.
“ ರೋಸಿ, ನಿನಗೆ ಬಾಯ್ ಫ್ರೆಂಡ್ಸ್ ಎಷ್ಟು ಜನ ? ” ಲಾವಣ್ಯ ಎಂದಾದರು ತನಗೆ ಈ ಪ್ರಶ್ನೆ ಹಾಕುತ್ತಾಳೆ ಎಂಬುದನ್ನೂ ರೋಸಿ ಊಹಿಸಿದ್ದಳು.
“ ಇದ್ದಾರೆ ಇದ್ದಾರೆ..... ನನ್ನ ಲೆಕ್ಕಕ್ಕೆ ಸಿಗೊದೂಂದ್ರೆ ಐವರು ಮಾತ್ರ ” ಅಂದಳು.
“ ಅವರ ಜತೆ ನಿನ್ನ ಸಂಬಂದ ಎಲ್ಲಿಯವರೆಗೆ ? ”
“ ಏನ್ ಸಿಸ್ಟರ್, ನನಗೆ ಕ್ಲಾಸ್ ತಗೊಳ್ತಾ ಇದೀಯಾ ... ? ” ಮೊರೆ ಊದಿಸಿಕೊಂಡವಳೇ,
“ ಊಂ...... ನಂಗೆ ನಿದ್ರೆ ಬರ್ತಾ ಇದೆ...... ” ಹೊದಿಕೆ ಮುಖದ ಮೇಲೆಳೆದುಕೊಂಡಳು.
ಹೌದು, ರಾತ್ರಿ ಹತ್ತೂವರೆ ಗಂಟೆಯಾಗಿತ್ತು.
“ ನನ್ನ ಮಾಜಿ ಗಂಡನ ವಿಷಯವನ್ನೇಲ್ಲ ನಿಂಗೆ ಹೇಳಿಲ್ವೇನೆ ಹುಡುಗಿ ? ”ಬೇಕೆಂತಲೇ ಕೆದಕಿದಳು.
“ ಆಗಲಿ ಸಿಸ್ಟರ್, ಹೇಳಿಯೇ ಬಿಡ್ತೀನಿ. ನನ್ನ ವಿಷಯ ನಿನಗೂ ತಿಳಿದು ಹೋಗಲಿ.... ಐದು ಜನ ಬಾಯ್ ಫ್ರೆಂಡ್ಸ್ ಇದ್ದಾರೆ. ಅವರಲ್ಲಿ ಇಬ್ಬರ ಜತೆ ದೈಹಿಕ ಸಂಭಂದ ಇದೆ. ”
“ ನಿನಗೆ ತಪ್ಪು ಮಾಡ್ತಾ ಇದೀನಿ ಅನ್ನಿಸಿಲ್ಲವೇ ? ”
“ ನಿನ್ನನ್ನಾ, ನಿನ್ನಿ ನೈಸ್ ಬಾಡಿನಾ ನೋಡ್ತಾ ಇದ್ದರೆ, ನಂಗೆ ಅಯ್ಯೋ ಪಾಪ ಅನ್ಸುತ್ತೇ... ”
“ ಯಾಕೇ... ? ”
“ ನೀನು ಈ ಸೈಂಟಿಫಿಕ್ ಯುಗದಲ್ಲಿ ಪ್ರೀತಿ, ಪ್ರೇಮಗಳ ಸಂಬಂದಗಳಲ್ಲೇ ಭಾವುಕಳಾದರೆ ಹೇಗೆ ? ”
“ ನಿನ್ನ ಮಾತೇ ನನಗೆ ಅರ್ಥವಾಗಲಿಲ್ಲ. ”
“ ಇಂದಿನ ಸೊಸೈಟಿಯಲ್ಲಿ ಅರ್ಥವಿಲ್ಲದ ಬದುಕನ್ನೇ ಅನುಭವಿಸುತ್ತಾ ಮಜವಾಗಿರೋರು ಬಹಳವಾಗಿದ್ದಾರೆ. ಸಿಸ್ಟರ್, ನಿನಗೆ ನನಗಿಂತ ಪ್ರಾಯ ಹೆಚ್ಚಾಗಿದೆಯಷ್ಟೇ. ಆ ಪ್ರಾಯದ ಹರವಿನೊಂದಿಗೆ ನಿನ್ನ ಯೋಚನೆಯ ದಿಕ್ಕೂ ಬದಲಾಗ್ಬೇಕು. ಇಲ್ಲದ್ದಿದ್ದರೆ, ಸುಖವನ್ನೇ ಕಾಣದೆ ಸೊರಗಿ ಹೋದಿಯೇ ಜೋಕೆ.... ! ” ರೋಸಿ ಕೊಂಕಿನಿಂದಲೇ ನುಡಿದಳು.
ಈ ಹದ್ದು ಮೀರಿದ ಹುಡುಗಿಯ ಹತ್ತಿರ ಮಾತಾಡಿ ಗೆಲ್ಲುವುದುಂಟೇ ಎನಿಸಿತು ಲಾವಣ್ಯಳಿಗೆ. ಆದರೂ, ಅವಳು ಹೇಳಿದ ಹಾಗೆ ತಾನೆಲ್ಲಿ ಸೊರಗಿಹೋಗುವೆನೋ ಎಂಬ ಆತಂಕವೂ ಬೆನ್ನು ಬೀಳದಿರಲಿಲ್ಲ.
ನನ್ನ ಮಾತು ಕಟುವಾಯ್ತೆ ಸಿಸ್ಟರ್ ! ಈವಾಗಿನ ಪ್ರಪಂಚದಲ್ಲಿ ಹೊಂದಿಕೊಂಡು ಸುಖಪಡುವುದೆಂದರೆ ಅದೂ ನಮ್ಮ ಕೈಯಲ್ಲೇ ಇದೆಯಲ್ಲ !.
“ ಹೌದು, ನೀನು ಹೇಳುವುದೂ ನಿಜಾನೇ, ಆದರೆ, ನಮ್ಮದೇ ಆಯ್ಕೆಯ ದಾರಿಯಲ್ಲಿ ನಾವು ಎಚ್ಚರದಿಂದಲೇ ನಡೆಯಬೇಕಲ್ಲವೇ ! ”
“ ಅದ್ಸರಿ ಛಾಯಪತಿಗೆ ಪೋನ್ ಮಾಡಿ ಅಪಾಯಿಂಟ್‌ಮೆಂಟ್‌ ತಗೋಳೋದಿಲ್ಲವೇನೂ ? ” ಥಟ್ಟನೆ ಮಾತು ಬದಲಿಸಿದಳು ರೋಸಿ.
ತಕ್ಷಣವೇ ಉತ್ತರಿಸಲಾಗದೆ ಕುಳಿತಳು ಲಾವಣ್ಯ.
ರೋಸಿ;ಮತ್ತೆ ಹೇಳಿದಳು,

“ ಛಾಯಾಪತಿಯೊಡನೆ ಒಂದೆರಡು ಗಂಟೆಗಳನ್ನು ಕಳೆದು ಬಾ. ನಿನಗೆ ಮುಂದೆ ಬಹಳ ಉಪಯೋಗವಾದೀತು. ”
“ ಅದೇನು ಉಪಯೋಗವೋ...... ನೀನು ಹೋಗಿದ್ಯಾ ? ”
“ ಹೋಗಿದ್ದೆ ನನಗೆ ನಿನ್ನ ಫಿಗರ್ ಇಲ್ಲವಲ್ಲ.... ! ”
“ ನಾನು ಒಂದು ಮಾತು ಹೇಳಲಾ ರೋಸಿ ? ”
“ ಹೇಳು ”
“ ನಿನಗೆ ಡೆಂಟಲ್ ಸರ್ಜನ್ ಆಗಲಿಕ್ಕೆ ಇಷ್ಟವಿಲ್ಲವೇ..... ”
“......”
“ ಹೇಳು ರೋಸಿ .”
“ ನನ್ನಂಥ ಸಾಧಾರಣ ಹೆಣ್ಣಿಗೆ ಈ ಮಾಡೆಲಿಂಗ್‌ನಲ್ಲಿ ಹೇಳಿಕೊಳ್ಳೋಂತ ಪ್ಯೂಚರ್ ಇಲ್ಲಾ ಅನ್ನಿಸಿದೆ, ನಿನ್ನನ್ನು ನೋಡಿದ ಮೇಲೆ. ”
“ ನನ್ನ ಸೌಂದರ್ಯದದಿಂದಲೇ ತಾನೆ ? ನನ್ನ ಸೌಂದರ್ಯ ನನ್ನನ್ನ ಏನೂ ಮಾಡಿಬಿಡಬಹುದು. ಅಲ್ವಾ ? ” ವಿಲಕ್ಷಣ ನಗೆ ನಕ್ಕಳು ಲಾವಣ್ಯ.
“ ಅದಿರಲಿ, ಮುಂದೇನು ನಿನ್ನ ಯೋಚನೆ ? ”
“ ಈಗಲೇ ಏನೂ ಹೇಳಲಾರೆ ”
ರೋಸಿ ಹಾಸೆಗೆಯಲ್ಲಿ ಮಗ್ಗುಲಾದಳು. ರಾತ್ರಿ ಒಂದು ಹೊತ್ತಿನಲ್ಲಿ ಧಡಕ್ಕನೆ ಎಚ್ಚರವಾಯಿತು. ಲಾವಣ್ಯಳಿಗೆ ಎದ್ದು ಬಾತ್ ರೂಮಿಗೆ ಹೋಗಿಬಂದಳು. ಆ ಬಳಿಗೆ ಹಾಸಿಗೆಯಲ್ಲಿ ಹೊರಳುವುದೇ ಆಯಿತು. ಪಕ್ಕದ ಬೆಡ್‌ನಲ್ಲಿ ರೋಸಿ ಮಲಗಿದ್ದಾಳೆ ದುಂಡುದುಂಡನೆಯ ಮುದ್ದಾದ ಹುಡುಗಿ. ಮೈಮರೆತು ನಿದ್ರೆ ಹೋಗಿದ್ದಾಳೆ. ಉಕ್ಕೇರುತ್ತಿರುವ ಪ್ರಾಯವೊಂದೇ ಅವಳ ಬಂಡವಾಳ, ಪ್ರಾಯಕ್ಕೆ ಬಂದರೆ ಕತ್ತೆಯೂ ಸುಂದರವೆಂಬಂತೆ. ತನಗಿಂತ ವಯಸ್ಸಿನಲ್ಲಿ ಚಿಕ್ಕವಳೇ.

ಈಗಲೇ ಪ್ರಪಂಚವನ್ನೇಲ್ಲ ಕಂಡವಳ ಹಾಗೆ ಆಡುತ್ತಾಳೆ. ಸುಖ ಎಂಬುದನ್ನೂ ಅವಳದೇ ರೀತಿಯಲ್ಲಿ ವ್ಯಾಕ್ಯಾನಿಸುತ್ತಾಳೆ. ತನ್ನ ದೇಹವನ್ನು ಡಯೆಟಿಂಗ್ ಮಾಡಿ ಚೆನ್ನಾಗಿಯೇ ಇಟ್ಟುಕೊಂಡಿದ್ದಾಳೆ. ತನ್ನ ಸುಖದ ಲೋಕದಲ್ಲಿದ್ದೂ ಯಾವುದೇ ಸೋ0ಕು ರೋಗ ತನ್ನ ದೇಹಕ್ಕೆ ತಗುಲದಂತೆ ಮುಂಜಾಗ್ರತೆ ವಹಿಸಿದ್ದಾಳೆ. ಆ ಬಗ್ಗೆಯೂ ಅನುಭವಿಯಂತೆ ನುಡಿಯುತ್ತಾಳೆ. ಅವಳ ದೃಷ್ಟಿಯಲ್ಲಿ ಬದುಕುವುದೂ ಮೊದಲು ಅನುಬೋಗದಿಂದ, ಅನಂತರ ಅನುಭವದಿಂದ. ಎಂಥಾ ಸೊಂಪಾಗಿ ನಿದ್ರೆ ಹೊಡೆಯುತ್ತಿದ್ದಾಳೆ ! ಅಸೂಯೆಯಾಯಿತು. ಲಾವಣ್ಯಳಿಗೆ ಹಾಸಿಗೆಯಲ್ಲಿ ಹೊರಳಿದಷ್ಟೂ ಮೈ ಬಿಸಿಯೇರುತ್ತಲೇ ಇದೆ. ಬಯಕೆ ಭುಗಿಲೇಳುತ್ತಿದೆ. ತಾನು ಮಾಡೆಲ್ ಆದ ಒಂದೇ ವರುಷದಲ್ಲಿ ಬೇಡಿಕೆಗಳು, ಹಗಲು, ರಾತ್ರೆ ಪೂರ್ಣ ಕೆಲಸದ ಒತ್ತಡ. ಡಿಸೈನರ್ಸ್, ಛಾಯಾಗ್ರಾಹಕರು, ಪ್ರಾಯೋಜಕೆರು ತನ್ನನ್ನು ಸುತ್ತುವರಿಯುವರು. ಅವಳಿಗೆ ಈಗೀಗ ಎಲ್ಲವೂ ಅಭ್ಯಾಸವಾಗತೊಡಗಿತ್ತು. ವೃತ್ತಿನಿರತ ಗಂಡಸರು ತನ್ನ ಮೈಮೇಲೆ ಕೈ ಯಾಡಿಸುವಾಗ, ತನ್ನನ್ನು ಟೇಕ್‌ಗಳಿಗೆ ಸಿದ್ದಗೊಳಿಸುವಾಗ ಕೆಲವೇಳೆ ಮೈ ಕಾವೇರುವುದು ಇತ್ತು. ಗಂಡಿನ ಸಂಗ ಸೌಖ್ಯವಿಲ್ಲದೇ ದೇಹ ತಹತಹಿಸುತ್ತಿತ್ತು. ತಾನೆಷ್ಟು ಸುಂದರಳಾದರೇನು ? ತನಗೆ ಸುಖವೆಂಬುದಿದೆಯೇ ? ತನ್ನಿ ಸೌಂದರ್ಯ ಇತರರಿಗಷ್ಡೇ ಮೀಸಲು. ಮಾರುಕಟ್ಟೆಯಲ್ಲಿ ಕಳೆದು ಹೋದ ಮೇಲೆ ತನ್ನೀ ದೇಹ ಸುಕ್ಕುಗಟ್ಟುತ್ತದೆ. ಸೌಂದರ್ಯ ಮಾಸುತ್ತದೆ.

ಮನುಷ್ಯ ಪ್ರಾಣಿ ಮಾತ್ರ ಮೈಥುನ ಕ್ರಿಯೆಯಲ್ಲಿ ಪರಮ ಸೌಖ್ಯ ಕಾಣಲು ಸಾಧ್ಯ. ನೀನು ನಿನ್ನ ದೇಹ ಸೌಂದರ್ಯವನ್ನು ಸಹಸ್ರಾರು ಜನರೆದುರಿಗೆ ತೆರೆದುಕೊಳ್ಳುತ್ತಿರುವೆಯೆಷ್ಟೇ. ನಿನಗೆ ಈ ಜನ್ಮದಲ್ಲಿ ಸುಖ ಹೀರುವುದೇ ಗೊತ್ತಿಲ್ಲ ! ಒಂಟಿ ಬದುಕು ಎಂದಿಗೂ ಬರಡು. ಕೊನೆಗೊಂದು ದಿನ ಯಾರಿಗೂ ಬೇಡವಾದ ಕೊರಡು. ಎಷ್ಟು ಗಳಿಗೆಯಾದರೇನು ? ಹೆಸರು ಮಾಡಿದರೇನು ? ಮರೆದರೇನು ? ನಿನಗೆ ಬೇಕಾದ ಸಂಗಾತಿಯೊಬ್ಬನನ್ನು ಆರಿಸಿ ಕೋ ಪ್ರೀತಿಸುವ ಹೃದಯವನ್ನು ಹುಡುಕಿಕೊ. ಬದುಕಿನ ಆನಂದವನ್ನು ಹೊಂದು ಎತ್ತ ಮಗ್ಗುಲಾದರೂ, ಕವುಚಿ ಮಲಗಿದರೂ ಮನಸ್ಸು ಚುಚ್ಚಿ ಹೇಳುತ್ತಲೇ ಇತ್ತು. ಮೈಕಾವು ಹೆಚ್ಚುತ್ತಿತ್ತು. ಹಾಸಿಗೆ ಮತ್ತೆ ಮತ್ತೆ ಮುಳ್ಳಾಗುತ್ತಿತ್ತು. ಇನ್ನೆನು ಬೆಳಗಾಗುವುದನ್ನೇ ಕಾದಿದ್ದವಳಂತೆ ಎದ್ದಳು. ಬಾತ್‌ರೂಮ್‌ ಸೇರಿ ಬಾಗಿಲು ಹಾಕಿಕೊಂಡಳು. ತಣ್ಣಿರೀನಲ್ಲಿ ಜುಳುಜುಳು ಮೀಯುವಾಗಲು ತನ್ನದೇ ಮೈ ಸೊಬಗು ತನ್ನನ್ನೇ ಅಣಕಿಸಿತು. ತೃಷೆ ಹಿಂಡಿತ್ತು. ಸುಖದ ತುಮುಲವೇ ತುಡಿದಿತ್ತು.

ಸ್ನಾನವಾದ ಮೇಲೆ ರೋಸಿಯೊಡನೆ ಮೆಸ್‌ನಲ್ಲಿ ತಿಂಡಿ ಮುಗಿಸಿಕೊಂಡು ಬಂದಳು.
“ ಇನ್ನೋಬ್ಬ ಡೆಸೈನರ್ ಮೈಖೇಲ್‌ ನನ್ನು ಕಾಣಲಿಕ್ಕೆದೆ ” ಎಂದಳು. ಲಾವಣ್ಯ ಕನ್ನಡಿ ಎದುರಿಗೆ ನಿಂತು ಕನಕಾಂಬರ ಬಣ್ಣದ ತೆಳು ಪತ್ತಾವನ್ನು ತನ್ನ ಹೊಕ್ಕಳಿನ ಕೆಳಗಿಳಿಸಿ ನೆರಿಗೆಗಳನ್ನು ಓರಣಗೊಳಿಸತೊಡಗಿದಳು.
“ ನೀನು ಸೀರೆ ಉಡುವ ಶೈಲಿಯೇ ಕಣ್ಣಿಗೊಂದು ಮಹದಾನಂದ ನೋಡು ! ” ಕಾಲೇಜಿಗೆ ಹೊರಟು ನಿಂತ ರೋಸಿ ತನ್ನ ಕಣ್ಣರಳಿಸಿದಳು.
ಲಾವಣ್ಯ ತುಟಿ ತುಳುಕಿಸಿ ನಕ್ಕಳು. ತಾನು ಹೊರನಡೆದು ಬಂದಿದ್ದಳು.
ತನ್ನ ಕಛೇರಿಯಲ್ಲಿ ಮೈಖೈಲ್ ಕುಳಿತಿದ್ದ. ಅವನ ಛೇಂಬರ್ ಹೊಕ್ಕಳು ಲಾವಣ್ಯ. ಅಷ್ಟೇನೂ ಸುಂದರವಲ್ಲದ ಅವನು, ಅವನ ವ್ಯಕ್ತಿತ್ವವೂ ಅಷ್ಟೇ. ಜೊಲ್ಲು ಸುರಿಸುವ ಅವಳನ್ನೇ ನೆಕ್ಕುವಂತ ನೋಡಿದನು.
ಲಾವಣ್ಯ ಅವನ ಎದುರಿಗೆ ಇದ್ದ ಖರ್ಚಿಯಲ್ಲಿ ಧಸಕ್ಕನೆ ಕುಳಿತಳು. ತೂಗಿ ತೊನೆವ ಆ ತನುವಿನ ಭಾರಕ್ಕೆ ಕುರ್ಚಿ ಕುಯ್ ಗುಟ್ಟಿತ್ತು.
“ ಓಹ್ ಎಂಥಾ ಸೊಗಸುಗಾತಿ ನೀನು ! ಮಿಸ್ ಇಂಡಿಯಾ ಆಗುವ ಎಲ್ಲಾ ಲಕ್ಷಣಗಳು ನಿನ್ನಲಿವೆ...... ” ಕಣ್ಣು ಹೊಡೆದನು ಮೈಖೇಲ್.
“ ನನ್ನ ಕೈಗೆ ಸಿಗಬೇಕು ನೀನು, ಅದೆಲ್ಲಿಗೆ ಹೋಗ್ತಿಯಾ ! ನನ್ನ ಟ್ರೈನಿಂಗ್ ತೆಗೆದುಕೊಂಡರೆ ನಿನ್ನ ಸ್ಟಾರ್ ಖಂಡಿತಾ ಬದಲಾಗಿ ಹೋಗುತ್ತೇ.... ” ಉನ್ಮಾದಗೊಂಡವನಂತೆ ಸಿಗರೇಟಿನ ಹೊಗೆಸುರುಳಿ ಸುರುಳಿಯಾಗಿ ಬಿಟ್ಟ.
“ ಥೂ ಹಾಳು ಹೊಗೆ ! ನಿನ್ನ ಹತ್ತಿರ ಇದ್ದರೆ ಉಸಿರುಗಟ್ಟುತ್ತದೆ ! ” ಮುಖ ಮುರಿದು ಕೈ ಅತ್ತಿತ್ತ ಆಡಿಸಿದಳು ಲಾವಣ್ಯ.
“ ನನಗೆ ಬರಲಿಕ್ಕೆ ಹೇಳಿದೆಯಲ್ಲ, ಅದೇನೂಂತ ಹೇಳು, ” ಕನಲಿದಳು. “ ಓ ಅದಾ ? ಒಂದು ದೊಡ್ಡ ಕಂಪೆನಿಯ ಹೊಸಾ ಪ್ರಾಡಕ್ಟ್ ನ್ನು ಮಾರ್ಕೆಟ್ಟಿಗೆ ಬಿಡುಗಡೆ ಮಾಡಲಿದೆ. ಆ ಸಂದರ್ಭದಲ್ಲಿ ಒಂದು ಭರ್ಜರಿ ಫ್ಯಾಷನ್ ಶೋ ನಡೆಯಲಿದೆ. ಅದಕ್ಕೆಲ್ಲಾ ಡ್ರೆಸ್ ಡಿಸೈನರ್ ನಾನೇ, ನಿನ್ನಂಥ ರನ್ನದ ಬೊಂಬೆಗೆ ರಾಂಪ್ ಮೇಲೆ ಹೆಜ್ಜೆ ಹಾಕಲಿಕ್ಕೊಂದು ಅವಕಾಶ ಕೊಡ್ಸೋಣಾ ಅಂತಾ .... ” ಮೈಖೇಲ್‌ನ ಕಣ್ಣು ಅವಳ ಏರಿಳಿವ ಎದೆಯ ಕಡೆಗೆ. “ ನನಗೆ ಸ್ವಲ್ಪ ಯೋಚನೆ ಮಾಡಲು ಅವಕಾಶ ಕೊಡು. ” ಲಾವಣ್ಯ ಸೆರಗನ್ನು ಎಳೆದುಕೊಂಡಳು.
“ ಇದರಲ್ಲಿ ಯೋಚ್ನೆ ಮಾಡೋದೇನಿದೆ ಹೇಳು, ಇಂಥಾ ಅವಕಾಶವನ್ನು ನೀನು ಬಿಡಬಾರದು ನೋಡು....”
ಟೇಬಲ್ ಮೇಲೆ ಗಾಜಿನ ಪೇಪರ್ ವೈಟ್ ನೊಡನೆ ಆಟವಾಡುತ್ತಿದ್ದ. ಅವಳ ಚಿಗುರು ಬೆರಳುಗಳನ್ನೊಮ್ಮೆ ಅವಳ ಹೊಳೆಯುವ ಕಂಗಳನ್ನೊಮ್ಮೆ ನಿಟ್ಟಿಸುತ್ತ ಹೇಳಿದ ಮೈಖೇಲ್,
“ ನಾನೇ ನಿನಗೆ ಡ್ರೆಸ್ ಡಿಸೈನರ್, ಟ್ರೈನರ್ ಎಲ್ಲಾ. ನನ್ನನ್ನ ನಂಬು ಲಾವಣ್ಯ...... ” ಅವಳ ಬೆರಳುಗಳ ಮೇಲೆ ಕೈ ಇಟ್ಟ.
ತಾನು ಕೈ ಹಿಂತೆಗೆದುಕೊಂಡು ಬಿಟ್ಟರೆ ಅವನ ಮುಖಕ್ಕೆ ರಾಚಿದ ಹಾಗೇ. ಹಾಗೆ ಮಾಡಿ ಜಯಿಸುವುದುಂಟೇ ? ಇವನ ವಿರೋಧ ಕಟ್ಟಿಕೊಂಡ ಕೆಲ ಮುದ್ದಾದ ಹುಡುಗಿಯರ ಕಥೆ ಎನಾಯಿತೆಂಬುದನ್ನು ತಿಳಿದ್ದಿದ್ದಳು.
“ ಮೈಖೇಲ್...... ನಾನು ಹೇಳಿದೆನಲ್ಲ. ನನಗೆ ಯೋಚ್ನೆ ಮಾಡಲು ಒಂದೆರಡು ದಿನ ಬೇಕು.” ಅವನ ಕೈ ಸವರಿ ತನ್ನ ಕೈ ಹಿಂತೆಗೆದುಕೊಂಡಳು, ಜಾಣ್ಮೆಯಿಂದ.
“ ಓ.ಕೆ. ಮೂರು ದಿನ ಟೈಮ್ ತಗೆದುಕೊ, ಆಮೇಲೆ ಪೋನ್ ಮಾಡು ನಂಗೆ. ” ಅವಳ ಮೃದು ಸ್ಪರ್ಶದಿಂದಲೇ ಮೆದುವಾಗಿದ್ದ ಮೈಖೇಲ್.
‘ ನಿನಗೆ ನಾನು ಪೋನ್ ಮಾಡಿದ ಹಾಗೆ ’ ಅಂದುಕೊಂಡಳು. ‘ ಇವನಿಗಿಂತ ಛಾಯಾಪತಿಯೇ ವಾಸಿ. ಅವನಲ್ಲೇನೋ ಸೆಳೆತವಿದೆ. ಅವನ ಸಾಮೀಪ್ಯದಲ್ಲಿ ನಾನು ಏನನ್ನೂ ಸಾಧಿಸಬಲ್ಲೆನೆಂಬ ಭರವಸೆ ಏಕೋ ಮೈ ತಳೆಯುತ್ತದಲ್ಲ ! ’ ಮೈಖೇಲ್ ಗೆ, “ ಬೈ ಬೈ ” ಹೇಳಿ ಎದ್ದು ಹೊರ ಬಂದಿದ್ದಳು.

ಎರಡು ದಿನಗಳು ಲಾವಣ್ಯ ಕೋಣೆ ಬಟ್ಟು ಹೊರ ಬರದಾದಳು. ಬೆಳಗಿನ ಸ್ನಾನ, ತಿಂಡಿ, ಮಧ್ಯಾಹ್ನದ ಊಟಕ್ಕೆ ಹೊರತಾಗಿ ಆಕೆ ಕೋಣೆಯಿಂದ ಹೊರಗೆ ಹೆಜ್ಜೆ ಇಡದಾದಳು. ರೋಸಿ ಮಾತನಾಡಿಸಿದರೆ ಚುಟುಕಾಗಿ ಪ್ರತಿಕ್ರಿಯೆಸುವಳು. ಇವಳ ಬಯಕೆಯ ಜ್ವರ ಏನೆಂದು ಅವಳೂ ಊಹಿಸಬಲ್ಲವಳೆ ಆದರೂ ಅಮಾಯಕಳಂತೆ ಇದ್ದು ಬಿಟ್ಟಳು.ನಾಲ್ಕನೆಯ ದಿನ ಸಂಜೆ ಛಾಯಾಪತಯೇ ಟೆಲಿಫೋನ್ ಕರೆ ನೀಡಿದಾಗ ಇದ್ದಕ್ಕಿದ್ದಂತೆ ಗೆಲುವಿನ ಖನಿಯಾದಳು, ಆವೋತ್ತೇ ರಾತ್ರೆ ಒಂಭತ್ತು ಗಂಟೆಗೆ ಬರಬೇಕೆಂದು ಅಪಾಯಿಂಟ್‌ಮೆಂಟ್ ಕೊಟ್ಟಿದ್ದ ಛಾಯಾಪತಿ. ಅದನ್ನೇ ಅತ್ಯಂತ ಖುಷಿಯಿಂದ ರೊಸಿಗೆ ಹೇಳಿದಳು. ಎಂಟೂವರೆಗೆ ಅತಿ ತೆಳುವಾದ ನುಣುಪಿನ ಆಕಾಶ ಬಣ್ಣದ ಸೀರೆಯನ್ನುಟ್ಟಳು. ಅದರ ನೆರಿಗೆಗಳನ್ನು ಒಪ್ಪವಾಗಿಸುತ್ತಾ ಕನ್ನಡಿಯ ಮುಂದೆ ನಿಂತು ಹಿಂದು ಮುಂದು ನೋಡಿಕೊ0ಡು ವೈಯಾರದಿಂದಲೇ ಬಳುಕಿದಳು ಲಾವಣ್ಯ. ರೋಸಿಯತ್ತ ಹೋಗಿ ಬರಲೇ ? ಎಂಬ ನೋಟಹರಿಸಿದಾಗ ರೋಸಿ ಆಕೆಯತ್ತ ಕಣ್ಣಗಲಿಸಿ, “ ನಿನ್ನನ್ನು ನೋಡುವುದೇ ಮನಸ್ಸಿಗೊಂದು ಮಹಾ ಖುಷಿ..... ” ಎಂದು ವಿಚಿತ್ರ ನಗೆ ನಕ್ಕು ಬೀಳ್ಕೋಟ್ಟಳು.

ಛಾಯಾಪತಿ ಮನ್ಮಥರೂಪಿ, ಅವಿವಾಹಿತ ಬೇರೆ, ತುಂಬಾ ಸ್ರ್ಟಿಕ್ಟ್ . ಸಿಕ್ಕ ಸಿಕ್ಕ ಹುಡುಗಿಯರ ಜೊತೆ ಚಕ್ಕಂದವಾಡುವವನಲ್ಲ ಎಂಬ ಹೆಸರು ಬೇರೆ ಪಡೆದಿದ್ದಾನೆ. ತನ್ನ ಕೆಲಸದಲ್ಲಿ ಒಂದು ಶಿಸ್ತು ರೂಢಿಸಿಕೊಂಡಿದ್ದಾನೆ. ಅವನ ಮೆಚ್ಚುಗೆ ಪಡೆದ ಯಾವ ಸುಂದರ ಮಾಡೆಲ್ ಗಳು ಸಹ ಅವನ ಗುಟ್ಟು ಏನೆಂದು ಬಿಟ್ಟುಕೊಡಲಾರರು. ಟೇಕ್‌ಗಳನ್ನು ಓಕೆ ಮಾಡುವಾಗ ಪಾಪ ಹೆಣ್ಣಿನ ಮನಸ್ಸನ್ನೊಂದಿಷ್ಟು ನೋಯಿಸಲಾರ. ಅಂತಹ ಚಾಕಚಕ್ಯತೆ ಅವನಿಗಿದೆಯಲ್ಲ. ಅಷ್ಟೋಂದು ಮೆದುವಾಗಿಯೇ, ತಾಳ್ಮೆಯಿಂದಲೇ ಹೇಳಿಕೊಡುವ ಜಾಣ್ಮೆಯೂ ಇದೆಯಲ್ಲ !
ವ್ಯವಹಾರದಲ್ಲಿ ಪ್ರಭಾವ ಶಾಲಿಯಾಗಿದ್ದ. ಪ್ರಾಯೋಜಕರ ಬಳಿ ವಸೂಲಿಗಾಗಿ ಕಳುಹಿಸಿಬಿಡುತ್ತಿದ್ದ. ಹೀಗಾಗಿಯೇ ಮಾಡೆಲ್‌ಗಳು ಅವನನ್ನು ನಂಬುತ್ತಿದ್ದರು. ಎಷ್ಟೋ ಹೆಣ್ಣುಗಳು ಈ ಸರಸಿ ಹಾಗು ರಸಿಕ ಮಹಾಶಯನನ್ನು ಒಳಗೊಳಗೆ ಪ್ರೀತಿಸುತ್ತಲೂ ಇದ್ದರೂ. ಇವನ ಕೃಪಾದೃಷ್ಟಿಗಾಗಿ ಕಾಯುತ್ತಲೂ ಇದ್ದರು. ಇಂಥ ಮನುಷ್ಯನ ಆಕರ್ಷಣೆಗೆ ಲಾವಣ್ಯ ಒಳಗಾದುದರಲ್ಲಿ ಆಶ್ಚರ್ಯವೇನಿರಲಿಲ್ಲ. ಲಾವಣ್ಯ ಛಾಯಾಪತಿಯ ಸ್ಟುಡಿಯೋ ತಲುಪಿದ್ದಳು. ಅವನು ಮುಗುಳನಗೆ ಬೀರಿ ಸ್ವಾಗತಿಸಿದ್ದ.
ಸ್ಟುಡೀಯೋದಲ್ಲಿ ಇದ್ದ ಒಂದಿಬ್ಬರು ಗಿರಾಕಿಗಳನ್ನು ಕಳುಹಿಸಿದ ನಂತರ ಸ್ಟುಡಿಯೋ ಬಂದ್ ಮಾಡಿಬಿಟ್ಟ ಲಾವಣ್ಯಳನ್ನು ಒಳಗಿನ ಡಾರ್ಕ್‌ ರೂಮಿಗೆ ಬರಹೇಳಿದ. ಅವಳನ್ನು ಎದುರಿಗೆ ಕೂರಿಸಿಕೊಂಡು ಸ್ವಲ್ಪ ಹೊತ್ತು ತದೇಕವಾಗಿ ದಿಟ್ಟಿಸಿದ್ದ. ಗಹನಾ ಲೋಚನೆಯಲ್ಲಿ ಮುಳುಗಿದ್ದವನಂತೆ ಕಂಡ. ಅವನು ಹಾಗೆ ತನ್ನನ್ನೇ ದಿಗಂಬರ ದೃಷ್ಟಿಯಲ್ಲಿ ದಿಟ್ಟಿಸುತ್ತಿದ್ದರೆ, ಲಾವಣ್ಯಳಿಗೆ ಎಂದಿಲ್ಲದ ಲಜ್ಜೆ ಮೈಗೆಲ್ಲ ಸುತ್ತಿಕೊಂಡಿತು. ಕೊಂಚ ತಲೆ ತಗ್ಗಿಸಿದಳು.
“ ಇಲ್ನೋಡು ಲಾವಣ್ಯ, ನಾನು ಹೇಳುವುದನ್ನೂ ಮೊದಲು ಗಮನವಿಟ್ಟು ಕೇಳು. ನೀನು ಈ ನಾಚಿಕೆ ಬಿಟ್ಟು ಬಿಡು. ನೀರಿಗೆ ಇಳಿದಾಯಿತಲ್ಲ ! ಛಳಿ ಏನು ? ಮೈ ತೆರೆದು ಅಂಗ ವಿನ್ಯಾಸ ತೋರಿಸಲು ನಿನಗೆ ಭಯವೇತರದು ? ಶ್ರಿಮಂತ ತಂದೆ, ತಾಯಿಗಳೇ ತನ್ನ ಮುದ್ದು ಮಕ್ಕಳನ್ನು ನಮ್ಮ ಬಳಿ ಕರೆ ತಂದು ನಿಲ್ಲಿಸುತ್ತಾರೆ. ಅವುಗಳ ಮೊಲೆಕಟ್ಟನ್ನು ಎತ್ತಿ ಎತ್ತಿ ತೋರಿಸುತ್ತಾರೆ; ಅವಕಾಶಕ್ಕಾಗಿಯೇ ಅಂಗಲಾಚುತ್ತಾರೆ. ತಮ್ಮ ಮಗಳು ಮಾಡೆಲ್ ಆಗಲು, ಫ್ಯಾಷನ್ ಶೋಗಳಲ್ಲಿ ಪ್ರದರ್ಶನ ನೀಡಲು, ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿವಿಧ ರೀತಿಯ ಉಡುಪುಗಳನ್ನು, ಅವಳಿಗಾಗಿಯೇ ಐವತ್ತು ಸಾವಿರದವರೆಗೆ ತಾವೇ ಸುರಿದು ಖರೀದಿಸುತ್ತಾರೆ. ಹರೆಯದ ಬಾಲೆಯರು ಓದಿಗಿಂತಲೂ ಹೆಚ್ಚಾಗಿ ಮಾಡೆಲ್‌ಗಳಾಗಿ ಅಂಗ- ವಸ್ತ್ರ ಪ್ರದರ್ಶನ ಮಾಡುವುದನ್ನೇ ಕಲಿಯಲೆಂದು ಆಶಿಸುತ್ತಾರೆ. ಅದಕ್ಕಾಗಿಯೇ ಏನೂ ತೆರಲು ಸಿದ್ದರಾಗಿರುತ್ತಾರೆ. ಅವುಗಳಿಗೆ ಮೈ ಕಟ್ಟು ಕಾಯ್ದುಕೊಳ್ಳುವ ವ್ಯಾಯಾಮ ಪಾಠಗಳಷ್ಟೇ ಕಠಿಣವಾದರೂ ಅದೇ ಮುಖ್ಯವೆಂದು ತಿಳಿಸಿಹೇಳುತ್ತಾರೆ. ಅವು ನಾಚಿಕೊಂಡರೆ ಸೆಟದು ನುಡಿದರೆ ಹೊಡೆದು ಬಗ್ಗಿಸಿ ಈ ವೃತ್ತಿಗೆ ಹೇಗಾದರೂ ಒಗ್ಗಿಸಲು ಹೇಸದ ಹೆತ್ತವರೂ ಇದ್ದಾರೆ ಲಾವಣ್ಯ. ”

ಲಾವಣ್ಯ ‘ ಹೀಗೂ ಉಂಟೆ ! ’ ಎಂದು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದಳು.
“ ನೋಡು ಲಾವಣ್ಯ, ನಿನ್ನ ಕಾಸ್ಟ್ಯೂಮ್ಸ್ ಖರ್ಚನೆಲ್ಲ ನಾನು ವಹಿಸಿಕೊಳ್ಳುತ್ತೇನೆ. ನಾನು ಹೇಳಿದ ಹಾಗೆ ಚಾಚು ತಪ್ಪದೆ ನೀನು ಕೇಳಿದರೆ ಸಾಕು. ” ಅವನು ತನ್ನ ಉಪದೇಶ ಕೊಟ್ಟಿದ್ದ.
“ ಈಗ ನಾನೇನು ಮಾಡ್ಬೇಕೂ.....” ಲಾವಣ್ಯ ವಿಧೇಯ ವಿಧ್ಯಾರ್ಥಿನಿ ಆದಳು.
“ ಏಳು ನಿನಗಾಗಿಯೇ ಸಿದ್ದ ಉಡುಪುಗಳನ್ನು ತರಿಸಿ ಇಟ್ಟಿದ್ದೇನೆ. ನಿನ್ನ ಎದೆ, ಸೊಂಟದ ಸುತ್ತಳತೆ ನನಗೆ ಗೊತ್ತಿದೆಯಲ್ಲ, ಅವು ಸರಿ ಹೊಂದುತ್ತವೆ. ಒಂದೊಂದಾಗಿ ಅವನ್ನು ಉಟ್ಟು ಪೋಸು ಕೊಡು ನೋಡೋಣ..... ” ಬೆನ್ನುಚಪ್ಪರಿಸಿದ್ದ.
ಯಾಕೋ ಅನುಮಾನಿಸಿದಳು ಲಾವಣ್ಯ, “ ಮತ್ತೇಕೆ ಹಾಗೆ ಕುಳಿತೆ ? ” ತೀರ ಮೆದುವಾಗಿಯೇ ಹೇಳಿ ಅವಳ ಮಾಟವಾದ ಬೆನ್ನ ಹಿಂದೆ ಬಂದು ನಿಂತವನು ಎರಡು ಭುಜದ ಮೇಲೆ ಕೈ ಇಟ್ಟು , “ ನೋಡು, ನಾನು ಹಾಗೆಲ್ಲ ಯಾವ ಸುಂದರ ಹೆಣ್ಣನ್ನು ಇಷ್ಟು ಹಚ್ಚಿಕೊಂಡವನಲ್ಲ, ವಂಚಿಸಿದವನು ಅಲ್ಲ. ನಿನ್ನಲ್ಲೆನೋ ಅತಿ ಸೆಳೆತ ನನಗೆ..... ಷೂರಲೀ ..... ಯು ಹ್ಯಾವ್ ದಟ್ ಪ್ಯೂಚರ್..... ” ಅವಳ ನುಣ್ಗೆನ್ನೇಗಳನ್ನು ಬೊಗಸೆಯಲ್ಲಿ ಹಿಡಿದಿದ್ದ.

ರೋಮಾಂಚಿತೆಯಾದಳು ಲಾವಣ್ಯ. “ ನೀವು, ಮತ್ತೆ ನನ್ನ ಕೈ ಬಿಡುವುದಿಲ್ಲ ತಾನೇ..... ? ”ಪಿಸುದನಿಯಲ್ಲಿ ಎಂದಳು; ಅವನ ಕೊರಳಸುತ್ತಲೂ ತಾನೂ ತೋಳು ಬಳಸಿಕೊಂಡಳು.
“ನನ್ನನ್ನು ನಂಬು ಎಂದೆನಲ್ಲ. ಏಳು ಷಾಟ್‌ಗೆ ರೆಡಿಯಾಗು. ” ತೋಳು ಸವರಿ ಸೊಂಟ ಬಳಸಿದ ಛಾಯಾಪತಿ.
ಅವಳು ತತ್‌ಕ್ಷಣ ಉನ್ಮಾದಗೊಂಡವಳಂತೆ ಎದ್ದಳು. ಸೀರೆ ಬಿಚ್ಚಿ ಬಿಸುಟಳು. ಅವನು ಹೇಳುತ್ತಿದ್ದಂತೆ ಒಂದೋಂದೇ ವಿಚಿತ್ರ ಉಡುಪುಗಳಲ್ಲಿ ಚಿತ್ರೀಕರಣ ನಡೆಯಿತು. ಬಟ್ಟೆ ಇದ್ದೂ ಇಲ್ಲದ ಅಂಗಾಂಗ ಪ್ರದರ್ಶನ.
“ ಹಾಗಲ್ಲ ಹೀಗೆ ಬಾಗಬೇಕು. ಹಾಗೆ ತಿರುಗಬೇಕು. ಇಲ್ಲಿ ತಗ್ಗಿನಲ್ಲಿ ಕತ್ತಲೆಯ ಛಾಯ ಬರಬೇಕು, ಈ ಉಬ್ಬಿನಲ್ಲಿ ಬೆಳಕು ಚೆಲ್ಲಿ ಮಿಂಚಬೇಕು ”
-ಎಂದೆಲ್ಲ ಸ್ವೇಚ್ಛೇಯಾಗಿ ತನ್ನ ಕೈಗಳನ್ನು ಅವಳ ಮೇಮೇಲೆ ಹರಿಯಬಿಟ್ಟಿದ್ದ. ಲಾವಣ್ಯಳಿಗೆ ಮತ್ತೇರಿದಂತಾಯ್ತು. ಮಾದಕತೆಯಿಂದ ಸಹಕರಿಸುತ್ತಲೇ ಮೈ ಮರೆತು ನಿಂತಳು. ಎತ್ತರದ ನಿಲುವು, ಚಂದ್ರವದನೆ, ಹೊಂಬಣ್ಣದ ಚೆಲುವೆ. ಅವಳ ಕೆಂದುಟಿ ಕಂಪಿಸುತ್ತಿತ್ತು. ಉಸಿರಾಟಕ್ಕೆ ತುಂಬಿದೆದೆ ಏರಿಳಿಯುತ್ತಿತ್ತು. ಹಲವಾರು ಡಿಸೈನ್‌ಗಳ ದಿರಿಸು, ಶಾರ್ಟ್ಸ್, ಸ್ಲೀವ್‌ಲೆಸ್‌, ಟಾಪ್‌ಲೆಸ್‌, ಓವರ್‌ಕೋಟ್, ಚೂಡಿ, ಮಿಟಿ ಪಾರದರ್ಶಕ ಶರ್ಟ್ಸ್, ಜೀನ್ಸ್, ಟೈಟ್ ಪ್ಯಾಂಟ್‌ ಇತ್ಯಾದಿಗಳಲ್ಲಿ ಅವಳ ದೇಹದ ಅಪ್ರತಿಮ ಸೌಂದರ್ಯವನ್ನು ಛಾಯಾಪತಿ ತನ್ಮಯತೆಯಿಂದ ಸೆರೆಹಿಡಿಯುತ್ತಲಿದ್ದಾನೆ. ತನ್ನ ನೀಳವಾದ ಕಾಲುಗಳ ಚಲನೆಯಲ್ಲಿ ಪಾದರಸದಂತಹ ಚುರುಕಿನ ಗತಿಯಲ್ಲಿ ಲಾವಣ್ಯ ಅವನೊಂದಿಗೆ ಸಹಕರಿಸುತ್ತಲಿದ್ದಾಳೆ.
“ ವಾಹ್, ರಿಯಲೀ ಗ್ಲಾಮರಸ್.... ! ” ಅವನ ಉದ್ಗಾರಗಳಲ್ಲಿ ಕೈ ಬಳಸಿ ಸ್ಪರ್ಶಿಸುವ ರೀತಿಯಲ್ಲಿ ಅವಳೊಳಗಿನ ಸುಪ್ತ ಬಯಕೆಯೂ ಗರಿಗೆದರಿ ಕೆಣಕಿದಾಗ ಬುಡ ಕಿತ್ತೋಗೆದ ಬಳ್ಳಿಯಂತಾದಳು.

ಕಡೆಯ ಹಂತದಲ್ಲಿ ತನ್ನ ತೋಳುಗಳಲ್ಲಿಯೇ ತೇಲುತ್ತಿದ್ದಾಕೆಯ ಕೆಂದುಟಿಗಳನ್ನು ಬಲವಾಗಿ ಚುಂಬಿಸಿದ್ದ ಛಾಯಾಪತಿ. ಅವಳೂ ಸಹ ಕೊರಳೆತ್ತಿ ಕೊಟ್ಟು ಸ್ಪಂದಿಸಿದ್ದಳು. ಅನಾಮತ್ತಾಗಿ ಅವಳನ್ನೆತ್ತಿಕೊಂಡ. ಪಕ್ಕದ ರೂಮಿನ ಪೋಮ್ ಬೆಡ್‌ನತ್ತ ನಡೆದಿದ್ದ ಛಾಯಾಪತಿ. ರತಿ ಸುಖಕ್ಕಾಗಿ ಬಹುದಿನದಿಂದ ಕಾತರಿಸುತ್ತಿದ್ದವಳು ತನ್ನಷ್ಟಕ್ಕೆ ತಾನೇ ಒಡ್ಡಿಕೊಂಡಳು. ಹಿಂದುಮುಂದಿನದನ್ನೆಲ್ಲ ಕಳೆದುಕೊಂಡು ಮೇಣದಂತೆ ಕರಗಿಹೋದಳು, ಬಯಕೆಯ ಬೆಂಕಿಯಲ್ಲಿ. ಜ್ವಾಲೆ ಅಡಗಿದ ಮೇಲೆ ಹೋದ ಜೀವ ಬಂದಂತಹ ಅನುಭವ. ಸುಖಾತೀರೇಖದ ಕೇಳಿಯ ಹಾಗೆ. ಸೀರೆಯುಟ್ಟು ಮೊಳಕಾಲುಗಳಲ್ಲಿ ಮುಖ ಹುದುಗಿಸಿ ಕುಳಿತಳು ಲಾವಣ್ಯ. ಆಕೆಯ ಗಲ್ಲ ಎತ್ತಿ, “ ನಿನಗೆ ಮಿಸ್ ಇಂಡಿಯಾ ಆಗುವ ಎಲ್ಲ ಅರ್ಹತೆ ಇದೆ. ನೋಡುತ್ತಿರ, ನೀನು ನನ್ನ ಕೈಯಲ್ಲಿ ಎಂತಹ ಎತ್ತರಕ್ಕೆರುವೆ ಎಂದು ! ನಾನು ನಿನ್ನ ಕೈ ಬಿಡುವುದಿಲ್ಲ. ನೀನು ಇಷ್ಟಕ್ಕೆ ಸೆಂಟಿಮೆಂಟಲ್ ಆಗಬಾರದು, ಏಳು. ” ಎಂದ ಛಾಯಾಪತಿ. ಲಾವಣ್ಯ ದೀನವದನೆಯಾಗಿದ್ದಳು.

ಇರುಳ ನಕ್ಷತ್ರ-3 (ಕಿರು ಕಾದಂಬರಿ)

-3-
ಈ ಮದ್ಯೆ ಲಾವಣ್ಯ ನಾಲ್ಕಾರು ಕಡೆ ವಿಚಾರಿಸಿ ಬಸವನಗುಡಿಯಲ್ಲೋಂದು ಲೇಡಿಸ ಹಾಸ್ಟೆಲ್ ಗೊತ್ತು ಮಾಡಿಕೊಂಡು ಬಂದಿದ್ದಳು. ಸದ್ಯದಲ್ಲೇ ಅಕ್ಕ ಬಾವಂಗೆ ಹೇಳಿ ಹಾಸ್ಟೆಲ್ ಸೇರಿಕೊಳ್ಳುವ ಅಭಿಲಾಷೆ ಅವಳದು.
“ ಅವಳು ಹೋಗಲೇ ಬೇಕೆಂದರೆ ತಡೆಯಲು ನಾವ್ಯಾಕೆ ಪ್ರಯತ್ನಿಸಬೇಕು ? ” ಎಂದು ಅಭಿರಾಮ ಹೆಂಡತಿಗೆ ಹೇಳುತ್ತಲೇ ಇದ್ದ. ಅಷ್ಟರಲ್ಲಿಯೇ ಬಾವಾ, ನಾದಿನಿಯರ ಮನಸ್ಸಿಗೆ ಕೊಂಚ ಇರುಸು ಮುರುಸಾಗುವಂತ ಚಿಕ್ಕ ಘಟನೆಯೂ ನೆರಯಬೇಕೆ ? ಆದರೆ, ಬಾವನಾಗಿ ಅಭಿರಾಮ ತನ್ನತನದೊಂದಿಗೆ ಲಾವಣ್ಯಳ ಜತೆ ಭಾವನಾತ್ಮಕವಾದ ಸಂಬಂದವನ್ನೂ ಹೆಚ್ಚಿಸಿಕೊಂಡ. ಇಲ್ಲಿರೋವರೆಗೂ ಲಾವಣ್ಯ ಮನೆಗೆಲಸದಲ್ಲಿ ಅಕ್ಕನಿಗೆ ಅಷ್ಟಿಷ್ಟು ನೆರವಾಗುತ್ತಿದ್ದಳು. ರಾತ್ರಿ ಊಟವಾದ ಮೇಲೆ ತನ್ನ ಕೋಣೆ ಸೇರಿದಳೆಂದರೆ ಕೈಯಲೊಂದು ಕಾದಂಬರಿ ಹಿಡಿದೇ ಹಾಸಿಗೆಯಲ್ಲಿ ಉರುಳಿಕೊಳ್ಳುತ್ತಾಳೆ. ಅವಳೂ ಹೆಚ್ಚು ಓದುತ್ತಿದ್ದುದು ಶೃಂಗಾರ ರಸಭರಿತ ಕಥೆಗಳನ್ನೇ. ಗಂಡಸರಿಗಿಂತ ಹೆಣ್ಣು ಮೇಲುಗೈ ಸಾಧಿಸಿದ ಕಥೆಗಳೆಂದರೆ ಇನ್ನೂ ಇಷ್ಟ. ಟಿ.ವಿ. ಧಾರವಾಹಿಗಳಿಗಿಂತ ಸಾಹಿತ್ಯವೇ ಅವಳಿಗೆ ಪ್ರಿಯವಾದ್ದುದು, ಒಂದು ರೀತಿ ಅತೈಪ್ತ ಹೆಣ್ಣಿನ ಲಕ್ಷಣಗಳು ಅವಳೊಳಗೆ ಮನೆಮಾಡಿಕೊಂಡಿದ್ದುವಲ್ಲ !

ಅದೊಂದು ಭಾನುವಾರ ಬೆಳಿಗ್ಗೆನೇ ಸಹನಾ ನೆರೆಮನೆಯಾಕೆಯೊಂದಿಗೆ ಜೆ.ಪಿ. ನಗರಕ್ಕೆ ಹೋಗಬೇಕಾಗಿತ್ತು ಅಲ್ಲೋಂದು ಹೆಣ್ಣಿನ ಮದುವೆ ನಿಶ್ಚಿತಾರ್ಥ ಇತ್ತು. ಸಹನಾ, ಇಡ್ಲಿ, ಚಟ್ನಿ ತಿಂದು ಮುಗಿಸಿಕೊಂಡವಳು, ಲಾವಣ್ಯಳನ್ನು ಕರೆದರೆ, ಅವಳು ಸುತರಾಂ ತಾನು ಬರುವುದಿಲ್ಲವೆಂದಳು. ತಾನು ಗಂಡ ಬಿಟ್ಟವಳೆಂದು ಜನ ಆಡಿಕೊಳ್ತಾರೆ. ಅಂಥ ಸಮಾರಂಭಗಳಲ್ಲಿ ತಾನು ಇರುವುದು ಸರಿಯಲ್ಲ ಎಂಬುದೇ ಅವಳ ಅಭಿಪ್ರಾಯ ಸಹನಾ ಇನ್ನೂ ಅವಳನ್ನು ಬಲವಂತಪಡಿಸದಾದಳು.
“ ಸರಿ, ನೀನು ಮನೆಯಲ್ಲಿ ಇದ್ದು, ನಿನ್ನ ಬಾವನಿಗೆ ಭಾನುವಾರದ ಸ್ಪೆಷಲ್ ಅಡುಗೆ ಮಾಡಿ ಹಾಕು. ನಾನು ಬರೋದು ಸಂಜೆಯಾಗಿ ಬಿಡಬಹುದು.... ” ಎಂದವಳೇ ಹೊರಟು ಹೊಗಿದ್ದಳು.
ಅಭಿರಾಮ, “ ನಾನು ಶಿವಾಜಿನಗರದಲ್ಲಿ ಯಾರನ್ನೋ ಕಾಣಲಿಕ್ಕಿದೆ. ಮಧ್ಯಾಹ್ನ ಒಂದು ಗಂಟೆಗೆ ಊಟಕ್ಕೆ ಇಲ್ಲಿಗೆ ಬರ್ತೀನಿ ಲಾವಣ್ಯ. ಇವತ್ತು ನಿನ್ನ ಕೈ ಅಡಿಗೆ ರುಚಿ ನೋಡೋಣ ” ಎಂದು ಹೇಳಿ ಬೆಳಿಗ್ಗೆ ಹತ್ತು ಗಂಟೆಗೆ ಹೊರಟು ಹೋದ. ಅವನು ಮದ್ಯಾಹ್ನ ಹೇಳಿದ ಟೈಮಿಗೆ ಸರಿಯಾಗಿ ಮನೆಗೆ ಊಟಕ್ಕೆ ಬಂದಿದ್ದ.
ಲಾವಣ್ಯ “ ನಾನೇನೋ ವಿಶೇಷ ಅಡುಗೆ ತಯಾರಿಸಿಲ್ಲ ಬಾವಾ...... ಹೇಗೀದೆಯೋ, ಏನೋ ” ಎನ್ನುತ್ತ ಊಟಕ್ಕೆ ಬಡಿಸಿದ್ದಳು. ತಾನೂ ಡೈನಿಂಗ್ ಟೇಬಲ್ ಮುಂದೆ ಕುಳಿತಳು.
ಜಾಮೂನು, ಕರಿದ ಹಪ್ಪಳ ಸಂಡಿಗೆ, ಈರುಳ್ಳಿ- ಬೇಳೆ ಹುಳಿ, ಅಭಿರಾಮ ಬಾಯಿ ಚಪ್ಪರಿಸಿಕೊಂಡು ತಿನ್ನುವುದನ್ನೇ ಅವಳು ನೋಡುತ್ತಾ ಇದ್ದಾಳೆ.
“ ಒಳ್ಳೆ ಪೊಗದಸ್ತಾದ ಊಟ ! ” ಎಂದುಹೊಟ್ಟೆ ತುಂಬ ಊಟ ಮಾಡಿದ.
“ ಓ, ನೀನು ಊಟ ಮಾಡಿಯೇ ಇಲ್ಲವಲ್ಲ........ ! ಅಂದ.”
“ ಈಗ ನೆನಪಾಯಿತೇ......... ಅವಳು ಕುಲುಕುಲು ನಕ್ಕಳು. ಸೋ ಸಾರಿ...... ಹೊಟ್ಟೆ ಹಸಿವು ಎಲ್ಲ ಮರೆಸಿಬಿಡ್ತು ನೋಡು..... ನಿನಗೆ ಜಾಮೂನು ಇದೆ ತಾನೆ .... ” ಎಂದು ಕಿರುನಗೆ ಬೀರಿದವನು.
“ ಎಲ್ಲಿ ನೀನು ಕುಳಿತ್ಕೊ, ನಾನು ಬಡಿಸ್ತಿನಿ..... ” ಬಲವಂತದಿಂದ ಕೂರಿಸಿದ್ದ.
“ ನೀವು ಬಿಸಿಲಿನಲ್ಲಿ ದಣಿದು ಬಂದಿದ್ದಿರಿ.... ಹೋಗಿ ರೆಸ್ಟ್ ತಗೋಳ್ಳಿ ಬಾವಾ ” ಅವಳೇ ಅವನನ್ನು ಮಲಗುವ ಕೋಣೆಗೆ ಅಟ್ಟಿದ್ದಳು. ಕೋಣೆ ಸೇರಿ ಹಾಸಿಗೆಯಲ್ಲಿ ಮಗ್ಗುಲಾದವನಿಗೆ ನಿದ್ರೆ ಹತ್ತಿತ್ತು. ಇತ್ತ ಲಾವಣ್ಯ ತನ್ನ ಊಟ ಮುಗಿಸಿದವಳೇ ತಟ್ಟೆಗಳನ್ನು ತೆಗೆದಿಟ್ಟು ತಾನೂ ಆಯಾಸ ಪರಿಹರಿಸಿಕೊಳ್ಳಲು ತನ್ನ ಕೋಣೆ ಸೇರಿದ್ದಳು. ಅವಳಿಗೆ ನಿದ್ರೆ ಹತ್ತಿರ ಸುಳಿಯಲಿಲ್ಲ. ಹಾಸಿಗೆ ಮುಳ್ಳಾದಂತೆನಿಸಿತು. ಬಹಳ ದಿವಸದಿಂದ ತಡೆಹಿಡಿದಿದ್ದ ಬಯಕೆ ಬೇಡವೆಂದರೂ ಭುಗಿಲೆದ್ದಿತ್ತು. ದೈಹಿಕ ತೃಷೆ ತಹತಹಿಸಿತು. ಯಾವುದಾದರೂ ಸೆಕ್ಸ್ ಪುಸ್ತಕಕ್ಕೆ ಮೊರೆಹೋಗಲು ಯತ್ನಿಸಿದಳು.
ಉಹೂಂ, ಮೈ ಬಿಸಿ ಏರಿ ಜ್ವಾಲೆಯಾಯಿತೇ ಹೊರತು ತಣ್ಣಗಾಗಲಿಲ್ಲ. ಹೀಗೆ ಹೊರಳಿದ್ದೇ ಆಯಿತು. ಅದು ಸೆಕೆಗಾಲ ಬೇರೆ. ಬೆವರು ಕಿತ್ತು ಬರುತ್ತಿತ್ತು. ಫ್ಯಾನ್ ಹಾಕಿದರೂ ಪ್ರಯೋಜನವಾಗಲಿಲ್ಲ. ಧಿಗ್ಗನೆದ್ದು ಬಾತ್ ರೂಮಿಗೆ ಹೋದಳು. ಉಡುಪು ಕಳಚಿ ತಣ್ಣೀರಿಗೆ ಮೈಯೊಡ್ಡಿದ್ದಾಗ ಹಾಯ್ ಹಾಯ್ ಎನ್ನಿಸಿತ್ತು. ಅರ್ಧಗಂಟೆಗೂ ಮೀರಿ ಮೀಯತೊಡಗಿದಳು. ಮದನ್ ಕುಮಾರ್‌ನ ಬಂಗಲೆಯ ವೈಬೋಗದಲ್ಲಿದ್ದಾಗ ಸೋಪಿನ ನೊರೆ ತುಂಬಿದ ಟಬ್‌ನಲ್ಲಿ ತೇಲಿದ್ದ ಸುಂದರವಾದ ಶರೀರಕ್ಕೆ ಈ ಪುಟ್ಟ ಬಾತ್‌ ರೂಮಿನ ಷವರ್ ವಾಟರ್ ಏನೂ ಅಲ್ಲ. ಆದರೇನು ! ಐಷರಾಮಕ್ಕಿಂತಲೂ ದೈಹಿಕವಾಗಿಹೀರಿಕೊಳ್ಳಲಾಗದ ಸುಖದ ಯಾತನೆಯೇ ಅತೀವವಾಗಿ ಪೀಡಿಸಿದರೆ.... ಲಾವಣ್ಯ ಚಡಪಡಿಸಿದ್ದಳು.

ಟವೆಲ್‌ ಸುತ್ತಿಕೊಂಡು ಕೋಣೆಗೆ ಬಂದವಳು ಉಡುಗೆ ಧರಿಸುವ ಮುನ್ನ ಗತ ರೂಢಿಯಂತೆ ನಿಲುವುಗನ್ನಡಿಯ ಮುಂದೆ ನಿಂತಳು. ಟವೆಲ್‌ ತೆಗೆದು ಕಾಟ್‌ ಮೇಲೆ ಎಸೆದಿದ್ದಳು. ನಿರ್ವಾಣವಾಗಿ ತನ್ನ ಸುರ ಸುಂದರವಾದ ಪೂರ್ಣ ಬಿಂಬವನ್ನೇ ನಖಶಿಖಾಂತ ನೋಡುತ್ತಾ ತಾನೇ ಮೈಮರೆತುಬಿಟ್ಟಳು. ಇತ್ತ ನಿದ್ರೆಯ ಮಂಪರಿನಲ್ಲಿ ಎದ್ದು ಬಂದ ಅಭಿರಾಮ ಅವಳ ಕೋಣೆಯ ಬಾಗಿಲನ್ನು ನಿಧಾನವಾಗಿ ಸ್ವಲ್ಪ ತಳ್ಳಿ ಒಳಗೆ ಇಣುಕಿದ್ದ.
“ ಲಾವಣ್ಯ..... ” ಕೂಗಲಿದ್ದವನ ದನಿ ಗಂಟಲಲ್ಲೇ ಕುಸಿದುಹೊಗಿತ್ತು ! ಉಸಿರುಕಟ್ಟಿಕೊಂಡು ಒಳಗಿನ ನಗ್ನದೃಶ್ಯವನ್ನು ದಿಟ್ಟಿಸುತ್ತಾ ಸ್ತಭ್ದನಾಗಿ ನಿಂತುಬಿಟ್ಟ ! ಎತ್ತರದ ನಿಲುವು, ಹರವಾದ ಎದೆಯಲ್ಲಿ ತುಂಬಿ ತೊನೆಯುವ ಪೀನ ಪಯೋಧರಗಳು, ಸಿಂಹಕಟಿಯಲ್ಲಿ ತೋರ ನಿತಂಬಗಳ ಮೇಲೆ ಇಳಿಬಿದ್ದ ಕೇಶರಾಶಿಗಳು, ದಂತದ ಬೊಂಬೆಯಂತೆ ಕಡೆದು ನಿಲ್ಲಿಸಿದ್ದ ಅಪೂರ್ವ ಅಪ್ಸರೆ...... ಲಾವಣ್ಯ !
ಸ್ವತಃ ಕಲಾವಿದನಾದ ಅಭಿರಾಮ ಆ ಕೆಲಕ್ಷಣಗಳಲ್ಲಿ ಅತಿಶಯ ಆನಂದೋನ್ಮಾದ ಕಂಡಿದ್ದ. ತಾನೂ ಕಡೆದ ಶಿಲ್ಪದಂತೆ ನಿಂತಿದ್ದ.... ಲಾವಣ್ಯ ಥಟ್ಟನೆ ತಿರುಗಿ ನೋಡಿ,
“ ಓ , ಬಾವಾ....... ” ಉದ್ಗಾರ ತೆಗೆದಳು. ಬೆಚ್ಚಿಬಿದ್ದಳು. ಅವಳ ಒಂದು ಕೈ ಎದೆ ಮೇಲೆ, ಇನ್ನೋಂದು ಸ್ವಲ್ಪ ದೂರದ ಕಾಟಿನ ಮೇಲೆ ಬಿದ್ದಿದ್ದ ಟವೆಲ್‌ಗಾಗಿ ಬಳ್ಳಿಯಂತೆ ಬಾಗಿದ ಶರೀರದೊಂದಿಗೆ ತಡಕಾಡಿತ್ತು. ಆಗ ಅಭಿರಾಮ ದಢಾರನೆ ಬಾಗಿಲೆಳೆದುಕೊಂಡು ನಿರ್ಗಮಿಸಿಬಿಟ್ಟ. ಆ ಬಳಿಕ ಮತ್ತರ್ಧ ಗಂಟೆ ಕಳೆದರೂ ಕೋಣೆಯಿಂದ ಹೊರಬರಲಿಲ್ಲ ಇಬ್ಬರೂ.

ಲಾವಣ್ಯಳಿಗೆ ಆ ಅನಿಷ್ಟದ ಕ್ಷಣಗಳಲ್ಲಿ ಭೂಮಿಯೇ ಬಾಯಿಬಿಡವಾದಿತ್ತೇ ಎನಿಸಿತ್ತು.

ಅವಳ ಮನಸ್ಸು ಪರ್ಯಾಲೋಚಿಸುತ್ತಿತ್ತು. ಪಾಪ, ಬಾವನದೇನೂ ತಪ್ಪಿರಲಿಲ್ಲ. ಅವರು ತನ್ನ ಕೋಣೆಗೆ ಸಹಜವಾಗೇ ಬಂದಿದ್ದರು. ತಾನು ಆಗಾಗ್ಗೆ ಅವರ ಕೋಣೆಗೆ ಹೋಗುತ್ತಿದ್ದಳಲ್ಲ ! ಎಷ್ಟೋ ಬಾರಿ, ತಾನು ಓದುತ್ತಿದ್ದ ಕಾದಂಬರಿಯನ್ನು ಕಿತ್ತುಕೊಂಡು ಕೀಟಲೆ ಮಾಡಿ ಹಾಸ್ಯ ಚಟಾಕಿ ಹಾರಿಸಿದ್ದರಲ್ಲ ! ಅದೆಲ್ಲವನ್ನೂ ತಾನು ಹಗುರವಾಗಿಯೇ ತೆಗೆದುಕೊಂಡಿದ್ದಳು. ಇವತ್ತು ತನ್ನ ಗ್ರಹಚಾರವೋ ಏನೋ ಈ ಗತಿ ತೋರಬೇಕಿತ್ತೇ ! ಬಾವನಿಗೆ ಹೇಗೆ ತಾನೆ ಮುಖ ತೋರಿಸಲಿ ? ತಪ್ಪು ತನ್ನದೇ . ತಾನು ಬಾಗಿಲು ಭದ್ರ ಪಡಿಸದೇ ಇದ್ದದ್ದು. ಈಗ ತಾನೇ ಅವರನ್ನು ಮಾತನಾಡಿಸಬೇಕು. ಏನು ಆಗಲಿಲ್ಲವೆಂಬಂತೆ ನಡೆದುಕೊಳ್ಳ ಬೇಕು. ಇವರಲ್ಲದೆ ನನ್ನನ್ನು ಆ ಸ್ಥಿತಿಯಲ್ಲಿ ಬೇರೋಬ್ಬ ಗಂಡಸು ನೋಡಿದ್ದರೆ.... ಮನೆಯಲ್ಲಿ ನಾನೊಬ್ಬಳೆ ಬೇರೆ.... ಅದನ್ನು ಊಹಿಸುವುದು ಕಷ್ಟವೆನಿಸಿತು ಲಾವಣ್ಯಳಿಗೆ..... ಅಭಿರಾಮನ ಬಗ್ಗೆ ಗೌರವ ಇಮ್ಮಡಿಸಿತ್ತು.

ಇತ್ತ ಕೋಣೆಯಲ್ಲಿ ಅಭಿರಾಮನ ಸ್ಥಿತಿ ಹೇಳತೀರದು. ಅವನು ನಿಂತಲ್ಲಿ ನಿಲ್ಲದೆ, ಕುಳಿತಲ್ಲಿ ಕುಳಿತೀರದೆ ಶತಪಥ ಹಾಕುತ್ತಿದ್ದ.
“ ಬಾವಾ....” ಎಡದ ಕೈನಲ್ಲಿ ಬಾಗಿಲು ತಳ್ಳಿಕೊಂಡು ಬಲಗೈನಲ್ಲಿ ಟೀ ಕಪ್ಪನ್ನು ಹಿಡಿದು ಲಾವಣ್ಯ ಒಳ ಬಂದಿದ್ದಳು.
ಕಿಟಕಿಯಾಚೆಗೆಲ್ಲೋ ಶೂನ್ಯ ನೋಟ ಬೀರಿದ್ದ ಅಭಿರಾಮ ಹಿಂದಿರುಗಿ ನೋಡಿದ್ದ.
ಇದೀಗ ತೀರ ಸಡಿಲವಾದ ಹಳದಿ ಬಣ್ಣದ ಮ್ಯಾಕ್ಸಿಯಲ್ಲಿ ದ್ದಾಳೆ ಲಾವಣ್ಯ.
ತಾವರೆಯ ಕಂಗಳು ಕೊಳವಾಗಿವೆ. ದನಿಯಲ್ಲಿ ಮಾರ್ದವತೆ ತುಂಬಿದೆ.
“ ಟೀ ತಗೋಳ್ಳಿ ಬಾವಾ ”
ಅಭಿರಾಮ ನಿಂತಲ್ಲೆ ಕರಗಿ ಹೋದ.
“ ಲಾವಣ್ಯ ನನ್ನನ್ನು ಕ್ಷಮಿಸಿಬಿಡು ”
“ ಬಾವಾ, ನೀವು ತುಂಬ ದೊಡ್ಡವರು. ಆ ಮಾತಾಡಬೇಡಿ.....ತಪ್ಪು ನನ್ನದೇ.. ಬಾಗಿಲು ಭದ್ರ ಪಡಿಸದೇ ಇದ್ದದ್ದು.... ” ಲಾವಣ್ಯ ದೈನ್ಯವೆತ್ತ ನೋಟ ಹರಿಸಿದಳು.
“ ನಾನೆಷ್ಟರವನು ? ನನ್ನ ನೋಟವೂ ದೌರ್ಬಲ್ಯವೇ......” ಅವನೆಂದ
“ ಇಲ್ಲ ಬಾವಾ.... ಇಲ್ಲ.... ” ಅವನತ್ತ ಅಪಾರ ವೇದನೆಯಿಂದ ಅತ್ಯಂತ ಅಪ್ಯಾಯತೆಯಿಂದ ದಿಟ್ಟಿಸಿದಳು ಲಾವಣ್ಯ,
“ ಟೀ ಕುಡಿಯಿರಿ ” ಎಂದಳು,
“ ಹೂಂ, ಹೆಣ್ಣಿನ ಸೌಂದರ್ಯಕ್ಕೆ ಗಂಡು ಹುಚ್ವನಾಗುತ್ತಾನೆ. ಅವನ ಪೌರುಷವಿರುವುದು ಅವಳ ಮೇಲಿನ ಆಕ್ರಮಣದಲ್ಲಲ್ಲ.... ಸ್ವಯಂ ನಿಯಂತ್ರಣದಲ್ಲಿ.... ”ಮತ್ತೆ ಅವಳೆ ಹೇಳಿದ್ದಳು.
ಅಭಿರಾಮ ಅವಳ ಎರಡೂ ಭುಜದ ಮೇಲೆ ಕೈ ಇಟ್ಟಾಗ ನಾಲ್ಕೂ ಕಣ್ಣುಗಳು ಒಂದಾಗಿ ಹೊಳೆಯುತ್ತಿದ್ದವು.
ಬಾವನ ನಿರ್ವಾಜ್ಯ ಪ್ರೇಮಕ್ಕೆ ಮನಸೋತಳು ಲಾವಣ್ಯ.
ಆತ ಆಕೆಯ ಮುಂಗುರುಳುಗಳಿಗೆ ಹೂಮುತ್ತನಿತ್ತು ಸಂತೈಸಿದ್ದ.

* *********************** *
ರಾತ್ರಿ ಎಂಡು ಹೊಡೆದರೂ ಸಹನಾ ಮನೆಗೆ ಬಂದಿರಲಿಲ್ಲ. ಲಾವಣ್ಯ ಅಡುಗೆಗೆ ತಯಾರಿ ನಡೆಸಿದ್ದಳು. ರಾತ್ರಿ ಊಟಕ್ಕೆ ಅಭಿರಾಮ ಅನ್ನ ತಿನ್ನುವುದು ಕಡಿಮೆಯೇ. ಅವನಿಗೆ ಎರಡು ಚಪಾತಿಯಾದರೂ ಇರಬೇಕು. ಒಮ್ಮೊಮ್ಮೆ ಸಹನಾಳಿಗೆ ಮಾಡಲು ಆಗದಿದ್ದರೆ ಸ್ವಲ್ಪ ಅನ್ನವನ್ನೇ ಊಟ ಮಾಡಿ ಎದ್ದು ಬಿಡುತ್ತಿದ್ದ. ಲಾವಣ್ಯ ಅದನ್ನು ಗಮನಿಸಿದ್ದಳು. ಅಡುಗೆ ಮನೆ ಸೇರಿ ಚಪಾತಿ ಮಾಡಲು ತೊಡಗಿದರು. ಅವಳ ಮನಸ್ಸು ಬಿಡದೆ ಬಾವನನ್ನೇ ಕುರಿತು ಯೋಚಿಸುತ್ತಿತ್ತು. ಆತ ಸ್ವಲ್ಪ ತನ್ನ ಮೇಲೆರಿಗೆ ಬಂದಿದ್ದರೆ ತನ್ನಂಥ ಅಪೂರ್ವ ಸುಂದರಿಯಿಂದ ಅನಾಯಾಸವಾದ ಸುಖ ಹೀರಬಹುದಿತ್ತು. ಎಲ್ಲ ಹಂಗು ತೊರೆದು ಕನ್ನಡಿ ಮುಂದೆ ನಿಂತಿದ್ದ ಅವಳಿಗೂ ಅದೆ ಸುಖ ಬೇಕಿತ್ತು. ಹಾಸಿಗೆಗೆ ಬಂದವನೇ ಮೇಲೆ ಹಾರಿ ಬರುತ್ತಿದ್ದ ಮದನ್ ಕುಮಾರ್‌ನೊಡನೆ ಹೋಲಿಸಿದಳು.
ಛೀ, ಅವನೊಬ್ಬ ನೀಚ ! ಗಂಡಸು ಜಾತಿಗೆ ಕಳಂಕ. ಅಂತಹ ಸ್ಥಿತಿಯಲ್ಲಿ ನೋಡಿದ ಮೇಲೆ ಗಂಡಸರು ಹೀಗೂ ಸಂಯಮಿಗಳಾಗಿರುತ್ತಾರೆಯೇ ? ಅಬಲೆ ಹೀಗೆ ಒಂಟಿ ಸಿಕ್ಕರೆ ಸುಮ್ಮನಿರುತ್ತಾರೆಯೇ ? ಈ ಮೊದಲು ಯಾರಾದರೂ ಹೇಳಿದ್ದರೆ ಅವಳು ನಂಬುತ್ತಿರಲಿಲ್ಲ. ಈಗ ?
ಗಂಡಿನ ಪೌರುಷವಿರುವುದು ಹೆಣ್ಣಿನ ಮೇಲಿನ ಆಕ್ರಮಣದಲ್ಲಲ್ಲ. ಅವನ ಸ್ವಯಂ ನಿಯಂತ್ರಣದಲ್ಲಿ. ಅಭಿರಾಮನ ಮಾತು ಮತ್ತೆ ಮತ್ತೆ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಆ ಕ್ಷಣದಿಂದಲೇ ಆತನ ಬಗ್ಗೆ ಪ್ರೀತಿ ಬುಗ್ಗೆಯಾಗಿ ಉಕ್ಕೇರಿತ್ತು. ಕ್ಷಣಕ್ಷಣಕ್ಕೂ ಆತನಿಗೆ ತಾನು ತೀರ ಹತ್ತಿರವಾಗುತ್ತಿರುವಂತೆ ಭಾಸವಾಗುತ್ತಿತ್ತು.
“ ಲಾವಣ್ಯ, ಇದೇನ್ ಚಪಾತಿ ಮಾಡ್ತಾ ಇದೀಯ ? ಅದನ್ಯಾಕೆ ಮಾಡಲಿಕ್ಕೆ ಹೋದೆ ? ” ಅಡುಗೆಮನೆ ಬಾಗಿಲಿಗೆ ಒರಗಿನಿಂತ ನುಡಿದಿದ್ದ ಅಭಿರಾಮ.
“ ಇರಲಿ ಬಿಡಿ ಬಾವಾ..... ನೀವು ರಾತ್ರಿ ಅನ್ನ ಊಟ ಮಾಡೋದೇ ಇಲ್ಲ. ನಾನು ಅಷ್ಟೂ ಮಾಡದಿದ್ದರೆ ಹೇಗೆ ? ” ಅಂದಳು.
ಅದೇ ಸಮಯದಲ್ಲಿ ಹೊರ ಬಾಗಿಲು ಸದ್ದುಮಾಡಿತ್ತು.
“ ಸಹನಾ ಬಂದಿರಬೇಕು ........” ಅವನೆಂದ. ಸಹನಾ ಒಳ ಬಂದವಳೆ, ಏನೂ ನೀವಿಬ್ಬರು ಊಟ ಮಾಡಿಲ್ವಾ ? ಕೇಳೀದಳು.
“ ನೀನು ಬರುವುದನ್ನೇ ಕಾಯುತ್ತಾ ಇದ್ದೆವು....... ಲಾವಣ್ಯ ಹೇಳಿದಳು.
ಸಹನಾ ತಾನು ನಿಶ್ಚಿತಾರ್ಥದಲ್ಲಿ ಕಂಡ ಪ್ರವರ ಬಿಚ್ಚುತ್ತಾ,
“ ಅಲ್ಲಾ, ಆ ಹುಡ್ಗಿಗೆ ಮೂರು ಸಾವಿರದ ರೇಷ್ಮೆ ಸೀರೆ ತಂದಿದ್ದರು. ಕೊರಳಿಗೆ ಸರ, ಬೆರಳಿಗೆ ವಜ್ರದುಂಗುರ ಬೇರೆ..... ಏನ್ ವೈಭವ, ಅಂತೀರ......” ಎನ್ನುತ್ತಾ ಡೈನಿಂಗ್ ಟೇಬಲ್ ಮುಂದೆ ಕುಳಿತಳು.
“ ಯಾಕೆ ! ಬಾವಾ ನಾದಿನಿ ಊಟ ಸರಿಯಾಗಿ ಮಾಡ್ತಾ ಇಲ್ಲ ? ಮಾತು ಆಡ್ತಾ ಇಲ್ಲ..... ? ” ಥಟ್ಟನೆ ಕೇಳಿದಳು.
“ ನಾನು ಊಟ ಸರಿಯಾಗಿ ಮಾಡ್ಲೀಂತಾನೆ ನಿನ್ನ ತಂಗಿ ಚಪಾತಿ ಮಾಡಿದ್ದಾಳೆ. ಅದನ್ನ ತಿಂದು ಮುಗಿಸದೇ ಇದ್ದರೆ ಅವಳು ಬಿಡ್ಬೇಕಲ್ಲ ! ” ನಾದಿನಿಯತ್ತ ನೋಡಿ ನಸುನಕ್ಕ ಅಭಿರಾಮ.
“ ಅಕ್ಕಾ, ಈ ಬಾವಾ ಹೇಗಿದ್ರೂ ಸುಮ್ನಿರ್ತಾರೆ. ಸುಮ್ನೆ ತಿಂತಾರೆ.... ಇಂಥ ಗಂಡ ಸಿಗಬೇಕಾದ್ರೆ ನೀನು ಜನ್ಮಾಂತರದ ಪುಣ್ಯ ಮಾಡಿದ್ದೆ.... ” ಲಾವಣ್ಯ ಎಂದಳು. “ ಓ ಹೊಗಳಿಗೆ ಬಹಳವಾಯ್ತು...... ” ಅವನೆಂದ.
“ ಹೊಗಳಲಿ ಬಿಡಿ, ಬಾವನ ಗುಟ್ಟೆಲ್ಲ ನಾದಿನಿಗೆ ಗೊತ್ತೂಂತ ಹೇಳಲ್ವೆ..... ” ಸಹನಾ ಕೊರಳ ಸೆರೆಯುಬ್ಬಿಸಿದಳು.
ಅಭಿರಾಮ ಚಕಿತನಾದ. “ಅದ್ಯಾರಪ್ಪ ಹಾಗೆ ಹೇಳಿದ್ದೂ ಅದೇನ್ ಗುಟ್ಟೂ ನಂಗೇ ತಿಳೀದೇ ಇರೋದೂ..... ? ” ರಾಗವಾಗೆಂದ.
“ ನಿಮಗೆ ಅದೆಲ್ಲಾ ಗೊತ್ತಾಗಲ್ಲಾರೀ..... ಅದೆಲ್ಲ ಹೆಂಗಸರಿಗೆ ಸೂಕ್ಷ್ಮವಾಗಿ ಗೊತ್ತಾಗೋದೂ.... ” ಸಹನಾ ಶೃತಿ ಮೀಟಿದಂತೆ ಹೇಳಿದಳು.
“ ಓ ಹಾಗೋ, ನೀನು ಇಷ್ಟು ಬುದ್ದಿವಂತೆ ಆಗಿದ್ದು ಯಾವಾಗ ? ” ಹುಬ್ಬೇರಿಸಿ ಹೆಂಡತಿಯನ್ನು ಕೆಣಕಿದ ಅಭಿರಾಮ.
“ ಎಲ್ಲಾನಿಮ್ಮ ನಾದಿನಿಯಿಂದಲೇ ”
“ ಅವಳು ಇಲ್ಲೇ ಇದ್ದರೆ ನೀನು ಇನ್ನೂ ಬುದ್ದಿವಂತೆ ಆಗ್ತೀಯಾನ್ನೂ .... ”
“ ಅವಳು ಇರಬೇಕಲ್ಲ.... ಸಾಕು, ಸುಮ್ನೆ ಊಟ ಮಾಡೇಳ್ರಿ...... ” ಸಹನಾ ಹಗುರವಾಗಿ ಗದರಿಕೊಂಡಳು.
ಲಾವಣ್ಯ ನಕ್ಕಳು. ಅಭಿರಾಮ ದಿವ್ಯ ಮೌನಿಯಾಗಿದ್ದ. ಸಹನಾ ತುಂಬಾ ಬದಲಾದಳು. ಬರುಬರುತ್ತಾ ತಂಗಿಯೊಂದಿಗೆ ಹೆಚ್ಚಿನ ಪ್ರೀತಿ, ವಿಶ್ವಾಸಗಳಿಂದ ನಡೆದುಕೊಳ್ಳಲಾರಂಬಿಸಿದಳು. ಬಾವನ ಬಗ್ಗೆ ಅವಳಿಗಿರುವ ಗೌರವಾದರಗಳನ್ನು ಗಮನಿಸಿದ್ದಳು. ತಾನೂ ಎಂದಿಗಿಂತಲೂ ಅಭಿರಾಮನ ಭಾವನೆಗಳನ್ನು ಸ್ಪಂದಿಸುವಳು. ರಾತ್ರಿ ವೇಳೆ ಅವನ ರಸಿಕತೆಗೆ ಸಹಕರಿಸುವಳು. ತನ್ನ ನಡೆ-ನುಡಿಯಲ್ಲಿ ಸೂಕ್ಷ್ಮತೆ ಕಂಡುಕೊಂಡಳು. ಹಳೆಯ ಕಂದಾಚಾರಗಳಿಂದ ಹೊರಬಂದಿದ್ದಳು. ಅಭಿರಾಮ ಹೊರಗೆ ಕರೆದರೆ ಕೂಡಲೇ ಸಿದ್ದಳಾಗುತ್ತಿದ್ದಳು. ತನ್ನ ಉಡುಗೆ ತೊಡುಗೆಗಳಲ್ಲಿ ಗಜಗಮನೆಯಾಗಿದ್ದವಳು ನವನವೀನೆಯಾದಳು. ಅಭಿರಾಮ ಹೆಂಡತಿಯಲ್ಲಾದ ಪರಿವರ್ತನೆಗೆ ಮೂಕವಿಸ್ಮಿತನಾದ. ‘ ಮನುಷ್ಯ ಸನ್ನೀವೇಶದ ಶಿಶು ಅಲ್ಲವೇ ? ’ ಅಂದುಕೊಂಡ. ಆದರೆ, ಲಾವಣ್ಯ ಳ ದೃಷ್ಟಿ ದೂರ ಗಗನದತ್ತಲೇ ಓಡುತ್ತಿತ್ತು. ತೂಗುಯ್ಯಾಲೆಯಾಡುತ್ತಲೆ ಇತ್ತು....... ಅಭಿರಾಮನೇನೋ ಆಕೆಯ ದೃಷ್ಟಿಯಲ್ಲಿ ಎತ್ತರದ ಸ್ಥಾನಗಳಿಸಿದ್ದ. ಅಷ್ಟೇ ಆಕೆಯ ಹೃದಯಕ್ಕೆ ಹತ್ತಿರವಾದ. ಅದೇಕೋ ಆತನೆದುರು ಮೊದಲಿನಂತೆ ದಿಟ್ಟೆಯಾಗಿ ನಿಂತು ಮಾತು ಬೆಳೆಸಲಾರಳು. ಆಕೆಗೂ ಆತನ ಸನಿಹ ಮಾತ್ರ ಬೇಕೆನಿಸುತ್ತಿತ್ತು, ಆತನ ಆಸರೆಯಲ್ಲಿರುವುದೇ ಆಪ್ಯಾಯಮಾನವೆನಿಸುತ್ತಿತ್ತು. ಆದರೂ, ಚಂಚಲ ಮನಸ್ಸು ಹೊರವಲಯದ ಆಕರ್ಷಣೆಗೇ ಜಿಗಿಯುತ್ತಿತ್ತು. ಸ್ವಚ್ಛಂದ ಬದುಕಿಗೇ ಹಾತೊರೆಯುತ್ತಿತ್ತು.
ಲಾವಣ್ಯ ಕಡೆಗೂ ತನ್ನ ನಿರ್ಧಾರ ಬದಲಿಸದಾದಳು, ತಾನು ಈ ಮೊದಲೇ ಯೋಚಿಸಿದಂತೆ ಹಾಸ್ಟೆಲ್ ಸೇರಿಕೊಳ್ಳಲೆಂದೇ ಹೊರಟು ನಿಂತಳು.
ಸಹನಾ ತಂಗಿಯ ಹಠದ ಮುಂದೆ ಸೋತಳು. ಏನೋ ಅವಳು ಮರುಮದುವೆ ಮಾಡಿಕೊಂಡು ಬಾಳುವಂತಾಗಿದ್ದರೆ ಎಷ್ಟೋ ಚೆನ್ನಾಗಿತ್ತು. ಎಂಬುದೇ ಅವಳ ಅಂತರಂಗದ ಧ್ವನಿ.
“ ಹೆಣ್ಣಾಗಿ ಹುಟ್ಟುವುದೇ ತಪ್ಪೇನೋ ಕಣೇ ......” ಎಂದಳು ತಂಗಿಯ ಮೈ ನೇವರಿಸುತ್ತಾ, “ ಸುಂದರಿಯಾಗಿ ಹುಟ್ಟಿದರೆ ಇನ್ನೂ ಕಷ್ಟ.....ಎಂದಳು. ”
ಆ ಸೌಂದರ್ಯವನ್ನು ಬಂಡವಾಳವಾಗಿಟ್ಟುಕೊಂಡು ಸುಖ ಕಾಣಲು ಅವಳ ಮನಸ್ಸು ಒಳಗೊಳಗೆ ಚಡಪಡಿಸುತ್ತಿರುವುದೆಂದು ಆಗೆಲ್ಲಿ ಗೊತ್ತಿತ್ತು. ?
ಅಭಿರಾಮನಂತೂ ಅವಕ್ಕಾಗಿ ನೋಡುತ್ತಾ ನಿಂತಿದ್ದ.
ಲಾವಣ್ಯ , “ ಬರ್ತೀನೀ ಬಾವಾ ....” ಕಾಲಿಗೆರಗಲು ಬಂದಿದ್ದಳು. ತತ್ ಕ್ಷಣ ಆಕೆಯ ನಳಿದೋಳುಗಳನ್ನೇತ್ತಿ ಹಿಡಿದ ಅವನು ತುಂಬಿ ಹೊಳೆಯುವ ಆ ಜೋಡಿ ಕಣ್ಣುಗಳನ್ನು ನಿಟ್ಟಿಸಿದ್ದ. ಪಕ್ಕದಲ್ಲೇ ಹೆಂಡತಿ ಇರುವುದನ್ನೂ ಮರೆತು ಆಕೆಯ ಹಣೆಯನ್ನು ಚುಂಬಿಸಿಬಿಟ್ಟ. ಆಕೆಗೆ ಮೈಯೆಲ್ಲ ಪ್ರಿಯವಾದ ಪುಳಕವುಂಟಾಯ್ತು. ಸಹನಾಳ ಮುಖ ನೋಡಿದ ಅಭಿರಾಮ, ಅದು ನಗೆ ಸೂಸುತ್ತಾ ಪ್ರಶಾಂತವಾಗಿತ್ತು. ಲಾವಣ್ಯ ಅಕ್ಕನ ಕಾಲಿನತ್ತ ಶಿರಬಾಗಿದಳು. “ ಏಳೇ, ನಮ್ಮ ಆಶೀರ್ವಾದ ಸಹಾ ನಿನ್ನೋಂದಿಗೆ ಇರುತ್ತದೆ ” ಎಂದಳು. ಸಹನಾ. ಲಾವಣ್ಯ ಸೂಟ್‌ಕೇಸಿನೊಂದಿಗೆ ಮನೆಯ ಅಂಗಳ ದಾಟಿ ರಸ್ತೆಗಿಳಿದಳು. ಏನೋ, ಒಂಟಿ ಹೆಣ್ಣು ...... ನಮ್ಜೊತೆನೆ ಇದ್ದಿದ್ದರೆ ಆಗ್ತಿತ್ತು.... ಅವಳಿಗೆ ಅವಳ ಹಠಾನೆ ಗೆಲ್ಲಬೇಕಲ್ಲ..... ಸಹನಾ ಗಂಡನ ಭುಜದ ಮೇಲೆ ಕೈ ಇಟ್ಟು ಭಾರವಾದ ದನಿಯಲ್ಲೆಂದಳು.
ಅಭಿರಾಮ ಹೆಂಡತಿಯ ಕೈಯನ್ನು ತನ್ನ ಬೊಗಸೆಯೊಳಗೆ ತೆಗೆದುಕೊಂಡು ಹೇಳಿದ. “ ನೀವು ಅಕ್ಕ ತಂಗಿಯರು ಎಷ್ಟು ಒಳ್ಳೆಯವರೂಂದ್ರೆ ಒಬ್ಬರನ್ನೊಬ್ಬರು ಬಿಟ್ಟುಕೊಡದಷ್ಟು......”
* ****************** *

ಬಸವನಗುಡಿಯ ಲೇಡಿಸ್ ಹಾಸ್ಟೆಲ್‌ಗೆ ಬಂದಿಳಿದಳು ಲಾವಣ್ಯ. ಹಾಸ್ಟೆಲಿನ ವಾರ್ಡನ್ ರಮಮಣಿ, “ ನೋಡು ಲಾವಣ್ಯ, ನೀನು ಆವೋತ್ತು ಬರ್ತೀನಿಂತ ಹೇಳಿಹೋದವಳು, ಇವತ್ತಿಗೆ ತಿಂಗಳಾಯ್ತು...... ನಿನಗೆ ಇಲ್ಲಾಂತ ಹೇಳಲಾರೆ. ಒಂದು ರೂಮಿದೆ. ನೀನು ಸ್ವಲ್ಪ ಅಡ್ಜೆಸ್ಟ್ ಮಾಡ್ಕೋಬೇಕಷ್ಷೇ.....”
“ ಅಡ್ಜೆಸ್ಟ್ ಅಂದರೆ ! ” ಲಾವಣ್ಯ ಹುಬ್ಬೇರಿಸಿದಳು.
“ ಏನಿಲ್ಲಾ, ಒಬ್ಬರು ಕ್ರಿಶ್ಚಿಯನ್ ಹುಡ್ಗಿ ಇದಾಳೆ. ಹೆಸರು ರೋಸಿ, ಕಾಲೇಜಿನಲ್ಲಿ ಓದ್ತಾಳೆ. ತುಂಭಾ ಚೂಟಿ. ಅಷ್ಟೇ ಸ್ನೇಹ, ಸೌಜನ್ಯ ಅವಳಲ್ಲಿದೆ. ಅವಳ ಜೊತೆ ನೀನು ರೂಮ್ ಮೇಟ್ ಆಗಬೇಕಷ್ಟೇ..... ” ರಮಾಮಣಿ ಹೇಳಿದಳು.
“ ಈ ಕಾಲೇಜು ಹುಡುಗಿಯರ ಸ್ನೇಹ, ಸಹವಾಸ ಹೇಗೋ, ವಯಸ್ಸಿನ ಅಂತರ ಬೇರೆ! ” ತುಸು ಯೋಚಿಸುತ್ತಾ ನಿಂತಳು ಲಾವಣ್ಯ.
“ ನೀನೇನೋ ಬಹಳ ಯೋಚ್ನೆ ಮಾಡ್ಬೇಕಾಗಿಲ್ಲ.... ರೋಸಿ ಕಾಲೇಜ್ ಹುಡುಗಿ ನಿಜ. ಈಗಿನ ಜನರೇಷನ್ ಜತೆ ನೀನೆ ಅಡ್ಜೆಸ್ಟ್ ಮಾಡಕೊಂಡ್ರೆ ಆಯ್ತು.
” ರಮಾಮಣಿ ಪುನಃ ಸಮಜಾಯಿಸಿದಳು. ಲಾವಣ್ಯ ಒಪ್ಪಿಕೊಳ್ಳದೆ ವಿಧಿ ಇರಲಿಲ್ಲ. ರಮಾಮಣಿ ಕೂಡಲೇ ರೋಸಿಯನ್ನು ಕರೆದು ಪರಿಚಯಿಸಿದಳು. “ ಬನ್ನೀ ಮೇಡಂ .... ಯು ಆರ್ ವೆಲ್‌ಕಮ್. ನನ್ನ ವಿಷಯ ವಾರ್ಡನ್ ನಿಮ್ಗೆಲ್ಲಾ ಹೇಳಿರಬೇಕಲ್ಲಾ.... ” ಕಾಲ್ಗೇಟ್ ದಂತಪಕ್ತಿಯನ್ನು ಪ್ರದರ್ಶಿಸಿದಳು ರೋಸಿ. ತನ್ನ ಕೋಣೆಗೆ ಕರೆದುಕೊಂಡು ಹೋದಳು.
ಲಾವಣ್ಯ ಬಹು ಬೇಗ ರೋಸಿಯ ಜತೆ ಹೊಂದಿಕೊಂಡಳು. ರೋಸಿ ಶ್ರೀಮಂತರ ಮನೆ ಹುಡುಗಿ. ಅವಳ ತಂದೆ ಆಂಧ್ರಪ್ರದೇಶದಲ್ಲಿ ದೊಡ್ಡ ಉದ್ಯಮಿ. ಹಣ ಕೊಳೆತು ಹೋಗುವಷ್ಟಿದೆ. ಈ ಹುಡುಗಿ ಇಲ್ಲಿ ಬಂದು ಡೆಂಟಲ್ ಕಾಲೇಜಿನಲ್ಲಿ ಓದ್ತಾ ಇದ್ದಾಳೆ. ಓದುವುದಕ್ಕಿಂತ ಹೆಚ್ಚಾಗಿ ಹೊರಗೇ ಅಡ್ಡಾಡಿಕೊಂಡಿರುತ್ತಾಳೆ. ಕಣ್ಣಿಗೆ ಕಂಡ ಡ್ರೆಸ್ ಧರಿಸುತ್ತಾಳೆ. ಬಾಯ್ ಫ್ರೆಂಡ್ಸ್ ಜತೆ ಓಡಾಡುತ್ತಲೂ ಇರುತ್ತಾಳೆ. ಆರಂಭದಲ್ಲಿ ಇದನ್ನೇಲ್ಲಾ ಪ್ರಶ್ನಿಸಿದ ವಾರ್ಡನ್ ರಮಾಮಣಿಗೆ ಹಣದಾಸೆ ತೋರಿಸಿ ಬಾಯಿ ಮುಚ್ಚಿಸಿದ್ದಾಳೆ. ಈ ಹುಡುಗಿ ಹೇಗಿದ್ದರೇನು ? ತನ್ನಷ್ಟಕ್ಕೆ ತಾನಿದ್ದರಾಯಿತಲ್ಲ ! ಅವಳ ಸ್ವಂತ ವಿಷಯಕ್ಕೆ ತಾನು ತಲೆಹಾಕದಿದ್ದರಾಯಿತು ಎಂದುಕೊಂಡಳು ಲಾವಣ್ಯ. ಆದರೆ, ಅತ್ಯಲ್ಪ ಕಾಲದಲ್ಲೆ ರೋಸಿ ಇವಳ ಸ್ವಂತ ವಿಷಯಕ್ಕೆ ತಲೆ ಕೆಡಿಸಿಕೊಳ್ಳುವಂತಾದಳು.
‘ ಎಲಾ, ಈ ಮೇಡಮ್ ಲಾವಣ್ಯಳ ಹಾಗೆ ತಾನೂ ಅತಿ ರೂಪಸಿಯಾಗಿದ್ದಿದ್ದರೆ ಈ ಪ್ರಪಂಚವನ್ನೇ ಕಿರುಬೆರಳಿನಲ್ಲಿ ಆಡಿಸುತ್ತಿದ್ದೆ ! ’ ಎಂಬ ತನ್ನ ಅನಿಸಿಕೆಯನ್ನೂ ಅವಳ ಎದುರಿಗೆ ವ್ಯಕ್ತಪಡಿಸಿದ್ದಳು. ಯಾವಾಗಲೂ ಮೇಡಂ ಎಂದೇ ಸಂಬೋದಿಸುತ್ತಿದ್ದ ಅವಳಿಗೆ, “ ನಾನೂ ನಿನಗೆ ಸಿಸ್ಟರ್ ಇದ್ದ ಹಾಗೆ ರೋಸಿ... ನನ್ನ ಹೆಸರು ಹಿಡಿದೇ ಕರೀ ” ಅಂದಳು. ಅದೊಂದು ದಿನ, ಸಂಜೆ ಏಳು ಗಂಟೆಗೆ ಕೆಲ್ಸದಿಂದ ದಣಿದು ಬಂದಿದ್ದ ಲಾವಣ್ಯ ಉಟ್ಟ ಸೀರೆಯನ್ನು ಬದಲಿಸದೆ, ಏಕೋ ತಲೆ ನೋವು ಕಣೇ ರೋಸಿ ಎಂದು ಮಲಗಿಬಿಟ್ಟಳು. “ ಅಲ್ವೇ, ಮೈ ಡಿಯರ್ ಸಿಸ್ಟರ್‌, ನೀನು ಆ ಕಂಪ್ಯೂಟರ್ ಹೌಸ್‌ಗೆ ಹೋಗಿ ಬೆಳಗಿನಿಂದ ಸಂಜೆವರೆಗೆ ಕತ್ತೆ ದುಡಿದ ಹಾಗೆ ಐಯಾಮ್ ಸಾರಿ ಕತ್ತೇ ಅಂತಿನೀಂರ ಬೇಜಾರಗಬೇಡಾ.... ಹಾಗೆ ದುಡಿತ್ತೀಯಲ್ಲ .... ನಿನ್ನ ನೋಡಿದರೆ ನಂಗೆ ಅಯ್ಯೋ ಅನ್ಸುತ್ತೇ. ”
“ ಮತ್ತೇ ನಾನೇನು ಮಾಡಲಿಕ್ಕಗಾಗುತ್ತೆ ಹೇಳು ರೋಸಿ ! ಈ ಕೆಲ್ಸಾನೂ ಬಿಟ್ಟರೆ ಬೇರೆ ಸಿಗೋದು ಸುಲಭನಾ.....” ಲಾವಣ್ಯ ದುಗುಡದಿಂದ ಹೇಳಿದಳು. ಆಕೆಗೆ ಕಂಪ್ಯೂಟರ್ ಹೌಸ್‌ನಲ್ಲಿದ್ದ ವಿದ್ಯಾಮಾನಗಳು ಬೇಸರ ತರಿಸಿದ್ದವು. ನಾನು ನಿನಗಿಂತ ಚಿಕ್ಕವಳು. ಈ ಪ್ರಪಂಚದಲ್ಲ ದುಡ್ಡು ಬಿಟ್ಟರೆ ಬೇರೆನಿಲ್ಲ. ನಮ್ಮಪ್ಪ ನಂಗೆ ಸಾವಿರಗಟ್ಟಲೆ ಪಾಕೆಟ್ ಮನಿ ಕೊಟ್ಟು ಕಳುಹಿಸುತ್ತಾರೆ. ಆದ್ರೂ ಆ ದುಡ್ಡು ನಂಗೇನೂ ಅಲ್ಲ.... ನನಗೆ ಅನ್ಸುತ್ತೆ ಮಜವಾಗಿರೋದು ನಿಂಗೆ ತಿಳಿದಿಲ್ಲ. ವ್ಯಥೆಯಲ್ಲೇ ನಿನ್ನ ಅರ್ಧ ಬೇಜಾರಗ್ಬೇಡ...... ಅರ್ಧಕ್ಕೆ ಮಾತು ನಿಲ್ಲಿಸಿದಳು ರೋಸಿ. “ ನಾನೇನ್ ಮಾಡ್ಬೇಕೂಂತ ನೀನು ಹೇಳಲಿಲ್ಲ....... ” ಲಾವಣ್ಯ ಕೇಳಿದಳು. “ ನೋಡು ಸಿಸ್ಟರ್, ನೀನು ಸಿಟ್ಟು ಮಾಡ್ಕೊಳಲಾಂದ್ರೆ..... ಹೇಳ್ತಿನಿ ”
“ ಹೇಳು ಪರವಾಗಿಲ್ಲ....”
“ ನೀನು ಮನಸ್ಸು ಮಾಡಿದರೆ ನಿನ್ನ ಸೌಂದರ್ಯವನ್ನು ಎನ್‌ಕ್ಯಾಷ್‌ ಮಾಡ್ಕೋಬಹುದು. ”
“ ಅರ್ಥವಾಗಲಿಲ್ಲ ನನಗೆ ...”
“ ಏನಿಲ್ಲ, ವೆರಿ ಸಿಂಪಲ್, ನೀನೂ ಮಾಡೆಲಿಂಗ್ ಆರಂಬಿಸಿಬಿಡು. ಅದು ನನಗೆ ಹವ್ಯಾಸ ವೃತ್ತಿಯಾದಿತು....”
“ ಏನಂದೆ ? ಮಾಡೆಲಿಂಗ್ ಆರಂಭಿಸೋದೇ ? ನಾನು .... ! ”
“ ಯಾಕಾಗ್ಬಾರದು ? ಈವತ್ತಿನ ದಿನ ಅಪ್ಪ, ಅಮ್ಮಂದಿರೂ ತಮ್ಮ ಚೆಂದದ ಮಗಳು ಮಾಡೆಲಿಂಗ್‌ಗೆ ಆಯ್ಕೆಯಾಗುತ್ತಾಳೆಂದರೆ ಸಂಭ್ರಮಿಸುತ್ತಾಳೆಂದರೆ ಸಂಭ್ರಮಿಸುತ್ತಾರೆ. ನಿನಗೇನು ಹಿಂದಿಲ್ಲ, ಮುಂದಿಲ್ಲ.... ಸೋ ಸಾರಿ, ನಾನು ಹೀಗಂತೀನಿಂತ ಬೇಜಾರಾಗ್ಬೇಡ.... ” ರೋಸಿ ನಯವಾಗೇ ಮಾತು ಜಾರಿಸಿದಳು. ಲಾವಣ್ಯ ಮಾತಿಲ್ಲದೇ ಕುಳಿತಳು. ಈ ಹುಡುಗಿ ಸಂಜೆ ಹೊತ್ತಿನಲ್ಲಿ, ಕೆಲವೊಮ್ಮೆ ಕಾಲೇಜಿಗೆ ಚಕ್ಕರ ಹಾಕಿ ಅದೆಲ್ಲಿಗೆ ಹೋಗಿ ಬರುತ್ತಾಳೆ ಎಂಬುದಕ್ಕೆ ಉತ್ತರ ಸ್ಪಷ್ಟವಾಗಿ ಸಿಕ್ಕಿತ್ತು. “ ಹೆಣ್ನಾಗಿ ಹುಟ್ಟಿದರೆ ನಿನ್ನ ಹಾಗೆ ಅಪೂರ್ವ ಸುಂದರಿ ಆಗಿರಲೇಬೇಕು ನೋಡು. ಆಗ ಈ ಪ್ರಪಂಚವೇ ಅವಳ ಕಾಲ ಬಿಡುವಿನ ವೇಳೆಯ ಪ್ರೊಫೆಷನ್ ಅಂತ ಭಾವಿಸುತ್ತಾಳೆ .”
“ ನನಗೂ ನನ್ನ ಸೌಂದರ್ಯದ ಬಗ್ಗೆ ಹೆಮ್ಮೆ ಇದೆ. ಮಾಡೆಲಿಂಗ್, ಪ್ಯಾಷನ್ ಇವುಗಳಲ್ಲಿ ಆಸಕ್ತಿಯೂ ಇದೆ. ಆದ್ರೆ ..... ತೀರಾ ಅಂಗಾಂಗ ಪ್ರದರ್ಶನವೆಂದರೆ ಅಸಹ್ಯ.....” ಲಾವಣ್ಯಳಿಗೆ ಇದೀಗ ‘ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ’ ಎಂಬಂತಾಗಿತ್ತು. ಅವಳ ಅಂತರಂಗದಲ್ಲಿ ಅದಮ್ಯ ಆಸೆ ಮೊಳಕೆ ಕಟ್ಟಿದ ಹಾಗೆ ಚಿಗುರೊಡೆದಿತ್ತು. “ ಓ ಅದಕ್ಕೇನು ಯೋಚಿಸಬೇಕಾಗಿಲ್ಲ.... ಮಾಡೆಲಿಂಗ್‌ನಲ್ಲೂ ವೆರೈಟೀಸ್ ಇದೆಯಲ್ಲ.... ನೀನು ಎಷ್ಟು ಎಕ್ಸ್‌ಪೋಸ್ ಆಗ್ತೀಯಾ ಅದರ ಮೇಲೆ ನಿನ್ನ ರೇಟು ಫಿಕ್ಸ್.... ” ತೀರ ಹಗುರವಾಗಿಯೇ ಹೇಳಿದಳೂ ರೋಸಿ. “ ಓಹ್ಹೋ, ನನಗೊಂದ್ಸಲ್ಪ ಯೋಚಿಸಲು ಅವಕಾಶ ಕೊಡು. ” ಲಾವಣ್ಯ ಮತ್ತೆ ರಾಗ ಎಳೆದಳು. ‘ ಯೋಚಿಸುವುದೇನಿಲ್ಲ, ನಂಜೊತೆ ಬಾ, ನಿನಗೆಲ್ಲ ತಿಳೀತಾ ಹೋಗುತ್ತೇ....’ ರೋಸಿ ಧೈರ್ಯ ತುಂಬಲೆತ್ನಿಸಿದಳು. ಲಾವಣ್ಯ ಮಾತಿಲ್ಲದೇ ಕುಳಿತಳು.
“ ಸಿರಿಯಸ್ ಆಗಿ ಗಮನಿಸೋದೂಂದ್ರೆ ಮಾಡೆಲ್‌ಗೆ ಅಗತ್ಯವಿರುವ ಕೆಲವು ಅಂಶಗಳನ್ನ.....ಮೊದಲನೆಯದು ಎತ್ತರ, ಎರಡನೆಯದು ಮೈಮಾಟ, ಎರಡು ನಿನಗಿದೆ. ಮೂರನೆಯದು ನಾಚಿಕೆ, ಸಂಕೋಚವಿಲ್ಲದೆ ಮುನ್ನುಗ್ಗುವುದು. ಮೈಮೇಲೆ ವಿವಿಧ, ವಿಚಿತ್ರ ವಿನ್ಯಾಸಗಳ ಬಟ್ಟೆ ಪ್ರದರ್ಶಸುವ, ಸೊಗಸುಗಾತಿಯಾಗಿ ನಿಲ್ಲುವ ಎದೆಗಾರಿಗೆ ಇರಬೇಕು. ಇದೇ ನಿನಗೀಗ ಮುಖ್ಯವಾಗಿ ಬೇಕಾಗಿರೋದು ಏನಂತೀಯಾ ? ” ರೋಸಿ ತನ್ನದೆಯನ್ನು ಸ್ಟೈಲಾಗಿ ಕುಲುಕಿಸಿದಳು. ಲಾವಣ್ಯ ಗಂಬೀರವಾಗಿ ಹೇಳಿದಳು. “ ನೋಡು ರೋಸಿ, ನೀನು ಶ್ರೀಮಂತರ ಮನೆಯಿಂದ ಬಂದವಳು. ಇಂಥ ಜೀವನಶೈಲಿಗೆ ನಿಮ್ಮ ವರ್ಗದ ಜನ ತಲೆ ಕೆಡಿಸಿಕೊಳ್ಳುವುದಿಲ್ಲ. ಇದೇ ನ್ಯೂ ಸ್ಟೈಲ್‌ ಎಂದು ಬೆಲೆ ಕೊಡೋರು ನಿಮ್ಮಲ್ಲಿದ್ದಾರೆ. ನಾನದ್ರೆ ಮಧ್ಯಮ ವರ್ಗದಿಂದ ಬಂದೋಳು. ನನಗೆ ತುಂಬಾ ಕಷ್ಟ....” ತನ್ನ ಮನದಾಳದ ತಳಮಳ ವ್ಯಕ್ತಪಡಿಸಿದಳು.
ನೀನು ಹೀಗೆ ಹೇಳ್ತೀಯಾಂತ ನನಗೆ ಗೊತ್ತು. ಇದೊಂಥರಾ ಕಲ್ಚರಲ್‌ ಶಾಕ್, ಇದನ್ನೇಲ್ಲ ತೊರೆದು ನಿಲ್ಲುವ ಎದೆಗಾರಿಗೆ ನಿನಗಿದೆ ಸಿಸ್ಟರ್ ! ಆಕೆಯ ತುಂಬಿ ತೊನೆವ ಎದೆಯನ್ನು ನಿಟ್ಟಿಸಿದಳು.

ಲಾವಣ್ಯ ಅವಳ ನೋಟಕ್ಕೆ ಮಣಿದಳು. ತನ್ನ ಗತ ಚರಿತ್ರೆಯನ್ನೆಲ್ಲ ಕೇಳಿತಿಳಿದಿರುವ ಈ ಹುಡುಗಿಯ ಎದುರಿಗೆ ತಾನು ತೀರ ಕುಬ್ಜಳಾಗಬಾರದು. ಹಳೆಯ ಕಂದಾಚಾರದ ಕಟ್ಟುಪಾಡಿಗೆ ಬಿದ್ದವಳಂತೆ ಹೆದರಲೂ ಬಾರದಲ್ಲ! ಕಾಲೇಜು ದಿನಗಳಿಂದಲೇ ತನ್ನ ಅಂತರಂಗದಲ್ಲಿ ಬೇರೂರಿರುವ ಆಸೆಯೂ ಅದೇ ಆಗಿರುವಾಗ ಈಗ ಏಕೆ ಹಿಂಜರಿಯಲಿ ? ಅವಕಾಶ ಸಿಕ್ಕರೆ ತನ್ನ ಆಸೆ ಫಲಿಸುತ್ತದಲ್ಲ ! ಎಂದುಕೊಂಡಳು.
“ ಯೋಚ್ನೆ ಮಾಡು ಸಿಸ್ಟರ್. ಬೇಗ ಡಿಸೈಡ್ ಮಾಡಿದ್ರೆ ನಿನ್ನ ಮನಸ್ಸಿಗೊಂದು ರೀತಿ ಸಮಾಧಾನ ಸಿಗಬಹುದು. ನಿನ್ನ ಹಳೆಯ ಕತೆಯಲ್ಲ ಮರೆತು ನೀನೆ ರಾಣಿಯಂತೆ ಮೆರೆಯಲೂಬಹುದಲ್ಲ. ನೀನು ಹ್ಞೂಂ ಅನ್ನು. ನಾನು ನಿನಗೆ ದಾರಿ ತೋರಿಸ್ತಿನಿ. ” ರೋಸಿಯೂ ಆಕೆಯ ಬೆನ್ನುತಟ್ಟಿದಳು.
ಅನಂತರ, ಲಾವಣ್ಯ ಬಿಡುವು ದೊರೆತಾಗಲೆಲ್ಲ ರೋಸಿಯ ಜತೆ ಹೊರಗೆ ತಿರುಗಾಡತೊಡಗಿದಳು. ಕೆಲವು ಫ್ಯಾಷನ್ ಶೋಗಳಿಗೂ ಹೋಗಿಬಂದಳು. ಹೀಗೆ ಅವಳ ಬಹು ದಿನದ ಆಸೆ ಆಕಾಂಕ್ಷೆ ತಂತಾನೆ ಬಲಿತು ಬೆಳೆಯಲಾರಂಬಿಸಿತು.
ಇತ್ತ ಕಂಪ್ಯೂಟರ್ ಹೌಸ್‌ನಲ್ಲಿ ದಿನೇ ದಿನೇ ಅವಳಿಗೆ ಜವಾಬ್ದಾರಿ ಹೆಚ್ಚುತ್ತಿರುವ ಆರೋಗ್ಯದ ಮೇಲೂ ಪರಿಣಾಮ ಬೀರುವುದರಲ್ಲಿತ್ತು. ಅವಳೋಬ್ಬಳೇ ಎಲ್ಲ ವ್ಯಾಪಾರ, ವಹಿವಾಟು ನಡೆಸಬೇಕಿತ್ತು. ಪ್ರಿಯಂಕರ್‌ ಅವಳ ದಕ್ಷತೆ, ಪ್ರಾಮಾಣಿಕತೆಯನ್ನೂ ದುರುಪಯೋಗಪಡಿಸಿಕೊಂಡಿದ್ದ. ಅವಳು ಮಾಡುವ ಕೆಲಸಕ್ಕೆ ಐದು ಸಾವಿರ ಕೊಟ್ಟರೂ ಕಡಿಮೆಯೇ. ಏನೋ ಮಹಾ ಧಾರಾಳಿಯಂತೆ ಮೂರು ಸಾವಿರ ಕೊಡುತ್ತಿದ್ದ. ಮಾತು ಮಾತಿಗೂ ಅವಳ ಅಂದ ಚೆಂದ ಹೊಗಳುತ್ತ, ಮೈಗೆ ಮತ್ತಿಕೊಂಡವನಂತೆಯೇ ಇರುತ್ತಿದ್ದ. ಅವಳಿಗೋ ಮುಜುಗರವಾಗುತ್ತಿತ್ತು. ತಾನು ತನ್ನ ಬಾಳೆಯ ದಿಂಡಿನಂತಹ ದೇಹವನ್ನು ದಂಡಿಸಿ ಇಲ್ಲಿ ಪಡೆಯವ ಬಾಗ್ಯವೇನು ? ತನ್ನ ಯೌವನ, ಸೌಂದರ್ಯ ಹೀಗೆ ವ್ಯರ್ಥ ಸವೆಯಬೇಕು, ತಾನು ಜೀವನದಲ್ಲಿ ಏನೂ ಸಾಧಿಸದೇ ಹೋಗಬೇಕು ? ಎಂಬೆಲ್ಲ ಚಿಂತೆ ಮುತ್ತಿಗೆ ಹಾಕಿದಾಗ ಅವಳಿಗೆ ಕುಳಿತಲ್ಲೇ ಕಾಣುವದೇ ರೂಪದರ್ಶಿಗಳ ನಕ್ಷತ್ರ ಲೋಕ. ಆ ಇರುಳು ಬೆಳಕಿನ ವಿಹಂಗಮ ಲೋಕದಲ್ಲೇ ವಿಹರಿಸುತ್ತಾ ಇಹವನ್ನೇ ಮರೆಯುವಳು.
ಅವಳ ಅನ್ಯ ಮನಸ್ಕತೆಯನ್ನು ಗುರುತಿಸಿದ ಪ್ರಿಯಂಕರ , ಏನೇ ಆಗಲಿ ಸ್ವಲ್ಪ ತಪ್ಪಾದರೂ ಗದರೀಸದೇ ಮೆಲುವಾಗಿಯೇ ಓಲೈಸುವನು, ಎಷ್ಟೆಂದರು ಅವಳ ರೂಪಾತೀಶಯಕ್ಕೆ ಬೆರಗಾಗಿರುವನಲ್ಲ ! ಅಲ್ಲದೆ, ಹೊರಗೆ ಮೋಜು, ಮೇಜುವಾನಿ ಮಾಡುತ್ತ ತಿರುಗುತ್ತಿದ್ದ ಪ್ರಿಯಂಕರ ವಾರಕ್ಕೊಮ್ಮೆ ಇವಳನ್ನೂ ತನ್ನ ವಾಹನದಲ್ಲಿ ಕೂರಿಸಿಕೊಂಡು ಹೋಗುವ ಸಂಧರ್ಭಗಳಿದ್ದುವಲ್ಲ. ಇವು ಏಕಾದರೂ ಬರುತ್ತವೋ ! ತಾನೆಲ್ಲಿ ಒಂದು ರೀತಿ ಬಂದಿನಿಯೆ ಸರಿ: ತನಗೆ ಸ್ವಾತಂತ್ರವಿಲ್ಲ. ತಾನಿವನ ಕೈಸೆರೆಯಾಳಂತೆಯೇ !
ಅವನ ಮಾರುತಿ ಕಾರಿನ ಬಾಗಿಲು ತೆರೆದು, “ ಕಾರಿಗೆ ಕಪ್ಪುಗಾಜು ಇದೆ. ಹೊರಗಿನಿಂದ ಯಾರೂ ನೋಡಲಾರರು. ಬಾ ಮುಂದಿನ ಸೀಟಿನಲ್ಲೇ ಕೂತ್ಕೋ ” ಎನ್ನುತ್ತಿದ್ದ. ಅಲ್ಲಿ ಕುಳಿತರೆ ಸಾಕು, ಅವನ ಲೀಲೆ ರಂಪಾಟಗಳು ಶುರುವಾಗುತ್ತಿದ್ದವು. ಅದೂ ಇದೂ ಅಶ್ಲೀಲ ಜೋಕ್ಸ್ ಕಟ್‌ ಮಾಡುವುದಲ್ಲದೇ ಅವಳ ಬೆನ್ನು ತೀಡುತ್ತಿದ್ದ. ಕೆನ್ನೆ ತಟ್ಟುತ್ತಿದ್ದ, ತೊಡೆ ಹಿಂಡುತ್ತಿದ್ದ. ಡ್ರೈವ್ ಮಾಡುವಾಗ ಅಯಾಚಿತವೆಂಬಂತೆ ಅವಳ ಮೇಲೋರಗಿರುತ್ತಿದ್ದ. ತಟ್ಟನೆ ಸ್ತನಗಳನ್ನು ಸ್ಪರ್ಶಿಸುಬಿಡುತ್ತಿದ್ದ. ಅವಳ ಕಣ್ಗಳು ಕೆಂಡದುಂಡೆಗಳಾಗಿ ಕಿಡಿಕಾರಿದ ಸಂದರ್ಭದಗಳಲ್ಲಿ, “ ಓ ಐ ಯ್ಯಾಮ್ ಸಾರಿ..... ಮೇಮ್ .... ” ಹಲ್ಕಿರಿದು ಬಿಡುತ್ತಿದ್ದ.
ಅಂದೋಮ್ಮೆ ಇಳಿ ಹೊತ್ತು ನಾಲ್ಕರ ಸಮಯ. ಅವನ ಕಾರು ಇವಳನ್ನು ಕೂರಿಸಿಕೊಂಡು ಸದಾಶಿವನಗರದಲ್ಲಿದ್ದ ಬಂಗಲೆಗೆ ಹೋಗಿತ್ತು. ಇಲ್ಲಿಗ್ಯಾಕೆ ಕರ್‌ಕೊಂಡುಬಂದ್ರಿ... ? ಲಾವಣ್ಯ ಗಾಬರಿಯಿಂದಲೇ ಕೇಳಿದಳು
.
“ ಡೋಂಟ್‌ವರಿ.... ಇದೇ ನಮ್ಮ ಮನೆ. ನನ್ನ ಪರ್ಸನಲ್ ಕಂಪ್ಯೂಟರ್‌ನಲ್ಲಿ ಕೆಲ್ಸ ಇದೆ. ಆಮೇಲೆ ಹೊರಟುಬಿಡೋಣ..... ” ಎಂದ. ಲಾವಣ್ಯ ನಿರ್ವಾಹವಿಲ್ಲದೇ ಕಾರಿನಿಂದ ಕೆಳಗಿಳಿದಳು. ಸೆರಗನ್ನು ಬುಜದ ತುಂಬಾ ಹೊದೆದುಕೊಂಡಳು. ತನ್ನ ಖಾಸಗಿ ಕೋಣೆಗೆ ಸ್ವಾಗತಿಸಿದ ಪ್ರಿಯಂಕರ್, “ ಕೂತ್ಕೋ ಲಾವಣ್ಯ.... ” ಹೇಳಿದವನೆ ಫ್ರಿಜ್ ಕಡೆಗೆ ಸಾಗಿದ್ದ.
ಆ ಕೋಣೆ ಅತ್ಯಾಧುನಿಕ ರೀತಿಯಲ್ಲಿ ಸುಸಜ್ಜಿತವಾಗಿತ್ತು. ನೋಡಲು ಎರಡು ಕಣ್ಣೂ ಸಾಲದೆನಿಸಿತ್ತು. ಎರಡು ಗ್ಲಾಸುಗಳಲ್ಲಿ ಪೆಪ್ಸಿ ಹಿಡಿದು ಬಂದವನೆ,
“ ತೆಗೆದುಕೋ, ನಿನ್ನ ಕೋಮಲ ದೇಹ ತಂಪಾಗುತ್ತೇ. ” ನಕ್ಕ. ಲಾವಣ್ಯ ಅನುಮಾನಿಸಿದಳು. ‘ ಯಾಕೆ .... ಜ್ಯೂಸ್ ಕುಡೀಲಿಕ್ಕೇನೂ.....’
‘ ಇದರಲ್ಲೇನಾದರೂ ಮತ್ತು ಬರುವಂತದನ್ನ ಸೇರಿಸಿದ್ದಾನೋ ! ಆತಂಕವಿತ್ತು ಆಕೆಗೆ.’
“ ಉಂ ಕುಡೀಂದ್ರೆ... ಕುಡಿಬೇಕು, ನಾನೇನೂ ಬೆರೆಸಿಲ್ಲ ಇದರಲ್ಲಿ.... ” ಜೋರಾಗಿ ಗದರಿಕೊಂಡ.
ಆಕೆ ಕೂಡಲೇ ಗ್ಲಾಸ್ ಗಟಗಟನೆ ಎತ್ತಿ ಕುಡಿದು ಕೆಳಗಿಟ್ಟಳು. ಅವನು ನಕ್ಕ. ಫಕಫಕನೆ ನಕ್ಕ ! ತನ್ನ ಅಸಹಾಯಕತೆಗಾಗಿ ಸಿಟ್ಟು ಬಂತು.
“ ನಾನು ಹೋಗ ಬೇಕು.... ಎದ್ದು ನಿಂತಳು.”
“ ಹೋಗುವಿಯಂತೆ, ನನ್ನ ಕಂಪ್ಯೂಟರ್ ನೋಡುವುದಿಲ್ಲವೇನೂ....”
“ ನನಗೆ ಆಸಕ್ತಿ ಇಲ್ಲ......”
“ ಈ ತುಂಬು ಯೌವನದಲ್ಲಿಯೇ ಆಸಕ್ತಿ ಇಲ್ಲವಾದರೆ ಹೇಗೆ ಲಾವಣ್ಯ....”
ಲಾವಣ್ಯ ಅವನ ನೋಟ ಎದುರಿಸದಾದಳು. “ ಕುತ್ಕೋ, ನಾನೇನು ನೀನು ತಿಳಿದಿರೋ ಹಾಗೆ ಪಶು ಅಲ್ಲ....”
ಅವನ ದನಿ ಮೆದುವಾಗುವುದನ್ನು ಕಂಡು ಕುಳಿತಳು.

ಅವನು ಕಂಪ್ಯೂಟರ್ ಆನ ಮಾಡಿದವನೇ ಒಂದು ಪ್ಲಾಫಿಯನ್ನು ಅದರ ಡ್ರೈವ್‌ನಲ್ಲಿ ಹಾಕಿದ. ಮಾನಿಟರ್ ಮೇಲೆ ಒಂದೋಂದಾಗಿ ವರ್ಣರಂಜಿತ ಪೋಟೋಗಳನ್ನು ಡಿಸ್‌ಪ್ಲೇ ಮಾಡತೊಡಗಿದ. ಅವೆಲ್ಲವೂ ಸುರಸುಂದರ ದಷ್ಟಪುಷ್ಟರಾದ ಗಂಡು, ಹೆಣ್ಣಿನ ಶೃಂಗಾರ ವಿಲಾಸ ಭಂಗಿಗಳು, ಕೆಲವೊಂತು ಸಂಭೋಗದ ಆಸನಗಳು. ವಾತ್ಸಾಯನದ ಕಾಮಸೂತ್ರವನ್ನೂ ನಾಚಿಸುವಂತ ವಿಚಿತ್ರ ಬಗೆಯ ದೃಶ್ಯಗಳು. ನೋಡ ನೋಡುತ್ತಿದ್ದಂತೆಯೇ ಲಾವಣ್ಯಳಿಗೆ ಮೈ ಕಾವೇರಿತ್ತು. ಗಂಡಿನ ಸಂಗ ಸುಖವನ್ನು ಸವಿಯದಿದ್ದವಳಿಗೆ ಲಘು ನಡುಕ ಉಂಟಾಗಿ ಜಲಜಲನೆ ಬೆವೆತು ಹೋದಳು. “ ಹೆದರ್ಕೋಬೇಡಾ... ಟೇಕ್ ಇಟ್ ಈಸೀ .... ! ಮನುಷ್ಯನ ಜೀವನದಲ್ಲಿ ಮಾತ್ರ ಇವನ್ನೆಲ್ಲಾ ನೋಡಲು ಸಾಧ್ಯ. ಹ್ಞಾಂ..... ಮಾಡಲೂ ಸಾಧ್ಯ . ಆದ್ದರಿಂದ , ನೋಡುವುದೇನಿದ್ದರೂ ನೋಡಬೇಕು. ಮಾಡುವುದೇನಿದ್ದರೂ ಮಾಡಿಬಿಡಬೇಕು. ” ದೊಡ್ಡ ಹುಸಿನಗೆ ನಕ್ಕ. ಅವಳ ದೇಹವನ್ನೇ ಬೆತ್ತಲೆಯಾಗಿ ಕಲ್ಪಿಸಿಕೊಂಡು ದಿಟ್ಟಿಸುತ್ತಾ ಖುಷಿ ಪಡಲೆತ್ನಿಸಿದ್ದ. ಅದನ್ನರಿತ ಲಾವಣ್ಯ ತಲೆ ತಗ್ಗಿಸಿಬಿಟ್ಟಳು.
ಮೆಲುದನಿ ತೆಗೆದು ಹೇಳಿದ, “ ನನ್ಜೊತೆ ನೀನೂ ಜಾಲಿಯಾಗಿರು, ನಿನ್ನಿ ಸೌಂದರ್ಯ, ದೇಹಸಿರಿಎಲ್ಲ ಯಾರಿಗಾಗಿ ಹೇಳು ! ಅದರೋಂದಿಗೆ ಸುಖ ಕಾಣದ ನಿನ್ನೀ ಜೀವವಿದ್ದರೇನು ಫಲ..... ಯೋಚ್ನೆಮಾಡು....” ಬೆನ್ನ ಮೇಲೆ ಕೈಯಾಡಿಸಿದ್ದ, ಅವಳ ಮೈಯೆಲ್ಲ ಝುಮ್ಮೆಂದಿತು.
ಬಯಕೆಯ ಬಲೆಯಲ್ಲಿಯೇ ತಾನು ಕಳೆದುಹೋಗುತ್ತಿದ್ದೇನೆಯೇ ಉಹ್ಞೂಂ, ಬೆನ್ನುಕೊಡವಿಕೊಂಡಳು. ಅಮ್ಮ ಮ್ಮಾಂದ್ರೆ ಇನ್ನು ಹತ್ತು ವರುಷ; ಮುದುಕಿಯಾಗುವುದೇನೂ ದೂರವಿರೋಲ್ಲ. ಆಮೇಲೆ ಒಬ್ಬಳೆ ಈ ಜೀವಮಾನದಲ್ಲಿ ಏನ್ ಕಂಡೆಂತ ಕೊರಗುವುದಷ್ಟೇ. ಬೀ ಬೋಲ್ಡ್ ಎನಫ್.... ಪ್ರಪಂಚ ನಿನಗೆ ಬಹಳಷ್ಟು ಕೊಡುತ್ತೇ. ಬೆನ್ನುತಟ್ಟಿದ್ದ. ಅದೇ ವೇಳೆಗೆ ಟೆಲಿಪೋನ್ ಶಬ್ದಿಸಬೇಕೇ ! ಪ್ರಿಯಂಕರ್ ರಿಸೀವ ಮಾಡಲು ಎದ್ದು ಹೋದ. ಲಾವಣ್ಯ ಬೆದರಿದ ಹರಿಣಿಯಾಗಿದ್ದಳು. ಅತ್ತಿತ್ತ ಕಣ್ಣು ಹಾಯಿಸಿದ್ದಳು. ಮನೆಯಲ್ಲಿ ತಮ್ಮಿಬ್ಬರನ್ನೂ ಬಿಟ್ಟರೆ ಬೇರೆ ಯಾರೂ ಇರುವಂತೆ ಕಾಣಲಿಲ್ಲ. ಇವನಿಂದ ತಪ್ಪಿಸಿಕೊಂಡು ಹೋಗುವುದು ಹೇಗೆ ?
ಅದೇನು ಸುಲಭವಲ್ಲ, ಇವನನ್ನು ಪ್ರತಿಭಟಿಸಿ ತಾನಿಲ್ಲಿ ಗೆಲುವು ಕಾಣಲಾಗುವುದಿಲ್ಲ. ಹೆಣ್ಣಾಗಿ ಜಾಣ್ಮೆಯಿಂದಲೇ ಜಾರಿಕೊಳ್ಳುವುದು ಲೇಸೆನಿಸಿತ್ತು. ಅದ್ಹೇಗೆ ? ಅಂತಹ ಚಾಲಾಕಿತನ ತನಗೆ ಹೊಸತು ಅಥವಾ ಇವನೊಂದಿಗೆ ಹೊಂದಿಕೊಂಡು ಹೋದರೆ, ಒಂದು ಮಗುವಿಗೆ ತಂದೆಯಾಗಿರುವ ಇವನಿಂದ ತಾನು ಹೊಂದುವ ಸುಖವಾದರೂ ಏನೂ? ಉಹೂಂ, ಅದನ್ನು ಕಲ್ಪಿಸಿಕೊಳ್ಳಲಾರಳು. ತನ್ನ ದೇಹ ಸೌಂದರ್ಯಕ್ಕೆ ಹುಚ್ಚಾಗಿ ಬರುವ ಗಂಡಸರು ಇದ್ದಾರೆ. ತನ್ನನ್ನು ಹೃತ್ಪೂರ್ವಕವಾಗಿ ಪ್ರೀತಿಸುವೆನೆಂದೂ, ಕೈ ಹಿಡಿದು ಬಾಳುಕೊಡುವೆನೆಂದೂ ಬರುವ ಒಬ್ಬನೇ ಒಬ್ಬ ಮಹಾ ಪುರುಷ ಎಲ್ಲಿರುವನೋ. ಗಂಡ ಬಿಟ್ಟವಳೆಂದೇ ತನ್ನನ್ನು ನೋಡುವ ಇವರೆಲ್ಲರ ದೃಷ್ಟಿ ಸ್ವಾರ್ಥಲಾಲಸೆ ತನಗೆ ತಿಳಿಯದೇನು ?
ಪ್ರಿಯಂಕರ ಟೆಲಿಪೋನ್ ರಿಸೀವರ್ ಹಿಡಿದು ಆ ಕಡೆಯಿಂದ ಕೇಳಿಬರುತ್ತಿದ್ದ ಮಾತುಗಳನ್ನು ಆಲಿಸುತ್ತಿದ್ದಾನೆ. ಆಲಿಸುತ್ತಿದ್ದಂತೇ ಅವನ ಮುಖ ಬಿಳಿಚಿಕೊಂಡಿತ್ತು.
“ ಡ್ಯಾಡಿಗೆ ಆಕ್ಸಿಡೆಂಟ್ ಆಗಿದೆಯಾ ..... ಎಲ್ಲಿ ? ಆಸ್ಪತ್ರೆಗೆ ಸೇರಿಸಿದೀರ.... ಎಲ್ಲಿಂದ್ರೆ ? ಜಯನಗರ ಸಂಜಯಗಾಂಧಿ ಆಸ್ಪತ್ರೆನಾ ? ಈಗ ಬಂದೆ.....” ರಿಸೀವರ್ ಕ್ರೆಡಲ್ ಮೇಲಿಟ್ಟು ಬಂದಿದ್ದ. ಲಾವಣ್ಯ ಪ್ರಶ್ನಾರ್ಥಕವಾಗಿ ದಿಟ್ಟಿಸಿದಳು. ಏಳು ಲಾವಣ್ಯ, ನನ್ನ ಡ್ಯಾಡಿಗೆ ಆಕ್ಸಿಡೆಂಟ್ ಆಗಿದೆ. ಅವರಿಗೆ ಅಲ್ಲಿ ಸಿರಿಯಸ್ ಆಗಿರೋವಾಗ ನಾನಿಲ್ಲಿ ಎಂಜಾಯ್ ಮಾಡುವಂಥ ನೀಚನಲ್ಲ ! ಎಂದ.
ಭಯವೀತಳಾಗಿದ್ದ ಲಾವಣ್ಯ ಒಣಗಿದ ತುಟಿಗಳನ್ನು ನಾಲಿಗೆಯಿಂದ ಒರೆಸಿಕೋಂಡಳು. ‘ ಸದ್ಯ, ಅಷ್ಟಾದ್ರೂ ಮನುಷ್ಯತ್ವ ಇದೆಯಲ್ಲ. ನನ್ನ ಪುಣ್ಯ !’ ಅಂದುಕೊಂಡಳು.
“ ಹೌದಾ ಹೇಗಿದೀರಂತೆ ..... ? ಜೀವಕ್ಕೇನೂ ಅಪಾಯ ಇಲ್ಲವಂತೇನೂ..... ನಡೀರಿ ಮೊದ್ಲು ನೋಡೋಣ. ” ಕರುಣಾಕರನ್ ಬಗ್ಗೆ ಅವಳಿಗೂ ಗೌರವ ಭಾವನೆ ಇತ್ತಲ್ಲ, ಕಾತರಗೊಂಡಳು.
“ ಅದ್ಸರಿ, ನಿಮ್ಮ ಶ್ರೀಮತಿ ತೌರಿಗೆ ಹೋಗಿದಾರೇನು ? ” ಕೇಳಬೇಕೂಂತ ಇದ್ದೆ, ಅಷ್ಟರಲ್ಲಿ......ಎಂದಳು.
“ ಹೌದು, ತೌರಿಗೆ ಹೋಗಿದಾಳೆ. ” ಚುಟುಕಾಗಿ ಹೇಳಿದ. ಕಾರು ಹತ್ತಿ ಕುಳಿತಾಗಿ ‘ ಉಸ್ಸೆಂದು ’ ನಿಟ್ಟುಸಿರೆಳೆದಳು.
“ ನನಗೂ ತುಂಬ ತಲೆ ನೌಯ್ತಿದೆ ಪ್ರಿಯಂಕರ್.... ” ಅಂದಳು. ಅದುವರೆಗೂ ತಮ್ಮ ಮಧ್ಯೆ ಏನೂ ನಡೆಯಲೇ ಇಲ್ಲವೆಂಬಂತೆ. ಪ್ರಿಯಂಕರ್ ಏನೋ ಅಧ್ಬುತ ಕಂಡವನಂತೆ ನೋಡಿದ್ದ. ಆಕೆ ಮೊದಲ ಬಾರಿಗೆ ತನ್ನ ಹೆಸರು ಹಿಡಿದು ಸಂಬೋದಿಸಿದ್ದಳಲ್ಲ ! ತಂದೆಯ ನೋವಿನ ಸುಳಿಯಲ್ಲಿ ಉಬ್ಬಿಹೋದ, “ ಅಪ್ಪಾ ಹೇಗೆದ್ದಾರೋ....” ಎಂದು ಹೇಳಿದ.
“ ನಿಮ್ಮ ತಂದೆಗೆ ಏನು ಆಗೊಲ್ಲ ಬಿಡಿ..... ದೇವರಿದ್ದಾನೆ. ” ಅವನ ಪಕ್ಕಕ್ಕೆ ಸರಿದು ಕುಳಿತು ಹೇಳಿದಳು. ಅವನ ನೋವಿಗೆ ಪ್ರತಿಕ್ರಿಯೆಸುತ್ತಿರುವಳಂತೆ ತೀರ ಹತ್ತಿರವಾದವಳಂತೆ ನಟಿಸಿದಳು.
ಈಗ ಪ್ರಿಯಂಕರ ಅತ್ಯಂತ ಹಗುರ ಮನಸ್ಸಿನಿಂದಲೇ ಕಾರು ಓಡಿಸಲಾರಂಬಿಸಿದ್ದ.
ಆಸ್ಪತ್ರೆಯಲ್ಲಿ ಕರುಣಾಕರನ್ ಅವರನ್ನು ನೋಡಿಕೊಂಡು ಹಾಸ್ಟೆಲಿಗೆ ಬಂದಾಗ ಸಂಜೆಗತ್ತಲಾಗಿತ್ತು.
ರೋಸಿ, “ಯಾಕೆ ಸಿಸ್ಟರ್ ಲೇಟು.... ? ” ಕೇಳಿದಳು. ಲಾವಣ್ಯ ವರದಿಯೊಪ್ಪಿಸಿದಳು.
“ ಈ ದೊಡ್ಡ ಮನುಷ್ಯರ ಸಹವಾಸ ಕಷ್ಟಾಮ್ಮ.....” ತನ್ನ ವ್ಯಾನಿಟಿ ಬ್ಯಾಗ್ ಟೇಬಲ್ ಗೆ ಎಸೆದು ಕಾಟಿನ ಮೇಲೆ ಕುಳಿತು ಗೋಡೆಗೊರಗಿದಳು. ಬಿಸಿಯುಸಿರೊಂದನ್ನು ಚೆಲ್ಲಿದಳು.
“ ಹೇಳು ಅದೇನಾಯ್ತು...... ನೀನು ತುಂಬಾ ಅಪ್ ಸೆಟ್ ಆಗಿರೋ ಹಾಗಿದೇ.... ” ರೋಸಿ ಕಾತರದಿಂದ ಕೇಳಿದಳು. “ ಸದ್ಯ, ಈವತ್ತು ಬಚಾವಾದೆ.......”
“ ಏನಾಯ್ತು ಹೇಳಬಾರದೇನು ? ”
ಲಾವಣ್ಯ ತಾನು ಪ್ರಿಯಂಕರ್‌ನ ಜತೆ ಹೋಗಿ ಪಡೆದ ಅನುಭವವನ್ನು ಸೂಕ್ಷ್ಮವಾಗಿ ತಿಳಿಸಿದಳು.
“ ಇಷ್ಟೇನಾ..... ? ” ರೋಸಿ ತೀರ ಹಗುರವಾಗಿ ನಕ್ಕಳು.
“ ನನ್ನ ಮಾನ ಹೋಗೊದಲ್ಲೇ ಹುಡುಗಿ. ”
“ ಅದಷ್ಟು ಸುಲಭಕ್ಕೆ ಹೋಗಲ್ಲ. ಸುಂದರಳಾದ ಹೆಣ್ಣು ಬುದ್ದಿವಂತೆ ಇರಲಾರಳು ಅನ್ತಾರೆ. ನಿನಗಿಷ್ಟು ಬುದ್ದಿವಂತಿಕೆ, ಧೈರ್ಯ, ನಟನೆ ಎಲ್ಲ ಇದೆಯೆಂದರೆ ನಂಬಲಿಕ್ಕಾಗಲ್ಲ ! ”
“ಮತ್ತೆ ಪಾರಾಗಲಿಕ್ಕೆ ಏನಾದ್ರೂ ಮಾಡಬೇಕಲ್ಲ....”
“ ಸಂತೋಷವಾಗಿರಲಿಕ್ಕೂ ಯತ್ನಿಸಬೇಕಲ್ಲ. ಅಂದ ಹಾಗೆ ಪ್ರಿಯಂಕರ್ ತನ್ನ ಅಪ್ಪನಿಗೆ ಆಕ್ಸಿಡೆಂಟ್ ಅಂತ ಹೊರಡದಿದ್ದರೂ, ನೀನೂ ಉಪಾಯದಿಂದ ಪಾರಾಗುತ್ತಿದೆಯಲ್ಲಾ.... ! ”
“ ಖಂಡಿತಾ..... ”
‘ಉಹೂಂ, ಯೌವನ ತುಂಬಿ ಹರಿಯುತ್ತಿರುವ ಒಂಟಿ ಜೀವ, ಹಾಗೆಲ್ಲ ಖಚಿತವಾಗಿ ಹೇಳಲಿಕ್ಕಾಗಲ್ಲ ’ ನಕ್ಕಳವಳು.
“ ಅದಿರಲಿ ಬಿಡು, ಈ ಘಟನೆ ನಿನಗೊಂದು ಪಾಠವೇ..... ಅಂತಾರೆ ಡಾಕ್ಟರುಗಳು ಎಂದರು.... ”
“ ಈಗ ನನ್ನ ಜೀವ ಅಂತೂ ಆ ಕಂಪ್ಯೂಟರ್ ಹೌಸ್ ನಿಂದ ಹೊರಗೇ ತಾನೇ ? ”
“ ಹೌದೇ ರೋಸಿ, ನಾನು ಈ ತಿಂಗಳ ಸಂಬಳ ತಗೋಂಡು ಉಪಾಯದಿಂದಲೇ ಹೊರಬರಬೇಕಲ್ಲ ”
“ ಮಂದೇನು ? ನಾನು ಹೇಳಿದ ಹಾಗೆ ಮಾಡು.... ”
“ ಏನ್ ಮಾಡಲಿ ಹೇಳು ? ”
“ಮಾಡೆಲಿಂಗ್ ! ಒಂದು ಸಂಜೆಗೆ, ಒಂದು ಟೇಕ್‌ಗೆ ಸಾವಿರಾರು ರೂಪಾಯಿಗಳು, ನಿನ್ನದೇ ಸುಖಜೀವನ. ”
“ ಹಾಗೆ ಡಿಪ್ರೆಸ್ ಆದ್ರೆ ಏನೂ ಆಗೊಲ್ಲ. ”
ಲಾವಣ್ಯಳಿಗೆ ಹೌದೆನಿಸಿತು. ಅಂತರಂಗದಲ್ಲಿ ಇದ್ದ ಅದಮ್ಯ ತುಮುಲವಿಂದು ತಾನಾಗಿಯೇ ತೆರೆದುಕೊಂಡಿತ್ತು. ತಾನು ಸೌಂದರ್ಯ ರಾಣಿಯಂತೆ ಮೆರೆಯುವಂತಾದರೆ, ನಿಟ್ಟುಸಿರೆಳೆದ್ದಿದ್ದಳು. ಕುಳಿತಲ್ಲಿಂದ ಎದ್ದು ಸೀರೆ ಬಿಚ್ಚಿದವಳೆ ನೈಟಿಗೆ ಬದಲಿಸಲನುವಾದಳು. ರೋಸಿ ಬಿಟ್ಟ ಕಣ್ನುಗಳಿಂದ ಅವಳನ್ನೆ ಅಡಿಯಿಂದ ಮುಡಿಯವರೆಗೆ ದಿಟ್ಟಿಸಿ, ಹಾಯ್, ನಾನೇ ಗಂಡು ಆಗಿದಿದ್ದರೇ.... ಎನ್ನುತ್ತಾ ಬಾಚಿ ತಬ್ಬಿಕೊಂಡಳು. “ ಈಗ ಆದದ್ದಾಯಿತಲ್ಲ. ನಾಳೆ ಸಂಜೆ ನನ್ನ ಜತೆ ಹೊರಡು. ನಿನಗೆ ಬೇರೋಂದು ಅದ್ಭುತ ಪ್ರಪಂಚವನ್ನೇ ತೋರಿಸ್ತಿನಿ. ” ಥಟ್ಟನೆ ಅವಳ ದುಂಡುಕೆನ್ನೆಯನ್ನು ಚುಂಬಿಸಿದಳು ರೋಸಿ ತುಂಟ ಹುಡುಗನಂತೆ. “ ಆಯ್ತೆ ಹುಡುಗಿ..... ಅದೇನ್ ತೋರಿಸ್ತಿಯೋ ತೋರಿಸು..... ಅದನ್ನು ನೋಡಿಯೇ ಬಿಡೋಣ ! ” ಅವಳೆಂದಳು ನೈಟಿ ಸರಿಪಡಿಸಿಕೊಳ್ಳುತ್ತಾ.
‘ ರೋಸಿ ಹೇಳುವುದೂ ಸರಿಯೇ ! ಒಂದು ಸಂಜೆಗೆ ಇದೇ ವೃತ್ತಿಯಲ್ಲಿ ಐದಾರು ಸಾವಿರ ತರುತ್ತಾಳಲ್ಲ ಈ ಪೀಚು ಹುಡುಗಿ ! ನನಗೆ ಇನ್ನೂ ಸಿಗಬಹುದಲ್ಲ. ಅವಳೇ ಹೇಳುವಂತೆ ಮಾಡೆಲಿಂಗ್ ವೃತ್ತಿಯಲ್ಲಿಯೂ ಅನೇಕ ವಿಧಗಳಿವೆಯಲ್ಲ.’ ಇದನ್ನೊಂದು ಸದ್ ವೃತ್ತಿಯನ್ನಾಗಿಯೇ ತೆಗೆದುಕೊಂಡು ಒಂದು ಇತಿಮಿತಿಯಲ್ಲೇ ಹೋಗುವಂಥ ಮಹಿಳೆಯರ ಬಗ್ಗೆಯೂ ಕೇಳಿದ್ದಾಳೆ. ತಾನೂ ಯಾಕೆ ಪ್ರಯತ್ತ ಪಡಬಾರದು ? ಹಣದ ಬಲದಿಂದಲೇ ಎತ್ತರಕ್ಕೇರಲೂ ಬಹುದಲ್ಲ ಎಂದೇ ಲೆಕ್ಕಚಾರ ಹಾಕಿದಳು ಲಾವಣ್ಯ. ದಾಸ್ ಕಂಪ್ಯೂಟರ್ ಹೌಸ್ ನಲ್ಲಿ ಆ ತಿಂಗಳ ಸಂಬಳ ಪಡೆದ ಲಾವಣ್ಯ ಪ್ರಿಯಂಕರ್‌ನನ್ನು ಕಾಣಲು ಅವನ ಛೇಂಬರಿಗೆ ಹೋದಳು. ಕೆಲಸ ಬಿಡಬೇಕೆಂದರೆ ಅವಳು ಒಂದು ತಿಂಗಳು ಮುಂಚಿತವಾಗಿ ಕಂಪೆನಿಗೆ ನೋಟಿಸ್ ಕೊಡಬೇಕಾಗಿತ್ತು. ಅದನ್ನು ಸಿದ್ದಪಡಿಸಿಕೊಂಡೇ ಬಂದಿದ್ದಳು. ನೋಟಿಸ್ ನೋಡಿದ ಪ್ರಿಯಂಕರ್ ಶಾಕ್ ಹೊಡೆದವನಂತೆ ತತ್ತರಿಸಿದ್ದ. “ ಲಾವಣ್ಯ, ಏನಿದು ? ” ಎರಡು ಹುಬ್ಬೇರಿಸಿದ ಬೆಪ್ಪಾಗಿ.
“ ನಿಮ್ಮ ಕೈಯಲ್ಲಿ ಇದೆಯಲ್ಲ......... ನೋಡಿ ” ಅಂದಳು.
“ ನನ್ನಿಂದ ತಪ್ಪಾಗಿರಬಹುದು ಲಾವಣ್ಯ. ಅದಕ್ಕೆ, ರಾಜಿನಾಮೆ ಕೊಡೋ ಅಗತ್ಯ ಇರಲಿಲ್ಲ. ”
“ ನನಗೆ ನಿಮ್ಮ ಮೇಲೇನೂ ಬೇಸರ ಇಲ್ಲ. ನನಗೆ ಕೆಲ್ಸ ಬಿಡ್ಬೇಕು ಅನಿಸ್ತು. ಬಿಡ್ತಾ ಇದೀನಿ. ”
“ ಬೇರೆ ಏನ್ ಮಾಡ್ತೀಯಾ .........”
“ ನನಗೆ ಗೊತ್ತಿಲ್ಲ ......... ”
“ ನಿನ್ನಂಥ ಎಫಿಸಿಯಂಟ್ ಲೇಡಿ ಸಿಗಬೇಕಲ್ಲಾ .......! ”
“ ನನಗಿಂತಲೂ ಸ್ವೀಟ್ ಗರ್ಲ್ಸ್ ನಿಮಗೆ ಸಿಗುತ್ತಾರೆ....... ಅವರ ಮುಂದೆ ನನ್ನಂಥ ಹೆಂಗಸು ಯಾವ
ಲೆಕ್ಕ ನಿಮಗೆ ! ” ಹಣೆಯ ಮೇಲಿನ ಮುಂಗುರುಳು ತೀಡಿಕೊಂಡಳು. “ ನಿನಂಥ ಹೆಂಗಸೂಂತ ಯಾರು ಹೇಳ್ತಾರೆ ..... ? ನೀನು ಹೋಗಲೇ ಬೇಕೆಂದರೆ ತಡೆಯಲು ನಾನ್ಯಾರು ? ಸಂಬಳ ಒಂದು ಸಾವಿರ ಏರಿಸೋಣ... ಯೋಚ್ನೆ ಮಾಡು. ” ಅವನೆಂದ. “ ಎಲ್ಲಾ ಯೋಚ್ನೆ ಮಾಡಿಯೇ ಈ ನಿರ್ಧಾರ ತಗೋಂಡಿದ್ದೀನಿ.”
“ ಎನಿ ಹೌ, ಯು ಹ್ಯಾವ್ ಡಿಸೈಡೆಡ್........ ಓ.ಕೆ. ....”
ಹತಾಶನಾದರೂ ತನ್ನ ಬಿಗುವು ಬಿಟ್ಟು ಕೊಡದವನಂತೆ ಇದ್ದ.
“ ತುಂಬಾ ಥ್ಯಾಂಕ್ಸ್.... ” ಲಾವಣ್ಯ ನಸು ನಗೆ ಬೀರಿ ಅವನಿಗೆ ವಿದಾಯ ಹೇಳಿದಳು. ಆ ಬಳಿಕ, ಏಕೋ ತನ್ನ ಬಾವ ಅಭಿರಾಮನಿಗೆ ಈ ವಿಷಯ ತಿಳಿಸದೇ ಇರಲು ಆಗಲಿಲ್ಲ. ಅದೊಂದು ಸಂಜೆಯೇ ಸಿಟಿ ಬಸ್ ಹಿಡಿದು ಸೀದಾ ಆತನ ಮನೆಗೆ ಬಂದಳು. ತಂಗಿಯ ಅನೀರಿಕ್ಷಿತ ಆಗಮನದಿಂದ ಸಹನಾ ಸಂತಸಗೊಂಡಳು. ಸದ್ಯದಲ್ಲೇ ಆಕೆ ತಾಯಿ ಆಗುವ ಸೂಚನೆಗಳಿವೆಂದು ತಿಳಿದಾಗ ಅಕ್ಕನನ್ನು ಬಾಚಿಗೊಂಡಳು.
“ ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಬಿಡೆ..... ” ಸಹನೆ ಅಸಹನೆ ತೊರಿದಳು.
“ ಯಾಕೆ !..... ಯಾವ ಹೆಣ್ಣೂ ಆಗದೇ ಇರುವ ತಾಯಿ ನೀನೇ ಆಗಲಿದ್ದೀಯೆನೂ...... ” ಲಾವಣ್ಯ ಮುಖ ಚಿಕ್ಕದು ಮಾಡಿಕೊಂಡಳು.
ಸಹನಾ, “ ಇಲ್ವೇ ಮಹರಾಯಿತಿ........ ನಾನೇನ್ ಮಾಡಲಿ, ನನಗೆ ಯಾವಾಗಲೂ ಸುಸ್ತು......... ಇವತ್ತಿದ್ದಂಗೆ ನಾಳೆ ಇರ್ತೀನೊ ಇಲ್ವೋ..... ” ಅಳು ಮೊರೆ ಹೊತ್ತು ಕುಳಿತಳು. ಅಕ್ಕನಿಗೆ ಧೈರ್ಯ ತುಂಬಿ ಸಮಾಧಾನಿಸುವ ಹೊತ್ತಿಗೆ ಸಾಕುಸಾಕೆನಿಸಿತು ಲಾವಣ್ಯಳಿಗೆ.
ಸಂಜೆ ಅಭಿರಾಮ ಫ್ಯಾಕ್ಟರಿಯಿಂದ ಬಂದ. ಕಾಫಿ ಕುಡಿದವನೇ ಆಸಕ್ತಿಯಿಂದಲೇ ನಾದಿನಿಯನ್ನು ವಿಚಾರಿಸಿಕೊಂಡ. ಲಾವಣ್ಯ ತಾನು ದಾಸ್ ಕಂಪ್ಯೂಟರ್ ಹೌಸ್ ಬಿಟ್ಟು ಬಂದ ಸಮಾಚಾರ ಮುಟ್ಟಿಸಿದಳು. ಅಲ್ಲಿ ಹೀಗೇನೋ ಆಗಬಹುದೆಂಬ ಗುಮಾನಿ ತನಗೆ ಪ್ರಿಯಂಕರ್ ನನ್ನು ನೋಡಿದಾಗಲೇ ಹೊಳೆದಿತ್ತಲ್ಲ ಅಂದುಕೊಂಡ. ಇಗ ಇವಳಿಗೆ ಮುಂದೇನು ? ಎಂಬ ಪ್ರಶ್ನೆ ಬೃಹದಾಕಾರವಾಗಿ ನಿಂತಿತ್ತು. ಇವಳು ಸಲೀಸಾಗಿ ಅವನ ಪ್ರಶ್ನೆಗೆ ತಾನು, “ ಮಾಡೆಲಿಂಗ್ ಮಾಡ್ತೀನಿ.... ” ಗಿಳಿಯಂತೇ ಉಲಿಯಬೇಕೆ ! ಅಭಿರಾಮ ತಟಸ್ತನಾದ. ಸ್ವಲ್ಪ ತಡೆದು ಹೇಳಿದ್ದ. “ ನೀನು ಬೆಂಕಿಯಿಂದ ಬಾಣಲೆಗೆ ಬೀಳ್ತಾ ಇದೀಯಾ ............ ”
“ ಇಲ್ಲಾ ಬಾವ... ನನ್ನಂಥ ಅಬಲೆಗೆ ಈ ಬದುಕು ಬೆಂಕಿಯ ಮೇಲಿನ ಬಾಣಲೆಯ ಹಾಗೆ, ಹಾಗಂತ ಹೆದರಿಕೊಂಡ್ರೆ ಆದೀತೆ ? ”
“ ನಿನ್ನಂಥ ಸೌಂದರ್ಯವತಿ ಒಂಟಿಯಾಗಿ ಬದುಕೊದು ಕಷ್ಟಾಂದ್ರೆ, ನೀನು ಆ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಬಾಳ್ತೀನಿಯಂತಿಯಲ್ಲ ! ”
“ ಬಾವಾ, ಅದರಲ್ಲೂ ನಮ್ಮ ಇತಿಮಿತಿಗೆ ಹೊಂದುವ ಹಾ್ಗೆ ಆಯ್ಕೆ ಮಾಡ್ಕೊಬಹುದಲ್ಲ. ನಿಜ ಹೇಳ್ಬೇಕೂಂದ್ರೆ ನಂಗೆ ಮೊದಲಿನಿಂದಲೂ ಮಾಡೆಲ್ ಆಗ್ಬೇಕೂಂತ ಒಳಗೆ ಆಸೆ ಇತ್ತು. ”
“ ಓ, ಆ ಆಸೆಗೆ ಈಗ ನೀರೆರೆದು ಚಿಗುರಿಸಿದವನು ಯಾರೋ..... ? ”
“ ನನ್ನ ರೂಂ ಮೆಟ್ ರೋಸಿ. ”
“ ಅವಳು ಶ್ರಿಮಂತರ ಮನೆ ಹುಡುಗಿ ಇರಬೇಕು. ಲಾವಣ್ಯ, ನೀನು ಬುದ್ದಿವಂತೆ ಇದೀಯ, ಯೋಚನೆ ಮಾಡು, ದುಡ್ಡಿದ್ದವರು ಏನ್ ಮಾಡಿದರೂ ಜಯಿಸ್ತಾರೆ, ಮತ್ತೂ ದುಡ್ಡು ಮಾಡ್ತಾರೆ, ಇಂತಹ ಫೀಲ್ಟ್‌ನಲ್ಲಿ ಕಾಲಿಡುವ ನಿನ್ನಂಥ ಬಡಪಾಯಿಗಳೂ ದಡ್ಡರೇ ಆಗ್ಬಿಡ್ತಾರೆ, ದಡ ಕಾಣದವಾರಾಗಿಯೇ ಉಳಿದುಬಿಡ್ತಾರ, ” ಅಭಿರಾಮ ಅತೀವ ಆತಂಕಗೊಂಡಿದ್ದ.
“ ನಾನೇನಂಥ ದಡ್ಡಿ ಅಲ್ಲ ಬಾವಾ .........”
“ ನೀನು ಬುದ್ದಿವಂತೆಯೇ ಅಂತ ನಾನು ಹೇಳಿದೆನೆಲ್ಲ. ನಿನ್ನೀ ಸೌಂದರ್ಯದೊಂದಿಗೆ ನಿನ್ನ ಸ್ವಂತಿಕೆಯನ್ನು ಕಾಪಾಡಿಕೊಳ್ಳುವುದಿದೆಯಲ್ಲ, ಅದೇ ಒಂದು ದೊಡ್ಡ ಸವಾಲು. ನೋಡುವ ”
ಅಭಿರಾಮ ಮತ್ತೂ ಎಚ್ಚರಿಸಿದ್ದ, “ ಸಧ್ಯಕ್ಕೆ ಈ ವಿಷಯ ನಿನ್ನ ಅಕ್ಕನಿಗೆ ತಿಳಿಯದಿರುವುದೇ ಲೇಸು, ” ಎಂದಿದ್ದ.
ಲಾವಣ್ಯ ಸಹ ಅಷ್ಟಕ್ಕೇ ಮರುಮಾತಾನಾಡದಾದಳು, ಆದರೇನು ಸಹನಾಳಿಗೆ ಇದೆಲ್ಲ ಎಂದಿದ್ದರೂ ತಿಳಿಯದಿದ್ದೀತೆ !
ಅಕ್ಕ – ಬಾವಾನ ಮನಸ್ಸಿಗೆ ಒಗ್ಗದ ವಿಷಯವನ್ನೇ ತಾನು ಪ್ರಸ್ತಾಪಿಸಿದ್ದಳಲ್ಲ ! ಮಧ್ಯಮ ವರ್ಗದವರ ಈ ಮಡಿವಂತಿಕೆಗೆ ಕೊನೆ ಇದೆಯೇನು ? ತನ್ನಷ್ಟಕ್ಕೇ ನಕ್ಕಳು ಮಾಡೆಲಿಂಗ್ ಲೋಕದ ಮೋಹ ಬಲವತ್ತರವಾಗಿಯೇ ಸೆಳೆಯುತ್ತಿತ್ತು.

ಇರುಳ ನಕ್ಷತ್ರ-2 (ಕಿರು ಕಾದಂಬರಿ)

-2-
ಲಾವಣ್ಯ ಅಕ್ಕನ ಮನೆಗೆ ಬಂದಿರುವುದು ಮದುವೆಯಾದ ಮೇಲೆ ಮೊದಲ ಸಾರಿಗೆ. ಹಾಗೆ ನೋಡಿದರೆ ಅವಳು ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗೋವರೆಗೂ ಇದ್ದದ್ದೇ ಅಕ್ಕನ ಮನೆಯಲ್ಲಿ. ತಾಯಿಯ ಪ್ರೀತಿಯನ್ನೇ ಕಾಣದ ತಬ್ಬಲಿ. ತಂದೆಯ ನೆನಪು ಎಲ್ಲೋ ಅಲ್ಪ ಸ್ವಲ್ಪ ಇದೆಯಷ್ಟೇ. ಆಗಿಂದಲೂ ಈ ಅಕ್ಕ, ಬಾವನಿಗೆ ತಕ್ಕ ಅಭಿರುಚಿಯುಳ್ಳವಳಲ್ಲ ಎನ್ನಿಸಿದೆ. ಬಹುರಾಷ್ಟ್ರಿಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ, ತಿಂಗಳಿಗೆ ಹನ್ನೆರಡು ಸಾವಿರ ಸಂಬಳ ತರುವ , ಒಳ್ಳೆ ಸಿನಿಮಾ ಹೀರೋ ಥರಾ ಇರುವ, ಅಂತರಂಗದಲ್ಲಿ ರಸಿಕನಾಗಿ ಸೌಂದರ್ಯ ಪ್ರಜ್ಞೆ ಹೊಂದಿರುವ, ಹವ್ಯಾಸಿ ಚಿತ್ರ ಕಲಾವಿದನೂ ಆಗಿರುವ ಅಭಿರಾಮನ ವ್ಯಕ್ತಿತ್ವಕ್ಕೆ ತಕ್ಕ ಹಾಗೆ ಸಹನಾ ಇನ್ನೂ ಹೊಂದಿಕೊಂಡಿಲ್ಲವೇಕೆ ?

ಸಹನಾ ಎಸ್ಸೆಸೆಲ್ಸಿಯವರೆಗೂ ಓದಿದ್ದಾಳೆ. ಕಥೆ , ಕಾಂದಬರಿಗಳಲ್ಲಿ ಆಸಕ್ತಿ ಅವಳಿಗೂ ಇದೆ. ಟಿ.ವಿ. ಧಾರಾವಾಹಿ ನೋಡುತ್ತಾಳೆ . ನಗರದಲ್ಲಿದ್ದೂ ಹಿಂದುಳಿದವಳಂತೆ ಇರುತ್ತಾಳಲ್ಲ ಏಕೆ ? ಮದುವೆಯಾಗಿ ಏಳು ವರುಷಗಳೇ ಆಗಿದ್ದರೂ ಮಕ್ಕಳ ಭಾಗ್ಯವಾಗಿರಲಿಲ್ಲ. ದೇವರು ಅದನ್ನಾದರೂ ಕರುಣಿಸಿದ್ದರೆ ಸಹನಾ ಸದಾ ನಗು ನಗುತ್ತಾ ಇರುತ್ತಿದ್ದಳೇನೋ ! ಈಗ ಅವಳ ಮುಖದಲ್ಲಿ ಅತೃಪ್ತಿಯ ಹೊಗೆ. ಬದಲಿಗೆ ಆಕೆಯಿಂದಲೇ ತನಗೇನೋ ಕೊರತೆಯಿಲ್ಲವೆಂಬಂತೆ ಅಬಿರಾಮನ ನಡೆ. ಅದೇ ಆಶ್ಚರ್ಯ ಲಾವಣ್ಯಳಿಗೆ.
ಕಡಲೆಕಾಯಿ ಮಾರುವ ಹುಡುಗ, “ ಬೇಕೆ ಸಾರ್ ? ” ಕೇಳಿದಾಗ ಅಭಿರಾಮ ಕೊಂಡುಕೊಂಡ. ಮೊದಲು ಲಾವಣ್ಯಳ ಕೈಗೆ ಹಾಕಿದ್ದ. ಸಹನಾ ಏಕೋ ಬೇಡವೆಂದಳೂ. ಬಾವ, ನಾದಿನಿ ಮೆಲ್ಲತೊಡಗಿದರು.
“ ಲಾವಣ್ಯ, ನೀನು ಕಂಪ್ಯೂಟರ್ ನಲ್ಲಿ ಕೆಲವು ಕೋರ್ಸಗಳನ್ನು ಮಾಡಿದ್ದಿಯಲ್ಲ ! ನಿನಗೆ ಈ ಮಹಾನಗರದಲ್ಲಿ ಕೆಲಸ ಸಿಗೋದೇನೋ ಕಷ್ಟವಿಲ್ಲ. ನಮ್ಮ ಪ್ಯಾಕ್ಟರಿಯಲ್ಲಿ ಸ್ನೇಹಿತರಿಗೆ ಹೇಳಿದರೆ ಎಲ್ಲಾದರು ಕೆಲಸ ಕೊಡಿಸುತ್ತಾರೆ. ”
“ಹೌದು ಬಾವ ನನಗೊಂದು ಕೆಲ್ಸಾಂತ ಸಿಕ್ಕರೆ ನಾನು ಯಾವುದಾದರೂ ಒಳ್ಳೆ ಲೇಡಿಸ್ ಹಾಸ್ಟೆಲ್ ಸೇರಿಕೊಳ್ತಿನಿ. ”
“ ಯಾಕೆ ! ನಮ್ಮ ಮನೆ ಏನಾಗಿದೆಯೆಂದು ? ” ಒಮ್ಮೆಲೆ ಸಹನಾ ಮಧ್ಯ ಬಾಯಿ ಹಾಕಿದಳು.

“ ಅಕ್ಕಾ, ಸುಮ್ನೆ ನಿಮಗ್ಯಾಕೆ ತೊಂದರೆ ನಾನು ಗಂಡನ್ನ ಬಿಟ್ಟು ಬಂದೋಳು. ನನ್ನ ಜೊತೆ ನಿಮ್ಮನ್ನ ಸೇರಿಸಿ ಆಡಿಕೊಳ್ತಾರೆ ಜನ. ಹೇಗೋ ಕೆಲ್ಸ ಸಿಗೋವರೆಗೂ ನಿಮ್ಮ ಜತೆ ಇರಲಿಕ್ಕೆ ಅವಕಾಶ ಮಾಡಿಕೊಟ್ಟರೆ ಸಾಕು."
ಲಾವಣ್ಯ ಹೀಗನ್ನುತ್ತಿದ್ದಂತೇ,
“ ಹೌದೇ, ಈ ಅಕ್ಕ ತುಂಬಾ ಕೆಟ್ಟವಳು. ಜನರೆಲ್ಲರ ಬಾಯಿಗೆ ಬಿದ್ದಂತೆ ಇವಳ ಬಾಯಿಗೆ ನಿನ್ಯಾಕೆ ಬೀಳ್ತಿಯಾ ಹೇಳು ! ”
ಸಹನಾ ಮುಸಿಮುಸಿ ಅಳಲು ಶುರುಮಾಡಿದಳು. ಅಭಿರಾಮನಿಗೆ ಇವರಿಬ್ಬರ ನಡುವೆ ದಿಕ್ಕೆ ತೋಚದಂತಾಯಿತು.
ತನ್ನ ನೇರ ನುಡಿಗಳಿಂದ ಅಕ್ಕನ ಮನಸ್ಸಿಗೆ ಚುಚ್ಚಿದಂತಾಯಿತು. ಎಂಬುದನ್ನು ಗ್ರಹಿಸಿದಳು ಲಾವಣ್ಯ.

ಬಾವನ ಮುಖ ನೋಡಲಾರಂಬಿಸಿದಳು. ಅಭಿರಾಮ ಕೂಡಲೇ ಸಾವರಿಸಿಕೊಂಡ.
ಹೆಂಡತಿಯ ಭುಜ ತಟ್ಟಿ, “ ಯಾಕೆ ಸಹನಾ ಈಗೇನಾಯ್ತುಂತ...... ಅವಳೇನ್ ಹೇಳಬಾರದ್ದನ್ನ ಹೇಳಿದಳೂಂತ.... ಅವಳು ತುಂಬಾ ನೊಂದಿದ್ದಾಳೆ. ಎಷ್ಟು ದಿನಾಂತ ನಮ್ಮನ್ನೇ ಅವಲಂಬಿಸಿರಬೇಕೂಂತ ಯೋಚ್ನೆಮಾಡ್ತಾಳೆ. .. ತಪ್ಪೇನು ? ” ಎಂದ.

ಏನೇ ಆಗಲಿ, ಅಕ್ಕನ ಮಾತು ಒರಟಾದರೂ ಹೃದಯ ಒಳ್ಳೆಯದು. ಅದು ತನಗೆ ಒಳಿತನ್ನೇ ಬಯಸುತ್ತದಲ್ಲ !
“ ಅಕ್ಕಾ, ನಾನೇನ್ ಈಗ್ಲೇ ಹೊರಟಿರೋ ಹಾಗೆ ಆಡ್ತಿಯಲ್ಲ, ತನಗಿನ್ನೂ ಕೆಲ್ಸ ಸಿಗಬೇಕು. ನನ್ನ ಗಂಡನಿಂದ ಪೂರ್ಣ ಬಿಡುಗಡೆಯಾಗಬೇಕು. ಆಮೇಲೆ ತಾನೇ ಮುಂದಿನ ಯೋಚ್ನೆ ? ನಿನ್ನನ್ನೂ ಬಾವನ್ನೂ ಬಿಟ್ಟು ಬೇರೆ ಎಲ್ಲಿಗೆ ಹೋಗಲಿ ನಾನು ? ನಾನು ಎಂದಿದ್ದರೂ ನಿಮ್ಮವಳೇ ಗದ್ಗದಿತಳಾದಳು ಲಾವಣ್ಯ. ”

ಅಭಿರಾಮ ಅವಳ ಬೆನ್ನ ಮೇಲೆ ಕೈ ಇಟ್ಟು ಸಾಂತ್ವನದ ನೋಟ ಬೀರಿದನು.
ಅದಾಗಲೇ ಹಕ್ಕಿಗಳ ಕಲರವದೊಂದಿಗೆ ಸಂಜೆಗತ್ತಲಾರಂಭಿಸುತ್ತಿತ್ತು.
ಪಾರ್ಕಿನಲ್ಲಿರುವ ಜನ ನಿರ್ಗಮಿಸುತ್ತಿದ್ದರು. ಅಭಿರಾಮ ಹೆಂಡತಿಯ ಕೈ ಹಿಡಿದು,
“ ಏಳೂ ಸಹನಾ, ಮನೆಗೆ ಹೋಗೋಣ ” ಎಂದು ಎಬ್ಬಿಸಿದ್ದ.
ಮೂವರು ಮನೆಯತ್ತ ಹೆಜ್ಜೆ ಹಾಕಿದರು.
* ************* *

ಲಾವಣ್ಯ ಹೆಸರಿನಂತೆಯೆ ತುಂಬು ಚೆಲುವಿನ ಖನಿ. ತನ್ನ ಸೌಂದರ್ಯದ ಬಗ್ಗೆ ಅವಳಿಗೆ ಎಲ್ಲಿಲ್ಲದ ಹೆಮ್ಮೆ. ಹದಿಹರೆಯದಿಂದಲೇ ತನ್ನ ಮೈಸಿರಿಗೆ ತಾನೇ ಬೀಗುತ್ತಿದ್ದಳು. ಟಿ.ವಿ. ಯಲ್ಲಿ ಪ್ರತ್ಯಕ್ಷಗೊಳ್ಳುವ ರೂಪಸಿಯರ ನಡುವೆ ತನ್ನನ್ನು ಕಲ್ಪಿಸಿಕೊಳ್ಳುವಳು. ತನ್ನ ನೀಳವಾದ ಹೆರಳಿಗೆ ಶ್ಯಾಂಪೂ ಪೂಸಿಕೊಂಡು ಸ್ನಾನ ಮಾಡಿ ಬಂದಳವಳೆಂದರೆ ಒಬ್ಬಳೆ ಕೋಣೆಯ ನಿಲುವುಗನ್ನಡಿಯ ಮುಂದೆ ನಿಂತು ಬಿಡುವಳು. ತನ್ನ ನಗ್ನ ಸೌಂದರ್ಯವನ್ನು ತಾನೇ ಸವಿಯತೊಡಗುವಳು. ವಿಶಿಷ್ಟ ಶೈಲಿಯಲ್ಲಿ ಉಡುಪುಗಳನ್ನು ಧರಿಸುವಳು. ಅವ್ಯಾಹತವಾಗಿ ಅಲಂಕಾರ ಮಾಡಿಕೊಳ್ಳುತ್ತಲಿದ್ದಳು. ವಿದ್ಯಾರ್ಥಿ ದೆಸೆಯಲ್ಲಿ ಇಡಿ ಕಾಲೇಜಿನಲ್ಲಿ ಸೂಜಿಗಲ್ಲಿನಂತೆ ಸೆಳೆದಿದ್ದಳು. ಅಧ್ಯಾಪಕ ವೃಂದದಲ್ಲೂ ಅದೇಕೋ ಇವಳೆಂದರೆ ವಿಶೇಷ ಕಾಳಜಿ. ಕಾಲೇಜಿನ ಸಾಂಸ್ಕೃತಿಕ ಸಮಾರಂಭಗಳಲ್ಲಿಯೂ ತನ್ನ ಪ್ರತಿಭೆಯಿಂದ ಗಮನ ಸೆಳೆದಳು. ನೃತ್ಯ, ನಾಟಕಗಳಲ್ಲಿ ಬಹುಮಾನ ಗಳಿಸಿದ್ದಳು. ಇವಳ ಒಂದು ಕುಡಿನೋಟಕ್ಕೆ, ಪ್ರೀತಿಯ ನುಡಿಗೆ ಉಬ್ಬಿ ಹೋಗುತಿದ್ದ ಲೆಕ್ಕವಿರಲಿಲ್ಲ. ಇವಳೂ ಮಾತ್ರ ಯಾರಿಗೂ ಮರುಳಾದವಳಲ್ಲ. ಇವಳ ಹವ್ಯಾಸವೆಂದರೆ, ಕಾಲೇಜಿನ ಕೆಲ ಶ್ರೀಮಂತ ಕನ್ಯೆಯರು ನಗರದಲ್ಲಿ ಎಲ್ಲಾದರೂ ಸೌಂದರ್ಯ ಸ್ಪರ್ಧೆ, ಫ್ಯಾಷನ್ ಶೋಗಳು ನಡೆಯುತ್ತವೆಯೆಂದರೆ ಹೋರಾಡಲು ಉತ್ಸುಕಾರುಗುತ್ತಿದರಲ್ಲ, ಅವರ ಜತೆ ಅವಳು ಸೇರಿಕೊಂಡಿರುತ್ತಿದ್ದಳು. “ ನಾನು ಅಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಹೇಗೆ ? ” ಎಂದು ಕನಸು ಕಾಣುತ್ತಿದ್ದಳು. ಅವಳೂ ಗೆಳತಿಯರಲ್ಲೆ ಕೆಲವರು ಹಣ ಸುರಿದು ಮಾಡೆಲಿಂಗ್ ಕಲಿತವರಿದ್ದರು ಇವಳು ಹೋಗಬೇಕಲ್ಲ ! ಅದೆಲ್ಲ ತನ್ನಂಥ ಮಧ್ಯಮ ವರ್ಗದ ಹುಡುಗಿಯರಿತಲ್ಲ. ಈ ಮಧ್ಯಮ ವರ್ಗದ ಕೋಟೆಯೊಳಗೆ ಎಲ್ಲ ಆಚಾರ, ವಿಚಾರ ಶೀಲವಂತಿಕೆಗಳು ಇನ್ನು ಭಧ್ರವಾಗಿವೆಯಲ್ಲ ! ಅವೆಲ್ಲವನ್ನೂ ದುಡ್ಡಿದವರೂ ಸಲೀಸಾಗಿ ಕಿತ್ತೆಸೆದು, ತನ್ನಂಥೆ ಸುಂದರಿಯಾದ ಹೆಣ್ಣು ಇಲ್ಲಿ ಕನಸು ಕಾಣುವುದಷ್ಟೇ. ತಾನೇನಿದ್ದರೂ ಚೆನ್ನಾಗಿ ಓದಿ ಮುಂದೆ ಬರಬೇಕು. ತನ್ನ ತಲೆಯಲ್ಲಿ ಇಂತಹ ವಿಚಾರಗಳೆಲ್ಲಾ ತುಂಬಿಕೊಂಡಿವೆಯೆಂದರೆ ಆಯಿತು. ತನಗೆ ಏನೆಲ್ಲವೂ ಆಗಿರುವ ಅಕ್ಕ ಭಾವ ತನ್ನನ್ನೇ ಹೊರಗೆ ಹಾಕಿ ಬಿಡುತ್ತಾರೆ ಹೀಗೆ ಲಾವಣ್ಯ ಕಟ್ಟೆಚ್ಚರದಿಂದಲೇ ಓದುತ್ತಾ ಬೆಳೆದಳು. ಏರು ಜವ್ವನೆಯಾದಂದಿನಿಂದಲೂ ತನ್ನ ಶೀಲ ವ್ಯಕ್ತಿತ್ವದ ಮೇಲೆ ಯಾವೋಂದು ಕಪ್ಪು ಛಾಯೆಯೂ ಬೀಳದಂತೆ ಜಾಗ್ರತೆಯಿಂದಿದ್ದಳು.ಚಿಕ್ಕಂದಿನಿಂದಿಲೇ ತಂದೆ ತಾಯಿಯರನ್ನು ಕಳೆದುಕೊಂಡ ಲಾವಣ್ಯಳನ್ನು ಅಕ್ಕ ಬಾವ ಅಕ್ಕರೆಯಿಂದ ಸಾಕಿ ಬೆಳೆಸಿದರು. ಇವಳು ಬಿ.ಎಸ್.ಸಿ.ಗೇ ಓದು ಮುಗಿಸಿ ಕಂಪ್ಯೂಟರ್ ಟ್ರೈನಿಂಗ್ ಮಾಡುತ್ತಿದ್ದಂತೆ, ಅವರೇ ಇವಳು ಮೆಚ್ಚಿಕೊಂಡ ಹುಡುಗನಿಗೆ ತಾವೇ ಮುಂದೆ ನಿಂತು ಮದುವೆ ಮಾಡಿಕೊಟ್ಟರು. ಆ ಹುಡುಗನೇ ಮದನ್ ಕುಮಾರ್ ! ಲಾವಣ್ಯಳನ್ನು ನೋಡಲು ಬಂದವನು ಮೇಲ್ನೋಟಕ್ಕೆ ಆಕರ್ಷಿಸಿದನಾದರೂ ಅವನೊಳಗೆ ಅವನದೇ ಆದ ವಿಚಿತ್ರ ವಿಕೃತ ರೂಪವಿತ್ತು. ಹೊರಗೆ ಸಭ್ಯತೆ, ಸೋಗಲಾಡಿತನದ ಸೋಗು ಹಾಕುತ್ತಾ ಅವನು ದುಂಡುದುಂಡಗೆ, ಬೆಳ್ಳಗೆ ಕಂಡ ಹೆಣ್ಣುಗಳೊಡನೆ ಸ್ನೇಹ ಬೆಳಸುವುದರಲ್ಲಿ ನಿಸ್ಸೀಮನಾಗಿದ್ದ. ಲೈಫ್ ಎಂಜಾಯ್ ಮೆಂಟ್ ಎಂದರೆ ಅದೇ ಎಂದು ಭಾವಿಸಿದ್ದ. ಅವನ ಮೋಡಿಗೆ ಜಾಣೆಯಾದ ಲಾವಣ್ಯ ಕೂಡ ಅದ್ಹೇಗೆ ಒಳಗಾದಳೋ ದೇವರೇ ಬಲ್ಲ ! ಮದುವೆಯಾದ ಮೇಲಂತೂ ಲಾವಣ್ಯ ಊಹಿಸಿರದ ರೀತಿಯಲ್ಲೀ ಅವನ ಬೋಗವಿಲಾಸ ಮುಂದುವರೆದಿತ್ತು. ಲಾವಣ್ಯ ಏನೇ ಪ್ರತಿಭಟಿಸಿದರೂ, ಗೋಗರೆದರೂ, ಅವನ ದಾರಿಯಲ್ಲಿ ಸಾಗಿದ್ದವನು. ತೀರ ತಿರುಗಿಬಿದ್ದಳೆಂದರೆ ಹೊಡೆತಗಳೂ ಬೀಳುತ್ತಿದ್ದವು.
ಈಗೀಗ ಅವನಿಗೆ ದಿನಕ್ಕೊಂದು ಹೆಣ್ಣಿನ ಸುಖ ಬೇಕಿತ್ತು. ಅಂತಹ ವಿಕೃತ ಕಾಮಿ ಅವನು. ಅತಿಶಯ ರೂಪಸಿ, ಅತಿ ವಿನಯ, ನಾಜೂಕಿನ ಲಾವಣ್ಯ ಹೆಂಡತಿಯಾಗಿ ಇವನೊಂದಿಗೆ ಹೇಗೆ ಏಗುತ್ತಿದ್ದಳೊ ! ಅದಂತೂ ಇವನಿಗೆ ಹೇಗೆ ಸಿಕ್ಕಳೋ ! ದಿನ ರಾತ್ರಿ ಪಡಬಾರದ ಯಾತನೆ ಪಡುವಂತಾದಳು. ಇಷ್ಟು ಸಾಲದೇ ಹಗಲೆಲ್ಲ ಅವನು ಹೇಳಿದಂತೆ ಅತಿರೇಕದ ಮೇಕಪ್ ಮಾಡಿಕೊಂಡಿರಬೇಕವಳು ಆಕೆ ತನ್ನ ದೇಹಸಿರಿ ಕಾಪಾಡಿಕೊಳ್ಳಲು, ತನ್ನ ಸೌಂದರ್ಯ ವರ್ಧಿಸಿಲು ಬ್ಯೂಟಿ ಪಾರ್ಲರಿಗೆ ಹೋಗುತ್ತಿದ್ದಳು ನಿಜ. ಅವಳಿಗೂ ತನ್ನ ಸೌಂದರ್ಯ ಕಾಯ್ದುಕೊಳ್ಳಬೇಕೆಂಬ ಹುಚ್ಚು ಹಂಬಲವು ಬಹಳವಿತ್ತಲ್ಲ ! ಅನೇಕ ನಮೂನೆಯ ಬೆಲೆಬಾಳುವ ಉಡುಪು, ರೇಷ್ಮೆ ಸೀರೆ, ಒಡವೆ ಧರಿಸಲು ಅವಳೂ ಇಚ್ಚಸುತ್ತಿದ್ದಳು. ಆದರೆ, ಮದನ್ ಕುಮಾರನ ಆಜ್ಞೆಯಂತೆ ಡ್ರೆಸ್ ಮಾಡಿಕೊಳ್ಳುವುದೆಂದರೆ ಜೀವ ಅಂಗೈಗೆ ಬರುತ್ತಿತ್ತು. ಅದಕ್ಕಿಂತಲೂ ಅವಳಿಗೆ ಒಂದೋಳ್ಳೆ ಜಾಹಿರಾತು ಕಂಪೆನಿಯ ಮಾಡೆಲ್ ಆಗಿ ಪ್ರದರ್ಶನ ನೀಡುವುದೇ ಮೇಲೆನಿಸುತ್ತಿತ್ತು . ಅವನಿಷ್ಟದಂತೇ ಅವಳು ಹೊಚ್ಚ ಹೊಸ ಡಿಸೈನಿನ ಅರೆನಗ್ನ ಡ್ರೆಸ್‌ ತೊಟ್ಟು ಪಾರ್ಟಿಗಳಿಗೆ ಬರಬೇಕು. ಲೋನೆಕ್, ಸ್ಲೀವ್‌ಲೆಸ್‌ ! ಮನೆಯಲ್ಲಿದ್ದಾಗಲೂ ಅಷ್ಟೇ. ತೆಳುವಾದ ಸ್ಯಾಟಿನ್ ಮ್ಯಾಕ್ಸಿ ತೊಡಬೇಕು. ಪಾರದರ್ಶಕ ನೈಟಿಯಲ್ಲಿ ಅವನೊಂದಿಗೆ ಬೆಡರೂಂ ಸೇರಬೇಕು. ಟೇಪ್‌ ರೇಕಾರ್ಡರ್ ಆನ್ ಮಾಡಿದರೂ ಬರುವ ಪಾಶ್ಚಿಮಾತ್ಯ ಸಂಗೀತಕ್ಕೆ ಅವನು ತನ್ನ ಹೆಂಡತಿಯ ಸೊಂಟ ಬಳಸಿಕೊಂಡರೆ ಲಯಬದ್ದ ಹೆಜ್ಜೆಹಾಕುತ್ತ ಕುಣಿಯಲೂಬೇಕು. ‘ ಇದೇನು ಪೀಡೆಯೋ ಪ್ರಾರಬ್ದವೋ, ನನಗೆ ಇವನು ಗಂಟು ಬಿದ್ದನಲ್ಲ. ನಾನೇ ಬುದ್ದಿವಂತೆ ಎಂದರೆ ನನ್ನನ್ನೇ ಏಮಾರಿಸಿಬಿಟ್ಟ ! ’ ಎಂದು ಕೊರಗುತ್ತಿದ್ದಳು ಲಾವಣ್ಯ. ಇವನೊಂದಿಗಿನ ರಾತ್ರಿಗಳು ಯಾಕಾದರೂ ಬರುತ್ತವೋ ಎಂದು ಕೊಳ್ಳುತ್ತಿದ್ದಳು. ಮೃಗೀಯ ಸ್ವಭಾವ ;ಅವನದು. ಮರುದಿನ ಬೆಳಿಗ್ಗೆ ಬಾತ್ ರೂಮ್‌ನಲ್ಲಿ ದಂತದಂತೆ ಹೊಳೆವ ಮೈರಾತ್ರಿ ನಡೆದ ಧಾಳಿಯ ಪರಿಣಾಮವಾಗಿ ತಣ್ಣೀರಿನಿಂದ ಶಮನಗೊಳ್ಳಲು ತವಕಿಸುತ್ತಿತ್ತು. ಹೇಗಾದರೂ ಇವನ ಬಂಧನದಿಂದ ಬಿಡುಗಡೆ ಪಡೆದು ಹೊರಗೆ ಹಕ್ಕಿಯಂತೆ ಹಾರಿಹೋಗಬೇಕು. ಡೈವರ್ಸ್‌ ಪಡೆದರೆ ಹೇಗೋ ಆದಿತೆಂಬ ಆಲೋಚನೆಯೂ ಬರುತ್ತಿತ್ತು. ತನ್ನದೇ ಸ್ವತಂತ್ರ, ಸ್ವಚ್ಛಂಧ ಬದುಕು ಕಾಣಬೇಕೆನಿಸುತ್ತಿತ್ತು.
ಹೆಂಡತಿಯ ಮನಸ್ಸು ಹೇಗಿದ್ದರೇನು ? ಅವಳ ದುಂಡು ಮುಖದಲ್ಲಿ ನಗೆ ಮಿಂಚು ತುಳುಕುತ್ತಿರಲೇಬೇಕು. ಇಲ್ಲದ್ದಿದ್ದರೆ, “ ಏ ಗೂಬೆ , ನಿನಗೇನಾಗಿದೆ ಧಾಡಿ ಈ ಮನೆಯಲ್ಲಿ ? ” ಎಂದು ಅವಾಚ್ಯವಾಗಿ ಬೈಯುವನು. ಮನೆಗೆ ಅವನನ್ನು ಅರಸಿ ಬರುವ ಸನ್ಮಾನ್ಯ ಸಂದರ್ಶಕರನ್ನು ರೂಪಸಿ ಹೆಂಡತಿಯೆ ಬೆಡಗಿನ ನಗೆ ಬೀರಿ ಸ್ವಾಗತಿಸಬೇಕು. ಅವರ ಬೇಕು- ಬೇಡಗಳನ್ನು ಅವಳೇ ಕೇಳಿಪೂರೈಸಬೇಕು. ತನ್ನಿಂದ ಇವೆಲ್ಲ ಆಗುವುದಿಲ್ಲವೆಂದರೆ ಕೇಳಬೇಕಲ್ಲ ! ಅವನಿಂದ ರಾತ್ರಿ ಹೊಡೆತ ಬೀಳುವುದನ್ನು ತಪ್ಪಿಸಿಕೊಳ್ಳಲು ಆದೀತೇ... ಅದೊಂದು ದಿನ, ಒಬ್ಬ ದೊಡ್ಡ ಮನುಷ್ಯ ಮನೆಗೆ ಬಂದಿದ್ದ. ಆಗ ಮದನ್ ಕುಮಾರ್ ಹೇಳಿದ್ದ, “ ನೋಡು ಲಾವಣ್ಯ , ಇವನು ನನ್ನ ಬಿಸಿನೆಸ್ ಫೈನಾನ್ಶಿಯರ್ ರಾಕೇಶ್‌, ಇವನನ್ನು ನೀನು ಸರಿಯಾಗಿ ಟ್ರೀಟ್ ಮಾಡ್ಬೇಕು. ಇವನಿಗೇನೋ ಕಡಿಮೆಯಾಗ್ಬಾರದು. ಒಂಚೂರು ನೋವು ಕೊಡಬಾರದು. ಒಳ್ಳೆ ಖುಷಿಪಡಿಸ್ಬೇಕು, ತಿಳೀತಾ... ? ಈಗ ನನಗೊಂದ್ಸೊಲ್ಪ ಅರ್ಜೆಂಟ್ ಕೆಲ್ಸ ಇದೆ. ಹೊರಗೆ ಹೋಗಿ ಬರ್ತೀನಿ............. ” ಹೇಳಿ ಹೊರಟೇಬಿಟ್ಟಿದ್ದ.
“ ಸ್ವಲ್ಪ ನನ್ನ ಮಾತು ಕೇಳಿಂದ್ರೆ..... ” ಲಾವಣ್ಯ ಮುಂಬಾಗಿಲಿಗೆ ಬರೋ ಹೊತ್ತಿಗಾಗಲೇ ಅವನ ಹೀರೋಹೊಂಡಾ ರೊಯ್ಯನೆ ಶಬ್ದಿಸುತ್ತಾ ಗೇಟು ದಾಟಿ ರಸ್ತೆಗಿಳಿದಿತ್ತು. ಲಾವಣ್ಯ ಬೆವರೊಡೆದು ನಿಂತಿದ್ದಳು.
“ ಯಾಕ್ರಿ, ಹೆದರಿಕೆನಾ ? ನಾನೇನು ಹುಲೀನಾ.. ? ಪಾಪ, ಅವನಿಗೇನೊ ಅರ್ಜೆಂಟ್‌ ಇದೆ... ನೀವು ಒಳಗೆ ಬನ್ನಿ.... ” ರಾಕೇಶ ಮೆಲ್ಲ ಮೆಲ್ಲನೆ ಸರಿದು ಮುಂಬಾಗಿಲು ಎಳೆದುಕೊಂಡ.
ಲಾವಣ್ಯ ನಡುಗಿಹೋದಳು.
ಅವಳು ತುಂಬಿದ ಸ್ತನಗಳು , ಮಿನುಗುವ ಲೋನೆಕ್ ಸ್ಯಾಟಿನ್ ನೈಟಿಯಲ್ಲಿ ಏರಿಳಿಯುತ್ತಿದ್ದವು. ಹಣೆಯಲ್ಲಿ ಬೆವರ ಹನಿಗಳು ಸಾಲುಗಟ್ಟಿದ್ದವು. “ ಇಲ್ಲ ಇಲ್ಲ ನನಗೆಂಥ ಹೆದರಿಕೆ ! ನಾನು ಒಬ್ಬಳೇ ಈ ಬಂಗಲೆಯಲ್ಲಿದ್ದು ಅಭ್ಯಾಸವಿದೆ. ಜತೆಗೆ ಮನೆ ಆಳು ಬೇರೆ ಇದಾನಲ್ಲ ...! ” ಎಲ್ಲಲ್ಲದ ಧೈರ್ಯ ತಂದುಕೊಂಡಳು. ಹೊರಬಾಗಿಲಿಗೆ ಬಂದು ಆತನನ್ನು ಕೂಗೋಣವೆಂದರೆ ಬಾಗಿಲು ಹಾಕಿಬಿಟ್ಟಿದ್ದಾನೆ ರಾಕೇಶ್‌. ಕಿಟಕಿಯ ಬಳಿ ನಿಂತು. “ ರಾಮೋಜಿ... ” ಎಂದು ಕೂಗು ಹಾಕಿದ್ದಳು.
“ ನಿಮ್ಮ ವಾಚ್‌ಮನ್‌ ಸಿಗರೇಟು ತರಲಿಕ್ಕೆ ಹೋಗಿದ್ದಾನೆ....... ಹ್ಹಿ ಹ್ಹೀ..... ” ವಿಕಟ ನಗೆ ನಕ್ಕ ರಾಕೇಶ ತೀರಾ ಸನಿಹಕ್ಕೆ ಬಂದು ನಿಂತ. ಅವನ ಹಸಿದ ಕಣ್ಣುಗಳು, ಎದುರಿಗೆ ತಿವಿಯುವಂತೆ ತೊನೆವ, ತುಂಬಿದೆದೆಯ ಸೊಗಸನ್ನೆ ದಿಟ್ಟಿಸುತ್ತಿದ್ದವು.
“ ನೋಡು ನಿನ್ನ ಗಂಡನಿಗೆ ಐದು ಲಕ್ಷ ರೂಪಾಯಿ ಸಾಲಾ ಕೊಟ್ಟು ಐದಾರು ತಿಂಗಳುಗಳಾಗಿವೆ. ಪಾಪ ! ಅವನಿಂದ ಅಸಲು, ಬಡ್ಡಿ ಏನೂ ಚುಕ್ತಾ ಆಗಿಲ್ಲ... ನೀನು ಮನಸ್ಸು ಮಾಡಿದರೆ ಅವನೂ ಋಣಮುಕ್ತನಾಗುತ್ತಾನೆ. ನಿನ್ನಂಥ ಬ್ಯೂಟೀ ಗಂಡನಾದವನಿಗೆ ಅಷ್ಟೂ ರೀಲಿಫ್ ಕೊಡಿಸಿದಿದ್ದರೆ ಹೇಗೆ ? ” ಅವಳ ನುಣ್ಣನೆಯ ಕಪೋಲ ಸವರಿದ್ದ. ಲಾವಣ್ಯ ಕೊಸರಾಡಿದಳು. ಇಂತಹದೊಂದು ದುರ್ಭರ ಪ್ರಸಂಗ ತನಗೆ ಬಂದಿತೇಂದು ಊಹಿಸಿರಲಿಲ್ಲ ಅವಳು. ಗಂಡನ ಬಂಡತನ ತಿಳಿದಿತ್ತು. ತಲೆ ಹಿಡುಕುತನ ! ಉಹೂಂ ಅದರ ಪರಿಕಲ್ಪನೆ ಎಲ್ಲಿತ್ತು ?
ತಾನು ತಿಳಿದವಳು. ಹೇಗಾರರೂ ಬುದ್ದಿವಂತೆಕೆಯಿಂದಲೇ ಈ ಅಪಾಯದಿಂದ ಪಾರಾಗಬೇಕು. ತನ್ನ ಶೀಲ ಉಳಿಸಿಕೊಳ್ಳಬೇಕು, ಹೇಗೆ, ಹೇಗೆ ? ತನ್ನನ್ನು ಬಳಸಿದ್ದವನ ಕೈಯನ್ನು ನಯವಾಗಿಯೇ ನೂಕಿದಳು. ಬಾರದ ನಗೆ ತಂದುಕೊಂಡಳು. ಸಂಚು ಹೊಡಲುನುವಾದಳು. ಆಗ ಬಾಗಿಲ ಬಳಿ ಸದ್ದಾಯಿತು.
“ ಸಾಬ್‌ ಸಿಗರೇಟ್.. ” ರಾಮೋಜಿ ನಿಂತಿದ್ದ !
“ ಅಲ್ಲಿಡು.......” ಟೀಪಾಯ್ ತೋರಿಸಿದ ರಾಕೇಶ.
ರಾಮೋಜಿ ಸಿಗರೇಟು ಪ್ಯಾಕು ಅಲ್ಲಿಟ್ಟು ಬೇಕೆಂತಲೇ, “ ಮತ್ತೇನಾದ್ರು.......” ತಲೆ ಕೆರೆದುಕೊಂಡ. ಮನೆಯೊಡತಿಯ ದೈನಾವಸ್ಥೆಗೆ ಒಳಗೆ ಮರುಗಿದ್ದ.
“ ಏನೂ ಬೇಡ...... ನೀನಿನ್ನು ಹೊರಡು...... ” ರಾಕೇಶ ಗುಡುಗಿದ್ದ. ಅಷ್ಟರಲ್ಲಿಯೇ, ಲಾವಣ್ಯ ಪಾದರಸದಂತೆ ಚುರುಕಾದಳು ಮಲಗುವ ಕೋಣೆ ಸೇರಿ, ಬಾಗಿಲು ಭದ್ರಪಡಿಸಿಕೊಂಡುಬಿಟ್ಟಳು.
ರಾಕೇಶ ಬಾಗಿಲ ಮೇಲೆ ಕುಟ್ಟಿದ. “ತೆಗೀತೀಯೋ.....ಬಾಗಿಲೊಡೆದು ಒಳಗೆ ಬರಲೋ..? ” ಬೆದರಿಕೆ ಹಾಕಿದ.
ಲಾವಣ್ಯ ಅವನ ಬೆದರಿಕೆಗೆ ಬಗ್ಗದಾದಳು.
ಅವನೇನಾದರೂ ಬಾಗಿಲೊಡೆದು ಒಳಗೆ ಬಂದರೆ, ಏನು ಮಾಡುವುದು ಎಂಬ ಭೀತಿಯೆ ಕಾಡುತ್ತಿತ್ತು, ‘ಹಾಗೇನಾದರೂ ಮಾಡಿದರೆ ರಾಮೋಜಿ ಬಂದು ಸಹಾಯ ಮಾಡದಿರಲಾರ ’ ಅಂದುಕೊಂಡಳು. ಅವಳಿಗೂ ಎಲ್ಲಿಲ್ಲದ ಭಂಡ ಧೈರ್ಯ “ ಥೂ ಹಾಳಾದವನು..... ಹೆಂಡತಿಯನ್ನು ಬಿಟ್ಟು ಹೋದವನು ಹೋದ. ಜತೆಗೆ ಕಾಯಲಿಕ್ಕೆ ವಾಚ್‌ಮನ್‌ನನ್ನೂ ಇಟ್ಟು ಹೋಗಿದ್ದಾನಲ್ಲ........ ಮುಠ್ಠಾಳ ...... ! ”ನಿಂತಲ್ಲಿ ನಿಲ್ಲದೆ ಹಪಹಪಿಸಿದ ರಾಕೇಶ . ಈಗ ಆತುರ ಪಟ್ಟರೆ ಆಗಲಾರದು ಅನ್ನಿಸಿತೇನೊ ! ಮತ್ತೇನೋ ಗಲಾಟೆ . ರಂಪಕ್ಕೆ ಹೋಗದೇ ಹಾಲ್‌ನಲ್ಲಿದ್ದ ಸೋಫಾದ ಮೇಲೆ ಬಿದ್ದುಕೊಂಡ. ಜೋರಾಗಿ ಸಿಗರೇಟಿನ ‘ದಂ ’ ಎಳೆಯುತ್ತಿದ್ದವನು, ಕುಡಿದು ಮತ್ತು ಏರುತ್ತಿದ್ದುದ್ದರಿಂದ ಹಾಗೇ ನಿದ್ರೆ ಹೋಗಿದ್ದ.
ಬೆಳಗಾಗುವುದನ್ನೇ ಕಾದಿದ್ದಳು ಲಾವಣ್ಯ. ರಾತ್ರಿಯೆಲ್ಲ ನಿದ್ರೆ ಇಲ್ಲದೆ ಹಾಸಿಗೆಯಲ್ಲಿ ಹೊರಳಿದ್ದೆ ಆಗಿತ್ತು. ತನ್ನ ಅಸಹಾಯಕತೆಗೆ ದುಂಖ ಬಂದರೆ, ಕ್ರೌರ್ಯಕ್ಕೆ ಕ್ರೋಧ ಉಕ್ಕೇರುತ್ತಿತ್ತು. ‘ ಈಗ ಏನು ಮಾಡಲಿ ? ಹೇಗೆ ಈ ಬಂಗಲೆಯಿಂದ ಹೊರಬೀಳಲಿ ? ’ ಇರುಳನ್ನು ಚಿಂತಿಸುತ್ತಲೇ ಕಳೆದಳು.
ಸೂರ್ಯ ಕಿರಣಗಳು ಕಿಟಕಿಯಿಂದ ಪ್ರವೇಶಿಸಿದಾಗ ಬೆಳಗಿನ ಎಂಟು ಗಂಟೆಯಾಗಿರಬೇಕು. ಹಾಲು, ದಿನಪತ್ರಿಕೆ ಬಂದಿರಬಹುದು. ಆಗಲೆ ಅಡುಗೆಯ ಚಿನ್ನಮ್ಮ ಬಂದು ತನ್ನ ಕೆಲಸ ಆರಂಬಿಸಿದ್ದಾಳೆ. ಪಾತ್ರೆ ಪಡಗಗಳ ಶಬ್ಧ ಕೇಳಬರುತ್ತಿತ್ತು.
“ ಅಮ್ಮಾವ್ರೆ ....... ಕಾಫಿ ರೆಡಿ..... ಬಾಗಿಲು ತೆಗೀತೀರ...? ” ಕೇಳಿದಳು.
“ ಹೌದು, ಅವಳದೇ ದೊಡ್ಡ ದನಿ ! ” ನಿಟ್ಟುಸಿರಿದಳು ಲಾವಣ್ಯ. ನೈಟಿ ಸರಿಪಡಿಸಿಕೊಂಡು ಹಾಸಿಗೆಯಿಂದ ಎದ್ದವಳೇ ಬಾಗಿಲು ತೆರೆದಳು. ಕೆಲಸದಾಕೆ ಕಾಫಿ ತಂದು ಬೆಡ್ ಪಕ್ಕದ ಮೇಲಿನ ಸ್ಟೂಲಿನ ಮೇಲಿನ, “ ಗೆಸ್ಟ್‌ಗೆ ಕಾಫಿ ಕೊಟ್ಟೆಯಾ ...... ? ” ಕೇಳಿದಳು ಅಸಹನೆಯಿಂದಲೇ. ‘ ಇಲ್ಲ ಅಮ್ಮಾವ್ರೆ, ಯಜಮಾನರ ಜೊತೆ ವಾಕಿಂಗ್‌ ಹೋಗಿದ್ದಾರೆ. ’
‘ಸಧ್ಯ ಈ ಗಂಡ ಅನ್ನಿಸಿಕೊಂಡವನು ಬೆಳಿಗ್ಗೆಗೆ ಮುಂಚೇನೆ ಬಂದ್ಬಿಟ್ಟಿದ್ದಾನಲ್ಲ ! ’ ಇನ್ನೊಂದು ಏದುಸಿರು ಹೊರಚೆಲ್ಲಿದಳು.
ಕಾಫಿ ಕುಡಿದಳು. “ ನೀನಿನ್ನು ಟಿಫಿನ್‌ಗೆ ರೆಡಿ ಮಾಡು, ಸ್ನಾನ ಮಾಡಿ ಬರ್ತೀನಿ ” ಎಂದಳು.
ಪುನಃ ಕೋಣೆಯ ಬಾಗಿಲು ಹಾಕಿಕೊಂಡಳು. ಅಟ್ಯಾಚ್ಡ್‌ ಬಾತ್ ರೂಂ ಹೊಕ್ಕಳು. ಗೀಸರ್ ಇದ್ದರೂ ಬಿಸಿ ನೀರು ಬೇಡವಾಗಿತ್ತು, ಶವರ್‌ ಗೆ ತಲೆಕೊಟ್ಟು ತಣ್ಣೀರಿನಲ್ಲಿ ಮೀಯಲಾರಂಬಿಸಿದಳು. ಜುಳು ಜುಳು ಹರಿವ ನೀರು ! ಕೊರಳಿಂದ ಎದೆಯ ಕಣಿವೆಯಲ್ಲಿಳಿದು ನಾಭಿಯಿಂದಲೂ ಕೆಳಗಿಳಿಯುತ್ತಿದ್ದಂತೆ ‘ ಹಾಯ್ ’ ಎನಿಸಿತು ಜೀವಕ್ಕೆ. ರೂಢಿಯಂತೆ ಕನ್ನಡಿಯ ಮುಂದೆ ಮೈ ಒರೆಸಿಕೊಳ್ಳುತ್ತಾ ನಿಂತಾಗ ತನ್ನ ದೈಹಿಕ ಸೊಗಸೇ ತನಗೆ ಶತ್ರುವೇನೋ ಎನ್ನಿಸದಿರಲಿಲ್ಲ. ಸುಂದರಳಾದ ಹೆಣ್ಣು ಬುದ್ದಿವಂತಳೂ ಆದರೆ ಜಗತ್ತನ್ನೇ ಜಯಿಸಬಲ್ಲಳು. ಆದರೇನು, ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಶೀಲ ರಕ್ಷಣೆ ಮಾತ್ರ ಸುಲಭ ಸಾಧ್ಯವೇನಿಲ್ಲ.
ಹೊರಗೆ ಗೇಟಿನ ಬಳಿ ಯಾರೋ ಮಾತನಾಡುತ್ತ ಬರುವಂತೆ ಭಾಸವಾಯಿತು. ‘ ಇನ್ಯಾರು ? ಅವರಿಬ್ಬರೂ ಬಂದಿರಬೇಕು ’ ಆದಷ್ಟೂ ತನ್ನ ದುಗುಡವನ್ನೂ ನಿಯಂತ್ರಿಸಿಕೊಂಡಳು. ಒಂದು ನಿರ್ಧಾರಕ್ಕೆ ಬಂದಿದ್ದಳು. ಸಡಿಲವಾಗಿರುವ, ಪಾರದರ್ಶಕವಲ್ಲದ ತಿಳಿ ನೀಲ ಬಣ್ಣದ ಮ್ಯಾಕ್ಸಿಯನ್ನು ತೊಟ್ಟು ಕೋಣೆಯಿಂದ ಹೊರಬಂದಳು.
ಹೆಂಡತಿಯ ಮುಖ ಕಾಣುತ್ತಿದ್ದಂತೆ ಮದನ್ ಕುಮಾರ್ ಹಾವಿನಂತೆ ಭುಸುಗುಟ್ಟಿದ್ದ. ಅವನ ಪ್ರಿಯ ಮಿತ್ರ ರಾಕೇಶ ಲಾವಣ್ಯಳನ್ನೇ ಇಡಿಯಾಗಿ ನುಂಗಿಬಿಡುವಂತೆ ದುರುಗುಟ್ಟಿದ್ದ. ಅವಳ ಮೈಮಾಟ ಮರೆಯಾಗಿಸುವಂತೆ ಇದ್ದ ಸಾದಾ ಉಡುಪು ಅವನನ್ನು ತೀವ್ರ ನಿರಾಶೆಗೊಳಿಸಿತ್ತು. ರಾತ್ರಿ ಮುಖ ಭಂಗವಾದರೆ, ಈಗ ಅವಳ ನೋಟದಲ್ಲಿ ಕೆಂಡಗಳು.
ಕೆಲಸದಾಕೆ ಚಿನ್ನಮ್ಮ ಬೆಳಗಿನ ತಿಂಡಿಗೆ ದೋಸೆ, ಚಟ್ನಿ ರೆಡಿ ಮಾಡಿದ್ದಳು. ಲಾವಣ್ಯ ಡೈನಿಂಗ್ ಟೇಬಲ್ ಎದುರಿಗೆ ಗಂಡನ ಜತೆ ಕುಳಿತರೂ ಅಪರೂಪದ ಮಹಾನ್ ಅತಿಥಿ ರಾಕೇಶ್‌ನನ್ನು ನೋಡುತ್ತಿದ್ದಾಳೆ. ದೋಸೆ, ಚಟ್ನಿ ಗಂಟಲಲ್ಲಿ ಇಳಿಯದಾಯ್ತು. ತಟ್ಟೆಯಲ್ಲಿ ಕೈ ತೊಳೆದವಳೇ ಎದ್ದು ಬಿಟ್ಟಳು.

“ನಿನ್ನ ಮಿಸೆಸ್‌ ತುಂಬಾ ಬ್ಯೂಟಿ. ಕೋಪ ಮಾಡಿಕೊಂಡ್ರೆ ಇನ್ನೂ ವಂಡರ್‌ಪುಲ್‌. ಆದರೆ ನಮ್ಮ ಹೈ ಸೊಸೈಟಿ ರೀತಿ ನೀತಿಗೆ ಬಹಳ ಅಡ್ಜೆಸ್ಟ್ ಆಗ್ಬೇಕಮ್ಮಾ..... ” ಪೆಟ್ಟು ತಿಂದ ಹುಲಿಯಂತಾಗಿದ್ದ ರಾಕೇಶ ಹೇಳಿದ.
“ಹ್ಞೂಂ ........ ಆಗ್ತಾಳೆ. ಆಗಲೇಬೇಕು. ಇನ್ನೋಂದ್ಸೊಲ್ಪದಿವ್ಸ. ಸರಿ ಮಾಡಿಸ್ತೀನಿ... ” ಮದನ್ ಕುಮಾರ್ ಗುನುಗಿದ್ದ.
“ ಇನ್ನೋಮ್ಮೆ ಬರ್ತೀನಮ್ಮಾ ನಾನು ” ರಾಕೇಶ ಹೊರಟವನು ಇವಳನ್ನೆ ಹರಿದು ಮುಕ್ಕುವಂತೆ ಕೆಕ್ಕರಿಸಿ ನೋಡಿದ.
“ ಆಗಲಿ, ಬಾ ಬಾ ..... ಯು ಆರ್ ವೆಲ್‌ಕಮ್ ! ” ಮದನ್‌ನ ಉವಾಚ.
‘ ಮತ್ಯಾಕೆ ಬರ್ತಾನೋ ಪಾಪಿ ! ’ ಅಂದುಕೊಂಡಳು ಲಾವಣ್ಯ, ಸೆಟೆದದ್ದು ತನ್ನ ಕೋಣೆಗೆ ನಡೆದಳು. ಪುನಃ ಹಾಸಿಗೆಯಲ್ಲಿ ಹೊರಳಿದಳು. ಅವಳಿಗೇನೋ ಸೇರದಾಗಿತ್ತು. ಮದನ್ ಕುಮಾರ್ ಮರಳಿ ಬಂಗಲೆಗೆ ಬಂದಾಗ ಬೆಳಗಿನ ಹನ್ನೋಂದುವರೆ ಗಂಟೆ. ಲಾವಣ್ಯ ಆ ಮೊದಲೇ ನಿರ್ಧರಿಸದ್ದಂತೆ ಒಂದು ಸಾಧಾರಣ ಬಿಳಿ ಸೀರೆಯುಟ್ಟು ಕೈಯಲೊಂದು ಸೂಟ್‌ಕೇಸ್ ಹಿಡಿದು ಆ ಬಂಗಲೆಯಿಂದ ಹೊರಟೇ ಬಿಟ್ಟಳು. ತಾನು ಒಳ್ಳೇ ವಂಶಜನೆಂದೂ, ತನ್ನ ತಂದೆ ತಾಯಿಗಳು ಗೌರವಸ್ಥರೆಂದು, ತಂದೆ ಹುಬ್ಬಳಿಯಲ್ಲಿ ಹೆಸರಾಂತ ಉದ್ಯಮಿಗಳಾಗಿದ್ದರೆಂದೂ, ಅನಂತರ ಪಾರ್ಟನರ್ಸ್ ಮೋಸ ಮಾಡಿದ್ದರಿಂದ ಅದೇ ವ್ಯಥೆಯಾಗಿ ಸ್ವರ್ಗಸ್ಥರಾದರೆಂದೂ, ಅನಂತರ ತಾಯಿಯೂ ತೀರಿಕೊಂಡು ಒಬ್ಬನೇ ಮಗನಾದ ನಾನು ತಬ್ಬಲಿಯಾದೆನೆಂದೂ, ಬೆಂಗಳೂರಿಗೆ ಬರಿಗೈಲಿ ಬಂದವನು ಸ್ವತಃ ಕಠಿಣ ಪರಿಶ್ರಮದಿಂದ ಈ ಮಟ್ಟಕ್ಕೆ ಬಂದಿರುವೆನೆಂದು, ಹೇಳಿಕೊಂಡಿದ್ದ. ಮದನ್ ಕುಮಾರ್ ನ ಬೊಗಳೆ, ಭಂಡತನಗಳೆಲ್ಲ ಬಯಲಾಗಿದ್ದವು. ಅವನ ವ್ಯವಹಾರಗಳೆಲ್ಲ ಕುಟಿಲ ಕಪಟವೆಂದೇ ತಿಳಿದುಹೋಗಿತ್ತು.
“ ನಾನು ಹೋಗ್ತಾ ಇದ್ದೀನಿ.......” ಲಾವಣ್ಯ ಅವನನ್ನು ಉದ್ದೇಶಿಸಿ ಸ್ಪಷ್ಟವಾಗಿಯೇ ಹೇಳಿದಳು.
“ಎಲ್ಲಿಗೆ ? ” ಅಬ್ಬರಿಸಿದ ಮದನ್‌ಕುಮಾರ್‌. ‘ ನಾನೋಬ್ಬ ಸುಂದರ ಪುರುಷ, ನಾನು ಮನಸ್ಸು ಮಾಡಿದರೆ ಏನನ್ನು ಪಡೆಯತ್ತೇನೆ. ಏನನ್ನು ಅದಕ್ಕಾಗಿಯೆ ಮಾಡುತ್ತೇನೆ. ಸ್ವರ್ಗಸುಖ ನನ್ನ ಪಾದದ ಬಳಿಯೆ ’ ಎಂಬ ಕೊಬ್ಬು ! “ ನೀವು ಮನಸ್ಸು ಮಾಡಿದರೆ ಎಲ್ಲಿಗೆ ಅಂದ್ರೆ ಅಲ್ಲಿಗೆ ಹೋಗ್ಬಹುದು ಅಲ್ಲಾ .......”
“ ಅದಕ್ಕೆ ... ? ”
“ ನೀವು ನನ್ನನ್ನು ಏನಾದರೂ ಮಾಡ್ಬಹುದು...... ಅದಕ್ಕೆ ನಾನು ಮನೆಬಿಟ್ಟು ಹೋಗ್ತಾ ಇದೀನಿ . ” ಹೊರಡಲನುವಾದಳು.
“ ನಿಲ್ಲು ... ”
ತಿರುಗಿ ನೋಡಿದಳು, ತೀಕ್ಷ್ಣವಾಗಿ. “ ನೀನು ಹೊರಗೆ ಕಾಲಿಟ್ಟರೆ ಆಯ್ತು. ಈ ಮನೆ ಬಾಗಿಲು ನಿನಗೆ ಶಾಶ್ವತವಾಗಿ ಮುಚ್ಚಿದ ಹಾಗೇ... ”
“ ಓಹ್ ! ಅಷ್ಟೇ ತಾನೇ..... ನಿನ್ನಂಥ ಗಂಡಸಿಗೆ ಹೆಂಡತಿಯ ಅವಶ್ಯಕತೆ ಇಲ್ಲವಲ್ಲ. ಹೆಣ್ಣು ಬೇಕು ಅಷ್ಟೇ.... ” ವ್ಯಂಗವಾಗಿ ಹೇಳಿದಳು.
“ ಯೋಚ್ನೆ ಮಾಡು ಗಂಡನನ್ನು ಬಿಟ್ಟು ಬಂದೋಳಂತ ಸಮಾಜ ಛೀ ಥೂ ಅನ್ನುತ್ತೆ. ಸಮಾಜದ ಈ ದೃಷ್ಟಿಗೆ, ಹೆಣ್ಣಿನ ಈ ಅಸಹಾಯಕತೆ, ನೀಚರ ಕೆಲಸವನ್ನು ಕಂಡು ಕಾಣದಂತೆ ಕಣ್ಮುಚ್ಚಿಕೊಂಡಿರೋ ಸಮಾಜಕ್ಕೆ, ನಾನೇಕೆ ಹೆದರಲಿ? ”
“ ಹೋಗು ........ನಿಲ್ಲಬೇಡ, ಆದರೆ, ನಿನಗೆ ಎಲ್ಲೂ ನಿಲ್ಲಗೊಡೊದಿಲ್ಲ ಈ ಸಮಾಜ. ಅದೆಷ್ಟು ಘೋರ ಎಂದು ನಿನಗೆ ಗೊತ್ತಾಗುತ್ತೆ...”
“ ನಿನ್ನಂಥ ರಾಕ್ಷರನ್ನು ಕ್ರೂರ ಇರಲಿಕ್ಕಿಲ್ಲ. ಅದು ತುಂಬ ವಿಶಾಲವಾಗಿದೆ.....” ಕೊರಳೂ ಕೊಂಕಿಸಿ ದನಿ ಏರಿಸಿದ್ದಳು. ಸೊಂಟಕ್ಕೆ ಸೆರಗು ಬಿಗಿದು ಸರಕ್ಕನೆ ತಿರುಗಿ ಹೊಸ್ತಿಲು ದಾಟಿದಳು ಲಾವಣ್ಯ.
ಪ್ರಪಂಚ ವಿಶಾಲವಾಗಿದೆ ನಿಜ, ತನ್ನಂಥ ಯೌವನ ಭರಿತ ಹೆಣ್ಣಿನ ಬಯಕೆ, ಅವಳ ಬದುಕಿನ ಆಸೆ, ಅಕಾಂಕ್ಷೆಗಳನ್ನು ಈಡೇರಿಸುವಂಥ ಸಹೃದಯ ಒಬ್ಬ ತನಗಾಗಿ ಎಲ್ಲಿರುವನೋ.... ತನ್ನ ವಿಧಿ ಎಂಬುದು ಹೇಗಿದೆಯೋ..... ಲಾವಣ್ಯ ಕಂಗಾಲಾಗಿದ್ದಾಳೆ.
ಅಭಿರಾಮ ನಾದಿನಿಯ ಬದುಕಿಗೊಂದು ದಾರಿ ಕಾಣಿಸುವ ಸನ್ನಾಹದಲ್ಲಿದ್ದ. ಬಹಳ, ದುಡಿಮೆ ಮಾಡಿದರೂ ಹೆಣ್ಣಿಗೆ ಒಂಟಿ ಬದುಕು ಆರ್ಥಿಕ ಸ್ವಾತಂತ್ರದ ಪ್ರಾಮುಖ್ಯತೆಯೇ ಹತ್ತಿರದ ಸಂಬಂದಿಕರೊಡನೆ ಬದುಕುವುದೂ ಲಾವಣ್ಯಳಂಥ ಸ್ವಾಭಿಮಾನಿ ಹೆಣ್ಣಿಗೆ ಮದುವೆ ಇಲ್ಲದೆಯೂ ಎಷ್ಟೋ ಹೆಣ್ಣುಗಳುಒಂಟಿ ಬದುಕು ಸಾಗಿಸುತ್ತಿಲ್ಲವೇನು ! ತಾನು ಗಂಡಿನಿಂದ ಸುಖಪಟ್ಟಿದ್ದು ಸಾಕು. ತಾನು ಏನನ್ನಾದರೂ ಸಾಧಿಸಿ ತೋರಿಸಬೇಕೆಂಬ ಹಠವೇ ಕಾಡುತ್ತಿತ್ತು. ಆದರೇನು ! ಒಂಟಿ ಹೆಣ್ಣಾಗಿ ಮಧ್ಯಮ ವರ್ಗದ ಬಡ ಕುಟುಂಬದಿಂದ ಬಂದ ತಾನು ನಡೆಯುವ ದಾರಿಯಲ್ಲಿ ಏನೆಲ್ಲ ಕಲ್ಲು ಮುಳ್ಳೂಗಳು, ಕಾಕದೃಷ್ಟಿಯ ಗಂಡಸರ ವರ್ತನೆಗಳು! ಅವರು ತನ್ನಂಥ ಚೆಲುವೆಯರನ್ನು ತಮ್ಮ ಕಪಿಮುಷ್ಢಿಯಲ್ಲಿ ಸಿಲುಕಿಕೊಂಡು ಹಿಂಸಿಸುವ ಉದಾಹರಣೆಗಳೆಷ್ಟೋ ಇವೆ !
“ ಲಾವಣ್ಯ, ಹೆಣ್ಣಿಗೆ ಮದುವೆಯಿಂದಲೆ ಸಾಮಾಜಿಕ ಸ್ಥಾನಮಾನ ನೋಡು, ನಿನಗೆ ಆದರೆಆಶ್ರಯಬೇಕು. ನೀನೇಕೆ ಮರು ಮದುವೆಗೆ ಮನಸ್ಸು ಮಾಡಬಾರದು? ” ಅಭಿರಾಮ ನಾದಿನಿಯನ್ನು ಒತ್ತಾಯಿಸಿದ್ದ.
ಲಾವಣ್ಯ ಶುಷ್ಕ ನಗೆ ನಕ್ಕಳು.
“ ಮೊದಲು ನನಗೊಂದು ಕೆಲಸ ಕೊಡಿಸಿ ಬಾವಾ....”
ಅಂದಳು ಖಾರವಾಗಿಯೇ. ಮದುವೆಯ ಬಂಧನ ಅವಳಿಗೆ ಸಿಹಿ ಎನ್ನಿಸಿರಲಿಲ್ಲ. ಗಂಡಿನ ಅಂಕೆ, ಆಜ್ಞೆಗಳೊಳಗೆ ಜೀವಿಸುವ ರೀತಿಯೂ ಅವಳಿಗೆ ಹಿಡಿಸಿರಲಿಲ್ಲ. ಅದೇನೋ ಅವಳಲ್ಲಿ ಛಲ, ಸ್ವೇಚ್ಛೆಯಿಂದ ಬದುಕಬೇಕೆಂಬ ಹಂಬಲ. “ ಹೆಣ್ಣಗೆ ಈ ಒಂಟಿತನ, ಹಠಮಾರಿತನ ಒಳ್ಳೆಯದಲ್ಲ ಕಣೇ ” ಸಹನಾ ಸಹ ಹೇಳಿದಳು.
“ ಅಕ್ಕಾ ನನ್ನನ್ನು ನನ್ನಷ್ಟಕ್ಕೆ ಒಂಟಿಯಾಗಿ ಬಿಟ್ಟು ಬಿಡ್ತಿಯಾ ..... ? ” ಎಂದಿದ್ದಳು ಲಾವಣ್ಯ.
“ ಏನೋಮ್ಮ..... ನಾನು ನಿನ್ನಷ್ಟು ಬುದ್ದಿವಂತೆಯಲ್ಲ.... ! ” ಸಹನಾ ಸುಮ್ಮನಾಗಿಬಿಟ್ಟಳು.
“ ಏನ್ ಬಾವಾ, ಚಿಂತಿಸುತ್ತಲೇ ಇದೀರ.... ? ” ಲಾವಣ್ಯ ಹಗುರವಾಗಿಯೇ ಕೇಳಿದಳು.
“ ಇಲ್ಲ ಲಾವಣ್ಯ . ಇದು ಚಿಂತಿಸುವ ವಿಷಯವೇ, ಯಾಕೆಂದ್ರೆ, ನಿಂಗೆ ಈವತ್ತು ಗೊತ್ತಾಗುವುದಿಲ್ಲ, ಮುಂದೊಂದು ದಿನ ನೀನು ಪಶ್ಚಾತಾಪ ಪಡುವಂತಾಗಬಾರದು. ”
“ ನನ್ನ ಮೇಲೆ ನನಗೆ ಭರವಸೆ ಇದೆ ಬಾವಾ. ”
“ ಅದೇ, ನಿನ್ನ ಸೌಂದರ್ಯದ ಮೇಲೆ ನೀನು ಭರವಸೆ ಇಟ್ಟು ಬದುಕೋದು ತೀರ ಕಷ್ಟ.........”
“ ಅದೇನ್ ಕಷ್ಟಾ....... ನನ್ನ ಸೌಂದರ್ಯ ನನ್ನನ್ನೇ ಕೊಲ್ಲುತ್ತದೇಂತಾನಾ... ಸ್ವಲ್ಪ ವಿವರಿಸಿ ಹೇಳ್ತೀರಾ..... ಹೇಗೇಂತ....” ಅಂದದ ಎದೆಗಾತಿ ಹೇಳಿದಳು.
“ ಇಲ್ಲ ಲಾವಣ್ಯ, ಈಗ ನಾನೇನು ಹೇಳಲಾರೆ. ಈ ಸಾಮಾಜಿಕ ವ್ಯವಸ್ಥಯಲ್ಲಿ ಹೆಣ್ಣಿನ ಕೆಲವೊಂದು ಸಮಸ್ಯೆಗೆ ಉತ್ತರ ಸಿಗಲಾರದಲ್ಲ... ! ” ಅಭಿರಾಮನಿಗೆ ನಾದಿನಿಯ ಭವಿಷ್ಯವನ್ನು ಊಹಿಸಿದರೇನೆ ಭಯವೆನಿಸುತ್ತಿತ್ತು.
“ಬಾವಾ, ನೀವು ಚಿತ್ರಕಲಾವಿದರೂ ಅಲ್ಲವೆ..... ನೀವು ಹೆಣ್ಣಿನ ಸೌಂದರ್ಯವನ್ನು ಚರ್ಚೆ ಮಾಡಬಲ್ಲಿರಿ.... ಹೇಳಿ. ”
“ ಇಲ್ಲ, ನನಗೆ ಆಶಕ್ತಿ ಇಲ್ಲ. ಹೆಚ್ಚೆಂದರೆ ನಿನ್ನಂಥ ಸುಂದರ ಹೆಣ್ಣಿನ ಸೌಂದರ್ಯವನ್ನು ಕುಂಚದಲ್ಲಿ ಸೆರೆಹಿಡಿಯಬಲ್ಲೆ.........”
“ ಅಂದಹಾಗೆ, ಬಾವಾ, ನೀವು ನನ್ನ ಸುಂದರೆ ಭಾವ ಚಿತ್ರವನ್ನು ಯಾಕೆ ಬರೆಯಬಾರದು ? ”
“ ಅದಕ್ಕೂ, ಒಂದು ಸಂಧರ್ಬ ಕೂಡಿ ಬರ್ಬೇಕು. ಸಮಯಸ್ಪೂರ್ತಿ ಸಿಗಬೇಕು ಲಾವಣ್ಯ. ಅದಿರಲಿ, ನಮ್ಮ ಮಾತು ಎಲ್ಲಿಂದ ಎಲ್ಲಿಗೋ ಹೋಯಿತಲ್ಲ. ನಾನು ಮೊದಲು ನಿನಗೊಂದು ಕೆಲ್ಸ ಹುಡುಕಿಕೊಡಬೇಕು ತಾನೇ ? ನಾಳೆ ಸಂಜೆ ನನ್ನ ಜೊತೆ ಹೊರಡು. ನಿನ್ನನ್ನು ಒಂದು ಕಂಪ್ಯೂಟರ್ ಕಂಪೆನಿಗೆ ಕರಕೊಂಡು ಹೋಗ್ತೀನಿ. ” ಅಭಿರಾಮ ಹೇಳಿದಾಗ, ಲಾವಣ್ಯ ಳ ಮುಖ ಅರಳಿತ್ತು.
ಅಭಿರಾಮ ತಂದೆಗೆ ಒಬ್ಬನೇ ಮಗ, ಚಿಕ್ಕಂದಿನಿಂದಲೇ ತುಂಬ ಕಷ್ಟಪಟ್ಟವನು. ಎಮ್.ಎಸ್.ಸಿ. ಎಮ್.ಬಿ.ಎ. ಓದಿ ಇಂದಿನ ಸ್ಥಿತಿಗೆ ತಲುಪಿದವನು. ಅವನ ತಂದೆ ವೆಂಕಟಪ್ಪನವರು ತಮ್ಮ ಹೆಂಡತಿ ತೀರಿಕೊಂಡಾಗ ತಾಯಿ ಇಲ್ಲದ ಈ ತಬ್ಬಲಿ ಮಗನನ್ನು ಚೆನ್ನಾಗಿ ಬೆಳೆಸಿದರು. ತಾವು ಮರುಮದುವೆ ಮಾಡಿಕೊಳ್ಳಲು ಇಚ್ಛಸಿದೆ ಅಭಿರಾಮನೇ ತಮ್ಮ ಸರ್ವಸ್ವವೆಂದು ಬಗದರು.ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗಿ ಆಗಿದ್ದ ಅವರುಪ್ರಾಮಾಣಿಕವಾಗಿಯೇ ದುಡಿದರು. ರೈಟರ್ ಆದ ಮೇಲೆ ಚಿಕ್ಕಮಾವಳ್ಳಿಯಲ್ಲಿ ಮನೆ ಕಟ್ಟಿಸಿದರು. ಅವರು ತಮ್ಮ ಅರವತ್ತನೇ ವಯಸ್ಸಿನಲ್ಲಿ ಹೃದಯಘಾತದಿಂದ ತೀರಿಕೊಂಡರು. ಅಭಿರಾಮ ತಾನು ಈ ಜೀವನದಲ್ಲಿ ಬೆಳೆದು ಮುಂದೆ ಬಂದರೂ , ಹಿಂದಿನ ಕಷ್ಟದ ದಾರಿಯನ್ನು ಮರೆತಿರಲಿಲ್ಲ. ಇನ್ನೋಬ್ಬರ ಕಷ್ಟಕ್ಕೆ ಮರುಗುವ ಮನಸ್ಸೂ ಅವನಿಗಿದೆ. ಇನ್ನೂ ನಾದಿನಿ ಲಾವಣ್ಯಳ ಕಷ್ಟಕ್ಕೆ ಸ್ಪಂದಿಸದಿರುವನೇ ? ಲಾವಣ್ಯ ತಮಗೇನೂ ಭಾರವೆನಿಸುವುದಿಲ್ಲವಲ್ಲ. ಅವಳ ಮನಸ್ಸಿಗೆ ಅವಳು ಬಾರವಾಗಬಾರದಷ್ಟೇ. ಮಾನಸಿಕವಾಗಿ ತೊಳಲಾಡುವ ಒಂಟಿ ಹೆಣ್ಣಿಗೆ ನೌಕರಿಯ ಸ್ಥಿರತೆಯನ್ನು ತಂದುಕೊಡುತ್ತದೆ.
ಅಭಿರಾಮ ಅವಳಿಗೆ ಹೇಳಿದಂತೆಯೇ ಮಾರನೆಯ ದಿನ ಬ್ರಿಗೇಡ್ ರಸ್ತೆಯಲ್ಲಿನ ದಾಸ್ ಕಂಪ್ಯೂಟರ್ ಹೌಸ್ ಗೆ ಕರೆದುಕೊಂಡು ಹೋಗಿದ್ದ.
“ ಬನ್ನಿ, ನಿಮ್ಮ ಬಗ್ಗೆ ನಿಮ್ಮ ಫ್ಯಾಕ್ಟರಿಯವರೇ ಆದ ಪ್ರಸಾದ್ ಎಲ್ಲಾ ಹೇಳಿದಾರೆ. ನಮ್ಮಲ್ಲಿ ಕೆಲ್ಸ ಏನೋ ಇದೆ. ಸಂಬಳ ಕಡಿಮೆ ” ಅಂದರು ಇವರನ್ನು ನೋಡುತ್ತಿದ್ದಂತೆ ಆ ಸಂಸ್ಥೆಯ ಮಾಲೀಕರಾದ ಕರುಣಾಕರನ್. ಅಭಿರಾಮ ತಾನು ತನ್ನ ಸಹೋದ್ಯೋಗಿ ಪ್ರಸಾದ್‌ಗೆ ಹೇಳಿದ್ದ. ನಾದಿನಿಯ ಕೆಲಸದ ಬಗ್ಗೆ. ಅದೇನೋ ವಿಫಲವಾಗಿರಲಿಲ್ಲ. ಕರುಣಾಕರನ್ ಸುಮಾರು ಐವತ್ತರ ಪ್ರಾಯದ ಪ್ರಬುದ್ದ ಮನುಷ್ಯ. ಮಾತಿನಲ್ಲಿ ಬಿಗುವಿದ್ದರೂ ಮೊದಲ ನೋಟಕ್ಕೆ ಸೆಳೆಯುವ ಸಹೃದಯಿ ವ್ಯಕ್ತಿಯಾತ. ಅಭಿರಾಮ, ‘ ಪರವಾಗಿಲ್ಲ, ಇವರ ಜತೆ ಲಾವಣ್ಯ ಹೊಂದಿಕೊಂಡು ಕೆಲಸ ಮಾಡ್ತಾಳೆ ’ ಅಂದುಕೊಂಡ. ಆದರೆ, ಈ ಸಂಸ್ಥೆಗೆ ಮ್ಯಾನೆಜರ್ ಒಬ್ಬ ಇದ್ದಾನೆ. ಆತನದೇ ಎಲ್ಲ ಕಾರುಬಾರು ಎಂಬುದೇನೋ ಆ ಕ್ಷಣಕ್ಕೆ ತಿಳಿಯಲಿಲ್ಲ. ಕರುಣಾಕರನ್ ಲಾವಣ್ಯಳನ್ನು ಒಮ್ಮೆ ನೇರವಾಗಿ ದಿಟ್ಟಿಸಿದವರೆ, ನೋಡಮ್ಮ, ನಿನಗೆ ಒಳ್ಳೆಯ ರೂಪವಿದೆ.......... ನೀನು ಕಂಪ್ಯೂಟರ್ ಆಪರೇಟರ್ ಕಮ್ ರಿಸೆಪ್ಶನಿಷ್ಟ ಆಗಿಯೂ ಕೆಲಸ ಮಾಡಿದರೆ ನಮ್ಮ ಕಂಪೆನಿಗೆ ಹೆಚ್ಚಿನ ಲಾಭವಾದೀತು ಎಂದು ಅರ್ಥಪೂರ್ಣ ನಗೆ ನಕ್ಕರು.
ಲಾವಣ್ಯ ಅವರ ನೋಟಕ್ಕೆ ನಸು ನಾಚಿದಳು.
“ ಸಂಬಳ ಎಷ್ಟೋಂದು ನೀವು ಕೇಳಲಿಲ್ವೆ..... ? ಅವರೆಂದರು.”
“ನೀವೆ ಹೇಳಿಬಿಡಿ.....” ಅಭಿರಾಮನೆಂದ. “ ಈಗ ಒಂದು ಸಾವಿರ....... ನಿಮ್ಮ ಹುಡುಗಿಯ ಪರ್‌ಫಾರ್‌ಮೆನ್ಸ್ ನೋಡಿ ಹೆಚ್ಚಿಸೋಣ.......”
ಅಭಿರಾಮ ಆಗಬಹುದೇ ಎಂಬಂತೆ ಲಾವಣ್ಯಳ ಕಡೆ ನೋಡಿದ. ಲಾವಣ್ಯ ತಲೆಯಾಡಿಸಿದಳು.
ಅಷ್ಟೋತ್ತಿಗೆ ನೀಲಿ ಜೀನ್ಸ್ ಪ್ಯಾಂಟ್ ನಲ್ಲಿ ಕೆಂಪು ಷರ್ಟ್ ಇನ್ ಮಾಡಿದ್ದ ಯುವಕನೊಬ್ಬ ಅಂಗಡಿಯೊಳಗೆ ಧಾವಿಸಿ ಬಂದಿದ್ದ. ಅವನು ಛೇಂಬರ್ ಪ್ರವೇಶಿಸಿ ಕರುಣಾಕರನ್ ಅವರ ಪಕ್ಕದ ಕುರ್ಚಿಯಲ್ಲಿ ಕುಳಿತ.
“ ನೋಡು ಲಾವಣ್ಯ, ಇವನು ನನ್ನ ಮಗ ಪ್ರಿಯಂಕರ್, ನಮ್ಮ ಸಂಸ್ಥೆಯ ಮ್ಯಾನೆಜರ್. ಇವನದ್ದೇ ಎಲ್ಲಾ ಜವಬ್ದಾರಿ. ನಾನು ಎಲ್ಲ ವಿಧದಲ್ಲೂ ರಿಟೈರ್ಡ್ ಮನುಷ್ಯ. ಇವನು ಹೇಳಿದಂತೆ ನಡೆಯೊದೆಲ್ಲ. ಈಗ ನಿಮ್ಮಂಥ ಯುವಕ ಯುವತಿಯರ ಕಾಲ ಅಲ್ಲವೇ ? ” ಕರುಣಾಕರನ್ ಮಗನತ್ತ ನೋಡಿ ನಾಟಕೀಯ ನಗೆ ನಕ್ಕರು. “ ನಿನಗೆ ಲೇಡಿ ಸೆಕ್ರೆಟರಿ ಬೇಕೂಂತ ಹೇಳಿದ್ದೆಯಲ್ಲ....... ನೋಡು, ಇವರು ಸ್ಮಾರ್ಟ್ ಲೇಡಿ ಲಾವಣ್ಯ..... ! ” ಎಂದರು.
ಪ್ರಿಯಂಕರ್ ತನ್ನ ಕುಡಿ ಮೀಸೆಯ ಅಂಚಿನಲ್ಲಿ ನಕ್ಕ.
ಲಾವಣ್ಯ ಏಕೋ ನಗಲೆತ್ನಿಸಿ ವಿಫಲಳಾದಳು.
ಅವಳ ಉಬ್ಬಿದೆದೆಯ ಮೇಲೆ ನೆಟ್ಟಿತ್ತು ಅವನ ದೃಷ್ಟಿ.
“ ನಾಳೆಯಿಂದಾನೇ ನೀವು ಕೆಲಸಕ್ಕೆ ಬರಬಹುದು ಲಾವಣ್ಯ. ಟೈಮಿಂಗ್ಸ್ ಬೆಳಿಗ್ಗೆ ಒಂಭತ್ತೂವರೆಯಿಂದ ಸಂಜೆ ಆರು. ” ಕಿರುನಗೆಯಲ್ಲಿ ಹೇಳಿದ ಪ್ರಿಯಂಕರ್ ತನ್ನ ನೋಟವನ್ನು ಬೇರೆಡೆಗೆ ಹೊರಳಿಸಿದ್ದ. ಅಭಿರಾಮ ಥ್ಯಾಂಕ್ಸ ಹೇಳಿದ್ದ. ಲಾವಣ್ಯ ಕೈ ಜೋಡಿಸಿದ್ದಳು.
ಆ ಸಂಸ್ಥೆಯ ಕಟ್ಟಡದ ಮೆಟ್ಟಿಲಿಳಿದು ಹೊರಬರುತ್ತಿದ್ದಂತೆ ಅಭಿರಾಮ ಹೇಳಿದ, “ ನೋಡಿದೆಯಾ ಲಾವಣ್ಯ. ನಿನ್ನ ರೂಪ, ಲಾವಣ್ಯಕ್ಕೆ ಮೊದಲ ಆದ್ಯತೆ .”
“ ಅದು ದುಡಿಯುವ ಹೆಣ್ಣಿಗೆ ಪ್ಲಸ್ ಪಾಯಿಂಟ್ ತಾನೇ...... ? ” ಮೋಹಕವಾಗಿ ನಕ್ಕಳು ಲಾವಣ್ಯ.
“ ಅದೇ ಇಂದಿನ ಮಾರ್ಕೆಟನಲ್ಲಿ ಫೇಲ್ಯೂರ್ ಪಾಯಿಂಟೂ ಆಗ ಬಹುದು ಅವಳಿಗೆ. ಹ್ಞಾಂ, ಸ್ವಲ್ಪ ಹುಶಾರಾಗಿರು ; ಅಪ್ಪಾಏನೋ ಒಳ್ಳೆಯ ಮನುಷ್ಯನೇ ಮಗನಲ್ಲೇನೋ ದೃಷ್ಟಿದೋಷವಿದ್ದೀತು.....”
“ ಹೋಗಿ ಬಾವಾ ನಂಗೇನೋ ಗಂಡಸರಿಗೆಲ್ಲ ಕಣ್ಣಲ್ಲೇ ದೋಷ ಅನ್ಸುತ್ತೇ......”
“ ಮತ್ತೆ ಹೆಂಗಸರಿಗೆ ಬೇರೆಲ್ಲಾದ್ರು ದೋಷ ಇರುತ್ತೇನೋ ! ” ಅಭಿರಾಮ ಅಣಕವಾಡಿದ.
“ ಓ ಬಾವಾ ನೀವು ಕೀಟಲೆ ಮಾಡುವುದರಲ್ಲಿ ಚತುರರು. ”
“ ಈಗಲೇ ಸರ್ಟಿಫಿಕೇಟ್ ಕೊಡ್ಬೇಡಾ........ ”
“ ಮತ್ತೇ........ ಬಾವ........ ನಂಗೆ ಈ ಕೆಲ್ಸ ಆಯಿತಲ್ಲ ಯಾವುದಾದ್ರೂ ಒಳ್ಳೆ ಲೇಡಿಸ್ ಹಾಸ್ಟೆಲ್ ಸೇರಿಕೊಳ್ತಿನಿ. ನೀವು ಬೇಡ ಅನ್ಬಾರ್ದೂ........ ”
“ ಯಾಕೆ ಅಷ್ಟು ಅವಸರ ? ”
“ ಅವಸರ ಅಂತ ಅಲ್ಲ .......”
“ ಮತ್ತೇ ಈ ಬಾವನ ಕಣ್ಣಲ್ಲೂ ನಿನಗೆ ದೃಷ್ಟಿ ದೋಷ ಕಾಣಿಸುತ್ತೇನೂ.......”
“ ಇಲ್ಲ...... ಬಾವಾ........ ” ದನಿ ನಡುಗಿತು.
“ ನೀನೇ ಹೇಳಿದೆಯಲ್ಲ ಗಂಡಸರಿಗೆಲ್ಲ ಕಣ್ಣಲ್ಲೇಂತ....... ” ಮೆಲುವಾಗಿ ಹೇಳಿದ.
“ ಮತ್ತೇ....... ಮತ್ತೇ .....ನೀವೋಬ್ಬರು ಎಕ್ಸ್‌ಸೆಪ್‌ಶನ್, ಅದಿಕ್ಕೇ......... ” ತಡೆ ತಡೆದು ದನಿ ಪೋಣಿಸಿದಳು ಲಾವಣ್ಯ.
“ ಅಂದರೆ .......”
“ ನಿಮ್ಮ ಕಣ್ಣ ನೋಟದಲ್ಲೇ ಒಂದು ಸೆನ್ಸಿಟೀವ್‌ನೆಸ್ ಹಾಗೂ ಸ್ಪೆಷಾಲಿಟಿ ಇದೆ ”
“ ಏನಪ್ಪಾ ಅದು ? ”
“ ನೀವು ಕೀಟಲೆ ಮಾಡಬಾರದ್ದು...... ಹೇಳ್ತಿನಿ. ”
“ ಇಲ್ಲ ಹೇಳೂ..... ”
“ ಗಂಡಸರ ಬಗ್ಗೆ ನನ್ನ ಅಭಿಪ್ರಾಯ ಬದಲಿಸಿದೋರೂಂದ್ರೆ ನೀವೇ ನೋಡಿ..... ನೀವು ಸುಂದರಳಾದ ಹೆಣ್ಣಿನ ಶರೀರವನ್ನು ಆರಾಧನಾ ಭಾವದಿಂದ ನೋಡ್ತೀರಾ ! ” ನಗೆ ತೇಲಿಸಿದಳು.
“ ನಿನ್ನ ದಿಟ್ಟತನವನ್ನ ನಾನು ಮೆಚ್ಚುತ್ತೀನಿ, ಲಾವಣ್ಯ. ”
“ ಭಾವ, ಎಷ್ಟೇ ಆಗಲಿ, ಹೆಣ್ಣು ಮಾಯೆ ಎಂಬುದನ್ನ ಮರೆಯಬೇಡಿ. ” ಕೀಟಲೆ ಮಾಡುವ ಸರದಿ ಅವಳದಾಯಿತು.
“ ಹೌದು ಲಾವಣ್ಯ, ನಿನ್ನಂಥ ಅಪೂರ್ವ ಸುಂದರಿ ಮತ್ತೂ ಮಾಯೆ ! ” ಮೊರೆಯುಬ್ಬಿಸಿ ಅಭಿರಾಮ ಹೇಳಿದೆನಾದರೂ ಧ್ವನಿಯಲ್ಲಿ ಗಾಂಬೀರ್ಯವಿತ್ತು. ಲಾವಣ್ಯ ಥಟ್ಟನೆ ಮಾತು ಮೂಂದುವರಿಸದೆ ಸುಮ್ಮನಾದಳು.
ಇಬ್ಬರೂ ಮೌನವಾಗಿಯೆ ನಡೆಯುತ್ತಿದ್ದರು.
ಇನ್ನೇನು ಸಿಟಿ ಬಸ್ ಸ್ಟಾಪ್‌ ಹತ್ತಿರ ಬರಬೇಕು, ಆಗ ಅಭಿರಾಮ ಕೇಳಿದ, “ ನನ್ನ ಮಾತು ನಿನಗೆ ಇಷ್ಟವಾಗಲಿಲ್ಲ ಅಲ್ವಾ ಲಾವಣ್ಯ ? ”
“ ಏನಿಲ್ಲ ಬಾವಾ, ನಾನೇ ಅದೆಲ್ಲಿ ಮಾಯೆಗೆ ಸಿಕ್ಕಿ ಹೊಯ್ದಾಡಬೇಕಾಗುತ್ತೋಂತ ಯೋಚಿಸಿದ್ದೆ........ ”
“ ಮಾಯೆ ಯಾರನ್ನು ಬಿಟ್ಟಿದ್ದಲ್ಲ....... ಅದರಿಂದ ಯಾರ ಬದುಕೂ ಹಾಳಾಗಬಾರದು. ”
“ ನಾನು ನಿಮ್ಮಿಂದ ದೂರ ಹೋಗೋದು ನಿಮಗೆ ಇಷ್ಟ ಇಲ್ಲಾಂತ ಕಾಣ್ಸುತ್ತೇ. ”
“ ನೀನು ಹಾಸ್ಟೆಲ್ ಸೇರ್ಬೇಕೂಂದ್ರೆ ನನ್ನದೇನೂ ಅಭ್ಯಂತರವಿಲ್ಲ. ನಿನ್ನ ಅಕ್ಕ ನೊಂದುಕೊಳ್ಳುತ್ತಾಳೇನೋ. ಅವಳು ನಿನಗೆ ಬೇರೆ ಮದುವೆ ಮಾಡಿದರೆ ಹೇಗೆಂದೇ ಯೋಚಿಸುತ್ತಾಳೆ. ನೀನು ಸುಖ, ಸಂತೋಷದಿಂದ ಇರಬೇಕು. ” ಅವನೆಂದ.
“ ಅಕ್ಕನಿಗೆ ನಾನು ಒಂಟಿಯಾಗಿ ಬದುಕೋದು ಬೇಕಿಲ್ಲ. ನೀವಾದ್ರೆ ಅರ್ಥ ಮಾಡ್ಕೋತೀರಿ, ಈಗಿನ ದಿನಗಳಲ್ಲಿ ಅದೇನೂ ನ್ಯೂಸೆನ್ಸ್ ಅಲ್ಲವಲ್ಲ .... ! ”
“ ಲಾವಣ್ಯ ಸ್ವಲ್ಪ ಕಾಲ ಒಂಟಿ ಬದುಕು ನಡೆಸುವುದೇ ಸರಿ, ಆ ಒಂಟಿತನದ ಕಷ್ಟ ನಷ್ಟಗಳು ಅವಳ ವ್ಯಕ್ತಿತ್ವವನ್ನು ರೂಪಿಸಬಹುದು. ಆ ಬದುಕಿನ ಅರ್ಥವೂ ಅವಳಿಗೆ ಆಗುವುದಾದರೆ ಆಗಲಿ. ಪ್ರತಿಯೊಬ್ಬರಿಗೂ ಅವರದೆ ರೀತಿಯಲ್ಲಿ ಬದುಕುವ ಸ್ವಾತಂತ್ರಯವಿದೆಯಲ್ಲ. ಇತ್ತಿತ್ತಲಾಗಿ ಹೆಣ್ಣು ಯೋಚಿಸುವುದೂ ಅದೇ ದಾರಿಯಲ್ಲಿ ಎನ್ನುವುದಾದರೆ ಬೇಡವೆನ್ನಲು ನಾವು ಯಾರು ? ” ಅನ್ನಿಸಿತು ಅಭಿರಾಮನಿಗೆ. * ********************** *
ಈ ನಡುವೆ ಸಹನ ತಲೆ ಸುತ್ತು, ವಾಂತಿ ಎನ್ನುತ್ತಿದ್ದಳು.
“ ಬಾವ, ನೀವು ಫ್ಯಾಕ್ಟರಿಗೆ ರಜೆ ಹಾಕಿ ಅಕ್ಕನ್ನ ಡಾಕ್ಟರ್ ಹತ್ತಿರ ಕರಕೊಂಡು ಹೋಗ್ಬಾರದೇ ? ” ಅಗ್ರಹ ಪಡಿಸಿದಳು ನಾದಿನಿ.
“ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ ಕಣೇ ಅಕ್ಕಾ..... ಇಷ್ಟು ದಿವಸದ ಮೇಲಾದ್ರು ಈ ಮನೆಯಲ್ಲಿ ದೇವರು ಕಣ್ ಬಿಟ್ಟನಲ್ಲ ! ” ಅಕ್ಕನೊಡನೆ ಸಂತಸ ಹಂಚಿಕೊಳ್ಳಲೆತ್ನಿಸಿದ್ದಳು ಅವಳು.
ಅಭಿರಾಮ, ಅನಂತರ ತಡಮಾಡುವನೇ ? ಫ್ಯಾಕ್ಟರಿಗೆ ರಜೆ ಹಾಕಿ ಹೆಂಡತಿಯನ್ನು ಕರೆದೊಯ್ದು ಲೇಡಿ ಡಾಕ್ಟರಿಗೆ ತೋರಿಸಿದ್ದ. “ ಗರ್ಭಕೋಶ ದುರ್ಭಲವಾಗಿದೆ. ಗರ್ಭ ನಿಂತಿದ್ದರೂ ಎಚ್ಚರಿಕೆಯಿಂದಿರಿ. ” ಅಂದರು ಅವರು.
ಮತ್ತದೇ ಬೇಸರ ! ಮೂರು ತಿಂಗಳು ಕಳೆಯುವುದರೋಳಗೆ ಸಹನಾಳ ಗರ್ಭ ಇಳಿದೆಹೋಗಿತ್ತು. ಸಹನಾ ಎಲ್ಲಾ ತನ್ನ ಹಣೆ ಬರಹ ಎಂದು ಕಣ್ಣಿರಿಟ್ಟಳು. ಲಾವಣ್ಯ ಪರಿಪರಿಯಲ್ಲಿ ಅಕ್ಕನನ್ನು ಸಮಾದಾನಿಸಿದಳು.
“ ಒಂದ್ಸಾರಿ ಗರ್ಭ ಧರಿಸಿದೋಳು ನೀನು, ಅದು ಮತ್ತೆ ನಿಲ್ಲುತ್ತೆ....... ಯೋಚ್ನೆ ಮಾಡಬೇಡ.... ”ಎಂದಿದ್ದಳು ಲಾವಣ್ಯ. “ ನಿನಗಾದ್ರು ಮಕ್ಕಳಾಗಿದ್ರೆ, ಈ ಹಾಳು ಕಣ್ಣು ತುಂಬಿಕೊಂಡು ಸಂತೋಷ ಪಡ್ತಾ ಇದ್ದೆ ಕಣೇ. ” ಸಹನಾ ದುಃಖ ತಡೆಯದಾದಳು.
“ ಹುಚ್ಚು ಹುಚ್ಚಾಗಿ ಏನಾದ್ರೂ ಹೇಳ ಬೇಡ...... ನಿನಗೇ ಎಲ್ಲ ಸರಿಹೋಗುತ್ತೆ. ನೀನೇನೂ ಮುದುಕಿಯಲ್ಲ.... ” ಲಾವಣ್ಯ ಗದರಿಕೊಂಡಳು. ಸಹನಾ ಸಹನೆ ತಂದುಕೊಳ್ಳಲು ಯತ್ನಿಸಿದಳು.
ದಾಸ್ ಕಂಪ್ಯೂಟರ್‌ನಲ್ಲಿ ಎಲ್ಲರನ್ನು ಆಕರ್ಷಿಸುವ ಕೇಂದ್ರ ಬಿಂದುವಾದಳು ಲಾವಣ್ಯ. ಅವಳ ಚುರುಕಿನ ಮಾತುಗಾರಿಕೆ, ವ್ಯಾವಹಾರಿಕ ರೀತಿನೀತಿಗಳನ್ನು ಕಂಡು ಬೆರಗಾದರು ಕರುಣಾಕರನ್. ಕೆಲಸದಲ್ಲೂ ಅಷ್ಟೇ, ಬಿಡಿ ಭಾಗಗಳ ಮಾರಾಟ ಹಾಗೂ ಡೇಟಾ ಪ್ರಾಸೆಸಿಂಗ್‌ನಿಂದ ಹಿಡಿದು, ಸಾಫ್ಟ್‌ವೇರ್‌ ಪ್ಯಾಕೇಜ್‌ಗಳನ್ನು ಗಿರಾಕಿಗಳ ಬೇಡಿಕೆಗೆ ತಕ್ಕಂತೆ ಪೂರೈಸುವದರಲ್ಲಿ ಅವಳು ತೋರುತ್ತಿದ್ದ ಚಾಕಚಕ್ಯತೆ, ಕಾರ್ಯದರ್ಶನಿಯ ಹೊಣೆ ಹೊತ್ತು ಫರ್ಮನಿ ಇತರೆ ಸಿಬ್ಬಂದಿ ವರ್ಗದವರೊಂದಿಗೆ ವರ್ತಿಸುವ ಬಗೆ, ಹೊಸ ಕೆಲಸಗಳನ್ನು ಕೈಗೊಳ್ಳುವ ಪರಿಪನ್ನು ಕಂಡು ಮ್ಯಾನೇಜರ್‌ನಾದ ಪ್ರಿಯಂಕರ್ ನೂ ಬಹುವಾಗಿ ಮೆಚ್ಚಿಕೊಂಡುಬಿಟ್ಟ.
“ ಲಾವಣ್ಯ, ನಿನ್ನ ರೂಪ ನೋಡಿ ನಾವು ಕೆಲ್ಸ ಕೊಟ್ಟೆವು ಅಂದುಕೊಂಡಿದ್ದೆವು. ಈಗ ನೋಡಿದರೆ, ನಾನು ನಾಲ್ಕಾರು ದಿನ ಊರಲ್ಲಿ ಇಲ್ಲದ್ದಿದ್ದರೂ ನೀನು ಎಲ್ಲಾ ಕೆಲ್ಸ ನಿಭಾಯಿಸಿಬಲ್ಲೆ... ” ಪ್ರಿಯಂಕರ್‌ ಹೊಗಳಿದ್ದ.
ಮೂರು ತಿಂಗಳ ಅವಧಿಯಲ್ಲೇ ಅವಳೋಡನೆ ತೀರ ಸಲಿಗೆ ತೆಗೆದುಕೊಂಡುಬಿಟ್ಟ. ಕೆಲ ವೇಳೆ ತಮಾಷೆಯಾಗಿ ಕಚಗುಳಿ ಇಡುವಂತಹ ಅಣಿಮುತ್ತುಗಳನ್ನು ಉದುರಿಸುತ್ತಿದ್ದ. ಆಗೆಲ್ಲ ತಾನೂ ನಗುತ್ತಲೇ ಪ್ರತಿಕ್ರಿಯೆಸುತ್ತಿದ್ದಳು ಲಾವಣ್ಯ . ನಗುವುದಂತೂ ಅವಳಿಗೆ ಸಹಜ ಪ್ರವೃತ್ತಿಯಾಯಿತು. ವ್ಯಾಪಾರದಲ್ಲಿ ಜನಾಕರ್ಷಣೆ ಮುಖ್ಯ ತಾನೆ ? ಮೂರು ತಿಂಗಳು ಕಳೆಯುವುದರೊಳಗೆ ಅವಳ ಸಂಬಳ ಎರಡು ಸಾವಿರಕ್ಕೇರಿತು. ಇತ್ತ ಕರುಣಾಕರನ್ ಫರ್ಮಿನತ್ತ ಬಂದರೆ ಬಂದರು, ಇಲ್ಲವಾದರೆ ಇಲ್ಲ. ಪ್ರಿಯಂಕರಗೆ ಎಲ್ಲಾ ಉಸ್ತುವಾರಿ ವಹಿಸಿಕೊಟ್ಟಿದ್ದರು. ಲಾವಣ್ಯ ಬಂದ ಮೇಲೆ ಅವನು ಉತ್ಸಾಹದ ಚಿಲುಮೆಯಾಗಿದ್ದ. “ ನಿನ್ನಂಥ ಬ್ಯೂಟಿ ಜತೆ ಕೆಲಸ ಮಾಡುವುದೆಂದರೆ ಇಟ್ ಇಸ್ ರಿಯಲೀ ಎ ಪ್ಲೆಷರ್ ! ಸೋಮಾರಿ ಕೂಡಾ ಚುರುಕಾಗ್ತನೇ... ” ಕಣ್ಣರಳಿಸಿ ಇಣುಕುವನು ಅವಳೆಡೆಗೆ.
ಆ ಕಣ್ಣುಗಳ ಇಂಗಿತಾರ್ಥಕ್ಕೆ ಬೆಚ್ಚಿ ಬೀಳುವಳಲ್ಲ ಲಾವಣ್ಯ. ‘ಈ ಗಂಡಸು ದುಡಿಯುವ ಮಹಿಳೆ ಎಂದರೆ ಏನೆಂದುಕೊಂಡಿದ್ದಾನೋ... ’
ಅಲ್ಲದೆ, ಪ್ರಿಯಂಕರ್ ದಿನಕ್ಕೊಂದು ತಾಕೀತು ಮಾಡುತ್ತಾ ಬಂದಿದ್ದ. “ ನೀನು ಹೀಗೆ ಡ್ಯೂಟಿಗೆ ಬಂದರೆ ಆಗೊಲ್ಲ..... ಮಾಡ್ ಡ್ರೆಸ ಧರಿಸ್ಕೊಬೇಕು. ಒಂದಿನ ಸೀರೆ ಉಟ್ಟರೆ, ಇನ್ನೋಂದಿನ ಚೂಡಿದಾರ್, ಮತ್ತೋಂದಿನ ಜೀನ್ಸ್ ಪ್ಯಾಂಟ್, ಟೀ ಷರ್ಟ್ ಹಾಕಿಕೊಂಡು ಬರ್ಬೇಕು, ಇಲ್ಲದಿದ್ದರೆ,ನಮ್ಮ ಕಸ್ಟಮರ್ಸ ಅಟ್ರಾಕ್ಟ್ ಮಾಡೋದು ಹೇಗೆ ” ಸ್ಟ್ರಿಕ್ಟ್ ಆಗಿ ಆದೇಶಿಸಿದ್ದ. ‘ ನಿನಗೆ ಡ್ರೆಸ್ , ಮೇಕಪ್ಗೆಂದೆ ನಮ್ಮ ಫರ್ಮನಿಂದ ಹಣ ತಗೋ ! ’ ಮೂರು ಸಾವಿರದ ಮುಂಗಡವನ್ನೂ ಕೊಟ್ಟಿದ್ದ. ಅಂದು, ತನ್ನ ಉಡುಪು ತೊಡುಪುಗಳ ಬಗ್ಗೆ ಗಂಡನಾಗಿದ್ದ ಮದನ್‌ ಕುಮಾರ್‌ ನಿಂದ ದೊಡ್ಡ ಆದೇಶವನ್ನೇ ಪಾಲಿಸಬೇಕಿತ್ತು. ಇಂದು ? ಎಂತಹ ವಿಚಿತ್ರ ಪರಿಸ್ಥಿತಿ !
ಮನೆಯಲ್ಲಿ ಅಭಿರಾಮನಿಗೆ ಲಾವಣ್ಯಳ ಮನಸ್ಥಿತಿ ಅರ್ಥವಾಗುತ್ತಿತ್ತು.
ಸಹನಾಳಂತೂ, “ ಅದೆಂಥ ಉದ್ಯೋಗಕ್ಕೆ ಸೇರಿಸಿದಿರಿ ನೀವು ? ಛೀ, ಛೀ......... ” ಸಿಡುಕುತ್ತಿದ್ದಳು.
“ ಇದನ್ನೇಲ್ಲ ನಾವು ಕೂಲ್ ಆಗಿ ತೆಗೆದುಕೊಳ್ಳಬೇಕು ಸಹನಾ ಪ್ರಪಂಚ ಹೇಗೆ ಚಲಿಸುತ್ತೋ ಹಾಗೆ ನಾವು ಹೋಗಬೇಕಾಗುತ್ತೆ. ನಿನ್ನ ಹಾಗೆ ಗಜಗೌರಮ್ಮನಂತೆ ಮನೆಯಲ್ಲಿರೋ ಹೆಂಗಸಿಗೇನ್ ಗೊತ್ತಾಗುತ್ತೆ... ” ಅಭಿರಾಮ ಸಮಜಾಯಿಸಿದ.
“ ಅಲ್ವೇ ನೀನು ಲಕ್ಷಣವಾಗಿದ್ದೀಯಾ, ಆದರೆ, ನಿನ್ನ ತಂಗಿಯನ್ನು ನೋಡಿ ನೀನೂ ಕಲಿಯಬೇಕಾಗುತ್ತೆ ಕಣೇ. ”
“ ಸಾಕು ಸುಮ್ನಿರಿ........ ಅವಳ ಹಾಗೆ ನಾನು ಜೀನ್ಸ್ ಪ್ಯಾಂಟು, ಟೀ ಷರಟು ಹಾಕ್ಕೋಂಡ್ರೆ ದೇವರೆ ಗತಿ..... ! ” ಲಾವಣ್ಯ ಅಕ್ಕನ ಮಾತು ಕೇಳಿ ಫಕ್ಕನೆ ನಕ್ಕು ಬಿಟ್ಟಳು.
ಅಲ್ಲಿ ನಿಲ್ಲದೆ ಮರೆಯಾಗಿದ್ದಳು.
“ ಹಾಗಲ್ವೆ..... ನಿನಗೆ, ನಿನ್ನ ಮೈಮಾಟಕ್ಕೆ ಒಪ್ಪುವ ಹಾಗೆ ಸೀರೆ ಬ್ಲೌಸ್ ಧರಿಸೋದು ಗೊತ್ತಿಲ್ಲಾಂತ ಹೇಳಿದೆ. ನನ್ನ ಹೆಂಡತಿ ಚೆನ್ನಾಗಿ ಕಾಣಿಸಲೀಂತ ಯಾವ ಗಂಡಸು ತಾನೇ ಇಷ್ಟಪಡೋಲ್ಲ ಹೇಳು ಚಿನ್ನಾ... ” ಅಭಿರಾಮ ಮುಗುಳುನಗೆ ಹರಿಸಿ ಹೆಂಡತಿಯನ್ನು ತಬ್ಬಿಕೊಂಡ. ಅವಳು ಕೊಸರಿಕೊಂಡು ಮುನಿಸು ತೋರುತ್ತಾ ಅಡುಗೆ ಮನೆ ಸೇರಿದಳು.
ಒಂದು ದಿನ ಲಾವಣ್ಯ ಜೀನ್ಸ್ ತೊಟ್ಟು ಕನ್ನಡಿಯ ಮುಂದೆ ನಿಂತು ಮುಖಕ್ಕೆ ರಂಗನ್ನು ತೀಡುತ್ತಲ್ಲಿದ್ದಾಗ ಅಭಿರಾಮ ಕೇಳಿದ, “ ಪ್ರವಾಹದ ವಿರುದ್ದ ಈಜಿ ಜಯಿಸೋದೂಂದ್ರೆ ಹುಚ್ಚುತನ. ಹೊಂದಿಕೊಂಡು ಹೋಗುವುದೆ ಜಾಣತನ ಅಲ್ಲವೆ ಲಾವಣ್ಯ ? ”
“ ಏನೇ ಆಗಲಿ ಬಾವಾ, ಈಗಿನ ಸಂದರ್ಭಗಳಲ್ಲಿ ಹೆಣ್ಣಿಗೆ ಡೇರ್‌ನೆಸ್‌ ಇರ್ಬೇಕು ನೋಡಿ.”
“ ಜೊತೆಗೆ ಗ್ಲಾಮರ್ ಸಹಾ ಇರಬೇಕೂ ಅನ್ನು .........”
“ ಇಲ್ಲದಿದ್ದರೆ ಅವಳನ್ಯಾರು ಲೈಕ್ ಮಾಡುತ್ತಾರೆ ಅಂತೀರ .......... ? ”
“ ಅದ್ಸರಿ, ನಿಮ್ಮಫರ್ಮ್‌ನಲ್ಲಿ ಮೂರು ತಿಂಗಳಲ್ಲೆ ಎರಡು ಸಾವಿರ ಸಂಬಳಕ್ಕೆ ಜಂಪ್ ಸಿಕ್ಕಿತಲ್ಲ, ಅದೇನು ಮೋಡಿ ಮಾಡಿದೆಯೆ ಹುಡುಗಿ ನೀನು ! ”
“ ಅದೇ ಗ್ಲಾಮರ್ ಪ್ರಪಂಚ, ಲಾಭದ ದೃಷ್ಟಿಯಿಂದಾನೇ ನೋಡೋದಲ್ಲಾ........”
“ ನೀನು ಯಾವುದಾದ್ರೂ ಜಾಹಿರಾತು ಪ್ರಪಂಚಕ್ಕೆ ಹೋಗ್ಬಿಟ್ಟಿಯೆ ಜೋಕೆ ! ”
ಅಭಿರಾಮನೆಂದಾಗ ಲಾವಣ್ಯ ಹುಬ್ಬೇರಿಸಿದ್ದಳು, ತನ್ನ ಅಂತರಂಗದ ಗುಟ್ಟು ಬಯಲಾದವಳಂತೆ.
“ ಹೋಗಿ ಬಾವಾ, ಹೇಗಿದ್ದರೂ ಹೆಣ್ಣನ್ನ ಹೊರಗಿನ ಪ್ರಪಂಚ ನೋಡೋ ದೃಷ್ಟೀನೇ ಬೇರೆ. ”
“ ನಿನ್ನಂಥ ಛಲಗಾತಿಗೆ ಯಾವ ಕೆಟ್ಟ ದೃಷ್ಟಿಯೂ ತಾಗೋದಿಲ್ಲ ಬಿಡು. ” ಅಭಿರಾಮ
ಅಭಿಮಾನದಿಂದಲೇ ನುಡಿದಿದ್ದ.

ಇನ್ನೋಂದು ದಿನ ಪೋಸ್ಟ್‌ನಲ್ಲಿ ಮದನ್ ಕಳುಹಿಸಿದ್ದ ಡೈವೋರ್ಸ್ ಪೇಪರ್ಸ್ ಬಂದಿದ್ದವು. ಲಾವಣ್ಯ ಅವನ್ನು ತೆಗೆದುಕೊಂಡು ಅಭಿರಾಮನಿಗೆ ತೋರಿಸಿದ್ದಳು. ಅಬಿರಾಮ, “ ನಿನ್ನ ಬದುಕಿನ ಯಾವುದೇ ನಿರ್ಧಾರ ನಿನ್ನದೇ ” ಎಂದಿದ್ದ. ಲಾವಣ್ಯ ಅವುಗಳಿಗೆ ಸಹಿ ಹಾಕಿ ಕಳುಹಿದಸಿಬಿಟ್ಟಳು. ಈಗ ನಿರಾಳವೆನಿಸಿತು. ತಾನು ಸ್ವತಂತ್ರ್ಯ, ಸ್ವಚ್ಛಂದ ಹಕ್ಕಿಯಂತೆ ಗಗನದಲ್ಲಿ ಹಾರಾಡಬಹುದೆನಿಸಿತು. ಆದರೆ ಆ ಬಾನಾಡಿಯ ಬದುಕು ಈ ಭುವಿಯ ಹೆಣ್ಣಿಗೆ ಎಲ್ಲಿ ?

ದಿನಕಳೆದಂತೆ ದಾಸ್‌ ಕಂಪ್ಯೂಟರ್‌ನಲ್ಲಿ ಕೆಲಸದ ಒತ್ತಡ ಹೆಚ್ಚುತ್ತಿತ್ತು. ಲಾವಣ್ಯಳ ಸಲಹೆ ಕೇಳದೆ ಪ್ರಿಯಂಕರ್ ಯಾವ ವಿಷಯದಲ್ಲೂ ಮುಂದುವರೆಯುತ್ತಿರಲಿಲ್ಲ. ಇದೀಗ ಅವಳು ಕ್ಯಾಷಿಯರ್‌ ಸ್ಥಾನವನ್ನೂ ಅಲಂಕರಿಸಿದ್ದಳು. ಸಾವಿರಗಟ್ಟಲೆ ಲೇವಾದೇವಿ ಇವಳ ಕೈಯಿಂದಲೇ ಜರುಗುತ್ತಿತ್ತು. ಅವನೋ ಬೇಕೆಂತಲೆ ವಾರಗಟ್ಟಲೆ ಲೆಕ್ಕಪತ್ರ ತಪಾಸಣೆ ಮಾಡುತ್ತಿರಲಿಲ್ಲ. ಲೆಕ್ಕ ಪತ್ರಗಳಿಗಿಂತಲೂ ಲಾವಣ್ಯ ಅವನಿಗೆ ಬೇಕಾಗಿದ್ದಳು. ತಾನೂ ಇವನ ವಶದಲ್ಲಿರಲೆಂದೇ ತನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು ಬಲೆಯೊಡ್ಡುತ್ತಿರುವನೋ ಎಂಬ ಗುಮಾನಿ ಆಕೆಗೆ, ತಾನಂತೂ, ಜಾಗ್ರತೆಯಿಂದಿರಬೇಕೆಂದುಕೊಂಡಳು. ಇವಳ ಕೈ ಕೆಳಗೆ ಇಬ್ಬರೂ ಹದಿಹರೆಯದ ಹುಡುಗಿಯರೂ ಸೇರಿದಂತೆ ಇನ್ನಿಬ್ಬರೂ ಹುಡುಗರೂ ಕೆಲಸಕ್ಕೆ ಇದ್ದರು. ಚಿಕ್ಕ ಯಜಮಾನರ ಆಪ್ತಳು ಎಂಬಂತೆ ಈಕೆ ಕಾಣಿಸುತ್ತಿದ್ದರಿಂದ ಇವಳ ಮಾತಿಗೆ ಅವರೆಲ್ಲ ಬಹಳ ಬೆಲೆ ಕೊಡುವಂತಾದರು. ಇತ್ತೀಚಿಗೆ ಪ್ರಿಯಂಕರ್ ತನ್ನ ಮಾರುತಿ ಕಾರಿನಲ್ಲಿ ಬಿಸಿನೆಸ್ ಕಲೆಕ್ಷನ್ ಎಂಬ ನೆಪ ಹೇಳಿ ಜತೆಗೆ ಕರೆದುಕೊಂಡು ಹೋಗತೊಡಗಿದ್ದ. ಮೊದಮೊದಲು ಅವನೊಂದಿಗೆ ಹೋಗುವುದೆಂದರೆ ಆಕೆಗೆ ಎಲ್ಲಿಲ್ಲದ ಮುಜುಗರವಾಗುತ್ತಿತ್ತು.
“ ನೀನು ನನ್ನ ಪ್ರೈವೆಟ್ ಸೆಕ್ರೆಟರಿ ಲಾವಣ್ಯ. ಹೀಗೆ ಅಂಜಿಕೊಂಡ್ರೆ ಹೇಗೆ ? ಬೆಂಗಳೂರು ನಗರದಲ್ಲಿ ಒಂದು ರೌಂಡ್ ಹೋಗ್ಬರಲಿಕ್ಕೆ ಹೀಗಾದರೆ ಹೇಗೆ ? ನಾಳೆ ನಂಜೊತೆ ಔಟ್ ಆಫ್ ಸ್ಟೇಷನ್ ಟೂರ್ ಮಾಡಬೇಕು. ತಿಳೀತೇ ? ಬೀ ಎ ಬೋಲ್ಡ್ ಗರ್ಲ್...... ಬಾ ಬಾ ಇಲ್ಲೇ ಕೂತ್ಕೋ .... ” ಪ್ರಿಯಂಕರ್ ತನ್ನ ಕಾರಿನಲ್ಲಿ ಅವಳಿಗೆ ಫ್ರಂಟ್ ಸೀಟಿನಲ್ಲಿ ಕೂರಲು ಆಹ್ವಾನಿಸುತ್ತಿದ್ದ.
ನಿರ್ವಾಹವಿಲ್ಲದೇನೆ ಆಕೆ ಕುಳಿತಾಗ ಮೃದುವಾಗಿ ಬೆನ್ನು ತಟ್ಟುತ್ತಿದ್ದ. ಮೀಸೆ ತುದಿಯಲ್ಲೇ ನಗು ಇರುತ್ತಿತ್ತು. ಇವಳಿಗೆ ಮೊದಮೊದಲು ಮೈ ಉರಿಯುತ್ತಿತ್ತು. ಬರು ಬರುತ್ತಾ ಅಭ್ಯಾಸವಾಗಿತ್ತು. ಅವಳಿಗೆ ಅರಿಯದಂತೆ ಅವಳ ದೇಹ ಪುರುಷನ ಸಾಮೀಪ್ಯವನ್ನು ಬಯಸುತ್ತಿತ್ತು !
ಈವತ್ತಿನ ಪ್ರಪಂಚ ಇರೋದೇ ಹೀಗೆ. ಪುರುಷರೊಂದಿಗೆ ದುಡಿಯುವ ಮಹಿಳೆ ಇಷ್ಟಕ್ಕೆಲ್ಲಾ ಕೇರ್ ಮಾಡಿದರಾದಿತೇನು ? ತುಟಿಯ ಮೇಲೆ ನಗುವಿನೆಳೆ ಇರುತ್ತಿತ್ತು. ಪ್ರಿಯಂಕರ್ ಅವಳಿಗೆ ಹೊಸ ಪ್ರಪಂಚವನ್ನೇ ತೋರಿಸಲು ಹವಣಿಸಿದ್ದ. ಮೆಲ್ಲ ಮೆಲ್ಲನೆ ಸರಿದು ತನ್ನ ಮನದ ರೀಲು ಬಿಚ್ಚಲಾರಂಬಿಸಿದ. ಅವಳೊಂದಿಗೆ ಸಲಿಗೆ ಎಂಬುದು ಸ್ವೇಚ್ಛೇಯಾಯಿತು. ಅವಳ ದೇಹದ ಉಬ್ಬು ತಗ್ಗುಗಳಲ್ಲಿ ಇವನ ಕೈಗಳು ಹರಿದಾಡಿದ್ದವು. ತನಗಲ್ಲವೆಂದೂ ಅನ್ನಿಸುವುದು. ಇಲ್ಲಿ ಆರು ತಿಂಗಳು ಕಳೆಯುವುದರೊಳಗೆ ಸ್ವಲ್ಪ ಮೇಲು ಆದಾಯವನ್ನೂ ಮಾಡಿಕೊಂಡಿದ್ದಳು.
ಈಗಿಂದೀಗಲೇ ಬಿಡುವುದೆಂದರೆ ? .......... ತಾನು ಅಬಲೆ, ಇದನ್ನೆಲ್ಲಾ ಸಹಿಸಬೇಕು. ತನ್ನ ಗತ ಚರಿತ್ರೆಯೆಲ್ಲ ಆದ್ಹೇಗೋ ಪ್ರಿಯಂಕರ್‌ಗೆ ತಿಳಿದಿದೆ. ಆದುದರಿಂದಲೇ, ಅವನು ಹೀಗೆ ವರ್ತಿಸುವುದು......... ಹೀಗೆ ಗಂಡು ದಿಕ್ಕಿಲ್ಲದವಳೆಂಬ ಕಾರಣಕ್ಕಾಗಿಯೆ, ತನಗೆ ಶೋಷಣೆ ಮಾಡಲು ಮುಂದಾಗುವವರೇ ಎಲ್ಲಾ. ಮರು ಮದುವೆ ಯಾಗುವುದರಿಂದಲೇ ತನಗೆ ಹಿತವಿದೆಯೇನೂ. ಈ ಸಮಾಜದಲ್ಲಿ ಹೆಣ್ಣಿನ ಬಯಕೆಗೆ ಅವಳ ಬದುಕಿಗೆ ಮದುವೆಯೊಂದೇ ಬೇಲಿಯೇನು ? ಇತ್ಯಾದಿ ಆತಂಕ, ದ್ವಂದ್ವಗಳಲ್ಲಿ ಬಳಲಿದಳು ಲಾವಣ್ಯ.

ಅಭಿರಾಮ ತನಗೆ ಬಿಡುವು ದೊರೆತ ಸಮಯದಲ್ಲಿ ಬಣ್ಣ, ಕುಂಚ ಹಿಡಿದು ಚಿತ್ರ ಬಿಡಿಸುತ್ತ ಕೂರುತಿದ್ದ. ಚಿತ್ರ ಕಲೆ ಅವನಿಗೆ ಆತ್ಮ ಸಂತೋಷಕೊಡುವ ಹವ್ಯಾಸ, ಅವನ ಸಂಗ್ರಹದಲ್ಲಿ ಸ್ವಂತ ರಚನೆಯ ಹತ್ತಾರು ಜಲವರ್ಣ ಹಾಗೂ ತೈಲ ಚಿತ್ರಗಳಿದ್ದವು. ಅವುಗಳಲ್ಲಿ ಬಹುತೇಕ ಎಲ್ಲ ಭಾವ ಚಿತ್ರಗಳೇ. ದೇಶದ ನೇತಾರರು, ಹೆಸರಾಂತ ಸಾಹಿರಿಗಳು, ಪುರಾಣದಲ್ಲಿ ಬರುವ ಅಪ್ಸರೆಯರು ಹಾಗೂ ಅವನನ್ನು ಆಕರ್ಷಿಸಿದ ಆಧುನಿಕ ಚೆಲುವೆಯರು ಅರೆನಗ್ನ ಚಿತ್ರಗಳು ಅಲ್ಲಿದ್ದವು. ಇವನ್ನೆಲ್ಲಾ ಲಾವಣ್ಯ ನೋಡಿದ್ದಳು.
“ ಬಾವಾ, ನೀವು ಈ ಚಿತ್ರಕಲೆ ಎಲ್ಲಿ ಕಲಿತಿರಿ ? ” ಕೇಳಿದಳು.
“ ಇದು ನನಗೆ ಗುರು ಇಲ್ಲದೆ ಬಂದಿರೋ ವಿದ್ಯೆ ಲಾವಣ್ಯ .”
“ ನೀವು ದೊಡ್ಡ ಚಿತ್ರ ಕಲಾವಿದರಾಗಿ ಹೆಸರು ಮಾಡಬಹುದಿತ್ತು. ”
“ ಅದೆಲ್ಲ ನಮ್ಮಂಥವರಿಗೆ ಬರುವುದಿಲ್ಲ ಲಾವಣ್ಯ ”
“ ಅಂದರೆ ! ”
“ ನಿನಗೆ ಪ್ರಪಂಚ ಪೂರ್ಣ ಅರ್ಥವಾಗಿಲ್ಲ...”
“ ಅದು ಯಾರಿಗೆ ತಾನೇ ಅಪೂರ್ಣ ಅರ್ಥವಾಗಿದೆ ಬಾವಾ ? ”
“ ಅರ್ಥವಾಗೋದಿಲ್ಲ........... ಬಿಡು...”
“ ಬಾವಾ,ನಿಮ್ಮ ಈ ಚಿತ್ರಗಳ ಸರಕಿನಲ್ಲಿ ಹೆಣ್ಣಿನ ಚೆಲುವನ್ನೇ ಸೆರೆ ಹಿಡಿದಿರುವ ಚಿತ್ರಗಳ ಸಂಖ್ಯೆ ಜಾಸ್ತಿ ಇದೆಯಲ್ಲ ..........”
“ ಈ ಚೆಲುವೆಯರ ಅರೆ ನಗ್ನ ಚಿತ್ರ ನೋಡಿದ ಮೇಲೆ ನಿನ್ನ ಬಾವಾಂದ್ರೆ ನಿನಗೆ ಏನನ್ನಿಸಿತು ? ”
“ ನಿಜ ಹೇಳಲಾ ? ” “ ಹೇಳು ಲಾವಣ್ಯ...... ”
“ ನನ್ನ ಬಾವಾ ತುಂಬಾ ಶೃಂಗಾರ ಪ್ರಿಯರು ಅನ್ನಿಸ್ತು. ನಮ್ಮಕ್ಕ ನಿಮ್ಮನ್ನ ಕೈ ಹಿಡಿಯಲು ತುಂಬಾ ಪುಣ್ಯ ಮಾಡಿದ್ದಾಳೆ .”
“ ಅವಳೊಂದು ಪೆದ್ದು, ಅವಳ ಚಿತ್ರ ಬರೀತೀನೀಂದ್ರೆ ಹೌಹಾರಿ ಬೀಳ್ತಾಳೆ. ನಿಮಗೆ ಗಿಡ, ಮರ, ಜಿಂಕೆ, ನವಿಲು, ಇಂತಹ ಪ್ರಾಣಿ, ನಿಸರ್ಗದ ಚೆಲುವು ಕಾಣಸಿಗುವುದಿಲ್ವೇ....... ಹೆಣ್ಣಿನ ಬೆತ್ತಲೆ ಚಿತ್ರ ಬರೀತಿರಲ್ಲ.........” ಅಂತ ಬೈತಾಳೆ....... ಅವಳು ಹಳೇ ಕಾಲದವಳು. ಮನಸ್ಸೇನೂ ಒಳ್ಳೆಯದೇ. ನಿಮ್ಮ ಚಿಂತನೆಯ ಮಟ್ಟಕೇರಬೇಕವಳು. ಅಷ್ಟೇ....
ಅದ್ಯಾವಗಲೋ........ “ ಆಗ್ತಾಳೆ, ಅವಳು ಬದಲಾಗ್ತಾಳೆ........ ಬಾವಾ ನೀವು ನನ್ನ ರೂಪ ಹೊಗಳ್ತೀರಲ್ಲ, ನನ್ನ ಚಿತ್ರ ಯಾವಾಗ ಬರೀತೀರಿ ... ? ”
“ ನನಗೆ ಈಗೀಗಂತೂ ಫ್ಯಾಕ್ಟರಿ ಕೆಲ್ಸದಲ್ಲಿ ಬಿಡುವೇ ಆಗೋದಿಲ್ಲ...... ನೀನೇ ನೋಡ್ತಾ ಇದೀಯಾ....... ನೋಡೋಣ. ಅದಕ್ಕೂ ಒಂದು ಸಂದರ್ಭ ಕೂಡಿ ಬರಲಿ........ ಅಭಿರಾಮ ನಾದಿನಿಯನ್ನೇ ತದೇಕವಾಗಿ ದಿಟ್ಟಿಸಿದ್ದ.